ಬುಧವಾರ, ಆಗಸ್ಟ್ 23, 2023

ಶ್ರೀ ಕೃಷ್ಣನ ಕುರಿತ ಪುಟ್ಟ ರಸಪ್ರಶ್ನೆ

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಒಂದು ಸಣ್ಣ ರಸಪ್ರಶ್ನೆ.ಶ್ರೀಕೃಷ್ಣನನ್ನು ಕೊಲ್ಲಲು ಬಂದ ಅನೇಕ ರಾಕ್ಷಸರು ಅವನಿಂದ ಹಾಗೂ ಬಲರಾಮನಿಂದ ತಾವೇ ಹತರಾದರು.ಆ ರಾಕ್ಷಸರು ವಿವಿಧ ರೂಪಗಳಲ್ಲಿ ಬಂದರು.ಯಾವ ರಾಕ್ಷಸರು ಯಾವ ರೂಪಗಳಲ್ಲಿ ಬಂದರು ಹೇಳಿ ನೋಡೋಣ.
೧.ಪೂತನಿ
ಅ)ನವಿಲು,ಆ)ಸುಂದರಿ,ಇ)ವೃದ್ಧೆ,ಈ)ಹಂಸ
೨.ತೃಣಾವರ್ತ
ಅ)ಸುಂಟರಗಾಳಿ,ಆ)ನಾಯಿ,ಇ)ತಂಗಾಳಿ,ಈ)ತೋಳ
೩.ಶಕಟಾಸುರ
ಅ)ಬಂಡೆ,ಆ)ಗಾಡಿ,ಇ)ಒರಳುಕಲ್ಲು,ಈ)ಮಿಂಚು
೪.ಬಕಾಸುರ
ಅ)ಹದ್ದು,ಆ)ಕೊಕ್ಕರೆ,ಇ)ಗಿಣಿ,ಈ)ಪಾರಿವಾಳ
೫.ಅಘಾಸುರ
ಅ)ಬೃಹತ್ ಸರ್ಪ,ಆ)ಆನೆ,ಇ)ಸಿಂಹ,ಈ)ಹಂದಿ
೬.ವತ್ಸಾಸುರ
ಅ)ಕರು,ಆ)ಎಮ್ಮೆ,ಇ)ಕೋಳಿ,ಈ)ನಾಯಿ
೭.ಕೇಶಿ
ಅ)ಕುದುರೆ,ಆ)ಗೂಳಿ,ಇ)ಹುಲಿ,ಈ)ಹಾವು
೮.ಅರಿಷ್ಟಾಸುರ
ಅ)ಗೂಳಿ,ಆ)ಕುದುರೆ,ಇ)ತೋಳ,ಈ)ಆನೆ
೯.ಪ್ರಲಂಬಾಸುರ
ಅ)ಬ್ರಾಹ್ಮಣ ಬಾಲಕ,ಆ)ಗೊಲ್ಲ ಬಾಲಕ,ಇ)ರಾಜಕುಮಾರ,ಈ)ವೃದ್ಧ
೧೦.ಧೇನುಕಾಸುರ
ಅ)ಕತ್ತೆ,ಆ)ಕೋತಿ,ಇ)ಹಂದಿ,ಈ)ಕೋಣ
        ಉತ್ತರಗಳು
೧.ಆ)ಸುಂದರಿ
೨.ಅ)ಸುಂಟರಗಾಳಿ
೩.ಆ)ಗಾಡಿ
೪.ಆ)ಕೊಕ್ಕರೆ
೫.ಅ)ಬೃಹತ್ ಸರ್ಪ
೬.ಅ)ಕರು
೭.ಅ)ಕುದುರೆ
೮.ಅ)ಗೂಳಿ
೯.ಆ)ಗೊಲ್ಲ ಬಾಲಕ
೧೦.ಅ)ಕತ್ತೆ

ಶನಿವಾರ, ಆಗಸ್ಟ್ 12, 2023

ಪುಸ್ತಕ ಪರಿಚಯ -ಗಂಧರ್ವ ಗಾನ

ಡಾ.ರಾಜಕುಮಾರ್ ಅಭಿಮಾನಿಗಳಿಗೆ ಮತ್ತೊಂದು ರಸದೌತಣ!
ಡಾ.ರಾಜ್ ಚಿತ್ರಗೀತೆಗಳ ವಿಶ್ವಕೋಶ!

ಬೀ.ಸಿ.ಜಗನ್ನಾಥ್ ಜೋಯಿಸ್ ಅವರು ಸಂಕಲಿಸಿ, ಟಿಪ್ಪಣಿಗಳನ್ನು ಬರೆದು ಸಿದ್ಧಪಡಿಸಿರುವ ಒಂದು ಅದ್ಭುತ ಪುಸ್ತಕ,'ಗಂಧರ್ವ ಗಾನ -ಡಾ.ರಾಜಕುಮಾರ್ ಚಿತ್ರಗಳ ಸಮಗ್ರ ಗೀತಮಾಲಿಕೆ '. ಇದಕ್ಕೆ ಶ್ರೀ ದೊಡ್ಡರಂಗೇಗೌಡರು, ವಿ.ಮನೋಹರ್, ಮತ್ತು ಶ್ಯಾಂ ಕಿಶೋರ್.ಡಿ.ಅವರು ಮುನ್ನುಡಿಗಳನ್ನು ಬರೆದಿದ್ದಾರೆ.ಪ್ರತಿ ಚಲನಚಿತ್ರಕ್ಕೂ ಚಲನಚಿತ್ರದ ಒಂದು ಚಿತ್ರವಿದೆ.ಅನಂತರ, ಆ ಚಿತ್ರದ ಗೀತೆಗಳ ಮಾಹಿತಿ, ಟಿಪ್ಪಣಿಗಳು, ಮತ್ತು ಎಲ್ಲಾ ಹಾಡುಗಳು.ಡಾ.ರಾಜಕುಮಾರ್ ಚಿತ್ರಗೀತೆಗಳ ಒಂದು ವಿಶ್ವಕೋಶ ಇದು.
ಬೆಲೆ;ರೂ.950
ಪುಟಗಳು:864

ಶುಕ್ರವಾರ, ಆಗಸ್ಟ್ 11, 2023

ಪುಸ್ತಕ ಪರಿಚಯ -ದರ್ಪದಲನಮ್


ಸಂಸ್ಕೃತ ಗೊತ್ತಿಲ್ಲದವರಿಗೂ ಕಾಳಿದಾಸನ ಹೆಸರು ಗೊತ್ತಿರುತ್ತದೆ ಎಂದರೆ ಅದರಲ್ಲಿ ಅತಿಶಯವೇನಿಲ್ಲ ಎನಿಸುತ್ತದೆ.ಆದರೆ ಸಂಸ್ಕೃತ ಗೊತ್ತಿರುವವರಿಗೂ ಕ್ಷೇಮೇಂದ್ರನ ಹೆಸರು ಅಷ್ಟಾಗಿ ಪರಿಚಿತವಲ್ಲ ಎಂದರೆ ಅದೊಂದು ಕಟು ಸತ್ಯ ಎಂದು ಬೇಸರವಾಗುತ್ತದೆ.ಏಕೆಂದರೆ ಹನ್ನೊಂದನೆಯ ಶತಮಾನದ ಕಾಶ್ಮೀರದ ಈ ಮಹಾನ್ ಕವಿ ಕ್ಷೇಮೇಂದ್ರನು ಅಪಾರ ಗ್ರಂಥರಾಶಿಯನ್ನೇ ರಚಿಸಿದ್ದಾನೆ! ಅಷ್ಟೇ ಅಲ್ಲದೆ ಅನೇಕ ವಿಷಯಗಳನ್ನು ಕುರಿತು ಬರೆದಿದ್ದಾನೆ.ಒಟ್ಟು ಮೂವತ್ತು ಕೃತಿಗಳನ್ನು ಅವನು ರಚಿಸಿದ್ದಾನೆ.ರಾಮಾಯಣಮಂಜರಿ,ಭಾರತಮಂಜರಿ, ಬೃಹತ್ಕಥಾಮಂಜರಿ, ದಶಾವತಾರಚರಿತಂ, ಬೌದ್ಧ ಅವದಾನಕಲ್ಪಲತಾ, ಮೊದಲಾದ ಕಥಾಕಾವ್ಯಗಳು, ದೇಶೋಪದೇಶ, ಸಮಯಮಾತೃಕಾ, ಕಲಾವಿಲಾಸ, ನರ್ಮಮಾಲಾ, ಸೇವ್ಯಸೇವಕೋಪದೇಶ, ಮೊದಲಾದ ವಿಡಂಬನಕಾವ್ಯಗಳು, ಚಾರುಚರ್ಯಾ, ನೀತಿಕಲ್ಪತರು, ದರ್ಪದಲನ, ಮೊದಲಾದ ನೀತಿಕಾವ್ಯಗಳು, ಕವಿಕಂಠಾಭರಣ, ಔಚಿತ್ಯವಿಚಾರಚರ್ಚಾ , ಮೊದಲಾದ ಅಲಂಕಾರ, ಔಚಿತ್ಯ,ಗಳಂಥ ಕವಿತ್ವಕ್ಕೆ ಸಂಬಂಧಿಸಿದ ಕಾವ್ಯಗಳು, ಹೀಗೆ ಅನೇಕ ಇವೆ ಅವನ ಕೃತಿಗಳು. ಅವನು ಬರೆದ ನೃಪಾವಲೀ, ಚಿತ್ರಭಾರತ, ಮೊದಲಾದ ಅನೇಕ ಕೃತಿಗಳು ಸಿಕ್ಕೂ ಇಲ್ಲ! 
      ದರ್ಪದಲನವೆಂಬ ಈ ಕೃತಿಯಲ್ಲಿ ಕ್ಷೇಮೇಂದ್ರನು ದರ್ಪವನ್ನು ಮುರಿಯುವ ವಿಷಯವನ್ನು ಕುರಿತು ಕಾವ್ಯರಚನೆ ಮಾಡಿದ್ದಾನೆ.ಇದು ಪದ್ಯಾತ್ಮಕವಾದ ಒಂದು ಪುಟ್ಟ ಕೃತಿ.ಏಳು ಅಧ್ಯಾಯಗಳನ್ನು ಹೊಂದಿದ್ದು ವಿವಿಧ ಕಥೆಗಳ ಹಾಗೂ ಸುಭಾಷಿತಗಳ ಮೂಲಕ, ವಿವಿಧ ಕಾರಣಗಳಿಂದ ಉಂಟಾಗುವ ದರ್ಪ ಅಥವಾ ಅಹಂಕಾರವನ್ನು ಮುರಿಯುತ್ತದೆ.ಒಂದೊಂದು ಅಧ್ಯಾಯ ದರ್ಪಕ್ಕೆ ಕಾರಣವಾಗುವ ಒಂದೊಂದು ವಿಷಯವನ್ನು ತೆಗೆದುಕೊಳ್ಳುತ್ತದೆ. ಅವು, ಕುಲ, ಧನ, ವಿದ್ಯೆ, ರೂಪ, ಶೌರ್ಯ, ದಾನ, ಮತ್ತು ತಪಸ್ಸು. ಈ ಎಲ್ಲ ವಿಷಯಗಳಿಂದಲೂ ಮನುಷ್ಯನಿಗೆ ದರ್ಪವುಂಟಾಗಬಹುದು.ಹಾಗಾಗಬಾರದೆಂಬುದೇ ಕವಿಯ ಉದ್ದೇಶ.ಈ ಸೊಗಸಾದ ಗ್ರಂಥವನ್ನು ವಿದ್ವಾಂಸರಾದ ಶ್ರೀಯುತ ಡಾ.ಎಚ್.ವಿ.ನಾಗರಾಜರಾವ್ ಅವರು ಪ್ರಪ್ರಥಮ ಬಾರಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.ಈ ಸುಂದರ ಗ್ರಂಥವನ್ನು ಎಲ್ಲರೂ ಓದಿ ಅದರ ಸದುಪಯೋಗ ಪಡೆದುಕೊಳ್ಳಬೇಕು.
ಲೇಖಕರು: ಕ್ಷೇಮೇಂದ್ರ, ಡಾ.ಎಚ್.ವಿ.ನಾಗರಾಜರಾವ್ 
ಪ್ರಕಾಶಕರು: ಸಂವಹನ, ಮೈಸೂರು
ಬೆಲೆ:ರೂ.೧೩೦/-
ಮೊದಲ ಮುದ್ರಣ:೨೦೧೪
ಪುಟಗಳು:೧೬೮