ಗುರುವಾರ, ಏಪ್ರಿಲ್ 2, 2026

ಸುಂದರೀಶತಕ -೧೫

ಸಂಸ್ಕೃತ ಮೂಲ 

ವಯಸಾ ಕುಂಭಕೃತಾಸ್ಯಾ: ಪರಿಭ್ರಮತ್ಕಾಂತಿಮಂಡಲಚ್ಛಲತ: /
ಅಭ್ರಮಿ ಕಿಮುರಸಿ ಚಕ್ರಂ ಕುಚಕುಂಭಂ ಕರ್ತುಕಾಮೇನ //

ಕನ್ನಡ ಅನುವಾದ 

    ' ಈ ಸುಂದರಿಯ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸಲು ಇವಳ ವಕ್ಷಸ್ಥಳದಲ್ಲಿ ಪರಿಭ್ರಮಿಸುವ ಕಾಂತಿಮಂಡಲವೆಂಬ ನೆಪದಲ್ಲಿ ಚಕ್ರವನ್ನು ತಿರುಗಿಸಿದನೇ?'
     ಇಲ್ಲಿ ಕವಿಯು ಸುಂದರಿಯ ಯೌವನವನ್ನು ಕುಂಬಾರನಿಗೆ ಹೋಲಿಸಿದ್ದಾನೆ! ಅವಳ ದುಂಡುಕುಚಗಳನ್ನು ಅವನು ನಿರ್ಮಿಸುವ ಕುಂಭಗಳಿಗೆ ಹೋಲಿಸಿದ್ದಾನೆ! ಈ ಕುಚಕುಂಭಗಳನ್ನು ನಿರ್ಮಿಸಲು ಚಕ್ರವನ್ನು ತಿರುಗಿಸಬೇಕಲ್ಲವೇ? ಆ ಚಕ್ರವೇ ಅವಳ ವಕ್ಷಸ್ಥಳದಲ್ಲಿ ರಾರಾಜಿಸುತ್ತಿರುವ ಕಾಂತಿಮಂಡಲ! ಹೀಗೆ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸುವ ಆಸೆಯಿಂದ ಅವಳ ವಕ್ಷಸ್ಥಳದಲ್ಲಿ ಕಾಂತಿಮಂಡಲವೆಂಬ ಚಕ್ರವನ್ನು ತಿರುಗಿಸಿದನೇ ಎನ್ನುತ್ತಾ ಕವಿಯು, ಯೌವನದಲ್ಲಿ ಹೆಣ್ಣಿನಲ್ಲಿ ಉದಯಿಸುತ್ತಿರುವ ಸುಂದರ ಕುಚಕುಂಭಗಳನ್ನು ವರ್ಣಿಸುತ್ತಾನೆ.

ಸುಂದರೀಶತಕ -೧೪

ಸಂಸ್ಕೃತ ಮೂಲ 

ವಕ್ಷಸಿ ಸುಮುಖಿ ಭವತ್ಯಾ ಮನೋಹರಂ ಕಾಂತಿಮಂಡಲಂ ಜಯತಿ /
ಭ್ರಾಮಿತಮಭಿನವವಯಸಾ ಕಾಭನೃಪಾದೇಶಚಕ್ರಮಿವ //

ಕನ್ನಡ ಅನುವಾದ 
      ' ಎಲೈ ಸುಮುಖಿ! ನಿನ್ನ ವಕ್ಷಸ್ಥಳದಲ್ಲಿ ಮನೋಹರವಾದ ಕಾಂತಿಮಂಡಲವು ವಿಜಯಶಾಲಿಯಾಗುತ್ತದೆ! ಅದು, ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ!' 
     ಹೆಣ್ಣಿನ ಸೌಂದರ್ಯಕ್ಕೆ ಬಹು ಮುಖ್ಯವಾದ ಅಂಗಗಳೆಂದರೆ ಕುಚಗಳು! ಆ ತುಂಬುಕುಚಗಳ ಕಾರಣದಿಂದ ವಕ್ಷಸ್ಥಳದಲ್ಲಿ ಉಂಟಾಗಿರುವ ಮನೋಹರವಾದ ಕಾಂತಿಮಂಡಲವು ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ ಎಂದು ಕವಿಯು ಹೆಣ್ಣಿನ ವಕ್ಷಸ್ಥಳವನ್ನು ಉತ್ಪ್ರೇಕ್ಷಿಸುತ್ತಾ ವರ್ಣಿಸುತ್ತಾನೆ.

ಸುಂದರೀಶಚಕ -೧೩

ಸಂಸ್ಕೃತ ಮೂಲ 

ಸುತನೋರಿಯತ್ಪ್ರದೇಶೇ ತಿಷ್ಠತು ನವರೋಮರಾಜಿಭುಜಗೀತೀ /
ತ್ರಿವಲಿಸತ್ಯರೇಖಾ ವಯ:ಫಣಿಗ್ರಾಹಿಣಾಕಾರಿ //

ಕನ್ನಡ ಅನುವಾದ 
     ' ಈ ಸುಂದರಿಯ ನವರೋಮರಾಜಿ ಎಂಬ ಸರ್ಪಿಣಿಯು ಇಲ್ಲೇ ಇರಲಿ ಎಂದು ಯೌವನವೆಂಬ ಹಾವಾಡಿಗನು ತ್ರಿವಳಿಗಳೆಂಬ ಮೂರು ಸತ್ಯರೇಖೆಗಳನ್ನು ಗೀಚಿದ್ದಾನೆ!'
     ಇಲ್ಲಿ ಕವಿಯು ಸುಂದರ ಹೆಣ್ಣಿನ ನವರೋಮರಾಜಿಯನ್ನು ( ರೋಮಾವಲಿ ಅಥವಾ ರೋಮರಾಜಿ, ಹೆಣ್ಣಿನ ನಾಭಿಯ ಮೇಲಿನ ತೆಳುಗೂದಲಿನ ಸಾಲು) ಒಂದು ಸರ್ಪಿಣಿಗೆ ಹೋಲಿಸಿದ್ದಾನೆ. ಹಾವಾಡಿಗನು ಹೇಗೆ ಸರ್ಪವು ಎಲ್ಲೂ ಹೋಗದಂತೆ ಅದನ್ನು ಮಂತ್ರಗಳಿಂದ ಬಂಧಿಸುವನೋ, ಹಾಗೆಯೇ ಅವಳ ಯೌವನವೆಂಬ ಹಾವಾಡಿಗನು, ಅವಳ ಹೊಟ್ಟೆಯ ಮೇಲೆ ತ್ರಿವಳಿಗಳೆಂಬ ಮೂರು ಸತ್ಯಗೆರೆಗಳನ್ನು ( ಎಲ್ಲೂ ಹೋಗದಂತೆ ಮಾಡುವ ಗೆರೆಗಳು) ರೋಮಾವಲಿಯೆಂಬ ಸರ್ಪಿಣಿಯು ಎಲ್ಲೂ ಹೋಗದಂತೆ ಎಳೆದಿದ್ದಾನೆ ಎಂದು ಉತ್ಪ್ರೇಕ್ಷಿಸುತ್ತಾ ಸುಂದರಿಯ ರೋಮಾವಲಿ, ತ್ರಿವಳಿಗಳು ಹಾಗೂ ಯೌವನವನ್ನು ಪ್ರಶಂಶಿಸಿದ್ದಾನೆ.

ಬುಧವಾರ, ಏಪ್ರಿಲ್ 1, 2026

ಸುಂದರೀಶತಕ -೧೨

ಸಂಸ್ಕೃತ ಮೂಲ 

ಸ್ಮರರವಿಪುರ:ಸರೀಕೃತಯೌವನಮಾಯಾತಮಭಿಮುಖಂ ಸುತನೋ: /
ಆಲಕ್ಷ್ಯತೇ ಯಥೇಷಾ ರೋಮಾಲಿಚ್ಛದ್ಮತಶ್ಛಾಯಾ //

ಕನ್ನಡ ಅನುವಾದ 
     ' ಈ ಸುಂದರ ತನುವಿನ ಸುಂದರಿಯ ಶರೀರಕ್ಕೆ ಸ್ಮರನೆಂಬ ಸೂರ್ಯನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಅದರ ನೆರಳೇ ರೋಮಾವಲಿಯ ರೂಪದಲ್ಲಿ ಕಾಣುತ್ತಿದೆ!' 
    ಕವಿಯು ಇಲ್ಲಿ ಹೆಣ್ಣಿನ ರೋಮಾವಲಿಯನ್ನು ಕುರಿತು ಇನ್ನೊಂದು ಪದ್ಯವನ್ನು ರಚಿಸಿದ್ದಾನೆ. ಸುಂದರಿಯ ರೋಮಾವಲಿ, ಅವಳ ಯೌವನದ ನೆರಳು ಎಂದು ಸ್ವಾರಸ್ಯವಾಗಿ ಹೇಳುತ್ತಾನೆ. ಹಾಗೆ ನೆರಳು ಬೀಳಬೇಕಾದರೆ ಸೂರ್ಯನಿರಬೇಕಲ್ಲವೇ? ಆ ಸೂರ್ಯನೇ ಸ್ಮರ ಅಥವಾ ಮನ್ಮಥ! ಸೂರ್ಯನೆಂಬ ಮನ್ಮಥನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಆ ಯೌವನದ ನೆರಳು ಬಿದ್ದು ರೋಮಾವಲಿಯಂತೆ ಕಾಣುತ್ತಿದೆ ಎನ್ನುತ್ತಾನೆ ಕವಿ! 

ಭಾನುವಾರ, ಮಾರ್ಚ್ 29, 2026

ಸುಂದರೀಶತಕ -೧೧

ಸಂಸ್ಕೃತ ಮೂಲ 

ಯಾ ತವ ಗಾತ್ರೇ ಯೌವನತಪನರಥಾರೋಹನೇಮಿನವರೇಖಾ /
ಸುಂದರಿ ಸೈವ ಜನಾನಾಂ ಜನಯತಿ ರೋಮಾವಲಿಭ್ರಾಂತಿಮ್ //

ಕನ್ನಡ ಅನುವಾದ 

   ' ಎಲೈ ಸುಂದರಿ! ನಿನ್ನ ಶರೀರದಲ್ಲಿ ಯೌವನವೆಂಬ ಸೂರ್ಯನ ರಥ ಮೇಲೆ ಮೇಲೆ ಚಲಿಸುತ್ತಾ ಅದರ ಚಕ್ರದ ಅಂಚು ಮಾಡಿರುವ ಹೊಸ ರೇಖೆಯನ್ನೇ ಜನರು ರೋಮಾವಲಿ ಎಂದು ಭ್ರಮಿಸುತ್ತಾರೆ!'
     ರೋಮಾವಲಿಯೆಂದರೆ ಹೆಣ್ಣಿನ ನಾಭಿಯ ಮೇಲಿನಿಂದ ಎದೆಯವರೆಗೂ ಸಾಗುವ ತೆಳುಗೂದಲಿನ ಸಾಲು. ಇದು ಮುಖ್ಯವಾಗಿ ನಾಭಿಯ ಮೇಲಿದ್ದರೂ ಕೆಳಗೂ ಸಾಗಿ ಮುಖ್ಯವಾಗಿ ಹೊಟ್ಟೆಯ ಮೇಲಿನ ತೆಳುಗೂದಲಿನ ಸಣ್ಣ ಗೆರೆಯಾಗಿರುತ್ತದೆ. ಇದನ್ನು ರೋಮರಾಜಿ ಎಂದೂ ಕರೆಯಲಾಗಿ ಭಾರತೀಯ ದೃಷ್ಟಿಯಲ್ಲಿ ಹೆಣ್ಣಿನ ಸೌಂದರ್ಯದ ಒಂದು ಮುಖ್ಯ ಲಕ್ಷಣವಾಗಿದೆ. ಸಂಸ್ಕೃತ ಕವಿಗಳು ಹೆಣ್ಣಿನ ಸೌಂದರ್ಯದ ವರ್ಣನೆ ಮಾಡುವಾಗ ರೋಮಾವಲಿಯನ್ನು ವಿಶೇಷವಾಗಿ ವರ್ಣನೆ ಮಾಡಿಯೇ ಮಾಡುತ್ತಾರೆ. ವಿಶ್ವೇಶ್ವರನೆಂಬ ಕವಿ ರೋಮಾವಲಿಯನ್ನು ಕುರಿತು ರೋಮಾವಲೀಶತಕವೆಂಬ ಶತಕವನ್ನೇ ರಚಿಸಿದ್ದಾನೆ! 
    ಇಲ್ಲಿ ಕವಿಯು ಹೆಣ್ಣಿನ ಸೌಂದರ್ಯವನ್ನು ಸೂರ್ಯನ ರಥವೆಂದು ವರ್ಣಿಸುತ್ತಾನೆ. ಆ ರಥ ಅವಳ ಮೈಮೇಲೆ ಚಲಿಸುತ್ತಾ ಹೋದಾಗ, ಅದರ ನೇಮಿ ಅಥವಾ ಚಕ್ರದ ಅಂಚು ಮಾಡುವ ಹೊಸ ರೇಖೆಯನ್ನೇ ಜನರು ರೋಮಾವಲಿಯೆಂದು ಭ್ರಮಿಸುತ್ತಾರೆ ಎನ್ನುತ್ತಾನೆ! ಸಹಜವಾಗಿ ಸುಂದರವಾಗಿ ಉಂಟಾಗಿರುವ ಹೆಣ್ಣಿನ ಅಂಗಾಂಗಗಳಿಗೆ ಕವಿಯು ಉತ್ಪ್ರೇಕ್ಷಿತ ಕಾರಣಗಳನ್ನು ಕೊಡುತ್ತಾ ಅವು ಎಷ್ಟು ಸುಂದರವಾಗಿವೆ ಎಂದು ತೋರಿಸುತ್ತಾನೆ! 

ಶುಕ್ರವಾರ, ಮಾರ್ಚ್ 27, 2026

ರಾಮಾಯಣ ಸಂಬಂಧಿತ ಸ್ವಾರಸ್ಯಕರ ಒಗಟುಗಳು


೧. ಕಂದ ಬಂದ ಕೊಂದ ತಂದ 
         ಸರಳವಾದ ಒಂದೇ ವಾಕ್ಯದಲ್ಲಿ ಈ ಒಗಟು ರಾಮಾಯಣದ ಕಥೆಯನ್ನೇ ಹೇಳುತ್ತದೆ. ಕಂದ, ಎಂದರೆ ಬಾಲ ರಾಮನು ಹುಟ್ಟಿ ಬಂದ, ರಾವಣನನ್ನು ಕೊಂದ, ಸೀತೆಯನ್ನು ಹಿಂದಕ್ಕೆ ಕರೆತಂದ. 

೨. ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು!
    ಮಕ್ಕಳ ಕಣ್ಣಾಮುಚ್ಚಾಲೆ ಆಟದ ಈ ಸರಳ ಪದ್ಯದಲ್ಲಿ ರಾಮಾಯಣದ ಕಥೆ ಅಡಗಿದೆ. ಕಣ್ಣಾ ಮುಚ್ಚೆ ಅಂದರೆ ದಶರಥನು ಕಣ್ಣು ಮುಚ್ಚಲು, ಅಂದರೆ ಮರಣ ಹೊಂದಲು, ಕಾಡೇ ಗೂಡೆ, ಅಂದರೆ ರಾಮ, ಲಕ್ಷ್ಮಣ, ಸೀತೆಯರಿಗೆ ಕಾಡೇ ಗೂಡಾಯಿತು, ಅಂದರೆ ಮನೆಯಾಯಿತು. ಉದ್ದಿನ ಮೂಟೆ ಉರುಳೇಹೋಯ್ತು, ಅಂದರೆ ಉದ್ದಿನ ಮೂಟೆಯಂತೆ ಕೊಬ್ಬಿ ಉಬ್ಬಿದ್ದ ರಾವಣ ಸತ್ತು ಬಿದ್ದ. ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು, ಅಂದರೆ ನಮ್ಮ ಹಕ್ಕಿ ಎಂದು ಭಾವಿಸಿದ್ದ ನಿಮ್ಮ ಹಕ್ಕಿ ಸೀತೆಯನ್ನು ಬಿಟ್ಟೆವು, ಅಂದರೆ ಸೀತೆಯನ್ನು ಗೌರವದಿಂದ ಕಳಿಸಿಕೊಡುತ್ತೇವೆ ಎಂದು ವಿಭೀಷಣ ಹೇಳುವುದು. 
೩ ಹತ್ತುತಾ ಕೆಂಪು, ಆರುತಾ ಕಪ್ಪು, ಅದರ ಮಿತ್ರನ ಮಗನ ಒಡೆಯನ ವೈರಿಯ ಹೆಂಡತಿಯ ಹುಟ್ಹೆಸರೇನು?
      ಇದೊಂದು ಸಂಕೀರ್ಣ ಒಗಟು. ಹತ್ತುತಾ ಕೆಂಪು ಆರುತಾ ಕಪ್ಪು ಅಂದರೆ ಬೆಂಕಿ. ಅದರ ಮಿತ್ರ ಅಂದರೆ ಗಾಳಿ ಅಥವಾ ವಾಯು. ಮಿತ್ರನ ಮಗ ಅಂದರೆ ವಾಯುಪುತ್ರ ಹನುಮಂತ. ಅವನ ಒಡೆಯ ಅಂದರೆ ರಾಮ. ಅವನ ವೈರಿ ಅಂದರೆ ರಾವಣ. ಅವನ ಹೆಂಡತಿಯ ಹುಟ್ಹೆಸರು ಮಂಡೋದರಿ.
೪. ಹತೋ ಹನುಮತಾ ರಾಮ: ಸೀತಾ ಹರ್ಷಮುಪಾಗತಾ /
     ರುದಂತಿ ರಾಕ್ಷಸಾ: ಸರ್ವೇ ಹಾ ಹಾ ರಾಮೋ ಹತೋ      ಹತ: //
      ಇದೊಂದು ಸಂಸ್ಕೃತದ ಕೂಟ ಸಮಸ್ಯೆ. ಮೇಲ್ನೋಟಕ್ಕೆ ಒಂದು ಆರ್ಥ ಕಂಡರೆ ಪದಗಳನ್ನು ಬೇರೆ ರೀತಿಯಲ್ಲಿ ಸೇರಿಸಿದಾಗ ಅಥವಾ ಬಿಡಿಸಿದಾಗ ಬೇರೆ ಅರ್ಥ ಬರುತ್ತದೆ. ಮೇಲ್ನೋಟಕ್ಕೆ ಕಾಣುವ ಅರ್ಥ ಹೀಗಿದೆ -
      ಹನುಮಂತನಿಂದ ರಾಮನು ಹತನಾಗಲು, ಅಂದರೆ ಕೊಲ್ಲಲ್ಪಡಲು ( ಹತೋ ಹನುಮತಾ ರಾಮ:), ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ,' ಹಾ! ಹಾ! ರಾಮನು ಹತನಾದ!' ಎಂದು ಅಳತೊಡಗಿದರು!
    ವಿಚಿತ್ರ ಅರ್ಥವಲ್ಲವೇ? ಇದು ಹೇಗೆ ಸಾಧ್ಯ? ಹನುಮತಾ ರಾಮ: ಎನ್ನುವುದನ್ನು ಹನುಮತಾರಾಮ: ಎಂದು ಸೇರಿಸಿ ಹನುಮತಾ ಆರಾಮ: ಎಂದು ಬಿಡಿಸಿಕೊಂಡರೆ ಹತೋ ಹನುಮತಾ ಆರಾಮ: ಎಂದಾಗುತ್ತದೆ. ಆರಾಮ ಅಂದರೆ ಉದ್ಯಾನವನ. ಆಗ ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು ಎಂದಾಗುತ್ತದೆ. ಪುನಃ  ಹಾರಾಮ ಎಂದು ಸೇರಿಸಿ, ಹಾ ಆರಾಮ ಎಂದು ಬಿಡಿಸಿದರೆ ರಾಕ್ಷಸರು ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು ಎಂದು ಅಳುತ್ತಾರೆ ಎಂಬ ಅರ್ಥ ಬರುತ್ತದೆ. ಈಗ ಶ್ಲೋಕದ ಅರ್ಥ ಹೀಗಾಗುತ್ತದೆ -
       ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು, ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ ' ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು!' ಎಂದು ಅಳತೊಡಗಿದರು.
   

ಗುರುವಾರ, ಮಾರ್ಚ್ 26, 2026

ಶಿಲ್ಪ ಕಥೆ


ಶಿಲ್ಪ ಕಥೆ - ಶ್ರೀರಾಮನಿಂದ ಸಪ್ತತಾಳವೃಕ್ಷಗಳ ಛೇದನ 

     ಇದು ಅಮೃತಾಪುರದ ಅಮೃತೇಶ್ವರ ದೇವಾಲಯದ ಒಂದು ಶಿಲ್ಪ. ಚಿಕ್ಕಮಗಳೂರಿನ ಬಳಿಯ ತರಿಕೆರೆಯಲ್ಲಿರುವ ಈ ಅದ್ಭುತ ದೇವಾಲಯದಲ್ಲಿ ರಾಮಾಯಣ, ಮಹಾಭಾರತ, ಮತ್ತು ಭಾಗವತ ಮೂರೂ ಕಥೆಗಳ ಸುಂದರ ಶಿಲ್ಪಗಳಿವೆ. ಇದು ರಾಮಾಯಣದ ಒಂದು ಕಥಾಪ್ರಸಂಗದ ಒಂದು ಶಿಲ್ಪ. 
     ಶ್ರೀರಾಮನು ವಾನರರಾಜ ಸುಗ್ರೀವನ ಸಖ್ಯ ಬೆಳೆಸಿದ ಬಳಿಕ, ಅವನು ಸೀತೆಯನ್ನು ಹುಡುಕಲು ಸಹಾಯ ಮಾಡುವುದಾಗಿಯೂ ಅದಕ್ಕೆ ಪ್ರತಿಯಾಗಿ ರಾಮನು ತನ್ನನ್ನು ರಾಜ್ಯದಿಂದ ಓಡಿಸಿ ಹೆಂಡತಿ ರುಮೆಯನ್ನು ಅಪಹರಿಸಿರುವ ತನ್ನ ಅಣ್ಣ ವಾಲಿಯನ್ನು ಸಂಹರಿಸಬೇಕೆಂದೂ ಕೇಳುತ್ತಾನೆ. ಅದಕ್ಕೆ ರಾಮನು ಒಪ್ಪಲು, ಸುಗ್ರೀವನು ಅವನ ಬಾಹುಬಲವನ್ನು ಪರೀಕ್ಷಿಸಲು ಸಪ್ತತಾಳವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸಬೇಕೆಂದೂ ವಾಲಿಯು ಹಾಗೆ ಮಾಡುತ್ತಿದ್ದನೆಂದೂ ಹೇಳುತ್ತಾನೆ. ರಾಮನು ಅಂತೆಯೇ ಒಂದೇ ಬಾಣದಿಂದ ಸಪ್ತತಾಳವೃಕ್ಷಗಳನ್ನು ಭೇದಿಸಲು, ಅದು ಅವನ್ನು ಛೇದಿಸಿ ಪುನಃ ಅವನ ಬತ್ತಳಿಕೆಗೆ ಬಂದು ಬೀಳುತ್ತದೆ. ವಾಲ್ಮೀಕಿ ರಾಮಾಯಣದಲ್ಲಿರುವ ಕಥೆ ಇಷ್ಟೇ ಆದರೆ, ಇಲ್ಲಿ ಕಾಣುತ್ತಿರುವ ಶಿಲ್ಪದಲ್ಲಿ ಆ ಸಪ್ತತಾಳವೃಕ್ಷಗಳ ಕೆಳಗೆ ಒಂದು ಸರ್ಪವಿರುವುದನ್ನು ಕಾಣುತ್ತೇವೆ. ಇದೇ ರೀತಿಯ ಶಿಲ್ಪಗಳು ಇತರ ಹೊಯ್ಸಳ ದೇವಾಲಯಗಳಲ್ಲೂ ಕಂಡುಬರುತ್ತವೆ.
      ಈ ಹಾವೇಕೆ ಬಂತು? ವಾಲ್ಮೀಕಿ ರಾಮಾಯಣದಲ್ಲಿ ಹಾವಿನ ಪ್ರಸ್ತಾಪವಿಲ್ಲ. ಆದರೆ ಸಂಸ್ಕೃತದ್ದೇ ಇನ್ನೊಂದು ರಾಮಾಯಣವಾದ ಆನಂದರಾಮಾಯಣದಲ್ಲಿದೆ. ಇದನ್ನೂ ವಾಲ್ಮೀಕಿಗಳೇ ರಚಿಸಿದರೆಂದು ಪ್ರತೀತಿ. ಇದರ ಕಥೆಯ ಪ್ರಕಾರ, ರಾಮನು ಆ ಸಪ್ತತಾಳವೃಕ್ಷಗಳು ಚಕ್ರಾಕಾರವಾಗಿರುವುದನ್ನು ಗಮನಿಸುತ್ತಾನೆ. ಹಾಗಿರುವಾಗ ಒಂದೇ ಬಾಣದಿಂದ ಹೇಗೆ ಅವನ್ನು ಛೇದಿಸಲು ಸಾಧ್ಯ? ಅಲ್ಲದೇ ಅವು ಒಂದು ಸರ್ಪದ ಮೈಮೇಲೆ ಬೆಳೆದಿರುತ್ತವೆ. ಎಲ್ಲಾ ಸರ್ಪಗಳಲ್ಲೂ ಆದಿಶೇಷನ ಅಂಶವಿರುತ್ತದೆಯಲ್ಲವೇ? ಲಕ್ಷ್ಮಣ ಆದಿಶೇಷನ ಅವತಾರವೇ ಆಗಿರುತ್ತಾನೆ. ಹಾಗಾಗಿ ರಾಮನು ತನ್ನ ಅಂಗುಷ್ಠದಿಂದ ಲಕ್ಷ್ಮಣನ ಅಂಗುಷ್ಠವನ್ನು ಒತ್ತುತ್ತಾನೆ. ಆಗ ಆತ ಸರ್ಪಕ್ಕೆ ಒತ್ತಿದಂತಾಗಿ ಸುರುಳಿ ಸುತ್ತಿ ಮಲಗಿರುವ ಅದು ನೆಟ್ಟಗಾಗುತ್ತದೆ! ಆಗ ಅದರ ಮೇಲಿರುವ ಸಪ್ತತಾಳವೃಕ್ಷಗಳೂ ನೆಟ್ಟಗಾಗುತ್ತವೆ! ಆಗ ರಾಮನು ಒಂದೇ ಬಾಣದಿಂದ ಅವನ್ನು ಛೇದಿಸುತ್ತಾನೆ! 
     ಇಷ್ಟಕ್ಕೂ ಆ ಸಪ್ತತಾಳವೃಕ್ಷಗಳು ಏಕೆ ಆ ಸರ್ಪದ ಮೈಮೇಲೆ ಬೆಳೆದಿರುತ್ತವೆ? ಅದಕ್ಕೊಂದು ಕಥೆ ಇದೆ. ಒಮ್ಮೆ ವಾಲಿಯು ಕೆಲವು ತಾಳೆ ಹಣ್ಣುಗಳನ್ನು ಕಿತ್ತುಕೊಂಡು ತಿನ್ನಲೆಂದು ಒಂದು ಗುಹೆಗೆ ಹೋಗಿರುತ್ತಾನೆ. ಆಗ ನೋಡಿದರೆ ಏಳು ತಾಳೆ ಹಣ್ಣುಗಳು ಕಾಣೆಯಾಗಿರುತ್ತವೆ! ಯಾರು ಕದ್ದಿದ್ದು ಎಂದು ನೋಡಲು, ಒಂದು ಸರ್ಪವು ಕದ್ದಿರುತ್ತದೆ. ಆಗ ವಾಲಿಯು ಕೋಪಗೊಂಡು ಆ ಸರ್ಪಕ್ಕೆ," ನಿನ್ನ ಮೈಮೇಲೆ ಏಳು ತಾಳೆ ವೃಕ್ಷಗಳು ಬೆಳೆಯಲಿ!" ಎಂದು ಶಪಿಸಿರುತ್ತಾನೆ. ಅದಕ್ಕೆ ಆ ಸರ್ಪವೂ," ಯಾರು ಆ ಏಳು ತಾಳೆ ವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸುವನೋ ಅವನೇ ನಿನ್ನನ್ನು ಕೊಲ್ಲುತ್ತಾನೆ!" ಎಂದು ಮರುಶಾಪ ನೀಡಿರುತ್ತದೆ!
    ಹೀಗೆ ವಾಲಿಯ ಶಾಪದಿಂದ ಆ ಸರ್ಪದ ಮೈಮೇಲೆ ಏಳು ತಾಳೆ ವೃಕ್ಷಗಳು ಬೆಳೆದಿರುತ್ತವೆ. ರಾಮನು ಅವನ್ನು ಛೇದಿಸಿದ ಬಳಿಕ, ಸರ್ಪಕ್ಕೆ ಶಾಪ ವಿಮುಕ್ತಿಯಾಗುತ್ತದೆ. ಆಗ ಸುಗ್ರೀವನು ವಾಲಿಗೆ ಅವನ ತಂದೆ ಇಂದ್ರನು ಒಂದು ಅಲೌಕಿಕ ಹಾರವನ್ನು ಕೊಟ್ಟಿರುವನೆಂದೂ ಅದನ್ನು ಅವನು ಧರಿಸಿದ್ದಾಗ ಯಾರು ಅದನ್ನು ನೋಡುವರೋ ಅವರ ಅರ್ಧ ಶಕ್ತಿ ವಾಲಿಗೇ ಹೋಗುವುದೆಂದೂ ಹೇಳುತ್ತಾನೆ. ಆಗ ರಾಮನ ಆಜ್ಞೆಯಂತೆ ಆ ಸರ್ಪವು ವಾಲಿಯ ಆ ಹಾರವನ್ನು ಉಪಾಯವಾಗಿ ತೆಗೆದುಕೊಂಡು ಇಂದ್ರನಿಗೆ ಕೊಡುತ್ತದೆ.
     ಇದಿಷ್ಟೂ ಆನಂದ ರಾಮಾಯಣದ ಕಥೆ. ಆದರೆ ಈ ಶಿಲ್ಪದಲ್ಲಿ ರಾಮನು ಏಳು ಮರಗಳನ್ನು ಛೇದಿಸುವುದರೊಂದಿಗೆ ಸರ್ಪವನ್ನೂ ಬಾಣದಿಂದ ಹೊಡೆದಿದ್ದಾನೆ. ಅದು ಸರ್ಪದ ಶಾಪ ವಿಮುಕ್ತಿಗಾಗಿ ಇರಬಹುದು. 
     ಇದಕ್ಕೆ ಕಾರಣ ಇನ್ನೊಂದು ಕಥೆಯಾಗಿದ್ದು, ಅದು ತಮಿಳಿನ ಕಂಬರಾಮಾಯಣ ಹಾಗೂ ಒಡಿಯಾದ ಬಲರಾಮದಾಸನ ಜಗಮೋಹನ ರಾಮಾಯಣ ಮತ್ತು ಉಪೇಂದ್ರ ಭಂಜನ ವೈದೇಹಿಸ ವಿಲಾಸದಲ್ಲಿದೆ. ಈ ಕಥೆಯ ಪ್ರಕಾರ, ಮಣಿಭದ್ರ ಎಂಬ ಯಕ್ಷನಿಗೆ ಕವಿಕಾ ಎಂಬ ಪತ್ನಿಯಿಂದ ಅನೇಕ ಮಕ್ಕಳಿರುತ್ತಾರೆ. ಅವರಲ್ಲಿ ಏಳು ಪುತ್ರರು ಮಯಾಸುರನಿಂದ ಮಾಯಾವಿದ್ಯೆ ಕಲಿತು, ಒಂದು ದೊಡ್ಡ ಸರ್ಪವನ್ನು ಸೃಷ್ಟಿಸಿ ಅದರ ಮೇಲೆ ಕುಳಿತು ಲೋಕಪರ್ಯಟನೆ ಮಾಡುತ್ತಿರುತ್ತಾರೆ. ಒಮ್ಮೆ ಅಗಸ್ತ್ಯ ಮುನಿಗಳು ಬರುತ್ತಿದ್ದಾಗ ಅವರನ್ನು ಅಪಹಾಸ್ಯ ಮಾಡಲು ಅವರು ಆ ಸರ್ಪವನ್ನು ಭೂಮಿಯ ಅಡಿಯಲ್ಲಿ ಹೋಗಿಸಿ ಅದರ ಮೇಲೆ ಸಪ್ತ ತಾಳೆ ವೃಕ್ಷಗಳ ರೂಪ ತಾಳಿ ಚಕ್ರಾಕಾರವಾಗಿ ನಿಂತು ಅವರ ದಾರಿಗೆ ಅಡ್ಡವಾಗುತ್ತಾರೆ. ಆಗ ಅವರು," ಇನ್ನು ಮುಂದೆ ಹೀಗೆಯೇ ನಿಂತಿರಿ!" ಎಂದು ಶಪಿಸುತ್ತಾರೆ! ಆಗ ಅವರು ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲು, ಅಗಸ್ತ್ಯರು, ಅನೇಕ ವರ್ಷಗಳ ಬಳಿಕ ವಿಷ್ಣುವಿನ ಅವತಾರವಾದ ಶ್ರೀ ರಾಮನಿಂದ ಅವರಿಗೆ ಮುಕ್ತಿ ಸಿಗುತ್ತದೆ ಎಂದು ಉಶ್ಶಾಪ ನೀಡುತ್ತಾರೆ. ರಾಮನು ಆ ಏಳು ತಾಳೆ ವೃಕ್ಷಗಳನ್ನು ಛೇದಿಸಬೇಕಾದಾಗ ಒಂದು ಕಲ್ಲನ್ನು ತನ್ನ ಪಾದದಿಂದ ಒತ್ತುತ್ತಾನೆ. ಆಗ ಕಲ್ಲಿನ ಕೆಳಗೆ ಆ ಸರ್ಪದ ತಲೆ ( ಕೆಲವು ಕಥೆಗಳಲ್ಲಿ ಬಾಲ) ಇರಲು, ಅದು ಒತ್ತಲ್ಪಟ್ಟು ಅದಕ್ಕೆ ಪ್ರಚೋದನೆಯಾಗಿ ಸುರುಳಿಯಾಗಿ ಮಲಗಿರುವ ಅದು ನೆಟ್ಟಗಾಗುತ್ತದೆ. ಆಗ ಚಕ್ರಾಕಾರವಾಗಿರೂವ ಮರಗಳು ನೆಟ್ಟಗಾಗಲು, ರಾಮನು ಒಂದೇ ಬಾಣದಿಂದ ಮರಗಳನ್ನೂ ಹಾವನ್ನೂ ಭೇದಿಸುತ್ತಾನೆ ಹಾಗೂ ಆ ಬಾಣ ಅವನ ಬತ್ತಳಿಕೆಗೆ ಹಿಕದಿರುಗುತ್ತದೆ. ಆಗ ಆ ಸಪ್ತ ಕುಮಾರರಿಗೆ ಶಾಪವಿಮುಕ್ತಿಯಾಗುತ್ತದೆ.
    ಒಡಿಯಾ ರಾಮಾಯಣಗಳ ಪ್ರಕಾರ, ಈ ಏಳು ತಾಳವೃಕ್ಷಗಳಲ್ಲಿ ವಾಲಿಯ ಭಾಗಶಃ ಬಲವಿರುತ್ತದೆ. ಹಾಗಾಗಿ ಅವನ್ನು ರಾಮನು ನಾಶ ಮಾಡಬೇಕಾಗಿರುತ್ತದೆ. ಕಂಬ ರಾಮಾಯಣ ಹಾಗೂ ಆನಂದ ರಾಮಾಯಣದಲ್ಲಿ ಹಾಗೇನಿಲ್ಲ. 
    ಹನುಮಂತನು ರಚಿಸಿದನೆನ್ನಲಾದ ಸಂಸ್ಕೃತದ ಹನುಮನ್ನಾಟಕ ಅಥವಾ ಮಹಾನಾಟಕ ಎಂಬ ನಾಟಕದಲ್ಲೂ ಈ ಹಾವಿನ ಮೇಲೆ ಸಪ್ತತಾಳವೃಕ್ಷಗಳಿರುವ ವಿಷಯ ಇದೆ. ಅಲ್ಲಿ ವಾಲಿಯು ರಾಮನು ತನ್ನನ್ನು ಕೊಲ್ಲುವನೆಂದು ಮಾಡಿರುವ ಪ್ರತಿಜ್ಞೆಯನ್ನು ಕೇಳಿ ವಕ್ರವಾಗಿರುವ ಏಳು ತಾಳವೃಕ್ಷಗಳನ್ನು ತಾನೇ ಯುದ್ಧಕ್ಕೆ ಕಳಿಸುತ್ತಾನೆ. ಆಗ ಲಕ್ಷ್ಮಣನು ಅವುಗಳ ಕೆಳಗಿರುವ ಹಾವನ್ನು ತನ್ನ ಪಾದದಿಂದ ಒತ್ತಿ ನೆಟ್ಟಗೆ ಮಾಡಿ, ಮರಗಳು ನೆಟ್ಟಗೆ ನಿಲ್ಲುವಂತೆ ಮಾಡುತ್ತಾ ರಾಮನಿಗೆ ಬಾಣ ಹೊಡೆಯಲು ಸಹಾಯ ಮಾಡುತ್ತಾನೆ.
    ಹೀಗೆ ಈ ಸಪ್ತತಾಳವೃಕ್ಷಗಳೊಂದಿಗೆ ಸರ್ಪದ ಸಂಬಂಧ ಇರುವ ಕಥೆಗಳು ವಾಲ್ಮೀಕಿ ರಾಮಾಯಣದಲ್ಲಿ ಇರದಿದ್ದರೂ ಹಲವು ರಾಮಾಯಣಗಳಲ್ಲಿವೆ. ಅವು ಬಾಯ್ಮಾತಿನಿಂದ ಹರಡಿ ಶಿಲ್ಪಿಗೆ ಈ ರೀತಿಯ ಶಿಲ್ಪ ರಚಿಸಲು ಪ್ರೇರಣೆ ಮಾಡಿರಬಹುದು.

#ಶಿಲ್ಪ_ಕಥೆ #ಶಿಲ್ಪ_ಸ್ವಾರಸ್ಯ