ಸಂಸ್ಕೃತ ಮೂಲ
ಆಶ್ಲೇಷೋऽಧರದಾನಂ ಚುಂಬನಮನಿಮೇಷವೀಕ್ಷಣಂ ಸುರತಮ್ ।
ಇತ್ಯೇಕೈಕಪಣೇನ ಕ್ರೀಡತಿ ಮಿಥುನಂ ಜಿತಾನ್ಯೋನ್ಯಮ್ ।।
ಕನ್ನಡ ಅನುವಾದ
' ಆ ಪ್ರೇಮಜೋಡಿ, ಆಲಿಂಗನ, ಅಧರದಾನ, ಚುಂಬನ, ಕಣ್ಣು ಮಿಟುಕಿಸದೆ ದಿಟ್ಟಿಸಿ ನೋಡುವುದು, ಹಾಗೂ ಸುರತಕ್ರೀಡೆಗಳನ್ನು ಒಂದೊಂದನ್ನೂ ಪಣವಾಗಿಟ್ಟು ದ್ಯೂತವಾಡುತ್ತಾ ಪರಸ್ಪರ ಜಯಿಸುತ್ತದೆ!'
ಸನಾತನ ಧರ್ಮ ಅಥವಾ ವೈದಿಕ ಪರಂಪರೆಯಲ್ಲಿ ಮದುವೆ ಇತ್ಯರ್ಥವಾಗುವುದು ಸಪ್ತಪದಿಯಿಂದ. ಗಂಡು, ಹೆಣ್ಣುಗಳು ಅಗ್ನಿಯ ಸುತ್ತಲೂ ಏಳು ಹೆಜ್ಜೆಗಳನ್ನು ಇಡುತ್ತಾ ಮದುವೆಯನ್ನು ಪೂರ್ಣಗೊಳಿಸುತ್ತಾರೆ. ಆಗ ಒಂದೊಂದು ಹೆಜ್ಜೆಗೂ ಗಂಡು ಹೆಣ್ಣಿಗೆ ಒಂದೊಂದು ಮಂತ್ರ ಹೇಳುತ್ತಾ ಕೊನೆಯ ಏಳನೆಯ ಹೆಜ್ಜೆಯನ್ನಿಡುವಾಗ,' ಸಖಾ ಸಪ್ತಪದೀ ಭವ ' ಎನ್ನುತ್ತಾನೆ. ಅಂದರೆ ಏಳನೆಯ ಹೆಜ್ಜೆಯೊಂದಿಗೆ ನನ್ನ ಸ್ನೇಹಿತೆಯಾಗಿರು ಎಂದು ಅರ್ಥ. ಹೀಗೆ ಸನಾತನ ಧರ್ಮದಲ್ಲಿ ಪತಿ, ಪತ್ನಿಯರು ಸದಾ ಸ್ನೇಹಿತರಂತಿರಬೇಕು ಎಂದು ಅರ್ಥ. ಸನಾತನ ಧರ್ಮ, ಗಂಡು, ಹೆಣ್ಣು, ಇಬ್ಬರಿಗೂ ಸಮಾನತೆ, ಸ್ನೇಹ, ಪ್ರೀತಿಗಳನ್ನು ಹೇಳುತ್ತದೆ. ಅಂತೆಯೇ ಇಲ್ಲಿ ಕವಿಯು ಹಿಂದಿನ ಶ್ಲೋಕದಂತೆಯೇ ಒಂದು ಪ್ರೇಮಜೋಡಿಯ ದ್ಯೂತಕ್ರೀಡೆಯ ಪ್ರಸಂಗವನ್ನು ವರ್ಣಿಸಿದ್ದಾನೆ. ಇಲ್ಲಿ ಪತಿ, ಪತ್ನಿಯರು ಸಂತೋಷದಿಂದ ದ್ಯೂತವಾಡುತ್ತಾ ಪಣವಾಗಿ ಹಣ ಅಥವಾ ವಸ್ತುಗಳನ್ನಿಡುವ ಬದಲಿಗೆ ಆಲಿಂಗನ, ಅಧರದಾನ, ಚುಂಬನ, ಕಣ್ಣು ಮಿಟುಕಿಸದೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುವುದು, ಹಾಗೂ ಸುರತಕ್ರೀಡೆಗಳನ್ನು ಇಟ್ಟು ಆಡುತ್ತಾ ಪರಸ್ಪರ ಜಯಿಸುತ್ತಾರೆ. ಇಲ್ಲಿ ಯಾರು ಜಯಿಸಿದರೂ ಇಬ್ಬರಿಗೂ ಲಾಭವೇ! ಇಂಥ ಪ್ರೇಮದಾಟಗಳಿಂದ ಪತಿ, ಪತ್ನಿಯರ ಸ್ನೇಹ, ಪ್ರೀತಿಗಳು ವರ್ಧಿಸುತ್ತವೆ.