ಶನಿವಾರ, ಆಗಸ್ಟ್ 22, 2026

ಸುಂದರೀಶತಕ -೮೧

ಸಂಸ್ಕೃತ ಮೂಲ 

ಸ್ಮೇರಾನನೇ ಮುಖಂ ತವ ಸುಧಾನಿಧೇರ್ಮಂಡಲೇನ ತುಲಯಂತಮ್ ।
ಏನಂ ನಿಜಾಧರಸುಧಾದಾನೇನ ನ ಕಿಂ ವಿಲಕ್ಷಯಸಿ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಎಲೈ ನಗುಮುಖದ ಸುಂದರಿ! ನಿನ್ನ ಮುಖವನ್ನು ಸುಧಾನಿಧಿಯಾದ ಚಂದ್ರಮಂಡಲದೊಂದಿಗೆ ಹೋಲಿಸುತ್ತಿರುವ ಈ ನಿನ್ನ ಪ್ರಿಯತಮನಿಗೆ ನಿನ್ನ ನಿಜವಾದ ಅಧರಸುಧೆಯನ್ನು ನೀಡಿ ಏಕೆ ಇವನನ್ನು ಲಜ್ಜೆಗೊಳಿಸುವುದಿಲ್ಲ?" 
    ಬಹಳ ಸೊಗಸಾದ ಈ ಶೃಂಗಾರ ಪದ್ಯದಲ್ಲಿ ನಾಯಕನು ತನ್ನ ಪ್ರಿಯತಮೆಯ ಮುಖವನ್ನು ಚಂದ್ರನಿಗೆ ಹೋಲಿಸುತ್ತಾ ಚಂದ್ರನನ್ನು ಸುಧಾನಿಧಿ ಅಥವಾ ಸುಧಾಕರ ಎನ್ನುತ್ತಿದ್ದಾನೆ. ಚಂದ್ರನು ಸುಧೆಯಂಥ ತಂಪಾದ ಬೆಳಕನ್ನು ಬೀರುವುದರಿಂದ ಅವನನ್ನು ಸುಧಾನಿಧಿ ಹಾಗೂ ಸುಧಾಕರ ಎನ್ನುತ್ತಾರೆ. ಆದರೆ ನಾಯಕನು ನಾಯಕಿಗೆ ಅವಳ ನಿಜವಾದ ಅಧರಸುಧೆಯನ್ನು ನೀಡಲು ಪ್ರಾರ್ಥಿಸುತ್ತಾ ತನ್ನನ್ನು ಲಜ್ಜೆಗೊಳಿಸುವಂತೆ ಹೇಳುತ್ತಿದ್ದಾನೆ. ಅಂದರೆ ಅವಳ ಅಧರಸುಧೆ ಚಂದ್ರನ ಸುಧೆಗಿಂತ ಚೆನ್ನಾಗಿರುವುದರಿಂದ ಅದನ್ನು ತನಗೆ ನೀಡಿ, ಅವಳ ಮುಖವನ್ನು ಚಂದ್ರನಿಗೆ ಹೋಲಿಸುತ್ತಿರುವ ತನ್ನನ್ನು ಲಜ್ಜೆಗೊಳಿಸುವಂತೆ ಹೇಳುತ್ತಿದ್ದಾನೆ. ಅವಳ ಮುಖ ಚಂದ್ರನಿಗಿಂತ ಚೆನ್ನಾಗಿದೆ ಎಂದು ತಾತ್ಪರ್ಯ. ಇಲ್ಲಿ ಹೋಲಿಕೆಗೊಳಗಾಗುತ್ತಿರುವ ಸಾಮಾನ್ಯ ವಸ್ತು ಹೆಣ್ಣಿನ ಮುಖ.‌ ಹಾಗಾಗಿ ಅದು ಉಪಮೇಯ. ಅದನ್ನು ಪ್ರಸಿದ್ಧ ವಸ್ತುವಾದ ಚಂದ್ರನಿಗೆ ಹೋಲಿಸಲಾಗುತ್ತಿದೆ. ಹಾಗಾಗಿ ಚಂದ್ರ ಉಪಮಾನ. ಸಾಮಾನ್ಯವಾಗಿ ಮುಖವು ಚಂದ್ರನಂತಿದೆ ಎಂದರೆ ಅದು ಉಪಮಾಲಂಕಾರ. ಆದರೆ ಇಲ್ಲಿ ಉಪಮೇಯವಾದ ಮುಖ, ಅಧರಸುಧೆಯ ಕಾರಣದಿಂದ ಉಪಮಾನವಾದ ಚಂದ್ರನಿಗಿಂತ ಚೆನ್ನಾಗಿದೆ ಎಂದು ಹೇಳಿರುವುದರಿಂದ ವ್ಯತಿರೇಕ ಅಲಂಕಾರವಿದೆ. ಈ ರೀತಿಯ ವಿಭಿನ್ನ ಅಲಂಕಾರದಿಂದ ಪದ್ಯದ ಸೌಂದರ್ಯ ಅಧಿಕವಾಗುತ್ತದೆ.

ಸುಂದರೀಶತಕ -೮೦

ಸಂಸ್ಕೃತ ಮೂಲ 

ಅರ್ಚಿತಚಂಡೀಚರಣಪ್ರಸಾದಫಲಮನ್ಯದುರ್ಲಭಂ ತರುಣ: ।
ಸುಂದರಿ ಹಸಿತಕರಂಬಿತಮಖಂಡಪುಣ್ಯೇನ ಖಂಡಯತ್ಯಧರಮ್ ।।

ಕನ್ನಡ ಅನುವಾದ 

   'ಎಲೈ ಸುಂದರಿ! ಅನ್ಯರಿಗೆ ದುರ್ಲಭವಾದ ದುರ್ಗಾದೇವಿಯ ಚರಣಾನುಗ್ರಹದಿಂದ ದೊರೆತ ಅಖಂಡ ಪುಣ್ಯದಿಂದ, ನಿನ್ನ ನಗುವಿನಿಂದ ಕೂಡಿದ ಅಧರವನ್ನು ಈ ತರುಣನು ಚುಂಬಿಸುತ್ತಾನೆ!' 
    ಯುವದಂಪತಿಗಳ ನಡುವಿನ ಒಂದು ಸುಂದರ ಶೃಂಗಾರಮಯ ಚಿತ್ರಣವಿದು. ತನ್ನ ಪ್ರಿಯತಮೆಯ ಅಧರವನ್ನು ಚುಂಬಿಸುತ್ತಿರುವ ತರುಣನು ತನ್ನನ್ನು ತಾನು ಬಹಳ ಭಾಗ್ಯಶಾಲಿ ಎಂದು ಹೇಳಿಕೊಳ್ಳುತ್ತಿದ್ದಾನೆ. ಇನ್ನೊಬ್ಬರಿಗೆ ದುರ್ಲಭವಾದ ದುರ್ಗಾದೇವಿಯ ಚರಣಾನುಗ್ರಹದಿಂದ ದೊರೆತ ಅಖಂಡ ಪುಣ್ಯದಿಂದಷ್ಟೇ ಹೀಗೆ ಚುಂಬಿಸಲು ತನಗೆ ಸಾಧ್ಯವಾಗುತ್ತಿದೆ ಎಂದು ಹೇಳುತ್ತಿದ್ದಾನೆ. ಖಂಡಯತಿ ಎಂದರೆ ಖಂಡಿಸುತ್ತಾನೆ, ಅಂದರೆ ಕಚ್ಚುತ್ತಾನೆ ಎಂದು ಅರ್ಥ. ದಂತಕ್ಷತವೆನ್ನುವ ಈ ಕಾಮಕ್ರೀಡೆಯಲ್ಲಿ ತುಟಿಗಳನ್ನು ಚುಂಬಿಸುತ್ತಾ ಮೃದುವಾಗಿ ಕಚ್ಚುವುದುಂಟು. ಅಂದರೆ ಅವನು ಅಷ್ಟು ಆಳವಾಗಿ ಚುಂಬಿಸುತ್ತಿದ್ದಾನೆ. ಹೀಗೆ ಪ್ರೀತಿಯಿಂದ, ನಗುವಿನಿಂದ ಕೂಡಿರುವ ಸುಂದರಿಯ ಅಧರವನ್ನು ಚುಂಬಿಸುವುದು ನಿಜಕ್ಕೂ ಪುಣ್ಯವೇ! 

ಮಂಗಳವಾರ, ಆಗಸ್ಟ್ 18, 2026

ಸುಂದರೀಶತಕ -೭೯

ಸಂಸ್ಕೃತ ಮೂಲ 

ಮಧುಧೌತಮಧುರಮಧುರಂ ಧೃತಧಮ್ಮಿಲ್ಲಂ ಧವೇ ಧಯತಿ ।
ಕವಲಯತಿ ಕಿಮಪಿ ಕಂಪಿತಕಾಂತಾಕರಕಂಕಣಕ್ವಣಿತಮ್ ।।

ಕನ್ನಡ ಅನುವಾದ 

   ಪತಿಯು ತನ್ನ ಪ್ರಿಯ ಕಾಂತೆಯ ಅಲಂಕೃತ ತುರುಬನ್ನು ಹಿಡಿದು ಜೇನಿನಿಂದ ತೊಳೆದಂತೆ ಅತಿ ಮಧುರವಾಗಿರುವ ಅವಳ ಅಧರಾಮೃತವನ್ನು ಹೀರುತ್ತಾ ಅವಳ ಕಂಪನದಿಂದುಂಟಾದ ಕರಕಂಕಣಗಳ ಕಿಣಿ ಕಿಣಿ ಶಬ್ದವನ್ನು ಹೇಗೋ ನುಂಗಿಬಿಡುತ್ತಾನೆ!'
    ಕವಿಯು ಇಲ್ಲಿ ಪತಿ, ಪತ್ನಿಯರ ರತಿಕ್ರೀಡೆಯ ಅತ್ಯಂತ ಮಧುರವಾದ ಸನ್ನಿವೇಶವನ್ನು ರಸವತ್ತಾಗಿ ವರ್ಣಿಸಿದ್ದಾನೆ. ಪತಿಯು ತನ್ನ ಪ್ರಿಯ ಪತ್ನಿಯ ಅಲಂಕೃತ ತುರುಬನ್ನು ಹಿಡಿದು ಅವಳ ತುಟಿಗಳನ್ನು ಚುಂಬಿಸುತ್ತಾ ಅಧರಾಮೃತವನ್ನು ಹೀರುತ್ತಿದ್ದಾನೆ.‌ ಆ ತುಟಿಗಳು ಜೇನಿನಿಂದ ತೊಳೆದಂತಿವೆ ಎನ್ನುತ್ತಾ ಮಧುರಮಧುರಂ ಎಂದು ಎರಡು ಬಾರಿ ಹೇಳುತ್ತಾ ಅತಿಮಧುರವಾಗಿವೆ ಎನ್ನುತ್ತಾನೆ. ಆದರೆ ಎಲ್ಲಾ ನವವಿವಾಹಿತ ಸ್ತ್ರೀಯರಿಗಿರುವಂತೆ, ಇಲ್ಲೂ ನಾಯಕಿಗೆ ಸಂಭೋಗವೆಂದರೆ ಸ್ವಲ್ಪ ಭಯವಾಗಿ ನಡುಗುತ್ತಿದ್ದಾಳೆ. ಅವಳ ಆ ಕಂಪನದಿಂದ ಕೈಬಳೆಗಳು ಕಿಣಿ ಕಿಣಿ ಶಬ್ದವನ್ನು ಮಾಡುತ್ತಿವೆ. ಆದರೆ ಪತಿಯು ಅವಳ ಅದರಾಮೃತಪಾನ ಮಾಡುತ್ತಾ ಆ ಬಳೆಗಳ ಶಬ್ದವನ್ನೂ ಹೇಗೋ ನುಂಗಿಬಿಡುತ್ತಾನೆ ಎನ್ನುತ್ತಾನೆ ಕವಿ! ಕವಲಯತಿ ಎಂದರೆ ನುಂಗಿಬಿಡುತ್ತಾನೆ ಎಂದು ಅರ್ಥ. ಅಂದರೆ ಆ ಶಬ್ದವನ್ನೇ ಅಡಗಿಸಿಬಿಡುತ್ತಾನೆ! ಅದು ಗೊತ್ತಾಗದಂತೆ ಮಾಡುತ್ತಾನೆ! ಅಂದರೆ ಅವನು ಅದೆಷ್ಟು ಪ್ರೀತಿಯಿಂದ, ರಸಿಕತೆಯಿಂದ ಅವಳ ಅಧರವನ್ನು ಚುಂಬಿಸಿ ಹೀರುತ್ತಿದ್ದಾನೆಂದರೆ ಅವಳ ಭಯ, ನಡುಕ, ಮತ್ತು ಬಳೆಗಳ ಕಿಣಿಕಿಣಿ ಶಬ್ದಗಳೆಲ್ಲವನ್ನೂ ಹೋಗಲಾಡಿಸಿ ಅವಳು ಅವನ ಪ್ರೇಮದಲ್ಲಿ ಒಂದಾಗುವಂತೆ, ಮೈಮರೆಯುವಂತೆ ಮಾಡುತ್ತಿದ್ದಾನೆ! ಇದರಲ್ಲಿ ಒಂದು ವೈಜ್ಞಾನಿಕ ಸತ್ಯವೂ ಇದೆ. ಪತಿಯು ತನ್ನ ಹೆದರಿದ ಪತ್ನಿಯನ್ನು ಪ್ರೀತಿಯಿಂದ ಮುದ್ದಿಸುತ್ತಾ ನಿಧಾನವಾಗಿ ರಸಿಕತೆಯಿಂದ ಸಂಭೋಗಿಸುತ್ತಾ ಅವಳ ಭಯ, ಕಂಪನಗಳನ್ನು ಹೋಗಲಾಡಿಸಿ ಅವಳನ್ನು ತನ್ನ ಪ್ರೇಮದಲ್ಲಿ ಒಂದಾಗಿಸಿಕೊಳ್ಳಬೇಕೇ ಹೊರತು, ಆತುರ, ಬಲಾತ್ಕಾರಗಳಿಂದ ಭಯವನ್ನು ಹೆಚ್ಚಿಸುವಂತೆ ಸಂಭೋಗಿಸಬಾರದು. ಪ್ರೀತಿಯ, ರಸಿಕತೆಯ ಮಿಲನವಾದರೆ ಅದು ಮತ್ತೆ ಮತ್ತೆ ಬೇಕೆನಿಸುತ್ತದೆ ಹಾಗೂ ಅಂಥ ಸವಿಯಾದ ಶೃಂಗಾರಾನುಭವ ಸಿಕ್ಕ ಪತ್ನಿಯು ತನ್ನ ಪತಿಯನ್ನು ಮನಸಾರೆ ಪ್ರೀತಿಸುತ್ತಾಳೆ.

ಭಾನುವಾರ, ಆಗಸ್ಟ್ 16, 2026

ಎರಡು ತಲೆಗಳ ಹಕ್ಕಿ -ಪಂಐತಂತ್ರದ ಅಪರೂಪದ ಕಥೆ

ಇದು ಹಂಚಿಕೊಂಡು ಬದುಕಬೇಕೆಂದು ಬೋಧಿಸುವ ಪಂಚತಂತ್ರದ ಒಂದು ಕಥೆ.
   ಒಂದಾನೊಂದು ಕಾಲದಲ್ಲಿ ಭಾರುಂಡ ( ಗಂಡಭೇರುಂಡ) ಎಂಬ ಒಂದು ವಿಚಿತ್ರ ಪಕ್ಷಿಯಿತ್ತು. ಅದಕ್ಕೆ ದೇಹ ಒಂದೇ ಇದ್ದರೂ ತಲೆಗಳು ಎರಡಿದ್ದವು.‌ ಒಮ್ಮೆ ಒಂದು ತಲೆಗೆ ಒಂದು ಸಿಹಿಯಾದ ಹಣ್ಣು ಸಿಕ್ಕಿತು. ಅದು ಆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನುತ್ತಾ," ಅಬ್ಬ! ಇಂಥ ರುಚಿಯಾದ ಹಣ್ಣನ್ನು ನಾನೆಂದೂ ತಿಂದಿಲ್ಲ!" ಎಂದಿತು. ಆಗ ಇನ್ನೊಂದು ತಲೆ," ನನಗೂ ಸ್ವಲ್ಪ ಕೊಡು! ನಾನೂ ರುಚಿ ನೋಡುತ್ತೇನೆ!" ಎಂದಿತು. ಅದಕ್ಕೆ ಮೊದಲನೆಯ ತಲೆ," ನಮ್ಮಿಬ್ಬರಿಗೂ ಒಂದೇ ಹೊಟ್ಟೆಯಿದೆ! ಹಾಗಾಗಿ ನಾನೊಬ್ಬನೇ ತಿಂದರೂ ಸಾಕು! ನಮ್ಮ ಹೊಟ್ಟೆಗೆ ತೃಪ್ತಿಯಾಗುತ್ತದೆ! ಉಳಿದದ್ದನ್ನು ನಮ್ಮ ಹೆಂಡತಿಗೆ ಕೊಡೋಣ!" ಎಂದಿತು. ಪಾಪ, ಈ ಎರಡನೆಯ ತಲೆಗೆ ಏನೂ ಹೇಳಲಾಗಲಿಲ್ಲ.
    ಮೊದಲ ತಲೆ ಆ ಹಣ್ಣನ್ನು ಅರ್ಧ ತಿಂದ ಬಳಿಕ ಉಳಿದರ್ಧವನ್ನು ಹೆಂಡತಿಗೆ ಕೊಟ್ಟಿತು. ಅದು ಆ ಹಣ್ಣನ್ನು ತಿಂದು ಬಹಳ ಸಂತೋಷಗೊಂಡು ದಿನವಿಡೀ ಆ ತಲೆಯನ್ನು ಆಲಂಗಿಸಿ ಚುಂಬಿಸಿತು! ಇದರಿಂದ ಎರಡನೆಯ ತಲೆಗೆ ಅನಾದರ ತೋರಿದಂತಾಗಿ ದುಃಖವಾಯಿತು. ಅಂತೆಯೇ ಮೊದಲನೆಯ ತಲೆಯ ಮೇಲೆ ಅದಕ್ಕೆ ಕ್ರಮೇಣ ದ್ವೇಷ ಬೆಳೆಯಿತು! ಹೇಗಾದರೂ ಮಾಡಿ ಅದರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯತೊಡಗಿತು.
   ಒಂದು ದಿನ, ಎರಡನೆಯ ತಲೆಗೆ ಒಂದು ವಿಷಪೂರಿತ ಹಣ್ಣು ಸಿಕ್ಕಿತು! ಅದು ಆ ಹಣ್ಣನ್ನು ತೆಗೆದುಕೊಂಡು ಮೊದಲನೆಯ ತಲೆಗೆ ಹೇಳಿತು," ಇತರರನ್ನು ನಿರ್ಲಕ್ಷಿಸುವೆಯಲ್ಲವೇ? ಈಗ ಈ ವಿಷದ ಹಣ್ಣನ್ನು ತಿನ್ನುತ್ತೇನೆ ನೋಡು!" 
   ಆಗ ಎರಡನೆಯ ತಲೆ," ಅಯ್ಯೋ ಮೂರ್ಖ! ಅದನ್ನು ತಿನ್ನಬೇಡ! ನೀನು ತಿಂದರೆ ನಾವಿಬ್ಬರೂ ಸಾಯುತ್ತೇವೆ! "
   ಆದರೆ ಎರಡನೆಯ ತಲೆ ಅದರ ಮಾತು ಕೇಳದೆ ವಿಷದ ಹಣ್ಣನ್ನು ತಿಂದುಬಿಟ್ಟಿತು! ಆಗ ಎರಡೂ ಸತ್ತವು!
    ನಾವು ಸಂಸಾರದಲ್ಲೇ ಆಗಲಿ, ಕೆಲಸದ ಕಚೇರಿಯಲ್ಲೇ ಆಗಲಿ, ಒಂದು ಸಾಂಘಿಕ ಕಾರ್ಯದಿಂದ ನಡೆಯುವ 
ಸಂಸ್ಥೆಯಲ್ಲಿಯೇ ಆಗಲಿ, ಒಟ್ಟಿಗಿರುವಾಗ, ಯಾರನ್ನೂ ಉಪೇಕ್ಷಿಸಬಾರದು.‌ ಎಲ್ಲರಿಗೂ ಸಮಾನವಾದ ಗೌರವ, ಮರ್ಯಾದೆಗಳನ್ನು ನೀಡಬೇಕು. ಒಬ್ಬ ಕೆಲಸದವನನ್ನೂ ನಿರ್ಲಕ್ಷಿಸಬಾರದು. ಹಾಗೆ ನಿರ್ಲಕ್ಷಿಸಿದರೆ ಆ ವ್ಯಕ್ತಿಗಳಲ್ಲಿ ದ್ವೇಷವುಂಟಾಗಬಹುದು. ಆಗ ಅವರು ಇತರರಿಗೆ ಅಥವಾ ಸಂಸಾರ, ಅಥವಾ ಮೂಲ ಕಚೇರಿ ಅಥವಾ ಸಂಸ್ಥೆಗೆ ತೊಂದರೆ ಮಾಡಲು ಹೋದರೆ ಆ‌ ಇತರರಿಗೆ, ಸಂಸಾರಕ್ಕೆ, ಕಚೇರಿಗೆ ಅಥವಾ ಸಂಸ್ಥೆಗೆ ಇವರೂ ಸಂಬಂಧಪಟ್ಟಿರುವುದರಿಂದ, ಅವರೊಂದಿಗೆ ಇವರಿಗೂ ತೊಂದರೆಯಾಗುತ್ತದೆ! ಹೀಗೆ ಈ ಪುಟ್ಟ ಕಥೆಯಲ್ಲಿ ಎರಡು ನೀತಿಗಳನ್ನು ನೋಡಬಹುದು.

ಶನಿವಾರ, ಆಗಸ್ಟ್ 15, 2026

ಸುಂದರೀಶತಕ -೭೮

ವಿಶ್ಲಥಯತಿ ಕಿಮಪಿ ನೀವೀಂ ಕಲಕಂಠಿ ರತಸ್ಯ ಕೂಜಿತಂ ಯತ್ತೇ ।
ಶಿಕ್ಷಾವಿಸ್ಮೃತಿರೇಷಾ ಗುರೋರಭಕ್ತಿಂ ನಿವೇದಯತಿ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಎಲೈ ಕಲಕಂಠಿ! ರತಿಕ್ರೀಡೆಯ ಸಮಯದಲ್ಲಿ ನೀನು ಮಾಡುವ ಸೀತ್ಕಾರದ ಕೂಗು ಹೇಗೋ ನಿನ್ನ ನೀವಿಯ ಗಂಟನ್ನು ಸಡಿಲಗೊಳಿಸುತ್ತಿದೆ! ಇದು ನೀನು ಪಡೆದ ಶಿಕ್ಷಣದ ವಿಸ್ಮೃತಿಯಾಗಿದ್ದು ಗುರುವಿನಲ್ಲಿ ಅಭಕ್ತಿಯನ್ನು ತೋರಿಸುತ್ತದೆ!' 
     ರತಿಕ್ರೀಡೆಯ ಸಮಯದಲ್ಲಿ ಇಲ್ಲಿ ನಾಯಕನು ನಾಯಕಿಯನ್ನು ಛೇಡಿಸುತ್ತಿದ್ದಾನೆ. ರತಿಕ್ರೀಡೆಯ ಸಮಯದಲ್ಲಿ ಅವಳು ಮಾಡುವ ಸೀತ್ಕಾರದ ಶಬ್ದಗಳನ್ನು ಕೇಳಿ ಅವಳನ್ನು ಅವನು ಕಲಕಂಠಿ, ಅಂದರೆ ಸುಂದರ ಕಂಠದವಳು ಎಂದು ಕರೆಯುತ್ತಾನೆ. ಅವಳು ಮಾಡುತ್ತಿರುವ ಆ ರತಿಕೂಜಿತವೇ ಅವಳ ಕೆಳವಸ್ತ್ರದ ಪಟ್ಟಿಯಾದ ನೀವಿಯ ಗಂಟನ್ನು ಹೇಗೋ ಸಡಿಲಿಸುತ್ತಿದೆ. ಅದನ್ನು ತೋರಿಸುತ್ತಾ ಅವನು ಅವಳನ್ನು ಗಾಂಭೀರ್ಯ ಕಳೆದುಕೊಂಡಿದ್ದಾಳೆ, ಗುರುಹಿರಿಯರಿಂದ ಪಡೆದ ಶಿಕ್ಷಣವನ್ನು ಮರೆತಿದ್ದಾಳೆ, ಇದು ಗುರುಹಿರಿಯರಲ್ಲಿನ ಅವಳ ಅಭಕ್ತಿಯನ್ನು ತೋರಿಸುತ್ತದೆ ಎಂದು ಛೇಡಿಸುತ್ತಿದ್ದಾನೆ. ಸಾಮಾನ್ಯವಾಗಿ ಗಂಡನು ಹೆಂಡತಿಯ ನೀವಿಯನ್ನು ಸಡಿಲಿಸುತ್ತಾನೆ. ಆಗ ಗಾಂಭೀರ್ಯವನ್ನು ನಟಿಸುವ ಹೆಂಡತಿ ನಾಚಿಕೆಯಿಂದ ಅದನ್ನು ತಡೆಯುತ್ತಾಳೆ. ಆದರೆ ಇಲ್ಲಿ ಅವಳು ಮಾಡುವ ಸೀತ್ಕಾರಗಳಿಂದ ತಾನಾಗಿಯೇ ನೀವಿಯ ಗಂಟು ಸಡಿಲವಾಗುತ್ತಿದೆ. ಇದನ್ನು ನೋಡಿ ಗಂಡನು ತಾನೇನೂ ನೀವಿಯ ಗಂಟನ್ನು ಸಡಿಲಿಸಲಿಲ್ಲ, ನೀನೇ ಸಡಿಲಿಸಿಕೊಂಡು ಗಾಂಭೀರ್ಯ ಬಿಟ್ಟಿರುವೆ, ಸದಾ ಬಹಳ ಗಾಂಭೀರ್ಯದವಳು, ಲಜ್ಜಾನ್ವಿತಳು ಎನ್ನುವ ನೀನು ಈಗ ಗುರುಹಿರಿಯರ ಶಿಕ್ಷಣ ಮರೆತಿರುವೆ, ನಿರ್ಲಜ್ಜಿತಳಾಗಿರುವೆ ಎಂಬ ಅರ್ಥದಲ್ಲಿ ಅವಳನ್ನು ಹಾಸ್ಯ ಮಾಡಿ ಛೇಡಿಸುತ್ತಿದ್ದಾನೆ. ಇದು ಪ್ರಿಯ ಪತಿ, ಪತ್ನಿಯರ ನಡುವಿನ ಒಂದು ರಮ್ಯ ಶೃಂಗಾರದ ಕ್ಷಣ.

ಸುಂದರೀಶತಕ -೭೭

ಸಂಸ್ಕೃತ ಮೂಲ 

ಭ್ರೂಭಂಗಭಂಗಿಭುಗ್ನಂ ತಿರ್ಯಕ್ಚಲಲೋಚನಂ ಮುಖಂ ದಧತೀ /
ಸುರತಪ್ರಾರ್ಥನವೇಲಾಕೃತಾವಹೇಲಾ ವಧೂರ್ಜಯತಿ //

ಕನ್ನಡ ಅನುವಾದ 

    ಪ್ರಿಯ ಪತಿಯು ಸುರತಕ್ರೀಡೆಗಾಗಿ ಪ್ರಾರ್ಥಿಸುವ ಸಮಯದಲ್ಲಿ ಅವನ ನವವಧುವು ಹುಬ್ಬುಗಂಟುಹಾಕಿಕೊಂಡ ಭಂಗಿಯಲ್ಲಿ ವಕ್ರವಾಗಿಸಿ ಕಣ್ಣು ತಿರುಗಿಸಿದ ಮುಖದಿಂದ ನಿರಾಕರಣೆ ಮಾಡಿ ಜಯಿಸುತ್ತಾಳೆ!' 
    ರಾತ್ರಿಯ ನೂತನ ಪತಿ,ಪತ್ನಿಯರ ಒಂದು ಶೃಂಗಾರ ರಮ್ಯ ದೃಶ್ಯವನ್ನು ಕವಿ ಇಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಪತಿಯು ತನ್ನ ಪತ್ನಿಯನ್ನು ಶೃಂಗಾರ ಸುರತಕ್ರೀಡೆಗಾಗಿ ಬೇಡುತ್ತಿದ್ದಾನೆ. ಆದರೆ ಹೊಸದಾಗಿ ಮದುವೆಯಾಗಿರುವ ಅವನ ನವವಧುವಿಗೆ ಕೂಡಲೇ ಒಪ್ಪಿಗೆ ಸೂಚಿಸಲು ನಾಚಿಕೆ. ಹಾಗಾಗಿ ಸ್ವಲ್ಪ ಅಣಕು ಕೋಪದ, ನಾಚಿಕೆ ಮಿಶ್ರ ಭಾವದಿಂದ ಹುಬ್ಬು ಗಂಟು ಹಾಕಿಕೊಂಡು ಕಣ್ಣು ತಿರುಗಿಸಿ ಇಲ್ಲವೆಂದು ಸೂಚಿಸುತ್ತಿದ್ದಾಳೆ. ಅವಳ ಈ ಮುದ್ದಾದ ಭಾವ ಬಹಳ ರಮ್ಯವಾಗಿ ಕಾಣುತ್ತದೆ. ಹಾಗಾಗಿ ಅವಳು ಜಯಿಸುತ್ತಾಳೆ ಎನ್ನುತ್ತಾನೆ ಕವಿ. ಸ್ತ್ರೀಯರ ಕೆಲವು ಮುಖಭಾವಗಳನ್ನು ಎಷ್ಟು ವರ್ಣಿಸಿದರೂ ಸಾಲದು. ಅವುಗಳನ್ನು ನೋಡಿಯೇ ಅರಿಯಬೇಕು ಹಾಗೂ ಸವಿಯಬೇಕು. ಹೀಗೆ ಸುರತಕ್ರೀಡೆಗಾಗಿ ಪ್ರಾರ್ಥಿಸಿದಾಗ ನೂತನ ಪತ್ನಿ ಇಲ್ಲ ಎಂದು ಮುದ್ದಾಗಿ ಹೇಳಿದರೂ ಅದು ಚೆನ್ನ! ಹಾಗೆ ನಿರಾಕರಿಸಿಕೊಂಡ ಪತಿಗಳೂ ಧನ್ಯ! 

ಸೋಮವಾರ, ಆಗಸ್ಟ್ 10, 2026

ಬ್ರಾಹ್ಮಣ ಮತ್ತು ರಾಕ್ಷಸ - ಪಂಚತಂತ್ರದ ಅಪರೂಪದ ಕಥೆ

ಬ್ರಾಹ್ಮಣ ಮತ್ತು ರಾಕ್ಷಸ - ಪಂಚತಂತ್ರದ ಅಪರೂಪದ ಕಥೆ 

ಪಂಚತಂತ್ರದ ಈ ಕಥೆ ನಾವು ಸದಾ ಪ್ರಶ್ನಿಸುತ್ತಿರಬೇಕೆಂಬ ನೀತಿಯನ್ನು ಬೋಧಿಸುತ್ತದೆ.
     ಒಮ್ಮೆ ಒಬ್ಬ ಬ್ರಾಹ್ಮಣನು ಯಾವುದೋ ಒಂದು ಸ್ಥಳಕ್ಕೆ ಒಂದು ಕಾಡುದಾರಿಯ ಮೂಲಕ ಹೋಗುತ್ತಿದ್ದನು. ಆಗ ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಒಬ್ಬ ರಾಕ್ಷಸ, ತನ್ನನ್ನು ಹೆಗಲ ಮೇಲೆ ಹೊತ್ತು ನಡೆಯುವಂತೆ ಗರ್ಜಿಸಿದ! ಹೆದರಿ ನಡುಗಿದ ಬ್ರಾಹ್ಮಣ, ಬೇರೆ ದಾರಿಯಿಲ್ಲದೆ ಅವನನ್ನು ತನ್ನ ಹೆಗಲಿನ ಮೇಲೆ ಹೊತ್ತು ನಡೆಯತೊಡಗಿದ. ಹಾಗೆ ನಡೆಯುತ್ತಿರುವಾಗ ಅವನ ಪಾದಗಳನ್ನು ಹಿಡಿದಿದ್ದ ಬ್ರಾಹ್ಮಣನಿಗೆ ಅವು ಕಮಲ ಪುಷ್ಪದ ಒಳಭಾಗದಂತೆ ಬಹಳ ಮೃದುವಾಗಿರುವುದನ್ನು ನೋಡಿ ಆಶ್ಚರ್ಯವಾಯಿತು! ಆಗ ಅವನು ಅವು ಹಾಗೇಕೆ ಅಷ್ಟು ಮೃದುವಾಗಿವೆ ಎಂದು ಕೇಳಿದ. ಅದಕ್ಕೆ ರಾಕ್ಷಸನು," ನಾನೊಂದು ವ್ರತವನ್ನು ಪಾಲಿಸುತ್ತಿದ್ದೇನೆ. ಅದರಂತೆ, ನನ್ನ ಪಾದಗಳು ಒದ್ದೆಯಾಗಿರುವಾಗ ಅವನ್ನು ನೆಲದ ಮೇಲಿಡುವುದಿಲ್ಲ", ಎಂದನು. ಸರಿಯೆಂದು ಬ್ರಾಹ್ಮಣನು ಮುಂದುವರಿದು ನಡೆಯುತ್ತಾ ಹೋದನು. 
    ದಾರಿಯಲ್ಲಿ ಒಂದು ನದಿಯು ಕಾಣಿಸಲು, ರಾಕ್ಷಸನು ಬ್ರಾಹ್ಮಣನ ಹೆಗಲಿನಿಂದ ಇಳಿಯುತ್ತಾ," ನಾನೀಗ ಸ್ನಾನ ಮಾಡಿ ದೇವರ ಪೂಜೆ ಮಾಡುವೆನು. ಅಲ್ಲಿಯವರೆಗೂ ನೀನು ಇಲ್ಲಿಯೇ ಇರಬೇಕು!", ಎಂದು ನದಿಯಲ್ಲಿ ಇಳಿದನು.
    ಈಗ ಬ್ರಾಹ್ಮಣನು, ಸ್ನಾನವಾದ ಕೂಡಲೇ ರಾಕ್ಷಸನ ಪಾದಗಳು ಒದ್ದೆಯಾಗಿರುವುದರಿಂದ ಅವನು ನೆಲದ ಮೇಲೆ ಕಾಲಿಡುವುದಿಲ್ಲವೆಂದು ಅರಿತು ಓಡಿಹೋದನು!
    ಹೀಗೆ ಪ್ರಶ್ನೆ ಕೇಳಿದ್ದರಿಂದ ಬ್ರಾಹ್ಮಣನಿಗೆ ರಾಕ್ಷಸನ ರಹಸ್ಯ ತಿಳಿದು ತಪ್ಪಿಸಿಕೊಳ್ಳಲು ಅನುಕೂವಾಯಿತು. ಆದ್ದರಿಂದ ಸದಾ ಪ್ರಶ್ನಿಸುತ್ತಿರಬೇಕು.
     ಸಾಮಾನ್ಯವಾಗಿ ನಾವು ಅಪಾಯ ಬಂದಾಗ ಕಂಗಾಲಾಗುತ್ತೇವೆ. ಹಾಗೆ ಹೆದರಿಬಿಟ್ಟರೆ ಮುಂದೇನು ಮಾಡಬೇಕೆಂದು ಬುದ್ಧಿ ಓಡುವುದಿಲ್ಲ. ಹಾಗಾಗಿ, ನಾವು ಅಪಾಯದ ಮೂಲವೇನು, ಏನು ಮಾಡಿದರೆ ಅದರಿಂದ ಪಾರಾಗಬಹುದು, ಮೊದಲಾಗಿ ಅದರ ಬಗೆಗಿನ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದರಿಂದ ಹೊರಬರಲು ಏನಾದರೂ ಉಪಾಯ ಹೊಳೆಯುತ್ತದೆ. ಆದರೆ ಪರಿಹಾರಕ್ಕಾಗಿ ಪ್ರಶ್ನಿಸಿ ಪ್ರಯತ್ನಿಸದೇ ಸಮಸ್ಯೆಯ ಸುಳಿಯಲ್ಲೇ ಒದ್ದಾಡುತ್ತಿದ್ದರೆ ಅದು ಇನ್ನಷ್ಟು ಬಿಗಡಾಯಿಸುತ್ತದೆ.