ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ।।
ನಾವು ಸಾಮಾನ್ಯವಾಗಿ ಗಣೇಶನ ಪೂಜೆಗೆ ಮೊದಲು ಈ ಶ್ಲೋಕವನ್ನು ಹೇಳಿಕೊಳ್ಳುತ್ತೇವೆ. ಬಿಳಿಯ ವಸ್ತ್ರಧಾರಿಯೂ ಚಂದ್ರನ ಬಿಳಿಯ ವರ್ಣದವನೂ ಪ್ರಸನ್ನವದನನೂ ಆದ ವಿಷ್ಣುವನ್ನು ಎಲ್ಲಾ ವಿಘ್ನಗಳ ನಿವಾರಣೆಗಾಗಿ ಧ್ಯಾನಿಸಬೇಕು ಎಂಬುದು ಇದರ ಅರ್ಥ. ಗಣೇಶನು ವಿಘ್ನನಿವಾರಕ ದೇವರಾದ್ದರಿಂದ ಅವನನ್ನು ವಿಘ್ನೇಶ್ವರ ಎಂದು ಕರೆಯುತ್ತೇವೆ. ಆದರೆ ಇಲ್ಲಿ ವಿಷ್ಣುವನ್ನು ವಿಘ್ನಗಳ ನಿವಾರಣೆಗಾಗಿ ಧ್ಯಾನಿಸಬೇಕೆಂದು ಹೇಳಿದೆ. ವಿಷ್ಣುವೆಂಬ ಪದವು ಸರ್ವವ್ಯಾಕಪಕ್ವವನ್ನು ಸೂಚಿಸುವುದರಿಂದಲೂ ಪರಮಾತ್ಮನಾದ ವಿಷ್ಣುವೇ ಎಲ್ಲಾ ದೇವತೆಗಳ ಅಂತರಾತ್ಮನಾಗಿರುವುದರಿಂದಲೂ ಗಣೇಶನ ಪೂಜೆಗೆ ವಿಷ್ಣುವನ್ನು ಪ್ರಾರ್ಥಿಸಲಾಗುತ್ತದೆ ಎಂದು ಇದಕ್ಕೆ ಸಮರ್ಥನೆ ನೀಡಬಹುದಾದರೂ, ನಾವು ಪುರಾಣಗಳನ್ನು ಓದುತ್ತಾ ಹೋದಂತೆ ವಿಷ್ಣುವಿಗೂ ಗಣಪತಿಗೂ ಇರುವ ಒಂದು ಸ್ವಾರಸ್ಯಕರ ನಂಟು ತೆರೆದುಕೊಳ್ಳುತ್ತದೆ.
ಎಲ್ಲರಿಗೂ ಗೊತ್ತಿರುವಂತೆ ಗಣೇಶನು ಪಾರ್ವತಿಯ ಮೈಮಣ್ಣಿನಿಂದ ಹುಟ್ಟಿದ ದೇವರು. ಅವಳು ಸ್ನಾನ ಮಾಡುವಾಗ ಬಾಗಿಲು ಕಾಯಲೆಂದು ತನ್ನ ಮೈಮಣ್ಣನ್ನು ಗಂಧದೊದಿಗೆ ಬೆರೆಸಿ ಒಬ್ಬ ಹುಡುಗನನ್ನು ಸೃಷ್ಟಿಸಿ ಜೀವ ಕೊಟ್ಟು ನಿಲ್ಲಿಸಿದಳು. ಅವನು ಶಿವನನ್ನೂ ತಡೆಯಲು, ಶಿವನು ಅವನ ಶಿರಚ್ಛೇದನ ಮಾಡಿ, ಅನಂತರ ಪಾರ್ವತಿಯ ಸಮಾಧಾನಕ್ಕಾಗಿ ಆನೆಯ ತಲೆಯನ್ನು ಜೋಡಿಸಿ ಮತ್ತೆ ಜೀವ ನೀಡಿ ಪ್ರಥಮಪೂಜೆಯ ವರವಿತ್ತನು ಹಾಗೂ ತನ್ನ ಗಣಗಳಿಗೆ ನಾಯಕನನ್ನಾಗಿ ಮಾಡಿದನು. ಹಾಗಾಗಿ ಅವನಿಗೆ ಗಣೇಶ, ಗಣಪತಿ ಎಂಬ ಹೆಸರುಗಳು ಬಂದವು. ಇದು ಶಿವಪುರಾಣದಲ್ಲಿ ಬರುವ ಕಥೆಯಾದರೆ, ಇತರ ಪುರಾಣಗಳಲ್ಲಿ ಗಣೇಶನ ಹುಟ್ಟಿನ ಕಥೆಗಳು ಬೇರೆಬೇರೆಯಾಗಿವೆ! ಇವುಗಳಲ್ಲಿ ಬ್ರಹ್ಮವೈವರ್ತಪುರಾಣ ಎಂಬ ಪುರಾಣದಲ್ಲಿ ಕೃಷ್ಣ ಅಥವಾ ವಿಷ್ಣುವೇ ಗಣೇಶನಾಗಿ ಅವತರಿಸಿದ ವಿಭಿನ್ನ ಕಥೆಯಿದೆ. ಇಲ್ಲಿ ನಮಗೆ ಗಣೇಶನ ಪೂಜೆಯಲ್ಲಿ ಹೇಳುವ ವಿಷ್ಣುವಿನ ಶ್ಲೋಕಕ್ಕೆ ಆಧಾರ ಸಿಗುತ್ತದೆ. ಬ್ರಹ್ಮವೈವರ್ತ ಪುರಾಣದಲ್ಲಿ ಗಣಪತಿಖಂಡ ಎಂಬ ಒಂದು ಖಂಡವೇ ಇದ್ದು ಇದರಲ್ಲಿ ಗಣೇಶನ ವಿಭಿನ್ನ ಕಥೆಗಳಿವೆ. ಈ ಪುರಾಣದ ಪ್ರಕಾರ, ಶ್ರೀಕೃಷ್ಣನು ಎಲ್ಲಾ ದೇವತೆಗಳಿಗೂ ಮೀರಿದ ಪರದೇವತೆಯಾಗಿದ್ದು, ಅವನು ಎಲ್ಲಾ ಲೋಕಗಳಿಗೂ ವೈಕುಂಠಕ್ಕೂ ಮೇಲಿರುವ ಗೋಲೋಕವೆಂಬ ಲೋಕದಲ್ಲಿದ್ದಾನೆ. ವಿಷ್ಣುವೂ ಶ್ರೀಕೃಷ್ಣನ ಒಂದು ಸ್ವರೂಪ. ಗಣೇಶನು ಶ್ರೀಕೃಷ್ಣ ಅಥವಾ ವಿಷ್ಣುವಿನ ಒಂದು ಅವತಾರ ಎಂದು ಈ ಪುರಾಣ ಹೇಳುತ್ತದೆ. ಈ ಕಥೆಯ ಪ್ರಕಾರ, ಒಮ್ಮೆ ಪಾರ್ವತಿಗೆ ಒಬ್ಬ ಪುತ್ರನು ಬೇಕೆಂದು ಆಸೆಯಾಗಿ ಅದಕ್ಕಾಗಿ ಅವಳು ಶಿವನನ್ನು ಪ್ರಾರ್ಥಿಸಿದಳು. ಆಗ ಶಿವನು ಅವಳಿಗೆ ಪುಣ್ಯಕವ್ರತವೆಂಬ ವ್ರತವನ್ನು ಆಚರಿಸಲು ಹೇಳಿ, ಅದರಿಂದ ಶ್ರೀಕೃಷ್ಣನೇ ಪುತ್ರನಾಗಿ ಜನಿಸುವನೆಂದು ಹೇಳಿದನು. ಅವಳು ಶಿವನಿಂದ ಆ ವ್ರತವನ್ನು ಕಲಿತು ಆಚರಿಸಿದಳು. ಅನಂತರ, ಒಂದು ದಿನ ಶಿವ, ಪಾರ್ವತಿಯರು ಸುರತನಿರತರಾಗಿರಲು, ವಿಷ್ಣುವು ಒಬ್ಬ ಬ್ರಾಹ್ಮಣನ ರೂಪದಲ್ಲಿ ಭಿಕ್ಷೆಗೆಂದು ಬಂದನು. ಶಿವ, ಪಾರ್ವತಿಯರು ಅವನಿಗೆ ಭಿಕ್ಷೆ ನೀಡಲು ಬಂದಾಗ, ಅವನು ಸೂಕ್ಷ್ಮವಾಗಿ ಶಿವನ ವೀರ್ಯದಲ್ಲಿ ಸೇರಿ ಅನಂತರ ಅವರಿಗೆ ಮಗುವಾಗಿ ಜನಿಸಿದನು. ಶಿವ, ಪಾರ್ವತಿಯರು ಅವನಿಗೆ ಗಣೇಶ ಎಂದು ಹೆಸರಿಟ್ಟು ನಾಮಕರಣ ಸಮಾರಂಭಕ್ಕೆ ಎಲ್ಲಾ ದೇವತೆಗಳನ್ನೂ ಆಹ್ವಾನಿಸಿದರು. ತೊಟ್ಟಿಲಿನಲ್ಲಿದ್ದ ಮಗುವನ್ನು ಎಲ್ಲಾ ದೇವತೆಗಳೂ ನೋಡಿ ಪ್ರಶಂಸಿಸಿ ಹರಸುತ್ತಿರಲು, ಶನಿಯೊಬ್ಬನು ಮಾತ್ರ ನೋಡದೆ ಕೆಳಗೆ ನೋಡುತ್ತಿದ್ದನು. ಏಕೆಂದು ಪಾರ್ವತಿಯು ಕೇಳಲು, ಅವನು ಅದಕ್ಕೊಂದು ಕಥೆ ಹೇಳಿದನು," ಯಾವ ವಸ್ತುವನ್ನು ನೋಡಿದರೂ ಅದು ನಾಶವಾಗಲೆಂದು ನನಗೆ ನನ್ನ ಪತ್ನಿಯ ಶಾಪವಿದೆ! ನಾನು ಬಾಲ್ಯದಿಂದಲೂ ಶ್ರೀಕೃಷ್ಣನ ಭಕ್ತ. ಚಿತ್ರರಥನೆಂಬ ಗಂಧರ್ವನ ಮಗಳನ್ನು ನಾನು ವಿವಾಹವಾದ ಬಳಿಕ, ಒಮ್ಮೆ ಅವಳು ಚೆನ್ನಾಗಿ ಅಲಂಕರಿಸಿಕೊಂಡು ರತಿಕ್ರೀಡೆಯ ಉದ್ದೇಶದಿಂದ ನನ್ನನ್ನು ನೋಡತೊಡಗಿದಳು. ಆದರೆ ನಾನಾಗ ಶ್ರೀಕೃಷ್ಣನ ಧ್ಯಾನದಲ್ಲಿ ತಲ್ಲೀನನಾಗಿದ್ದುದರಿಂದ ಅವಳನ್ನು ನೋಡಲಿಲ್ಲ. ಇಷ್ಟಕ್ಕೇ ಕೋಪಗೊಂಡ ಅವಳು ನನಗೆ ಹೀಗೆ ಶಾಪ ಕೊಟ್ಟಳು! ಹಾಗಾಗಿಯೇ ನಾನು ಮಗುವನ್ನು ನೋಡುತ್ತಿಲ್ಲ!"
ಆದರೆ ಅದಕ್ಕೆ ಪಾರ್ವತಿಯು ಅವಳ ಸಖಿಯರೊಂದಿಗೆ ನಕ್ಕು ಅವನನ್ನು ನಂಬದೇ ಮಗುವನ್ನು ನೋಡಲು ಒತ್ತಾಯಿಸಿದಳು. ಶನಿಯು ಸರಿಯೆಂದು ಮಗುವನ್ನು ನೋಡುತ್ತಲೇ ಮಗುವಿನ ತಲೆಯು ಕತ್ತರಿಸಿ ಗೋಲೋಕಕ್ಕೆ ಹಾರಿಹೋಗಿ ಶ್ರೀಕೃಷ್ಣನೊಂದಿಗೆ ಕೂಡಿಕೊಂಡಿತು! ಈಗ ಪಾರ್ವತಿಯೂ ಇತರರೂ ಗೋಳಾಡಲು, ಬ್ರಹ್ಮ, ವಿಷ್ಣು, ಮಹೇಶ್ವರರು ಅವಳನ್ನು ಸಮಾಧಾನಗೊಳಿಸಿ ಮಗುವಿಗೆ ಬೇರೊಂದು ತಲೆಯನ್ನು ಜೋಡಿಸಿ ಮತ್ತೆ ಜೀವ ಕೊಡುವೆವೆಂದು ಆಶ್ವಾಸನೆ ನೀಡಿ ಇನ್ನೊಂದು ತಲೆಯನ್ನು ಹುಡುಕಲು ಹೊರಟರು. ಆಗ ಒಂದು ಕಾಡಿನಲ್ಲಿ ಹೆಣ್ಣಾನೆಯೊಂದಿಗೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಒಂದು ಗಂಡಾನೆಯನ್ನು ನೋಡಿ, ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಅದರ ಶಿರಚ್ಛೇದನ ಮಾಡಿ, ಅದರ ತಲೆಯನ್ನು ತಂದು ಮಗುವಿನ ದೇಹಕ್ಕೆ ಜೋಡಿಸಿ ಜೀವವಿತ್ತನು. ಅನಂತರ ಅವನು ದೇವತೆಗಳಲ್ಲಿ ಗಣೇಶನಿಗೆ ಪ್ರಥಮಪೂಜೆಯಾಗಬೇಕೆಂಬ ವರವನ್ನು ನೀಡಿ ತಾನೇ ಅವನನ್ನು ಪೂಜಿಸಿದನು.
ಪಾಪ, ಗಣೇಶನಿಗಾಗಿ ಆನೆಯೇಕೆ ಸಾಯಬೇಕಾಯಿತು? ಇದಕ್ಕೂ ಬ್ರಹ್ಮವೈವರ್ತಪುರಾಣ ಒಂದು ಕಥೆ ಕೊಡುತ್ತದೆ. ಆ ಆನೆಯು ಒಂದು ಸಾಮಾನ್ಯ ಆನೆಯಾಗಿರದೇ ಇಂದ್ರನ ವಾಹನವಾದ ಐರಾವತವೇ ಆಗಿತ್ತು! ಒಮ್ಮೆ ಇಂದ್ರನು ಅಪ್ಸರೆ ರಂಭೆಯೊಡನೆ ಕ್ರೀಡಿಸಿ ಮತ್ತನಾಗಿದ್ದನು. ಆಗ ದುರ್ವಾಸ ಮಹರ್ಷಿಗಳು ಆಗಮಿಸಿ ಅವನಿಗೆ ಹರಿಯ ಪ್ರಸಾದವೆಂದು ಒಂದು ಹೂಮಾಲೆಯನ್ನು ಕೊಟ್ಟರು. ಆದರೆ ಮದಿಸಿದ್ದ ಇಂದ್ರನು ಆ ಹೂಮಾಲೆಯನ್ನು ಐರಾವತದ ತಲೆಯ ಮೇಲಿಟ್ಟನು. ಇದರಿಂದ ಕುಪಿತಗೊಂಡ ದುರ್ವಾಸರು ಇಂದ್ರನಿಗೆ ಐಶ್ವರ್ಯವನ್ನು ಕಳೆದುಕೊಳ್ಳುವಂತೆ ಶಪಿಸಿ ಹೊರಟುಹೋದರು! ಆ ಐರಾವತವೂ ಮದಿಸಿದ್ದು ಹೂಮಾಲೆಯನ್ನು ಉಪೇಕ್ಷಿಸಿ ಎಸೆದು ಕಾಡಿಗೋಡಿ ಹೆಣ್ಣಾನೆಯೊಂದಿಗೆ ರಮಿಸತೊಡಗಿತು! ಈ ತಪ್ಪಿಗಾಗಿ ಅದು ತನ್ನ ತಲೆಯನ್ನು ಕಳೆದುಕೊಳ್ಳಬೇಕಾಯಿತು! ಆದರೆ ಅನಂತರ, ಹೆಣ್ಣಾನೆಯು ವಿಷ್ಣುವನ್ನು ಅದರ ಜೀವಕ್ಕಾಗಿ ಪ್ರಾರ್ಥಿಸಲು, ವಿಷ್ಣುವು ಐರಾವತಕ್ಕೆ ಪುನಃ ಜೀವಪ್ರದಾನ ಮಾಡಿದನು.
ಪಾಪ, ಶಿವನಿಗೇಕೆ ತನ್ನ ಪುತ್ರನ ಮರಣವನ್ನು ನೋಡುವ ಪರಿಸ್ಥಿತಿವೊದಗಿಬಂತು? ಅದಕ್ಕೂ ಈ ಪುರಾಣ ಒಂದು ಕಥೆ ಹೇಳುತ್ತದೆ. ಒಮ್ಮೆ, ಮಾಲಿ ಮತ್ತು ಸುಮಾಲಿ ಎಂಬ ಇಬ್ಬರು ದಾನವರು ಅಹಂಕಾರದಿಂದ ಬೀಗುತ್ತಾ ಸೂರ್ಯನನ್ನು ನಿಂದಿಸಿದರು. ಆಗ ಸೂರ್ಯನು ಕುಪಿತನಾಗಿ ಅವರಿಗೆ ಶ್ವೇತಕುಷ್ಠರೋಗವುಂಟಾಗಲೆಂದು ಶಪಿಸಿದನು! ಅವರಿಬ್ಬರೂ ಶಿವಭಕ್ತರಾಗಿದ್ದರಿಂದ, ಶಿವನು ಸೂರ್ಯನಲ್ಲಿ ಕುಪಿತಗೊಂಡು ಅವನನ್ನು ತನ್ನ ತ್ರಿಶೂಲದಿಂದ ಕೊಂದುಬಿಟ್ಟನು! ಇದನ್ನು ಕಂಡು ಸೂರ್ಯನ ತಂದೆ ಕಶ್ಯಪ ಮಹರ್ಷಿಗಳಿಗೆ ಕೋಪ ಬಂದು, ಅವರು ಶಿವನಿಗೆ ಅವನ ಮಗನ ಶಿರಚ್ಛೇದನವನ್ನು ಕಾಣುವಂತೆ ಶಪಿಸಿದರು! ಆಗ ಶಿವನು ಕೂಡಲೇ ಸೂರ್ಯನನ್ನು ಜೀವಂತಗೊಳಿಸಿದನು. ಸೂರ್ಯನಿಗೆ ತನ್ನ ತಂದೆ ಕಶ್ಯಪರು ಶಿವನನ್ನು ಶಪಿಸಿರುವ ವಿಷಯ ತಿಳಿಯಲು, ಅವನು ಖಿನ್ನನಾಗಿ ವೈರಾಗ್ಯ ತಾಳಿ ಶ್ರೀಕೃಷ್ಣನನ್ನು ಕುರಿತು ತಪಸ್ಸು ಮಾಡಲು ಯೋಚಿಸಿದನು. ಆಗ ಬ್ರಹ್ಮನು ಬಂದು ಅವನನ್ನು ಸಮಾಧಾನಪಡಿಸುತ್ತಾ ಜಗತ್ತನ್ನು ಬೆಳಗುವ ಅವನ ಕರ್ತವ್ಯವನ್ನು ಮಾಡಬೇಕೆಂದು ಬೋಧಿಸಿದನು. ಅನಂತರ, ಬ್ರಹ್ಮನು ಮಾಲಿ, ಸುಮಾಲಿಗಳಿಗೆ ಸೂರ್ಯನನ್ನು ಆರಾಧಿಸಿ ತಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಹೇಳಿದನು.
ಗಣೇಶನಿಗೆ ಒಂದೇ ದಂತವಿರುವುದರಿಂದ ಅವನಿಗೆ ಏಕದಂತನೆಂದು ಕರೆಯುತ್ತಾರೆ. ಇದಕ್ಕೆ ಹಲವಾರು ಕಥೆಗಳಿವೆ. ಬ್ರಹ್ಮವೈವರ್ತಪುರಾಣವೂ ಒಂದು ಕಥೆ ಹೇಳುತ್ತದೆ. ಅದರಂತೆ, ಒಮ್ಮೆ ಪರಶುರಾಮನು ತನ್ನ ಗುರುವಾದ ಪರಶಿವನ ದರ್ಶನ ಪಡೆಯಲೆಂದು ಕೈಲಾಸಕ್ಕೆ ಬಂದಾಗ, ಶಿವನು ಪಾರ್ವತಿಯೊಂದಿಗೆ ಏಕಾಂತದಲ್ಲಿದ್ದನು. ದ್ವಾರವನ್ನು ಕಾಯುತ್ತಿದ್ದ ಗಣೇಶನು ಪರಶುರಾಮನಿಗೆ ಸ್ವಲ್ಪ ಹೊತ್ತು ಕಾಯಲು ಹೇಳಲು, ಅವನ ಮಾತು ಕೇಳದೆ ಪರಶುರಾಮನು ಒಳಗೆ ನುಗ್ಗತೊಡಗಿದನು! ಗಣೇಶನು ಅವನನ್ನು ತಡೆಯಲು ಹೋಗಿ ಅವರೀರ್ವರಿಗೂ ಯುದ್ಧವಾಯಿತು! ಆಗ ಪರಶುರಾಮನು ಗಣೇಶನನ್ನು ತನ್ನ ಕೊಡಲಿಯಿಂದ ಹೊಡೆಯಲು, ಗಣೇಶನು ಆ ಕೊಡಲಿಯನ್ನು ತನ್ನ ತಂದೆ ಶಿವನು ಕೊಟ್ಟದ್ದೆಂಬ ಗೌರವಕ್ಕೆ ತನ್ನ ಒಂದು ದಂತವನ್ನು ಅದಕ್ಕೊಪ್ಪಿಸಿದನು! ಇದರಿಂದ ಅವನ ಆ ಒಂದು ದಂತ ಮುರಿದು ಕೆಳಗೆ ಬಿದ್ದು ದೊಡ್ಡ ಸದ್ದಾಯಿತು! ಈ ಶಬ್ದವನ್ನು ಕೇಳಿ, ಶಿವ, ಪಾರ್ವತಿಯರು ಹೊರಗೋಡಿ ಬಂದರು! ತನ್ನ ಪುತ್ರನ ಒಂದು ದಂತ ಭಗ್ನವಾಗಿದ್ದುದನ್ನು ಕಂಡು ಪಾರ್ವತಿಯು ಕೋಪಗೊಂಡು," ಇದೇಯೇನು ನಿನ್ನ ಗುರುವಿಗೆ ಗುರುದಕ್ಷಿಣೆ ಕೊಡುವ ರೀತಿ?" ಎಂದು ಇನ್ನೇನು ಪರಶುರಾಮನಿಗೆ ಶಾಪವನ್ನು ಕೊಡಲು ಹೊರಟಾಗ, ಅವನನ್ನು ಉಳಿಸಲು ವಿಷ್ಣುವು ಒಬ್ಬ ವೃದ್ಧ ಬ್ರಾಹ್ಮಣನ ರೂಪದಲ್ಲಿ ಬಂದನು. ಏಕೆಂದರೆ ಪರಶುರಾಮನು ವಿಷ್ಣುವಿನ ಅಂಶಾವತಾರವಾಗಿದ್ದನು. ವೃದ್ಧ ಬ್ರಾಹ್ಮಣನು ಪಾರ್ವತಿಯನ್ನು ಸಮಾಧಾನಪಡಿಸುತ್ತಾ ಹೇಳಿದನು," ಭದ್ರೆ! ಗಣೇಶನ ಹೆಸರುಗಳಲ್ಲಿ ಏಕದಂತ ಎಂಬುದೂ ಒಂದು! ಹಾಗಾಗಿ, ಅವನು ಏಕದಂತನಾಗಿರಬೇಕೆಂಬುದು ವಿಧಿನಿಯಮ. ಆದ್ದರಿಂದ ದಯವಿಟ್ಟು ಪರಶುರಾಮನನ್ನು ಶಪಿಸಬೇಡ!"
ಹೀಗೆ ಬ್ರಾಹ್ಮಣನ ರೂಪದಲ್ಲಿ ಬಂದ ವಿಷ್ಣುವು ಪಾರ್ವತಿಯನ್ನು ಸಮಾಧಾನಪಡಿಸಿ ಅವಳು ಪರಶುರಾಮನಿಗೆ ಶಪಿಸುವುದನ್ನು ತಪ್ಪಿಸಿದನು.
ಬ್ರಹ್ಮವೈವರ್ತಪುರಾಣದ ಪ್ರಕಾರ, ಗಣೇಶನಿಗೆ ತುಳಸಿ ಎಲೆಗಳ ಪೂಜೆ ನಿಷಿದ್ಧ. ಇದಕ್ಕೊಂದು ಕಥೆಯಿದೆ. ಒಮ್ಮೆ, ತರುಣಿಯಾಗಿದ್ದ ತುಳಸಿ, ವಿಷ್ಣುವನ್ನೇ ಪತಿಯಾಗಿ ಪಡೆಯಬೇಕೆಂದು ಪುಣ್ಯಕ್ಷೇತ್ರಗಳಲ್ಲಿ ತಪಸ್ಸು ಮಾಡುತ್ತಿದ್ದಳು. ಹೀಗಿರಲು, ಒಮ್ಮೆ ಗಣೇಶನು ಶ್ರೀಕೃಷ್ಣನನ್ನು ಕುರಿತು ತಪಸ್ಸು ಮಾಡಲು ಗಂಗಾತೀರಕ್ಕೆ ಬಂದನು. ಅವನನ್ನು ನೋಡಿ ಕಾಮಾವೇಶಿತಳಾದ ತುಳಸಿಯು ಅವನ ಬಳಿ ಬಂದು," ಎಲೈ ಗಜಮುಖನೇ! ಎಲೈ ಪ್ರಶಾಂತಮನಸ್ಕನೇ! ಯಾರನ್ನು ಕುರಿತು ಧ್ಯಾನಿಸುತ್ತಿರುವೆ? ಏಕೆ ನಿನ್ನ ಹೊಟ್ಟೆ ದೊಡ್ಡದಾಗಿದೆ? ಏಕೆ ನಿನಗೆ ಆನೆಯ ಮೊಗವಿದೆ? ಏಕೆ ನಿನಗೆ ಒಂದೇ ದಂತವಿದೆ? ಹೇ ಮಹಾತ್ಮ! ಈಗ ಸಂಜೆಯಾಗಿದೆ! ನಿನ್ನ ಈ ಧ್ಯಾನ ನಿಲ್ಲಿಸು!" ಎನ್ನುತ್ತಾ ಅವನ ತಲೆಯ ಮೇಲೆ ಸ್ವಲ್ಪ ನೀರೆರೆಚಿ, ತನ್ನ ತೋರುಬೆರಳಿನಿಂದ ತಮಾಷೆಗೆ ಹೊಡೆದಳು! ಧ್ಯಾನವು ಭಂಗವಾಗಲು, ಗಣೇಶನು ಖಿನ್ನನಾಗಿ, " ಓ ತರುಣಿ! ಯಾರು ನೀನು? ಏಕೆ ನನ್ನ ತಪೋಭಂಗ ಮಾಡುತ್ತಿರುವೆ? ಒಬ್ಬನ ತಪೋಭಂಗ ಮಾಡಿದರೆ ಅಮಂಗಳವುಂಟಾಗುತ್ತದೆ!" ಎಂದನು.
ಅದಕ್ಕೆ ತುಳಸಿಯು," ನಾನು ಧರ್ಮಧ್ವಜನ ಮಗಳು ತುಳಸಿ! ಒಬ್ಬ ಒಳ್ಳೆಯ ಪತಿಗಾಗಿ ತಪಸ್ಸು ಮಾಡುತ್ತಿರುವೆ! ಆದ್ದರಿಂದ ನೀನೇ ನನ್ನ ಪತಿಯಾಗು!" ಎಂದಳು.
ಗಣೇಶನು," ಓ ತಾಯಿ! ನನಗೆ ಮದುವೆಯಾಗಲು ಇಷ್ಟವಿಲ್ಲ! ಅದರಿಂದ ದುಃಖವೂ ಸಂಸಾರಬಂಧನವೂ ಆಗುತ್ತವೆ! ನೀನು ಬೇರೊಬ್ಬ ಕಾಮಾಸಕ್ತ ಪುರುಷನನ್ನು ಮದುವೆಯಾಗು!" ಎಂದನು. ಆಗ ತುಳಸಿಯು ಕೋಪಗೊಂಡು ಅವನಿಗೆ," ನಿನ್ನ ಹೆಂಡತಿಯು ದುಷ್ಟೆಯಾಗುವಳು!" ಎಂದು ಶಪಿಸಿದಳು. ಅದಕ್ಕೆ ಗಣೇಶನೂ ಕುಪಿತನಾಗಿ," ನೀನು ಒಬ್ಬ ರಾಕ್ಷಸನ ಪತ್ನಿಯಾಗಿ ಅನಂತರ ಇನ್ನೊಂದು ಶಾಪದಿಂದ ಮರವಾಗುವೆ!" ಎಂದು ಅವಳನ್ನು ಶಪಿಸಿದನು!
ಇದರಿಂದ ದುಃಖಿತಳಾಗಿ ಅಳುತ್ತಾ ತುಳಸಿಯು ಗಣೇಶನನ್ನು ಪಶ್ಚಾತ್ತಾಪದಿಂದ ಸ್ತುತಿಸಿದಳು. ಆಗ ಗಣೇಶನು ಅವಳಲ್ಲಿ ಪ್ರಸನ್ನನಾಗಿ ಹೇಳಿದ," ನೀನು ಎಲ್ಲಾ ಪುಷ್ಪಗಳ ಸಾರವಾಗಿ ವಿಷ್ಣುವಿಗೆ, ಅದರಲ್ಲೂ ಶ್ರೀಕೃಷ್ಣನಿಗೆ ಪ್ರಿಯಳಾಗುವೆ! ಪರಮಪವಿತ್ರಳಾದ ನೀನು ಎಲ್ಲರಿಗೂ ಮುಕ್ತಿಯನ್ನು ದಯಪಾಲಿಸುವೆ! ಆದರೆ ನಾನು ಮಾತ್ರ ನಿನ್ನನ್ನು ಸ್ವೀಕರಿಸುವುದಿಲ್ಲ!"
ಹೀಗೆ ಹೇಳಿ ಗಣೇಶನು ಬದರಿಕಾಶ್ರಮಕ್ಕೆ ಹೋದನು. ತುಳಸಿಯು ಪುಷ್ಕರ ಕ್ಷೇತ್ರಕ್ಕೆ ಹೋಗಿ ಉಪವಾಸ ಮಾಡುತ್ತಾ ಒಂದು ಲಕ್ಷ ವರ್ಷಗಳ ಕಾಲ ತಪಸ್ಸು ಮಾಡಿದಳು. ಅನಂತರ, ಗಣೇಶನ ಶಾಪದಂತೆ ಶಂಖಚೂಡನೆಂಬ ದಾನವನ ಪತ್ನಿಯಾದಳು. ಬಹುಕಾಲದ ಬಳಿಕ, ಶಂಖಚೂಡನು ಶಿವನಿಂದ ಸಂಹಾರಗೊಳ್ಳಲು, ತುಳಸಿಯು ಮರವಾದಳು ಹಾಗೂ ವಿಷ್ಣುವಿಗೆ ಪ್ರಿಯಳಾದಳು.
ತುಳಸಿಯ ಶಾಪದಂತೆ ಗಣೇಶನಿಗೆ ದುಷ್ಟ ಪತ್ನಿ ಸಿಗದಿದ್ದರೂ ಬ್ರಹ್ಮನ ಹೆಣ್ಣು ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಎಂಬುವರನ್ನು ಮದುವೆಯಾದ ಎಂದು ಬೇರೊಂದು ಕಥೆಯಿದೆ. ಇದು ಸಾಂಕೇತಿಕ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
ಇವು ಬ್ರಹ್ಮವೈವರ್ತಪುರಾಣದ ಗಣಪತಿ ಖಂಡದ ಸ್ವಾರಸ್ಯಕರ ಕಥೆಗಳು.