ಭಗವಾನರು ತಾವು ವಾಲ್ಮೀಕಿ ರಾಮಾಯಣವನ್ನೇ ನೇರವಾಗಿ ಓದಿ ಆಕ್ಷೇಪ ಮಾಡಿದ್ದೇನೆ, ಸುಳ್ಳು ಹೇಳಿಲ್ಲ ಎನ್ನುತ್ತಾರೆ. ಹಾಗಿದ್ದ ಮೇಲೆ ಅವರು ವಾಲ್ಮೀಕಿ ರಾಮಾಯಣದ ಕೆಲವು ಅಂಶಗಳನ್ನು ಮಾತ್ರ ಒಪ್ಪಿ ಇನ್ನಷ್ಟು ವಿಷಯಗಳನ್ನು ಬಿಡುವುದು, ಅಥವಾ ಅವರಿಗೆ ಮಾತ್ರ ಬೇಕಾಗಿರುವ ಅಂಶಗಳನ್ನು ಹೇಳುವುದು ಕವಿಗೆ ಮಾಡುವ ದ್ರೋಹ ಎಂದು ಹೇಳಬೇಕಾಗುತ್ತದೆ. ಹಾಗೆಂದು ಇವರು ವೈಚಾರಿಕವಾಗಿಯೂ ಹೇಳುತ್ತಿಲ್ಲ. ಆಕ್ಷೇಪ ಮಾತ್ರ ಮಾಡುತ್ತಿದ್ದಾರೆ. ಮುಖ್ಯವಾಗಿ ಶ್ರೀರಾಮನು ದಶರಥನ ಮಗನಲ್ಲ, ಅವನು ಒಬ್ಬ ಮದ್ಯಪಾನಿ, ಮಾಂಸಭಕ್ಷಕ, ಶಂಬೂಕನಂಥವರನ್ನು ಕೊಂದ ಕೊಲೆಗಡುಕ, ತನ್ನ ಹೆಂಡತಿ ಸೀತೆಯನ್ನು ಕಾಡಿಗಟ್ಟಿದ ಕಟುಕ, ತಮ್ಮ ಲಕ್ಷ್ಮಣನನ್ನು ಕೊಂದ, ತಂದೆಯನ್ನು ನಿಂದಿಸಿದ, ಮೊದಲಾದ
' ಸತ್ಯ'ಗಳನ್ನು ವಾಲ್ಮೀಕಿ ರಾಮಾಯಣದಿಂದ ಕಂಡುಕೊಳ್ಳುವ ಭಗವಾನರು ಶ್ರೀರಾಮನು ವಿಷ್ಣುವಿನ ಅವತಾರ, ಸಕಲ ಕಲ್ಯಾಣಗುಣಗಳಿರುವವನು, ವೀರ್ಯವಂತ, ಧರ್ಮಜ್ಞ, ಕೃಚಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದೇ ಅನೂಚಾನವಾಗಿ ಬಂದಿರುವ ಆಚಾರ ವ್ಯವಹಾರಗಳನ್ನು ತಪ್ಪದೇ ನಡೆಸಿಕೊಂಡು ಬರುವವನು, ಸಕಲ ಪ್ರಾಣಿಗಳಲ್ಲಿ ದಯಾಪರನು, ಚತುರ್ದಶವಿದ್ಯೆಗಳಲ್ಲೂ ಪಾರಂಗತನು, ಸಕಲಕಾರ್ಯಧುರಂಧರನು, ಸಕಲ ಕಾಲದಲ್ಲೂ ಸರ್ವರಿಗೂ ಮೋಹನರೂಪನಾಗಿರುವವನು, ಅತ್ಯಂತ ಧೈರ್ಯವಂತನು, ಕೋಪವನ್ನು ಜಯಿಸಿರುವವನು, ಎಣೆಯಿಲ್ಲದ ಕಾಂತಿಯಿಲ್ಲದವನು, ಅಸೂಯಾರಹಿತನು, ಯುದ್ಧದಲ್ಲಿ ದೇವತೆಗಳೂ ಹೆದರುವಂಥವನು, ಇಂಥ ಗುಣಗಳಿರುವವನು ಎಂದು ಅದೇ ವಾಲ್ಮೀಕಿ ರಾಮಾಯಣದ ಮಾತನ್ನು ಕಂಡುಕೊಳ್ಳದ ಮೂರ್ಖರು ಎಂದು ಹೇಳಬೇಕಾಗುತ್ತದೆ!
ಇರಲಿ! ಚಂದ್ರನನ್ನು ಕಂಡಾಗ ಬೆಳದಿಂಗಳನ್ನು ನೋಡುವ ಬದಲು ಕಪ್ಪು ಚುಕ್ಕೆಯನ್ನು ಮಾತ್ರ ನೋಡುವವರಿಗೆ ಏನು ಹೇಳುವುದು?
ಅದೇನೇ ಆದರೂ ಇವರ ಆಕ್ಷೇಪಣೆಗಳಿಗೆ ಉತ್ತರ ನೋಡೋಣ.
ದಶರಥನಿಗೆ ಮೂರು ಪತ್ನಿಯರು ಅಥವಾ ವಾಲ್ಮೀಕಿ ರಾಮಾಯಣದ ಪ್ರಕಾರವೇ ಹಲವಾರು ಪತ್ನಿಯರಿದ್ದರೂ ಸಂತಾನವಾಗಲಿಲ್ಲ. ಈಗ ಹಾಗಾದರೆ ನಾವು ವೈದ್ಯರ ಬಳಿ ಹೋಗಿ ಹಾರ್ಮೋನ್ ಚಿಕಿತ್ಸೆ ಮೊದಲಾದವುಗಳನ್ನು ತೆಗೆದುಕೊಂಡು ಸಂತಾನಾಭಿವೃದ್ಧಿ ಮಾಡಿಕೊಳ್ಳುವಂತೆ ಅಂದಿನ ದಿನಗಳಲ್ಲಿ ಪುತ್ರಕಾಮೇಷ್ಠಿ ಯಜ್ಞ ಮಾಡಿದಾಗ ದಿವ್ಯ ಪುರುಷನೊಬ್ಬ ಬಂದು ದಿವ್ಯ ಪಾಯಸವನ್ನು ಕೊಟ್ಟ ಹಾಗೂ ದಷರಥ ಅದನ್ನು ತನ್ನ ಮೂರು ಪ್ರಮುಖ ರಾಣಿಯರಿಗೆ ಹಂಚಲು ಅವರು ಅದನ್ನು ಸೇವಿಸಿ ಗರ್ಭವತಿಯರಾದರು ಎಂಬುದು ಸಣ್ಣ ಮಗುವಿಗೂ ಗೊತ್ತಿರುವ ವಿಷಯ. ಪಾಯಸ ಒಂದು ಔಷಧೀಯ ಚಿಕಿತ್ಸೆ ಏಕಾಗಿರಬಾರದು? ಅದನ್ನು ರಾಣಿಯರು ಸೇವಿಸಿ ಸಂತಾನ ಶಕ್ತಿ ಪಡೆದ ಬಳಿಕ ದಶರಥ ನಿಂದಲೇ ಗರ್ಭ ಧರಿಸಿದರಲ್ಲವೇ? ದಶರಥನ ಪುತ್ರನಾದುದರಿಂದಲೇ ರಾಮನಿಗೆ ದಾಶರಥಿ ಎಂದು ಹೆಸರು ಬುದಿತು. ಭಗವಾನರು ದಶರಥನು ತನ್ನ ರಾಣಿಯರನ್ನು ಪುರೋಹಿತರಿಗೆ ಒಪ್ಪಿಸಿದನು ಎಂದು ಹೇಳಿರುವುದು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಆದರೆ ಈ ಇನ್ನೊಬ್ಬರಿಂದ ಮಕ್ಕಳು ಹುಟ್ಟುವುದು ಇರಲಿಲ್ಲವೆಂದಲ್ಲ. ಅದು ಮಹಾಭಾರತ ಮತ್ತು ಇತರ ಪೌರಾಣಿಕ ಕಥೆಗಳಲ್ಲಿ ಕಾಣುವ ನಿಯೋಗ ಪದ್ಧತಿ. ಮಕ್ಕಳಾಗುವುದು ಬಹಳ ಮುಖ್ಯವಾಗಿದ್ದ ಕಾಲದಲ್ಲಿ ಒಬ್ಬ ಯೋಗ್ಯ, ಜಿತೇಂದ್ರಿಯ ವಿದ್ವಾಂಸನನ್ನು ಕರೆಸಿ ಅವನಿಂದ ಹೆಂಡತಿಯಲ್ಲಿ ಸಂಪರ್ಕ ಮಾಡಿಸಿ ಅವಳು ಗರ್ಭವತಿಯಾದ ನಂತರ ಅವಳಲ್ಲಿ ಯಾವುದೇ ಕಾಮವನ್ನು ವ್ಯಕ್ತಪಡಿಸದಿರುವ ಒಂದು ಪದ್ಧತಿ ನಿಯೋಗ ಪದ್ಧತಿ. ಇದಲ್ಲದೆ, ಮಹಾಭಾರತದಲ್ಲಿ ಪಾಂಡುವು ಕುಂತಿಗೆ, ಕನ್ಯೆಗೆ ಮದುವೆಗೆ ಮೊದಲೇ ಹುಟ್ಟಿರುವ ಕಾನೀನ ಪುತ್ರ, ದತ್ತು ತೆಗೆದುಕೊಳ್ಳುವ ದತ್ತು ಪುತ್ರ, ಮೊದಲಾದ ಹಲವು ರೀತಿಯ ಪುತ್ರರಿಗೆ ಅವಕಾಶ ಇದೆ ಎಂದು ವೈದಿಕ ಧರ್ಮದ ಔದಾರ್ಯವನ್ನು ಹೇಳುತ್ತಾನೆ. ಆದರೆ ರಾಮನು ಈ ಯಾವ ರೀತಿಯೂ ಹುಟ್ಟದೆ, ದಶರಥ ಮತ್ತು ಕೌಸಲ್ಯೆಯರಿಗೆ ದಿವ್ಯ ಪಾಯಸದಿಂದ ಹುಟ್ಟಿದವನಾಗಿದ್ದಾನೆ. ವಾಲ್ಮೀಕಿ ರಾಮಾಯಣವನ್ನೇ ಓದಿದ್ದೇನೆ ಎನ್ನುವ ಭಗವಾನರು ಅದರಲ್ಲಿರುವ ಅಲೌಕಿಕತೆಯನ್ನೂ ಒಪ್ಪಿಕೊಳ್ಳಬೇಕು.
ರಾಮನು ಮದ್ಯಪಾನಿ ಹಾಗೂ ಮಾಂಸಾಹಾರಿ ಎನ್ನುವುದು ಇನ್ನೊಂದು ಆಕ್ಷೇಪ. ನಿಜವೇ, ಶ್ರೀರಾಮನು ಸೀತೆಯೊಂದಿಗೆ ಮಧುಮೈರೇಯ ಎಂಬ ಪಾನೀಯವನ್ನು ಕುಡಿಯುತ್ತಾ ಸೇವಕರು ತಂದುಕೊಡುತ್ತಿದ್ದ ಮಾಂಸಭಕ್ಷ್ಯಗಳನ್ನು ಸೇವಿಸುತ್ತಾ ಅಪ್ಸರೆಯರ ನರ್ತನವನ್ನು ನೋಡುತ್ತಾ ಸಂತೋಷಪಡುತ್ತಿದ್ದ ಎಂದು ಉತ್ತರಕಾಂಡದಲ್ಲಿ ಹೇಳಿದೆ. ಅಷ್ಟೇ ಅಲ್ಲದೆ ಕಾಡಿನಲ್ಲಿ ಲಕ್ಷ್ಮಣ ಒಂದು ಪರ್ಣಕುಟಿ ಕಟ್ಟಿದಾಗ ಎಲ್ಲರೂ ಒಂದು ಕಸ್ತೂರಿಮೃಗವನ್ನು ಅರ್ಪಿಸಿ ಸೇವಿಸುತ್ತಾರೆ ಹಾಗೂ ರಾಮನೇ ಸೀತೆಗೆ ಒಮ್ಮೆ ಜಿಂಕೆಯ ಮಾಂಸವನ್ನು ಬೇಯಿಸಿ ತಿನ್ನಿಸಿದ ಎಂದು ಅರಣ್ಯಕಾಂಡದಲ್ಲೀದೆ. ರಾಮ ಒಬ್ಬ ರಾಜನಲ್ಲವೇ? ರಾಜರು ಕ್ಷತ್ರಿಯರು. ಕ್ಷತ್ರಿಯರಿಗೆ ಮದ್ಯಮಾಂಸಗಳು ಸಹಜವಲ್ಲವೇ? ರಾಮ, ಕೃಷ್ಣ, ಪಾಂಡವರು, ಕೌರವರು, ಇವರೆಲ್ಲರೂ ಮಾಂಸಾಹಾರಿಗಳೇ ಆಗಿದ್ದರು. ಅಷ್ಟೇಕೆ? ಬ್ರಾಹ್ಮಣರೂ ಯಜ್ಞ ಯಾಗಗಳಲ್ಲಿ ಮಾಂಸಭಕ್ಷಣೆ ಮಾಡುತ್ತಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಅನೇಕ ಮಾಂಸಗಳ ಔಷಧೀಯ ಗುಣಗಳೂ ಹೇಳಲಾಗಿದೆ. ಹಾಗೆಂದು ಸುಮ್ಮನೆ ಪ್ರಾಣಿಗಳನ್ನು ಕೊಲ್ಲುವುದನ್ನು ಪ್ರೋತ್ಸಾಹಿಸಿಲ್ಲ. ಬೇಟೆ, ಮದ್ಯಪಾನ, ಸ್ತ್ರೀ ವ್ಯಾಮೋಹ, ಮತ್ತು ಜೂಜು, ಈ ನಾಲ್ಕನ್ನೂ ರಾಜರ ದೋಷಗಳೆಂದೇ ಹೇಳಿದ್ದಾರೆ. ಆದರೆ ರಾಜರು ಇವನ್ನು ಸ್ವಲ್ಪವಾದರೂ ಮಾಡುತ್ತಿದ್ದರು. ಹಾಗಾಗಿಯೇ ಮನುಸ್ಮೃತಿ ಹೇಳುತ್ತದೆ
ನ ಮಾಂಸಭಕ್ಷಣೇ ದೋಷೋ ನ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ//
' ಮಾಂಸಭಕ್ಷಣೆ, ಮದ್ಯಪಾನ, ಹಾಗೂ ಮೈಥುನದಲ್ಲಿ ದೋಷವಿಲ್ಲ. ಇದು ಜೀವಿಗಳ ಪ್ರವೃತ್ತಿಯೇ ಆಗಿದೆ. ಆದರೆ ಇವುಗಳ ನಿವೃತ್ತಿಯಿಂದ ಮಹಾಫಲವುಂಟು.'
ಇನ್ನು ಮಧು ಮೈರೇಯ ಎಂಬುದು ಮಧು ಅಥವಾ ಜೇನು ಮತ್ತು ಕೆಲವು ಹಣ್ಣುಗಳಿಂದ ಹಾಗೂ ಸಂಭಾರ ಪದಾರ್ಥಗಳಿಂದ ಮಾಡಿದ ಒಂದು ಪೇಯ. ಹೀಗೆಯೇ ಆಸವ, ವಾರುಣಿ, ಮೊದಲಾದ ಅನೇಕ ಪೇಯಗಳಿದ್ದವು. ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಇಂಥ ಕೆಲವು ಪೇಯಗಳ ಉದಾಹರಣೆ ಕೊಡುತ್ತಾನೆ. ಭಾಗವತದಲ್ಲಿ ಕರ್ದಮರ ಪತ್ನಿ ದೇವಹೂತಿಗೆ ಸಖಿಯರು ಆಸವವೆಂಬ ಪಾನೀಯವನ್ನು ಕುಡಿಸುತ್ತಾರೆ. ಹಾಗೆಯೇ ಬಲರಾಮನು ವಾರುಣಿ ಎಂಬ ಪಾನೀಯವನ್ನು ಕುಡಿದ ಉಲ್ಲೇಖವಿದೆ. ಇವೆಲ್ಲವೂ ಮತ್ತು ಬರಿಸುವ ಪಾನೀಯಗಳೇ ಆದರೂ ಹೆಂಡ, ಸಾರಾಯಿಗಳಂಥ ಕ್ಷುಲ್ಲಕ ಮದ್ಯಗಳಲ್ಲ. ಅಂದಿನ ದಿನಗಳಲ್ಲಿ ರಾಜರು ಹೀಗೆ ಕೆಲವು ಪೇಯಗಳನ್ನು ಕುಡಿದು ಆನಂದಿಸುತ್ತಿದ್ದರು. ಈಗ ನಾವು ಕಾಫಿ, ಚಹಾ ಕುಡಿಯುವುದಿಲ್ಲವೇ? ಅವೂ ಸ್ವಲ್ಪ ಮತ್ತು ಬರಿಸುತ್ತವೆ. ಅಷ್ಟೇಕೆ? ಗಸಗಸೆ ಪಾಯಸ ಕುಡಿದರೂ ಸ್ವಲ್ಪ ಮತ್ತು ಬರುತ್ತದೆ. ರಾಮನು ಎಂಥ ಪರಾಕ್ರಮಿಯಾಗಿದ್ದ, ರಾವಣನಂಥ ವಿಶ್ವವನ್ನೇ ಗೆದ್ದ ರಾಕ್ಷಸನನ್ನು ಕೊಂದ ಎಂದು ಗೊತ್ತಿದ್ದ ಪ್ರಜೆಗಳು ಯಾವುದೇ ಅಪರಾಧಗಳನ್ನು ಮಾಡದೇ ಶಾಂತ ಜೀವನ ನಡೆಸುತ್ತಿದ್ದರು. ಹಾಗಾಗಿ ರಾಮನಿಗೆ ಆಡಳಿತ ಕಷ್ಟವಾಗದೇ ನರ್ತನ ನೋಡುತ್ತಾ ಆನಂದಿಸಿದರೆ ತಪ್ಪೇನು?
ಇನ್ನು ಶ್ರೀರಾಮನು ಶಂಬೂಕನನ್ನು ಕೊಂದ ಆಕ್ಷೇಪ. ಶಂಬೂಕ ಒಬ್ಬ ಶೂದ್ರ ತಪಸ್ವಿ ಎನ್ನುವುದಕ್ಕಿಂತ ಅವನು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ತಪಸ್ಸು ಮಾಡುತ್ತಿದ್ದ ಕಾರಣಕ್ಕೆ ರಾಮನು ಅವನನ್ನು ಕೊಂದ. ಹಿಂದೆ ಹರಿಶ್ಚಂದ್ರನ ತಂದೆ ಸತ್ಯವ್ರತ ಅಥವಾ ತ್ರಿಶಂಕು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸಿದಾಗ ವಸಿಷ್ಠರ ಮಕ್ಕಳು ಅವನಿಗೆ ಚಾಂಡಾಲತ್ವದ ಶಾಪ ಕೊಡಲಿಲ್ಲವೇ? ಹಾಗೂ ವಿಶ್ವಾಮಿತ್ರರು ಅವನನ್ನು ಯಜ್ಞ ಮಾಡಿ ಸ್ವರ್ಗಕ್ಕೆ ಕಳಿಸಲು ಅವನನ್ನು ಸ್ವರ್ಗದಿಂದ ತಳ್ಳಲಾಯಿತು. ಆಗ ವಿಶ್ವಾಮಿತ್ರರು ಅವನನ್ನು ತಲೆಕೆಳಗಾಗಿ ಅವರದೇ ಸೃಷ್ಟಿಯ ಒಂದು ಸ್ವರ್ಗದಲ್ಲಿ ನಿಲ್ಲಿಸಿದರು. ಅಂತೆಯೇ ರಾಮನು ಶಂಬೂಕನ ತಪ್ಪು ರೀತಿಯ ತಪಸ್ಸಿಗೆ ದಂಡನೆ ನೀಡಿದನು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲೇ ಮತಂಗ ಜಾತಿಯ ಶೂದ್ರಳೇ ಆದ ಶಬರಿ, ಹಾಗೂ ಶ್ರವಣಕುಮಾರನ ವೈಶ್ಯ ಮತ್ತು ಶೂದ್ರ ತಂದೆ ತಾಯಿಯರು ತಪಸ್ಸು ಮಾಡಿದ ವಿಷಯ ಇದೆ. ಅಷ್ಟೇ ಅಲ್ಲದೆ ಶಂಬೂಕನ ವಧೆಯಾದ ಕೂಡಲೇ ಬ್ರಾಹ್ಮಣ ಬಾಲಕ ಬದುಕಿದ ಅಲೌಕಿಕ ವಿಷಯವನ್ನೂ ಒಪ್ಪಬೇಕು. ಅವನು ಬದುಕಿದ ಹಾಗೂ ದೇವತೆಗಳು ಪುಷ್ಪವೃಷ್ಟಿ ಮಾಡಿದರು ಎಂದರೆ ರಾಮ ಮಾಡಿದ್ದು ಸರಿ ಎಂದೇ ಆಯಿತಲ್ಲವೇ? ಇಲ್ಲ, ಇಂಥ ಅಲೌಕಿಕ ವಿಷಯವನ್ನು ಒಪ್ಪಲಾಗದು ಎಂದರೆ ಇಡೀ ಕಥೆಯನ್ನು ಕಾಲ್ಪನಿಕ ಎಂದು ಹೇಳಬೇಕಾಗುತ್ತದೆ. ಆಗಲೂ ರಾಮನದು ಯಾವುದೇ ತಪ್ಪಿರುವುದಿಲ್ಲ. ಹಾಗೆ ನೋಡಿದರೆ ಕೆಲವು ವಿದ್ವಾಂಸರು ಉತ್ತರಕಾಂಡ ವಾಲ್ಮೀಕಿ ಕೃತವಲ್ಲ ಎಂದೂ ಹೇಳುತ್ತಾರೆ. ಹೀಗೂ ತೆಗೆದುಕೊಳ್ಳಬಹುದು.
ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ ಕಾರಣ ಅಗಸನ ಮಾತೆಂದು ತಿಳಿದಿರುವಂತೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಅಲ್ಲಿರುವಂತೆ ಇಡೀ ಅಯೋಧ್ಯೆಯ ಜನರು ಸೀತೆಯ ಚಾರಿತ್ರ್ಯದ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದರು ಹಾಗೂ ರಾಮನು ಅವಳನ್ನು ಪುನಃ ಕರೆದುಕೊಂಡಿದ್ದು ಸರಿಯಲ್ಲ ಎಂದು ಉದ್ಯಾನವನಗಳಲ್ಲಿ, ಬೀದಿಬೀದಿಗಳಲ್ಲಿ, ಎಲ್ಲೆಲ್ಲೂ ಮಾತನಾಡುತ್ತಿದ್ದರು ಎಂದು ಭದ್ರ ಎಂಬ ಗುಪ್ತಚರ ರಾಮನಿಗೆ ಹೇಳಿದಾಗ ರಾಮನು ಜನರ ಸಮಾಧಾನಕ್ಕಾಗಿ ಹಾಗೂ ತನಗೆ ಲೋಕಾಪವಾದ ಬರಬಾರದು ಎಂದು ಸೀತೆಯನ್ನು ಕಾಡಿಗೆ ಕಳಿಸಲೇಬೇಕಾಯಿತು. ಆದರೆ ಇಲ್ಲಿ ರಾಮನು ಸೊಗಸಾದ ಉಪಾಯ ಮಾಡಿದ್ದನ್ನು ಭಗವಾನರು ಗಮನಿಸಿಲ್ಲ. ಗರ್ಭವತಿಯಾಗಿದ್ದ ಸೀತೆಯು ಕಾಡಿನಲ್ಲಿ ಕಳೆದಂತೆ ಋಷಿಗಳ ಆಶ್ರಮದಲ್ಲಿ ಕಾಲ ಕಳೆಯಬೇಕೆಂದು ಆಸೆಯಾಗುತ್ತಿದೆ ಎಂದು ರಾಮನಿಗೆ ಹೇಳಿದ್ದಳು. ಇದೇ ನೆಪದಿಂದ ಅವನು ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟು ಬರಲು ಹೇಳುತ್ತಾನೆ. ಇದರಿಂದ ಅವಳ ಆಸೆಯೂ ನೆರವೇರಿ, ಜನರ ಸಮಸ್ಯಯೂ ಪರಿಹಾರವಾಗುತ್ತದೆ ಎಂದು ಅವನು ಯೋಚಿಸಿದ್ದು ಹಾಗೂ ಈ ಸಮಸ್ಯೆ ಸರಿಹೋದ ಬಳಿಕ ಅವಳನ್ನು ಪುನಃ ಹೇಗೋ ಪಡೆದುಕೊಳ್ಳುವ ಯೋಚನೆ ಇದ್ದುದು ಸ್ಪಷ್ಟವಾಗಿ ಕಾಣುತ್ತದೆ. ಇದರೊಂದಿಗೆ ರಾಮನೂ ಬಹಳ ನೊಂದುಕೊಂಡ. ಸೀತೆಯ ಮೇಲೆ ಅವನಿಗೆಷ್ಟು ಪ್ರೀತಿಯಿತ್ತು ಎಂದು ಅರಣ್ಯಕಾಂಡದಲ್ಲಿ ಅವನ ವಿಲಾಪದಿಂದಲೇ ಗೊತ್ತಾಗುತ್ತದೆ. ಅಲ್ಲದೆ ಅವನು ಅವಳನ್ನು ಮರಳಿ ಪಡೆಯಲು ವಾನರರೊಂದಿಗೆ ಲಂಕೆಗೆ ಹೋಗಿ ರಾವಣನನ್ನು ಕೊಂದು ಎಷ್ಟು ಕಷ್ಟ ಪಟ್ಟ ಎಂದು ಗೊತ್ತಾಗುತ್ತದೆ. ಜನರಿಗೆ ಅವಳ ಪಾವಿತ್ರ್ಯತೆ ತಿಳಿಯಲೆಂದು ಅವನು ಅವಳನ್ನು ನಿರಾಕರಿಸುವ ನಾಟಕ ಆಡಿದ. ಪುನಃ ವಾಲ್ಮೀಕಿ ರಾಮಾಯಣ ಮೊದಲಾದ ಗ್ರಂಥಗಳಲ್ಲಿ ಅಗ್ನಿಪರೀಕ್ಷೆಯಂಥ ಅಲೌಕಿಕ ಘಟನೆಗಳನ್ನು ಒಪ್ಪಬೇಕು. ಇಲ್ಲವೇ ಎಲ್ಲಾ ಹಿರಿಯರು ರಾಮನಿಗೆ ಉಪದೇಶ ಮಾಡಿ ಅವನು ಸೀತೆಯನ್ನು ಸ್ವೀಕರಿಸಿದ ಎಂದು ಐತಿಹಾಸಿಕವಾಗಿಯೂ ತೆಗೆದುಕೊಳ್ಳಬಹುದು. ಸೀತೆಯ ಬಗ್ಗೆ ಅಯೋಧ್ಯೆಯಲ್ಲಿ ಅಪವಾದ ಬಂದಾಗ, ರಾಮನು ಹೀಗಾಗಬಾರದೆಂದು ಲಂಕೆಯಲ್ಲೇ ತೋರಿಸಿದೆನಲ್ಲ ಎಂದು ಕೊರಗುತ್ತಾನೆ. ಹೀಗೆ ಒಬ್ಬ ರಾಜನಾಗಿ ಪ್ರಜೆಗಳಿಗಾಗಿ ಸೀತಾಪರಿತ್ಯಾಗ ಮಾಡಿದ ಶ್ರೀರಾಮ ಮಹಾತ್ಯಾಗಿ.
ರಾಮನು ತಂದೆಯನ್ನು ನಿಂದಿಸಿದ ಎನ್ನುವ ಆಕ್ಷೇಪ. ಕಾಡಿನಲ್ಲಿ ಒಂದೇ ಒಂದು ಬಾರಿ ಲಕ್ಷ್ಮಣನ ಬಳಿ, ತಾನು ಇಷ್ಟು ವಿಧೇಯ ಪುತ್ರನಾಗಿದ್ದರೂ ತನ್ನ ತಂದೆ ದಶರಥ ಕಾಮವಶನಾಗಿ ತನ್ನನ್ನು ಕಾಡಿಗೆ ಕಳಿಸಿದನಲ್ಲ ಎಂದು ಮನುಷ್ಯಸಹಜವಾಗಿ ನೊಂದುಕೊಳ್ಳುತ್ತಾನೆ. ಹಾಗೆಂದು ಅವನು ತಂದೆಯನ್ನು ನಿಂದಿಸಿಲ್ಲ. ತಂದೆಯು ಹೇಳಿದ ಕೂಡಲೇ ಕಾಡಿಗೆ ಹೋದ ಹಾಗೂ ಅವನ ಮದುವೆಯ ಸಮಯದಲ್ಲೂ ತಂದೆ ಬರಲಿ ಎಂದು ಹೇಳುತ್ತಾನೆ. ಅಂತೆಯೇ ಶ್ರದ್ಧೆಯಿಂದ ತಂದೆಯ ಶ್ರಾದ್ಧವನ್ನು ಮಾಡುತ್ತಾನೆ.
ಲಕ್ಷ್ಮಣನನ್ನು ಕೊಂದ ಎಂಬ ಆರೋಪ. ರಾಮಾವತಾರದ ಕೊನೆಯಲ್ಲಿ ಕಾಲಪುರುಷ ಅವನಿಗೆ ನೆನಪಿಸಲು ಬಂದಾಗ ರಾಮನು ಲಕ್ಷ್ಮಣನನ್ನು ಕಾವಲಿಟ್ಟು ಯಾರನ್ನೂ ಒಳಗೆ ಬಿಡಬಾರದೆಂದಾಗ ಹಾಗೂ ದುರ್ವಾಸರು ಬಂದು ಒಳಗೆ ಬಿಡದಿದ್ದರೆ ಅಯೋಧ್ಯೆಗೆ ಶಾಪ ಕೊಡುತ್ತೇನೆ ಎಂದಾಗ ಲಕ್ಷ್ಮಣನು ಅವರನ್ನು ಒಳಗೆ ಬಿಡಲೇಬೇಕಾಯಿತು. ಆ ತಪ್ಪಿಗೆ ರಾಮನು ಅವನನ್ನು ದಂಡಿಸದಿದ್ದರೂ ಅವನೇ ರಾಜ್ಯತ್ಯಾಗ ಮಾಡಿ ಸರಯೂ ನದಿಯಲ್ಲಿ ಮುಳುಗಿ ಯೋಗಸಮಾಧಿಯಿಂದ ಪ್ರಾಣತ್ಯಾಗ ಮಾಡಿದ. ಅನಂತರ ದು:ಖಿತನಾದ ರಾಮನೂ ಹಾಗೆಯೇ ಸರಯೂ ನದಿಯಲ್ಲಿ ಮುಳುಗಿ ತನ್ನ ಅವತಾರ ಮುಗಿಸಿದ. ಇದನ್ನು ಭಗವಾನರು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ಆದರೆ ಸ್ವ ಇಚ್ಛೆಯಿಂದ ಹೀಗೆ ದೇಹತ್ಯಾಗ ಮಾಡುವ ಯೋಗದ ಕ್ರಮವನ್ನು ಭಾಗವತದಲ್ಲಿ ವಿಷ್ಣುವಿನ ಅವತಾರವಾದ ಕಪಿಲ ಮಹರ್ಷಿಗಳು ವಿವರಿಸಿದ್ದಾರೆ. ಹಾಗಾಗಿ ಇದು ಆತ್ಮಹತ್ಯೆ ಅಲ್ಲ. ಅಲ್ಲದೆ ರಾಮನು ಹನ್ನೊಂದು ಸಾವಿರ ವರ್ಷಗಳ ಸುದೀರ್ಘ ಕಾಲ ಆಳಿ ತನ್ನ ಕರ್ತವ್ಯಗಳನ್ನು ಮುಗಿಸಿ ದೇಹತ್ಯಾಗ ಮಾಡಿದ ಕಾರಣ ಅದು ತಪ್ಪಲ್ಲ.
ರಾಮನು ಹನ್ನೊಂದು ಸಾವಿರ ವರ್ಷಗಳ ಕಾಲ ಆಳಿದ್ದು ಸುಳ್ಳು ಎನ್ನುತ್ತಾರೆ ಭಗವಾನರು. ವಾಲ್ಮೀಕಿ ರಾಮಾಯಣದಲ್ಲಿ ಇರುವುದನ್ನೇ ಹೇಳುವೆ ಎನ್ನುವ ಅವರು ಪುನಃ ಅದರಿಲ್ಲುರುವುದನ್ನು ಒಪ್ಪುವುದಿಲ್ಲ. ಆದರೂ ಇಷ್ಟೊಂದು ಕಾಲ ಹೇಗೆ ಬದುಕಿರಲು, ಆಳಲು ಸಾಧ್ಯ ಎಂದು ಕೇಳಬಹುದು. ಇದಕ್ಕೆ ಪರಿಹಾರ ಇದೆ. ವಿದ್ವಾಂಸರು ಹೇಳುವುದೇನೆಂದರೆ ಸಂಸ್ಕೃತದಲ್ಲಿ ಸಂಖ್ಯಾವಾಚಕ ಎಂಬ ಒಂದು ವಿಚಾರವಿದೆ. ಅದರಂತೆ ಇಂಥ ದೊಡ್ಡ ಸಂಖ್ಯೆಗಳನ್ನು ಯಥಾವತ್ತಾಗಿ ತೆಗೆದುಕೊಳ್ಳಬಾರದು. ಶ್ರೀಕೃಷ್ಣನ ಹದಿನಾರು ಸಾವಿರ ಪತ್ನಿಯರು, ಶ್ರೀ ರಾಮನ ಹನ್ನೊಂದು ಸಾವಿರ ವರ್ಷಗಳು, ಇವೆಲ್ಲವೂ ಹೀಗೆ ಸಂಖ್ಯಾವಾಚಕಗಳು.
ಇಷ್ಟೆಲ್ಲಾ ಹೇಳಿದರೂ ಶ್ರೀ ರಾಮನ ಕಾರ್ಯಗಳು ಆಕ್ಷೇಪಣೀಯ ಎನಿಸಿದರೆ ಅದಕ್ಕೆ ಕಾರಣ ಅವನು ಮಾನವನಾಗಿ ನಡೆದುಕೊಳ್ಳಬೇಕಾಗಿದ್ದ ಪರಿಸ್ಥಿತಿ. ರಾವಣನು ತಾನು ಮಾನವನನ್ನು ಹೊರತುಪಡಿಸಿ ಇನ್ನಾವ ಜೀವಿಯಿಂದಲೂ ಸಾಯಬಾರದೆಂದು ಬ್ರಹ್ಮನಿಂದ ವರ ಪಡೆದಿದ್ದನು. ಮಾನವರನ್ನು ಅವನು ಲೆಕ್ಕಿಸಲಿಲ್ಲ. ಹಾಗಾಗಿ ವಿಷ್ಣುವು ಮನುಷ್ಯನ ರೂಪದಲ್ಲಿ ಅವತರಿಸಿ ಅವನನ್ನು ಕೊಂದನು. ಎಂದೆಂದೂ ಅವನು ತಾನೇ ವಿಷ್ಣು ಎಂದು ಕೃಷ್ಣನಂತೆ ಬಹಿರಂಗಪಡಿಸಲಿಲ್ಲ. ಅವನು ಸುದರ್ಶನ ಚಕ್ರ, ಶಾರ್ಙ್ಗ ಧನುಸ್ಸು, ಗರುಡ ವಾಹನ, ಮೊದಲಾದ ವಿಷ್ಣುವಿನ ಯಾವ ಲಾಂಛನಗಳನ್ನೂ ಬಳಸಲಿಲ್ಲ. ಸೀತೆಯ ಅಗ್ನಿಪರೀಕ್ಷೆಯಾದಾಗ ಬ್ರಹ್ಮಾದಿದೇವತೆಗಳೊಂದಿಗೆ ಸ್ವಯಂ ದಶರಥನೇ ಆಕಾಶದಲ್ಲಿ ಪ್ರತ್ಯಕ್ಷನಾಗಿ ರಾಮನನ್ನು ಸಾಕ್ಷಾತ್ ವಿಷ್ಣುವೆಂದು ಹೇಳಿದಾಗ ಅವನು ಈ ವಿಷಯ ತನಗೆ ತಿಳಿಯದೆನ್ನುತ್ತಾನೆ. ಅವನು ಹೇಳುತ್ತಾನೆ - ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್ ( ನಾನು ನನ್ನನ್ನು ಒಬ್ಬ ಮನುಷ್ಯ, ದಶರಥನ ಪುತ್ರನಾದ ರಾಮ ಎಂದು ಭಾವಿಸುತ್ತೇನೆ.). ಹೀಗೆ ಮನುಷ್ಯನ ರೀತಿ ಇರಬೇಕೆಂದಾಗ ಕೆಲವು ಮಾನವದೌರ್ಬಲ್ಯಗಳು ಇದ್ದೇ ಇರುತ್ತವೆ. ಆದರೆ ಇವುಗಳೊಂದಿಗೆ ರಾಮನು ತಾನು ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಎಂದು ತೋರಿಸಿದ.
ಇನ್ನು ಪೌರಾಣಿಕವಾಗಿ ನೋಡುವುದಾದರೆ, ರಾಮನು ಸೀತೆ ಮತ್ತು ಲಕ್ಷ್ಮಣರ ತ್ಯಾಗ ಮಾಡುವುದಕ್ಕೆ ಒಂದು ಸ್ವಾರಸ್ಯಕರ ಕಥೆಯಿದೆ. ಇದೂ ವಾಲ್ಮೀಕಿ ರಾಮಾಯಣದಲ್ಲೇ ಇದೆ. ವಸಿಷ್ಠರು ಇದನ್ನು ದಶರಥನಿಗೆ ಮೊದಲೇ ಹೇಳಿದ್ದರು. ಅದನ್ನು ಕೇಳಿದ ಸುಮಂತ್ರನು ಲಕ್ಷ್ಮಣನಿಗೆ ಹೇಳಿದನು. ಆ ಕಥೆಯಂತೆ, ಹಿಂದೆ ದೇವಾಸುರರ ಯುದ್ಧವಾದಾಗ, ಸೋಲುತ್ತಿದ್ದ ರಾಕ್ಷಸರು, ತಮ್ಮ ಗುರು ಶುಕ್ರಾಚಾರ್ಯರು ತಪಸ್ಸಿಗೆ ಹೋಗಿದ್ದು ಅಲ್ಲಿ ಇರಲಿಲ್ಲದ ಕಾರಣ, ಅವರ ತಂದೆ ಭೃಗು ಮಹರ್ಷಿಗಳ ಆಶ್ರಮಕ್ಕೆ ಓಡಿದರು. ಅವರೂ ಇಲ್ಲದೆ, ಅವರ ಪತ್ನಿ ಖ್ಯಾತಿ ರಾಕ್ಷಸರಿಗೆ ಆಶ್ರಯ ಕೊಟ್ಟಳು. ಆಗ ವಿಷ್ಣುವು ಅವಳನ್ನು ರಾಕ್ಷಸರನ್ನು ಒಪ್ಪಿಸುವಂತೆ ಹೇಳಲು ಅವಳು ಒಪ್ಪದಿದ್ದಾಗ, ಅವನು ತನ್ನ ಚಕ್ರದಿಂದ ಅವಳ ಶಿರಚ್ಛೇದನ ಮಾಡಿ ಕೊಂದನು! ದೇವತೆಗಳು ರಾಕ್ಷಸರನ್ನು ಸೋಲಿಸಿದರು. ಅನಂತರ ಭೃಗು ಮಹರ್ಷಿಗಳು ತಮ್ಮ ಪತ್ನಿಯ ಸಾವಿನಿಂದ ದುಃಖಗೊಂಡು ತಮ್ಮ ದಿವ್ಯ ದೃಷ್ಟಿಯಿಂದ ಇದು ವಿಷ್ಣುವಿನ ಕಾರ್ಯ ಎಂದು ತಿಳಿದು ಅವನಿಗೆ ತಮ್ಮಂತೆಯೇ ಪತ್ನೀವಿಯೋಗ ಅನುಭವಿಸುವಂತೆ ಶಾಪ ಕೊಟ್ಟರು. ಅನಂತರ ತಮ್ಮ ತಪಶ್ಶಕ್ತಿಯಿಂದ ತಮ್ಮ ಪತ್ನಿಯನ್ನು ಬದುಕಿಸಿ, ವಿಷ್ಣುವನ್ನು ಶಪಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಆಗ ವಿಷ್ಣುವು ಪ್ರತ್ಯಕ್ಷನಾಗಿ ರಾಮಾವತಾರದಲ್ಲಿ ಅವರ ಶಾಪವನ್ನು ಸ್ವೀಕರಿಸುವೆನೆಂದು ಹೇಳಿ ಅವರನ್ನು ಸಮಾಧಾನಪಡಿಸಿದರು. ಈ ಕಾರಣದಿಂದ ವಿಷ್ಣುವಿನ ಅವತಾರವಾದ ರಾಮನು ಸೀತೆಯ ವಿಯೋಗವನ್ನು ಮತ್ತೆ ಮತ್ತೆ ಅನುಭವಿಸಬೇಕಾಯಿತು.
ಇಷ್ಟೆಲ್ಲಾ ಆದರೂ ರಾಮನನ್ನು ದೇವರೆಂದು ಒಪ್ಪುವುದಿಲ್ಲ ಎನ್ನಬಹುದು. ಆದರೆ ರಾಮಾಯಣ ಪರಂಪರೆ ಬಹಳ ದೊಡ್ಡದಿದೆ. ಶ್ರೀ ರಾಮ ಒಬ್ಬ ಆದರ್ಶ ಪುರುಷ. ಅವನು ನಿಜವಾಗಿಯೂ ಆಕಾಶದಲ್ಲಿ ಇರುವ ದೇವರಲ್ಲ ಅಥವಾ ದೇವರೇ ಇಲ್ಲ ಎಂದರೂ ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದಾನೆ. ಹೌದು, ಇಂದು ಮಾನವನೂ ಒಂದು ಪ್ರಾಣಿ, ಮಂಗ ಜಾತಿಯ ಪ್ರಾಣಿಯಿಂದ ವಿಕಾಸ ಹೊಂದಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ಇವೆ. ಅಂದಮಾತ್ರಕ್ಕೆ ಮಾನವನು ಪ್ರಾಣಿಯಂತೆ ಬದುಕಬೇಕೇ? ಮಾನವನು ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದು ಕಲ್ಪನೆ ಎಂಬ ವಿಶೇಷ ಶಕ್ತಿಯಿಂದ. ಸೆಪಿಯನ್ಸ್ ಗ್ರಂಥದಲ್ಲಿ ಆಧುನಿಕ ಇಸ್ರೇಲ್ ಚಿಂತಕ ಯುವಾಲ್ ನೋಹ್ ಹರಾರಿ ಇದನ್ನೇ ಹೇಳುತ್ತಾನೆ. ಪ್ರಾಣಿಗಳು ಕೇವಲ ಪ್ರಕೃತಿಯಲ್ಲಿ ಇರುವುದಷ್ಟನ್ನೇ ಕಾಣುತ್ತವೆ ಹಾಗೂ ಅರಿಯುತ್ತವೆ. ಆದರೆ ಮನುಷ್ಯ ಪ್ರಕೃತಿಯನ್ನು ಮೀರಿ ಕಲ್ಪನೆ ಮಾಡುತ್ತಾನೆ ಹಾಗೂ ಆ ಕಲ್ಪನೆಯ ದೆಸೆಯಿಂದ ಹಲವಾರು ಇತರ ಮನುಷ್ಯರೊಂದಿಗೆ ಸಹಕಾರಿಯಾಗಿ ಸಮಾಜ ಕಟ್ಟುತ್ತಾನೆ. ಹಾಗಾಗಿಯೇ ಸಭ್ಯತೆಗಳು ( civilizations) ಬಂದಿವೆ. ನಮ್ಮ ಭಾಷೆ, ಬಟ್ಟೆ, ಕಥೆ, ಪುರಾಣ, ಕೊನೆಗೆ ದೇವರು ಎಲ್ಲವೂ ಮನುಷ್ಯನ ಕಲ್ಪನೆಗಳೇ ನಿಜ! ಇವುಗಳಲ್ಲಿ ಒಳ್ಳೆಯ ಕಲ್ಪನೆಗಳು ಉಳಿಯಬೇಕು. ಸಭ್ಯತೆಗಳ ಪೈಕಿ ಅತ್ಯಂತ ಹಳೆಯ ಮತ್ತು ಇನ್ನೂ ಉಳಿದಿರುವ ಸಭ್ಯತೆ ನಮ್ಮ ಭಾರತೀಯ ಸಭ್ಯತೆ ಅಥವಾ ಸಂಸ್ಕೃತಿ. ಇಂಥ ಸಂಸ್ಕೃತಿಯ ಭಾಗವಾದ ಶ್ರೀ ರಾಮನಿಗೆ ದೇವಾಲಯ ಬೇಡವೇ? ಅದೂ ಹಿಂದೆ ಇದ್ದು ಮುಸಲ್ಮಾನ ದಾಳಿಕೋರ ಬಾಬರನಿಂದ ನಾಶವಾದ ದೇವಾಲಯದ ಪುನರ್ನಿರ್ಮಾಣ ಬೇಡವೇ? ಈ ದೇವಾಲಯದಿಂದ ನಮ್ಮ ಭಾರತೀಯ ಸಂಸ್ಕೃತಿಯ ಉಳಿವಿದೆ ಅಲ್ಲವೇ? ಹಾಗಾಗಿ ರಾಮಮಂದಿರ ಬೇಕೇ ಬೇಕು.