ಬುಧವಾರ, ಮಾರ್ಚ್ 4, 2026

ಪೌರಾಣಿಕ ಸ್ವಾರಸ್ಯಗಳು - ಭಂಗಾಸ್ವನನ ಕಥೆ

ಪೌರಾಣಿಕ ಸ್ವಾರಸ್ಯಗಳು 


ಸ್ತ್ರೀ,ಪುರುಷರ ಸಮಾಗಮದಲ್ಲಿ ಯಾರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ? 

ಭಂಗಾಸ್ವನನ ಕಥೆ 

     ಸ್ತ್ರೀ ಪುರುಷರು ಸಮಾಗಮ ಮಾಡಿದಾಗ ಹೆಚ್ಚು ಸುಖ ಯಾರಿಗೆ ಸಿಗುತ್ತದೆ? ಈ ಪ್ರಶ್ನೆಯನ್ನು ಕೇಳಿದ್ದು ಯುಧಿಷ್ಠಿರ. ಪ್ರಶ್ನೆ ಕೇಳಿದ್ದು ಶರಶಯ್ಯೆಯಲ್ಲಿದ್ದ ಭೀಷ್ಮರನ್ನು. ಮರಣವನ್ನು ಎದುರುನೋಡುತ್ತಾ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಹೋಗಿಬಿಟ್ಟರೆ ಅವರ ಅಪಾರ ಜ್ಞಾನರಾಶಿ ಅವರೊಂದಿಗೇ ಹೊರಟುಹೋಗುತ್ತದೆಯಲ್ಲಾ ಎಂದು ಯೋಚಿಸಿ ಶ್ರೀಕೃಷ್ಣನು ಅವರಿಂದ ಜ್ಞಾನೋಪದೇಶ ಪಡೆಯಲೆಂದು ಪಾಂಡವರನ್ನು ಅವರ ಬಳಿಗೆ ಕರೆದೊಯ್ಯುತ್ತಾನೆ. ಆಗ ಯುಧಿಷ್ಠಿರನು ಕೇಳಿದ ಹಲವಾರು ಪ್ರಶ್ನೆಗಳನ್ನು ಭೀಷ್ಮರು ಉತ್ತರಿಸುತ್ತಾರೆ. ಆಗ ರಾಜನೀತಿ, ಆಧ್ಯಾತ್ಮಿಕ ವಿಚಾರಗಳು, ತತ್ವ, ಭಕ್ತಿ, ದಾನದ ಮಹತ್ವ, ಮೊದಲಾದ ಹಲವಾರು ವಿಚಾರಗಳು ಬರುತ್ತವೆ. ಈ ವಿಷಯಗಳು ಶಾಂತಿಪರ್ವ ಮತ್ತು ಅನುಶಾಸನ ಪರ್ವಗಳಲ್ಲಿ ತುಂಬಿಕೊಂಡಿವೆ. ಶಾಂತಿಪರ್ವ ಇಂಥ ವಿಚಾರಗಳು ಹಾಗೂ ಹಲವಾರು ಕಥೆಗಳಿರುವ ಬಹು ದೊಡ್ಡ ಪರ್ವ. ಆದರೆ ಮಹಾಭಾರತದಂಥ ಗ್ರಂಥದಲ್ಲಿ ಮೇಲೆ ಹೇಳಿದ ವಿಷಯವೂ ಇದೆಯೆಂದು ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ ಮಹಾಭಾರತವು ಆರಂಭದಲ್ಲೇ ಹೇಳುತ್ತದೆ -

ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ /
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ //
   ' ಎಲೈ ಭರತರ್ಷಭ! ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳಲ್ಲಿ ಈ ಗ್ರಂಥದಲ್ಲಿರುವುದೇ ಇತರ ಕಡೆಗಳಲ್ಲಿದೆ. ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ!' 
      ಹಾಗಾಗಿ ಮಹಾಭಾರತದಲ್ಲಿ ಕಾಮದ ವಿಷಯವೂ ಚರ್ಚಿತವಾಗಿದೆ. ಭೀಷ್ಮರಂಥ ಆಜನ್ಮ ಬ್ರಹ್ಮಚಾರಿಗಳಿಗೆ ಇದೇನು ಗೊತ್ತಿರುತ್ತದೆ ಎಂದು ಕೇಳಬಹುದು. ಆದರೆ ಪ್ರಾಚೀನ ಭಾರತದಲ್ಲಿ ಒಂದು ವೃತ್ತಿ ಅಥವಾ ಒಂದು ಬದುಕಿನ ರೀತಿಯಲ್ಲಿ ಇರುವವರಿಗೆ ಇತರ ವಿಚಾರಗಳ ಬಗ್ಗೆ ತಿಳಿದಿರಬಾರದೆಂದೇನೂ ಇರಲಿಲ್ಲ. ಉದಾಹರಣೆಗೆ ಬ್ರಾಹ್ಮಣರಾದ ದ್ರೋಣಾಚಾರ್ಯರು ಕ್ಷಾತ್ರವಿದ್ಯೆಯನ್ನು ತಿಳಿದಿದ್ದರಲ್ಲದೇ ಅದನ್ನು ಪಾಂಡವ, ಕೌರವರಿಗೆ ಕಲಿಸಿದರು ಹಾಗೂ ಸ್ವಯಂ ಮಹಾವೀರರಾಗಿದ್ದರು ಮತ್ತು ಯುದ್ಧ ಮಾಡಿದರು ಕೂಡ! ಕಾಮಸೂತ್ರ ಬರೆದ ವಾತ್ಸ್ಯಾಯನ ಕೂಡ ತಾನು ಬ್ರಹ್ಮಚರ್ಯೆಯಲ್ಲಿರುವಾಗ ಈ ಗ್ರಂಥವನ್ನು ರಚಿಸಿದೆ ಎಂದು ಹೇಳಿಕೊಂಡಿದ್ದಾನೆ. ಪ್ರಹ್ಲಾದನು ಬಾಲ್ಯದಲ್ಲೇ ಮಹಾಭಕ್ತನೂ ಜ್ಞಾನಿಯೂ ಆಗಿದ್ದ! ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ.
     ಸ್ತ್ರೀ, ಪುರುಷರು ಸಂಭೋಗಿಸಿದಾಗ ಯಾರಿಗೆ ಹೆಚ್ಚು ಸುಖ ಸಿಗುತ್ತದೆ? ಇದೊಂದು ಚರ್ಚಾಸ್ಪದ ವಿಷಯ. ಇದನ್ನು ಭೀಷ್ಮರು ಒಂದು ಕಥೆಯ ಮೂಲಕ ಉತ್ತರಿಸುತ್ತಾರೆ. ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುತ್ತದೆ. ಈಗ ಈ ಸ್ವಾರಸ್ಯಕರ ಕಥೆಯನ್ನು ನೋಡೋಣ.
      ಹಿಂದೆ, ಭಂಗಾಸ್ವನನೆಂಬ ರಾಜನಿದ್ದನು. ಪರಮಧಾರ್ಮಿಕನಾಗಿದ್ದ ಅವನಿಗೆ ಅನೇಕ ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಹಾಗಾಗಿ ಅವನು ಪಂಡಿತರಲ್ಲಿ ಸಮಾಲೋಚಿಸಿ, ಪುತ್ರ ಪ್ರಾಪ್ತಿಗಾಗಿ ಅಗ್ನಿಷ್ಟುತವೆಂಬ ಯಜ್ಞವನ್ನು ಮಾಡಿದನು. ಅದರ ಪ್ರಭಾವದಿಂದ ಅವನಿಗೆ ನೂರು ಪುತ್ರರು ಜನಿಸಿದರು. ಆದರೆ ಈ ಯಜ್ಞದ ಒಂದು ವೈಶಿಷ್ಟ್ಯವೆಂದರೆ ಇದರಲ್ಲಿ ಇಂದ್ರನಿಗೆ ಆಹ್ವಾನವಿರಲಿಲ್ಲ! ಇದರಿಂದ ಇಂದ್ರನು ಈ ಯಜ್ಞವನ್ನು ದ್ವೇಷಿಸುತ್ತಿದ್ದನು. ತನಗೆ ಅಪ್ರಿಯವಾದ ಯಜ್ಞ ಮಾಡಿದ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಿದನು. ಅದಕ್ಕಾಗಿ ಅವನು ಭಂಗಾಸ್ವನನಲ್ಲಿ ಏನಾದರೂ ದೋಷವನ್ನು ಹುಡುಕಿದನು. ಆದರೆ ಅವನಿಗೆ ಯಾವ ದೋಷವೂ ಕಾಣಲಿಲ್ಲ. 
     ಹೀಗಿರಲು, ಒಂದು ದಿನ ಭಂಗಾಸ್ವನನು ಬೇಟೆಯಾಡಲು ಕಾಡಿಗೆ ಹೋದನು. ಆಗ ಇಂದ್ರನು ಸೇಡು ತೀರಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ರಾಜನ ಮನಸ್ಸಿಗೆ ಭ್ರಮೆಯಾವರಿಸಿದನು! ಭ್ರಮೆಗೊಳಗಾದ ರಾಜನು ಕುದುರೆಯ ಮೇಲೆ ದೌಡಾಯಿಸುತ್ತಾ ತನ್ನ ಪರಿವಾರದಿಂದ ಬೇರೆಯಾಗಿ ಎಲ್ಲೆಲ್ಲೋ ಸುತ್ತಿ ದಟ್ಟ ಅರಣ್ಯದ ಮಧ್ಯೆ ಸಿಲುಕಿಕೊಂಡನು! ಅವನೂ ಅವನ ಕುದುರೆಯೂ ಹಸಿವು, ಬಾಯಾರಿಕೆಗಳಿಂದ ಬಳಲಿದರು! ಆಗ ಇಂದ್ರನು ಸ್ವಲ್ಪ ದೂರದಲ್ಲೇ ಒಂದು ಮಾಯಾ ಸರೋವರವನ್ನು ನಿರ್ಮಿಸಿದನು! ಭಂಗಾಸ್ವನನು ಸುತ್ತಲೂ ಕಣ್ಣಾಡಿಸುತ್ತಾ ಆ ಸರೋವರವನ್ನು ನೋಡಿ ಸಂತೋಷಗೊಂಡನು! ಕೂಡಲೇ ಆ ಸರೋವರದ ಬಳಿಗೆ ಹೋಗಿ ಸ್ವಲ್ಪ ನೀರು ಕುಡಿದು ಕುದುರೆಗೂ ಕುಡಿಸಿ ಅದರ ಮೈ ತೊಳೆದು ಅದನ್ನು ಒಂದು ಮರಕ್ಕೆ ಕಟ್ಟಿ ತಾನು ಆ ಸರೋವರದಲ್ಲಿ ಮುಳುಗಿದನು. ಆದರೆ ಅವನು ಮೇಲೆದ್ದಾಗ ಅವನಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು! ಇದ್ದಕ್ಕಿದ್ದಂತೆ ಅವನು ಹೆಣ್ಣಾಗಿಬಿಟ್ಟಿದ್ದನು! 
    ಆಶ್ಚರ್ಯ, ದು:ಖಗಳಿಗೊಳಗಾದ ರಾಜನು," ಅಯ್ಯೋ! ಇದೇನು ನನ್ನ ದುರವಸ್ಥೆ! ನಾನೇಕೆ ಹೀಗೆ ಸ್ತ್ರೀಯಾದೆ? ಈಗ ಈ ಕುದುರೆಯನ್ನು ಹೇಗೆ ಹತ್ತಲಿ? ಮೃದುತ್ವ, ಕೃಶತ್ವ, ವ್ಯಾಕುಲತೆಗಳು ಹೆಣ್ಣಿನ ಗುಣಗಳೆಂದೂ ಕಾಠಿಣ್ಯ, ಪರಾಕ್ರಮಗಳು ಗಂಡಿನ ಗುಣಗಳೆಂದೂ ಶಾಸ್ತ್ರಜ್ಞರು ಹೇಳುತ್ತಾರೆ! ಹೀಗಿರುವಾಗ, ಪುರುಷತ್ವವನ್ನೇ ಕಳೆದುಕೊಂಡಿರುವ ನಾನು ರಾಜ್ಯವನ್ನು ಹೇಗೆ ಆಳಲಿ? ನಾನಿನ್ನು ರಾಜ್ಯವನ್ನು ಆಳಲಾರೆ ಎಂದು ಎಲ್ಲರಿಗೂ ಹೇಳಿ ಕಾಡಿಗೆ ಹಿಂದಿರುಗಿ ತಪಸ್ಸು ಮಾಡುತ್ತೇನೆ!" ಎಂದು ಯೋಚಿಸಿ ಕಷ್ಟಪಟ್ಟು ಕುದುರೆ ಹತ್ತಿ ತನ್ನ ರಾಜ್ಯಕ್ಕೆ ಹೋದನು. ತನ್ನ ಪತ್ನೀಪುತ್ರರಿಗೂ ಮಂತ್ರಿಗಳಿಗೂ ತಾನು ಭಂಗಾಸ್ವನ ರಾಜನೆಂದು ಹೇಳಿದರೂ ಅವರಾರೂ ನಂಬಲಿಲ್ಲ. ಆಗ ಅವನು ತನ್ನ ಕುಲ,ಗೋತ್ರಾದಿ ಗುರುತುಗಳನ್ನು ನಿಖರವಾಗಿ ಹೇಳಲು ಅವರು ನಂಬಿ ಅವನ ದು:ಸ್ಥಿತಿಗಾಗಿ ಮರುಗಿದರು. ಆಗ ಅವನು ತನ್ನ ನೂರು ಪುತ್ರರಿಗೆ ರಾಜ್ಯವನ್ನೊಪ್ಪಿಸಿ, ಪ್ರೀತಿ,ಸೌಹಾರ್ದತೆಗಳಿಂದ ಸುಖವಾಗಿ ಬಾಳಲು ಹೇಳಿ ಕಾಡಿಗೆ ಹೊರಟುಹೋದನು.
      ಈಗ ಭಂಗಾಸ್ವನಿಯು ಕಾಡಿನಲ್ಲಿ ತಪಸ್ಸು ಮಾಡಲು ಪ್ರಯತ್ನಿಸಿದಳು. ಆದರೆ ಸ್ತ್ರೀಯಾದ ಅವಳ ಅಂತ:ಕರಣ ಬದಲಾಗಿದ್ದು ಅವಳಿಗೆ ಆಗಲಿಲ್ಲ. 
       ಹೀಗಿರಲು, ಅವಳು ಒಂದು ಆಶ್ರಮವನ್ನು ಕಂಡು ಅಲ್ಲೊಬ್ಬ ಋಷಿಯನ್ನು ನೋಡಿದಳು. ಅವನಿಗೆ ತನ್ನ ಪೂರ್ವ ಕಥೆಯನ್ನು ಹೇಳಿ ಅವನ ಸೇವೆ ಮಾಡಲು ಅನುಮತಿ ಬೇಡಿದಳು. ಅದಕ್ಕೆ ಅವನು ಒಪ್ಪಲು, ಅವನ ಸೇವೆ ಮಾಡುತ್ತಾ ಅವಳು ತಾನೂ ಅವನೊಂದಿಗೆ ತಪಸ್ಸು ಮಾಡತೊಡಗಿದಳು. ಕ್ರಮೇಣ ಅವರಿಬ್ಬರಿಗೂ ಪ್ರೀತಿ ಬೆಳೆದು ಅವರು ಸಮಾಗಮ ಮಾಡಿದರು! ಇದರಿಂದ ಅವಳು ಗರ್ಭಿಣಿಯಾಗಿ ನೂರು ಪುತ್ರರಿಗೆ ಜನ್ಮವಿತ್ತಳು! 
       ಭಂಗಾಸ್ವನಿಯ ಮಕ್ಕಳು ದೊಡ್ಡವರಾಗಲು ಅವಳು ಅವರನ್ನು ತನ್ನ ಹಿಂದಿನ ರಾಜ್ಯಕ್ಕೆ ಕರೆದೊಯ್ದು ತನ್ನ ಹಿಂದಿನ ಮಕ್ಕಳಿಗೆ ಪರಿಚಯಿಸುತ್ತಾ," ಮಕ್ಕಳೇ! ಇವರೆಲ್ಲರೂ ನನ್ನ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳು! ಹಾಗಾಗಿ ನಿಮ್ಮ ತಮ್ಮಂದಿರಾಗುತ್ತಾರೆ! ನೀವು ಇವರೊಂದಿಗೆ ರಾಜ್ಯವನ್ನು ಹಂಚಿಕೊಂಡು ಶಾಂತಿ, ಸೌಹಾರ್ದತೆಗಳಿಂದ ಸುಖವಾಗಿ ಬಾಳಿ!" ಎಂದು ಹೇಳಿ ಹೊರಟಳು.ಅದಕ್ಕೆ ಆ ಮೊದಲಿನ ಮಕ್ಕಳು ಒಪ್ಪಿ ತಮ್ಮ ತಮ್ಮಂದಿರೊಡನೆ ರಾಜ್ಯವನ್ನು ಹಂಚಿಕೊಂಡು ಸುಖವಾಗಿರತೊಡಗಿದರು.
    ಇದರಿಂದ ಇಂದ್ರನಿಗೆ ಕಸಿವಿಸಿಯಾಯಿತು! ಅವನು ಯೋಚಿಸಿದನು," ನಾನು ಈ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳಲು ಅವನನ್ನು ಸ್ತ್ರೀಯಾಗಿ ಪರಿವರ್ತಿಸಿದರೆ ಅದು ಅವನಿಗೆ ಅನುಕೂಲವೇ ಆಯಿತು! ಅವನಿಗೆ ಇನ್ನೂ ನೂರು ಮಕ್ಕಳಾದರು! ಈಗ ಅವನಿಗೆ ದುಃಖವಾಗುವ ಹಾಗೆ ಏನಾದರೂ ಕಾರ್ಯ ಮಾಡಬೇಕು!" 
     ಹೀಗೆ ಯೋಚಿಸಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಭಂಗಾಸ್ವನನ ಮೊದಲ ನೂರು ಮಕ್ಕಳ ಬಳಿಗೆ ಹೋಗಿ ಹೇಳಿದ," ರಾಜಪುತ್ರರೇ! ನೀವು ಭಂಗಾಸ್ವನ ರಾಜನ ಮಕ್ಕಳು! ಆದರೆ ಆ ಇನ್ನೊಂದು ಗುಂಪಿನ ನೂರು ಯಾರೋ ತಪಸ್ವಿಯ ಪುತ್ರರು! ಒಬ್ಬನೇ ಕಶ್ಯಪನ ಮಕ್ಕಳಾದರೂ ದೇವತೆಗಳೂ ರಾಕ್ಷಸರೂ ಸದಾ ಸ್ವರ್ಗಕ್ಕಾಗಿ ಕಾದಾಡುತ್ತಲೇ ಇರುತ್ತಾರೆ! ಇನ್ನು ನೀವೇಕೆ ಪಿತೃಸಂಬಂಧವಾದ ಈ ರಾಜ್ಯವನ್ನು ಆ ಇತರರೊಂದಿಗೆ ಹಂಚಿಕೊಳ್ಳಬೇಕು? ನಾಳೆ ಅವರು ಈ ರಾಜ್ಯಕ್ಕೆ ತಾವೇ ವಾರಸುದಾರರೆಂದು ನಿಮ್ಮನ್ನು ಹೊರಗಟ್ಟಿದರೆ? ಅದಕ್ಕೆ ಮೊದಲು ನೀವೇ ಅವರನ್ನು ಹೊರಗಟ್ಟಿ!" 
     ಇಂದ್ರನ ದುರ್ಬೋಧೆ ಅವರ ಮನಸ್ಸಿಗೆ ನಾಟಿತು! ಅವರು ತಮ್ಮ ತಮ್ಮಂದಿರೊಡನೆ ಯುದ್ಧ ಮಾಡಲು ಎರಡೂ ಗುಂಪುಗಳು ಪರಸ್ಪರ ಕಾದಾಡಿ ನಾಶಗೊಂಡವು! 
    ಈ ವಿಷಯ ಭಂಗಾಸ್ವನಿಗೆ ದೂತನೊಬ್ಬನಿಂದ ತಿಳಿದು ಅವಳು ದು:ಖಿತಳಾಗಿ ಅತ್ತು ಗೋಳಾಡತೊಡಗಿದಳು! ಆಗ ಇಂದ್ರನು ಸಮಾಧಾನಗೊಂಡು ಪುನಃ ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಏಕೆ ಗೋಳಾಡುತ್ತಿರುವೆಯೆಂದು ಕೇಳಿದನು. ಆಗ ಅವಳು ತನ್ನ ಕಥೆಯನ್ನು ಹೇಳಿಕೊಂಡಳು. ಆಗ ಇಂದ್ರನು ತನ್ನ ನಿಜರೂಪಿನಲ್ಲಿ ಕಾಣಿಸಿಕೊಂಡು ನಗುತ್ತಾ," ಭದ್ರೆ! ಈ ನಿನ್ನ ಶೋಕಕ್ಕೆ ನಾನೇ ಕಾರಣ! ಮೂರ್ಖ ರಾಜನೇ! ಹಿಂದೆ ನೀನು ಇಂದ್ರನಿಗೆ ಪ್ರಾಧಾನ್ಯವಿಲ್ಲದ ಒಂದು ಯಜ್ಞ ಮಾಡಿ ಅವನಿಗೆ ಅಸಮಾಧಾನವುಂಟುಮಾಡಿದೆ! ಆ ಇಂದ್ರನು ನಾನೇ ಆಗಿದ್ದೇನೆ! ನನಗೆ ಅಪ್ರಿಯವಾದ ಯಜ್ಞ ಮಾಡಿದ ಕಾರಣ ನಿನ್ನ ಮೇಲಿನ ದ್ವೇಷದಿಂದ ನಿನಗೆ ಇಂಥ ದುರವಸ್ಥೆ ತಂದೆ!" 
      ತನ್ನ ಮುಂದೆ ನಿಂತಿರುವವನು ಇಂದ್ರನೆಂದು ತಿಳಿಯುತ್ತಲೇ ಭಂಗಾಸ್ವನಿಯು ಅವನ ಕಾಲಿಗೆ ಬಿದ್ದು ಹೇಳಿದಳು," ದೇವೇಂದ್ರ! ಆ ಯಜ್ಞವು ನಿನಗೆ ಅಪ್ರಿಯವಾದುದೆಂದು ನನಗೆ ತಿಳಿದಿರಲಿಲ್ಲ! ನಾನು ಪುತ್ರಾಪೇಕ್ಷೆಯಿಂದಷ್ಟೇ ಯಜ್ಞ ಮಾಡಿದೆ. ಆ ಯಜ್ಞದ ನಿಯಮಾನುಸಾರವಾಗಿ ಅದರಲ್ಲಿ ನಿನಗೆ ಆಹ್ವಾನವಿರಲಿಲ್ಲ ಅಷ್ಟೇ! ಆದ್ದರಿಂದ ದಯವಿಟ್ಟು ಪ್ರಸನ್ನನಾಗು! ಇದರಲ್ಲಿ ನನ್ನ ತಪ್ಪೇನೂ ಇಲ್ಲ! ತಪ್ಪೆನಿಸಿದರೆ ಮನ್ನಿಸು!" 
    ಇದನ್ನು ಕೇಳಿ ಇಂದ್ರನಿಗೆ ಕನಿಕರವುಂಟಾಯಿತು. ಆಗ ಅವನು ಹೇಳಿದನು," ಸರಿ! ಒಪ್ಪಿದೆ! ಒಂದು ವರವನ್ನು ನೀಡುತ್ತೇನೆ! ನಿನ್ನ ಒಂದು ನೂರು ಮಕ್ಕಳನ್ನು ಬದುಕಿಸುತ್ತೇನೆ! ನೀನು ಪುರುಷನಾಗಿದ್ದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ ಇಲ್ಲವೇ ಸ್ತ್ರೀಯಾದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ? ಹೇಳು!" 
    ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಸ್ತ್ರೀಯಾದಾಗ ಹುಟ್ಟಿದ ಮಕ್ಕಳೇ ಬದುಕಲಿ!" 
    "ಅದೇಕೆ?" ವಿಸ್ಮಯದಿಂದ ಕೇಳಿದ ಇಂದ್ರ.
     ಭಂಗಾಸ್ವನಿಯು ಹೇಳಿದಳು," ಸ್ತ್ರೀಯರಿಗೆ ಸಹಜವಾಗಿಯೇ ಮಕ್ಕಳೆಂದರೆ ಪ್ರೀತಿಯಿರುತ್ತದೆ! ಅದು ಅವರ ಮಕ್ಕಳೇ ಆಗಿರಬೇಕೆಂದಿಲ್ಲ! ಆದರೆ ಪುರುಷರಿಗೆ ಮಕ್ಕಳೆಂದರೆ ಅಷ್ಟು ಗಾಢ ಪ್ರೀತಿಯಿರುವುದಿಲ್ಲ! ಹೀಗಿರುವಾಗ ತಮ್ಮ ಮಕ್ಕಳೇ ಆದರೆ ಸ್ತ್ರೀಯರಿಗೆ ಇನ್ನೆಷ್ಟು ಪ್ರೀತಿಯಿರಬೇಡ? ತಾಯ್ತನದ ಸವಿಯನ್ನುಂಡಿರುವ ನನಗೆ ಅದು ಗೊತ್ತು! ಹಾಗಾಗಿ ನನಗೆ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳೇ ಬದುಕಲಿ!" 
     ಇಂದ್ರನು ಅವಳ ಉತ್ತರದಿಂದ ಸಂತುಷ್ಟನಾಗಿ ಹೇಳಿದ," ಭದ್ರೆ! ಸತ್ಯವನ್ನೇ ಹೇಳಿದೆ! ನಿನ್ನ ಎಲ್ಲಾ ಮಕ್ಕಳನ್ನೂ ಬದುಕಿಸುತ್ತೇನೆ! ಈಗ ಇನ್ನೊಂದು ವರವನ್ನು ನೀಡುತ್ತೇನೆ! ನೀನು ಪುನಃ ಪುರುಷನಾಗಲು ಬಯಸುವೆಯಾ? ಅಥವಾ ಹೆಣ್ಣಾಗಿಯೇ ಇರಲು ಬಯಸುವೆಯಾ? ಹೇಳು!" 
    " ನಾನು ಹೆಣ್ಣಾಗಿಯೇ ಇರಲು ಬಯಸುತ್ತೇನೆ!" ಭಂಗಾಸ್ವನಿಯು ಹೇಳಿದಳು.
    " ಅದೇಕೆ?" ಆಶ್ಚರ್ಯದಿಂದ ಕೇಳಿದ ಇಂದ್ರ. 
 ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಪುರುಷನಾಗಿದ್ದಾಗ ಹಾಗೂ ಸ್ತ್ರೀಯಾಗಿದ್ದಾಗ, ಈ ಎರಡೂ ಸಂದರ್ಭಗಳಲ್ಲಿ ರತಿಸುಖವನ್ನು ಅನುಭವಿಸಿದ್ದೇನೆ! ಈ ಎರಡು ಅನುಭವಗಳಲ್ಲಿ ಸ್ತ್ರೀಯಾದಾಗ ಪಡೆದ ಅನುಭವವೇ ಹೆಚ್ಚು ಸುಖದಾಯಕವೆಂದು ಅರಿವಾಗಿದೆ! ಹಾಗಾಗಿ ನಾನು ಸ್ತ್ರೀಯಾಗಿಯೇ ಇರಲು ಇಚ್ಛಿಸುತ್ತೇನೆ!" 
     "ಭಲೆ! ಪುನಃ ನೀನು ಸತ್ಯವನ್ನೇ ಹೇಳಿರುವೆ! ಹಾಗೆಯೇ ಆಗಲಿ! ನಾನಿನ್ನು ಬರುತ್ತೇನೆ!" ಇಂದ್ರನು ಹೇಳಿ ಅದೃಶ್ಯನಾದನು.
      ಭೀಷ್ಮರು ಹೀಗೆ ಕಥೆ ಹೇಳಿ," ಹೀಗೆ ಸ್ತ್ರೀ ಪುರುಷರ ಸಮಾಗಮದಲ್ಲಿ ಸ್ತ್ರೀಗೇ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ!" ಎಂದರು.
     ಹೀಗೆ ಸ್ತ್ರೀಪುರುಷರ ಸಮಾಗಮದಲ್ಲಿ ಪುರುಷರಿಗಿಂತ ಸ್ತ್ರೀಯರಿಗೇ ಹೆಚ್ಚು ಸುಖಪ್ರಾಪ್ತಿಯಾಗುತ್ತದೆಯೆಂಬುದು ಮಹಾಭಾರತದ ಅಂಬೋಣ. ಚಾಣಕ್ಯ ನೀತಿಯ ಒಂದು ಶ್ಲೋಕ ಹೀಗಿದೆ -
    ಆಹಾರೋ ದ್ವಿಗುಣಸ್ತ್ರೀಣಾಂ ಬುದ್ಧಿಸ್ತಾಸಾಂ ಚತುರ್ಗುಣಾ /
    ಷಡ್ಗುಣೋ ವ್ಯವಸಾಯಶ್ಚ ಕಾಮಶ್ಚಾಷ್ಟಗುಣ: ಸ್ಮೃತ: // 
     ' ಸ್ತ್ರೀಯರಿಗೆ ಪುರುಷರಿಗಿಂತ ಎರಡು ಪಟ್ಟು ಆಹಾರ ಸೇವನೆ ಹೆಚ್ಚು! ಅವರ ಬುದ್ಧಿ, ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚು! ಅವರ ಸಾಹಸ ಅಥವಾ ಕಾರ್ಯಕುಶಲತೆ ಆರು ಪಟ್ಟು ಹೆಚ್ಚು! ಅವರ ಕಾಮ ಎಂಟು ಪಟ್ಟು ಹೆಚ್ಚು!" 
     ಇದು ಸ್ವಲ್ಪ ಮಟ್ಟಿಗೆ ನಿಜವೆಂದು ಹೇಳಬಹುದು. ಹೆಚ್ಚು ಕೆಲಸ ಮಾಡುವುದರಿಂದ ಹಾಗೂ ಗರ್ಭಧಾರಣೆಯ ಸಮಯದಲ್ಲಿ ಹಾಗೂ ಮಕ್ಕಳಿಗೆ ಹಾಲೂಡಿಸುವ ಸಮಯದಲ್ಲಿ ಹಾಗೂ ನಿತ್ಯ ಜೀವನದಲ್ಲೂ ರಜಸ್ವಲೆಯಾದಾಗ ರಕ್ತದ ಮೂಲಕ ಹೆಚ್ಚು ಕಬ್ಬಿಣದ ಅಂಶ ಕಳೆದುಕೊಳ್ಳುವುದರಿಂದ ಸ್ತ್ರೀಯರಿಗೆ ಹೆಚ್ಚಿನ ಆಹಾರ ಸೇವನೆ ಬೇಕಾಗುತ್ತದೆ. ಪುರುಷರು ದೈಹಿಕವಾಗಿ ಹೆಚ್ಚು ಬಲಶಾಲಿಗಳಾದರೆ ಸ್ತ್ರೀಯರು ಮಾನಸಿಕವಾಗಿ ತಾಳ್ಮೆ, ಸಹನೆಗಳಿಂದ ಬಲಶಾಲಿಗಳು ಹಾಗೂ ಬುದ್ಧಿ, ಚಾತುರ್ಯಗಳನ್ನು ಹೆಚ್ಚಾಗಿ ಉಳ್ಳವರು. ಸಾಹಸ ಕಾರ್ಯಗಳಲ್ಲಿ ಹಾಗೂ ನಾಜೂಕಾಗಿ ಕೌಶಲ್ಯದಿಂದ ಕೆಲಸ ಮಾಡುವುದರಲ್ಲಿ ಸ್ತ್ರೀಯರು ಹೆಚ್ಚೇ! ಇನ್ನು ಕಾಮ, ಬಯಕೆಗಳೂ ಅವರಿಗೆ ಹೆಚ್ಚು. ಪುರುಷರಿಗಿಂತ ಚೆನ್ನಾಗಿ ಜೀವನವನ್ನು ಕಲಾತ್ಮಕವಾಗಿ ಅನುಭವಿಸಲು ಅವರಿಗೆ ಬರುತ್ತದೆ. ವೈಜ್ಞಾನಿಕವಾಗಿ ಪುರುಷರಿಗೆ ಬೇಗನೆ ಕಾಮಪ್ರಚೋದನೆಯಾಗಿ ಬೇಗನೆ ಮುಗಿದುಹೋದರೆ ಸ್ತ್ರೀಯರಿಗೆ ಅದು ನಿಧಾನವಾಗಿ ಆಗುತ್ತದೆ ಹಾಗೂ ಹೆಚ್ಚಿನ ಹೊತ್ತು ಇರುತ್ತದೆ. ಪುರುಷರಿಗಿಂತ ಸ್ತ್ರೀಯರಿಗೆ ಮಿಲನದ ಸಮಯದಲ್ಲಿ ಹೆಚ್ಚು ಬಾರಿ ಭಾವಪ್ರಾಪ್ತಿಯಾಗುತ್ತದೆ. ಹಾಗಾಗಿ ಪುರುಷರು ಸ್ತ್ರೀಯರನ್ನು ತಾಳ್ಮೆಯಿಂದ, ಪ್ರೀತಿಯಿಂದ ರಮಿಸುತ್ತಾ ನಿಧಾನವಾಗಿ ಸಂಭೋಗಿಸಿದರೆ ಆಗ ಸ್ತ್ರೀಯರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂಬುದು ನಿಜ. ಸ್ತ್ರೀಯರೊಂದಿಗೆ ಕೋಮಲವಾಗಿ ಶೃಂಗಾರಾತ್ಮಕವಾಗಿ ರತಿಕಲಾಪಗಳನ್ನು ನಡೆಸಿ ಅವರನ್ನು ಸುಖಗೊಳಿಸಲು ಪುರುಷರು ಪ್ರಯತ್ನಿಸಿ ಆ ಸುಖದಿಂದ ಪುರುಷರೂ ಸುಖಿಸಬೇಕು. ಅಂಥ ಪುರುಷರನ್ನು ಸ್ತ್ರೀಯರು ಮನಸಾರೆ ಪ್ರೀತಿಸುತ್ತಾರೆ. ಇದನ್ನು ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ವಿಶದವಾಗಿ ವಿವರಿಸಿದ್ದಾನೆ. ಹೀಗೆ ನಮ್ಮ ಪ್ರಾಚೀನ ಗ್ರಂಥಗಳಿಂದ ಇಂದಿನ ಜೀವನಕ್ಕೆ ಬಹಳಷ್ಟು ಪ್ರೇರಣೆ ಪಡೆಯಬಹುದು.

ಭಾನುವಾರ, ಮಾರ್ಚ್ 1, 2026

ಸುಂದರೀಶತಕ -೧

ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ವರ್ಣನೆಗಳಿಗೆ ಪ್ರಮುಖ ಸ್ಥಾನವಿದೆ. ಹಾಗಾಗಿ ಸಂಸ್ಕೃತದಲ್ಲಿ ಅನೇಕ ಶೃಂಗಾರ ಕಾವ್ಯಗಳಿವೆ.ಸುಕವಿ ಉತ್ಪ್ರೇಕ್ಷಾವಲ್ಲಭನು ರಚಿಸಿರುವ ಸುಂದರೀಶತಕ ಅಂಥ ಒಂದು ಶೃಂಗಾರ ಕಾವ್ಯ.

೧. ಜಯತಿ ವಿಲಾಸವತೀನಾಂ ನೇತ್ರಪ್ರಾಪ್ತಾವಲೋಕನಪ್ರಾಣ; /
ವದನೇಂದುದ್ಯುತಿಸದನ: ಸ್ಮಿತಮಾಧ್ವೀಮೇದುರೋ ಮದನ: //

ವಿಲಾಸವತಿ ಸ್ತ್ರೀಯರ ಕಟಾಕ್ಷಗಳೇ ಪ್ರಾಣವಾಗಿರುವ, ಅವರ ಮುಖಚಂದ್ರದ ( ಮುಖವೆಂಬ ಚಂದ್ರದ) ಕಾಂತಿಯೇ ಮನೆಯಾಗಿರುವ, ಅವರ ನಗುವೆಂಬ ಮಧುವಿನಿಂದ ಪ್ರವರ್ಧಿಸಿರುವ ಮದನನು ವಿಜಯಶಾಲಿಯಾಗುತ್ತಾನೆ! 
      ಮನ್ಮಥನಿಗೆ ವಿಲಾಸವತಿ ಸ್ತ್ರೀಯರ ಕಣ್ಣೋಟಗಳೇ ಪ್ರಾಣ! ಅವರ ಮುಖಚಂದ್ರದ ಕಾಂತಿಯೇ ಅವನು ವಾಸಿಸುವ ಮನೆ! ಅವರ ನಗುವೆಂಬ ಮಧುವಿನಿಂದಲೇ ಅವನು ಪ್ರವರ್ಧಿಸುತ್ತಾನೆ! ಹೀಗೆ ಸ್ತ್ರೀಯರ ಸೌಂದರ್ಯದಿಂದಲೇ ಎಲ್ಲವೂ ಆಗಿರುವ ಇಂಥ ಮನ್ಮಥನು ವಿಜಯಶಾಲಿಯಾಗುತ್ತಾನೆ ಎಂದು ಕವಿಯು ತನ್ನ ಸುಂದರೀಶತಕದ ಆರಂಭ ಶ್ಲೋಕದಲ್ಲಿ ಮನ್ಮಥನನ್ನು ಸ್ತುತಿಸಿದ್ದಾನೆ.


ಶನಿವಾರ, ಫೆಬ್ರವರಿ 21, 2026

ಪೌರಾಣಿಕ ಸ್ವಾರಸ್ಯಗಳು - ತನ್ನ ಶವವನ್ನೇ ತಾನು ತಿನ್ನುತ್ತಿದ್ದ ಶ್ವೇತ ರಾಜನ ಕಥೆ

ನಾವು ಪೌರಾಣಿಕ ಪ್ರಪಂಚದಲ್ಲಿ ವಿಹರಿಸತೊಡಗಿದರೆ ನಮಗೆ ಮುತ್ತು, ರತ್ನಗಳಂಥ ಅಸಂಖ್ಯಾತ ಕಥೆಗಳ ದೊಡ್ಡ ಗಣಿಗಳೇ ಸಿಗುತ್ತವೆ! ಬಗೆಬಗೆಯಾದ, ಸ್ವಾರಸ್ಯಕರ, ನೀತಿಬೋಧಕ, ಮನರಂಜನಾತ್ಮಕ ಕಥೆಗಳು ಹೇರಳವಾಗಿ ಸಿಗುತ್ತವೆ! ಇಂಥವನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು, ವೆಬ್ ಸೀರಿಸ್ ಗಳನ್ನು ಧಾರಾಳವಾಗಿ ಮಾಡಬಹುದು! 
    ರಾಮಾಯಣದ ಅಂಥ ಒಂದು ಉಪಕಥೆಯನ್ನು ಈಗ ನೋಡೋಣ. ಇದು ತನ್ನ ಹೆಣವನ್ನು ತಾನೇ ತಿನ್ನುತ್ತಿದ್ದ ಒಬ್ಬ ರಾಜನ ವಿಚಿತ್ರ, ವಿಲಕ್ಷಣ, ಬೀಭತ್ಸ ಕಥೆ! ಆದರೆ ಇದರಲ್ಲಿ ಒಂದು ಅದ್ಭುತ ಸಂದೇಶವಿದೆ! ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುತ್ತದೆ. ಶ್ರೀರಾಮನು ಒಮ್ಮೆ ಅಗಸ್ತ್ಯ ಮಹರ್ಷಿಗಳನ್ನು ನೋಡಲು ಹೋದಾಗ, ಅವರು ಅವನಿಗೆ ಒಂದು ದಿವ್ಯಾಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆಶ್ಚರ್ಯಗೊಂಡ ರಾಮನು, ಮುನಿಗಳಾದ ಅವರಿಗೆ ಈ ದಿವ್ಯಾಭರಣವು ಹೇಗೆ ದೊರೆಯಿತೆಂದು ಕುತೂಹಲದಿಂದ ಕೇಳಿದಾಗ, ಅವರು ಅದರ ಹಿಂದಿನ ವಿಚಿತ್ರ ಕಥೆ ಹೇಳುತ್ತಾರೆ.
      ಅಗಸ್ತ್ಯರು ಹಿಂದಿನ ತ್ರೇತಾಯುಗದಲ್ಲಿ ಒಂದು ದೊಡ್ಡ ಅರಣ್ಯಕ್ಕೆ ಹೋಗಿದ್ದರು. ನೂರು ಯೋಜನಗಳಷ್ಟು ದೊಡ್ಡದಾಗಿದ್ದರೂ ಅದು ನಿರ್ಜನವಾಗಿದ್ದು ಮೃಗಪಕ್ಷಿಗಳಿಂದಲೂ ರಹಿತವಾಗಿತ್ತು! ಆದರೆ ಅಲ್ಲಿ ಸೊಗಸಾದ ಫಲಮೂಲಗಳಿದ್ದವು! ಆ ಅರಣ್ಯದಲ್ಲಿ ಸಂಚರಿಸುತ್ತಾ ಹೋಗಲು, ಅದರ ಮಧ್ಯದಲ್ಲಿ ಅವರೊಂದು ಸುಂದರ ಸರೋವರವನ್ನು ಕಂಡರು! ಪಾಚಿಯೂ ಇಲ್ಲದ ತಿಳಿನೀರಿನಿಂದ ಕೂಡಿದ್ದ ಆ ಸರೋವರದಲ್ಲಿ ಹಂಸ, ಕಾರಂಡವ, ಚಕ್ರವಾಕ ಪಕ್ಷಿಗಳೂ ಕಮಲ, ನೀಲೋತ್ಪಲ ಪುಷ್ಪಗಳೂ ಇದ್ದವು! ಆ ಸರೋವರದ ತೀರದಲ್ಲಿ ಒಂದು ಹಳೆಯ ಆಶ್ರಮವಿತ್ತು! ಆದರೆ ಅಲ್ಲಿ ಯಾವ ಋಷಿ, ಮುನಿಗಳೂ ಇರಲಿಲ್ಲ! ಆ ಆಶ್ರಮದಲ್ಲಿ ಅವರು ಒಂದು ರಾತ್ರಿ ಕಳೆದು ಬೆಳಗಾಗೆದ್ದು ನೋಡಲು, ಆ ಸರೋವರದ ಬಳಿ ಒಂದು ಹೆಣವಿತ್ತು! ಪುಷ್ಟವಾಗಿಯೂ ಕಾಂತಿಯುಕ್ತವಾಗಿಯೂ ಇದ್ದ ಆ ಹೆಣವನ್ನು ನೋಡಿ ಇದೆಂಥ ವಿಚಿತ್ರ ಎಂದು ಆಶ್ಚರ್ಯಗೊಂಡರು ಅಗಸ್ತ್ಯರು! 
    ಆಗ ಇನ್ನೊಂದು ಆಶ್ಚರ್ಯ ನಡೆಯಿತು! ಆಕಾಶದಿಂದ ಒಂದು ಅದ್ಭುತವಾದ ದಿವ್ಯ ವಿಮಾನವು ಬರತೊಡಗಿತು! ಆ ವಿಮಾನದಲ್ಲಿ ಸ್ವರ್ಗೀಯ ಪುರುಷನೊಬ್ಬ ಸಿಂಹಾಸನದ ಮೇಲೆ ಕುಳಿತಿದ್ದನು! ಸಾವಿರಾರು ಅಪ್ಸರೆಯರು ಅವನನ್ನು ಸೇವಿಸುತ್ತಿದ್ದರು! ಕೆಲವರು ಗಾಯನ ಮಾಡುತ್ತಲೂ ಕೆಲವರು ವಾದ್ಯಗಳನ್ನು ನುಡಿಸುತ್ತಲೂ ಕೆಲವರು ಅವನಿಗೆ ಚಾಮರ ಬೀಸುತ್ತಲೂ ಇದ್ದರು! ಆಗ ಆತ ವಿಮಾನ ಕೆಳಗಿಳಿದಂತೆ ಆ ಸ್ವರ್ಗೀಯ ಪುರುಷನು, ಮೇರು ಪರ್ವತವನ್ನು ಬಿಟ್ಟು ಹೋಗುವ ಸೂರ್ಯನಂತೆ ತನ್ನ ಸಿಂಹಾಸನದಿಂದ ಇಳಿದು ಸರೋವರದ ಬಳಿಗೆ ಬಂದನು. ಅನಂತರ ಅವನು ಮಾಡಿದ್ದೇನು? ಅಲ್ಲಿದ್ದ ಆ ಹೆಣವನ್ನು ಕಿತ್ತು ಕಿತ್ತು ತಿನ್ನತೊಡಗಿದನು! ಅಗಸ್ತ್ಯರಿಗೆ ಪರಮಾಶ್ಚರ್ಯವಾಯಿತು! 
     ಹಾಗೆ ಶವದ ಮಾಂಸವನ್ನು ಚೆನ್ನಾಗಿ ಭಕ್ಷಿಸಿ, ಆ ಸ್ವರ್ಗೀಯ ಪುರುಷನು ತನ್ನ ಕೈಕಾಲು ಮುಖಗಳನ್ನು ತೊಳೆದುಕೊಂಡು ಆಚಮನ ಮಾಡಿ ಹೊರಡಲನುವಾದನು! ಆಗ ಕುತೂಹಲ ತಡೆಯಲಾಗದೆ ಅಗಸ್ತ್ಯರು ಅವನನ್ನು ತಡೆದು," ಯಾರು ನೀನು? ದೇವತೆಯಂತಿರುವ ನೀನು ಇಂಥ ಕುತ್ಸಿತ, ನಿಂದನೀಯ ಆಹಾರವನ್ನೇಕೆ ಸೇವಿಸಿದೆ? ನಿನ್ನಂಥವನಿಗೆ ಶವಭಕ್ಷಣೆ ಯೋಗ್ಯವಲ್ಲ ಎಂದು ನನ್ನ ಭಾವನೆಯಾಗಿದೆ! ಏಕೆ ಹೀಗೆ ಮಾಡಿದೆ?" ಎಂದು ಕೇಳಿದರು.
     ಅದಕ್ಕೆ ಅವನು ಕೈಮುಗಿದುಕೊಂಡು," ಋಷಿವರ್ಯರೇ! ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೇ! ಈ ಕಾರ್ಯವನ್ನು ನಾನು ಬಿಡಲಾಗುತ್ತಿಲ್ಲ! ಇದಕ್ಕೆ ಕಾರಣ ಹೇಳುತ್ತೇನೆ, ಕೇಳಿ! 
      ನಾನು ಹಿಂದೆ ಸುದೇವನೆಂಬ ರಾಜನ ಮಗನಾಗಿದ್ದೆ! ವಿದರ್ಭವನ್ನು ಆಳುತ್ತಿದ್ದ ಅವನು ಮಹಾಯಶೋವಂತನೂ ವೀರ್ಯವಂತನೂ ಆಗಿದ್ದು, ಮೂರು ಲೋಕಗಳಲ್ಲೂ ವಿಖ್ಯಾತನಾಗಿದ್ದ! ಅವನಿಗೆ ಇಬ್ಬರು ಪತ್ನಿಯರಿಂದ ಇಬ್ಬರು ಪುತ್ರರು ಜನಿಸಿದರು! ಒಬ್ಬನು ಶ್ವೇತನೆಂಬ ನಾನಾದರೆ, ಇನ್ನೊಬ್ಬನು, ಸುರಥನೆಂಬ ನನ್ನ ತಮ್ಮ! ನನ್ನ ತಂದೆಯು ಸ್ವರ್ಗಸ್ಥನಾದ ಬಳಿಕ, ನಾನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿಕೊಂಡಿದ್ದೆ. ಆಗ ಒಮ್ಮೆ ನನಗೆ ಯಾವುದೋ ಕಾರಣದಿಂದ ನನ್ನ ಆಯುಷ್ಯ ಎಷ್ಟೆಂದು ತಿಳಿದುಹೋಯಿತು! ಆಗ ನನಗೆ ರಾಜ್ಯವಾಳಲು ಮನಸ್ಸು ಬಾರದೇ ನನ್ನ ತಮ್ಮನಿಗೆ ಪಟ್ಟಗಟ್ಟಿ ತಪಸ್ಸು ಮಾಡಲೆಂದು ಮೃಗಪಕ್ಷಿರಹಿತವಾದ ಈ ದುರ್ಗಮ ಅರಣ್ಯಕ್ಕೆ ಬಂದೆ! ಈ ಸರೋವರದ ಬಳಿಯೇ ಆಶ್ರಮ ನಿರ್ಮಿಸಿಕೊಂಡು ಮೂರು ಸಾವಿರ ವರ್ಷಗಳ ಕಾಲ ದುಷ್ಕರ ತಪಸ್ಸು ಮಾಡಿ ಮೃತನಾದ ಬಳಿಕ ಬ್ರಹ್ಮಲೋಕ ಪಡೆದೆ! ಆದರೆ ಅತ್ಯಂತ ಶ್ರೇಷ್ಠವಾದ ಬ್ರಹ್ಮಲೋಕವನ್ನು ಪಡೆದರೂ ನನಗೆ ಹಸಿವು, ಬಾಯಾರಿಕೆಗಳು ಬಾಧಿಸತೊಡಗಿದವು! ಬ್ರಹ್ಮಲೋಕದಲ್ಲಿ ಹೀಗಾಗಬಾರದಲ್ಲ ಎಂದು ಯೋಚಿಸಿ ಪಿತಾಮಹ ಬ್ರಹ್ಮದೇವನ ಬಳಿ ಹೋಗಿ,'ಪಿತಾಮಹ! ಈ ಬ್ರಹ್ಮಲೋಕದಲ್ಲಿ ಕ್ಷುತ್ಪಿಪಾಸೆಗಳು ಕಾಡುವುದಿಲ್ಲ! ಆದರೆ ಅವು ನನ್ನನ್ನು ಕಾಡುತ್ತಿವೆ! ಇದೇಕೆ ಹೀಗೆ? ಈಗ ನನಗೆ ಆಹಾರ ಯಾವುದು?' ಎಂದು ಕೇಳಿದೆ. ಅದಕ್ಕೆ ಅವನು,'ಎಲೈ ಶ್ವೇತನೇ! ನಿನ್ನ ಶವದ ಮಾಂಸವೇ ನಿನಗಿನ್ನು ಆಹಾರ! ನೀನು ಹಿಂದೆ ಭೂಮಿಯ ಮೇಲೆ ತಪಸ್ಸು ಮಾಡುತ್ತಿದ್ದಾಗ ನಿನ್ನ ಶರೀರವನ್ನು ಸ್ವಾದಿಷ್ಟ ಆಹಾರದಿಂದ ಚೆನ್ನಾಗಿ ಪೋಷಿಸಿಕೊಳ್ಳುತ್ತಿದ್ದೆ! ಆದರೆ ಆಗ ನೀನು ಯಾರಿಗೂ ಏನನ್ನೂ ಕೊಡಲಿಲ್ಲ! ಒಂದಿಷ್ಟೂ ದಾನ ಮಾಡಲಿಲ್ಲ! ಕೇವಲ ತಪಸ್ಸು ಮಾಡುತ್ತಿದ್ದೆ ಹಾಗೂ ನೀನು ಮಾತ್ರ ಚೆನ್ನಾಗಿ ತಿನ್ನುತ್ತಿದ್ದೆ! ಯಾರಿಗೂ ಸ್ವಲ್ಪವೂ ಅನ್ನದಾನ ಮಾಡಲಿಲ್ಲ! ಆದ್ದರಿಂದಲೇ ಈಗ ನಿನಗೆ ಹಸಿವು, ತೃಷೆಗಳು ಬಾಧಿಸುತ್ತಿವೆ! ಬೀಜವನ್ನು ಬಿತ್ತದೇ ಸಸ್ಯವು ಬೆಳೆಯುವುದೇ? ಆದ್ದರಿಂದಲೇ ನಿನಗೆ ಹಸಿವಿನ ಸಂಕಷ್ಟ! ಇದಕ್ಕೆ ಪರಿಹಾರವೆಂದರೆ, ನೀನೇ ಬೆಳೆಸಿರುವ ಸ್ವಾದಿಷ್ಟವಾದ ನಿನ್ನ ಶರೀರವನ್ನೇ ತಿನ್ನುವುದು! ಅದು ಇನ್ನೂ ಆ ಸರೋವರದ ಬಳಿಯೇ ಇದೆ! ಒಳ್ಳೆಯ ಆಹಾರಗಳಿಂದ ಪೋಷಿಸಿರುವ ಅದು ರಸಭರಿತವಾಗಿದೆ! ದಿನವೂ ಹೋಗಿ ಅದನ್ನು ತಿನ್ನು! ಅದರಿಂದ ನಿನಗೆ ತೃಪ್ತಿಯಾಗುತ್ತದೆ! ನೀನು ತಿಂದ ಬಳಿಕ ಅದು ಪುನಃ ಮರುದಿವಸಕ್ಕೆ ತುಂಬಿಕೊಳ್ಳುತ್ತದೆ! ಕೊನೆಗೊಂದು ದಿನ, ಅಗಸ್ತ್ಯ ಮಹರ್ಷಿಗಳು ಬಂದಾಗ ನಿನ್ನ ಕಷ್ಟ ಪರಿಹಾರವಾಗುತ್ತದೆ!' ಎಂದನು. ಅದರಂತೆ ನಾನು ಅನೇಕ ವರ್ಷಗಳಿಂದ ನಿಂದ್ಯವಾದ ನನ್ನ ಶವವನ್ನೇ ತಿನ್ನುತ್ತಿದ್ದೇನೆ! ಅದು ಕ್ಷಯಿಸದೇ ಮತ್ತೆ ಮತ್ತೆ ತುಂಬಿಕೊಳ್ಳುತ್ತಲೇ ಇದೆ! ಈಗ ನೀವು ದುರ್ಗಮವಾದ ಈ ಅರಣ್ಯಕ್ಕೆ ಬಂದಿರುವಿರೆಂದರೆ ನೀವು ಅಗಸ್ತ್ಯ ಮಹರ್ಷಿಗಳೇ ಇರಬೇಕು! ನಿಮ್ಮನ್ನು ಬಿಟ್ಟು ಬೇರಾರೂ ಇಲ್ಲಿಗೆ ಬರಲಾರರು! ದಯವಿಟ್ಟು ನನ್ನನ್ನು ಈ ಸಂಕಷ್ಟದಿಂದ ಪಾರುಮಾಡಿ! ನನ್ನ ಈ ಒಂದು ಆಭರಙವನ್ನು ತೆಗೆದುಕೊಂಡು ನನ್ನನ್ನು ಅನುಗ್ರಹಿಸಿ! ಇದು ಸಾಮಾನ್ಯ ಆಭರಣವಾಗಿರದೇ ದಿನವೂ ಅಪಾರ ಚಿನ್ನ, ವಸ್ತ್ರ, ಆಭರಣ, ಭಕ್ಷ್ಯ ಭೋಜ್ಯಗಳನ್ನು ಕೊಡುತ್ತದೆ!" 
        ಹೀಗೆ ತನ್ನ ಕಥೆ ಹೇಳಿ ಆ ಸ್ವರ್ಗೀಯ ಪುರುಷನು ಅಗಸ್ತ್ಯ ಮಹರ್ಷಿಗಳಿಗೆ ಆ ದಿವ್ಯಾಭರಣವನ್ನು ಕೊಟ್ಟನು. ಅವನನ್ನು ಕಾಪಾಡಲೆಂದು ಅಗಸ್ತ್ಯರೂ ಅದನ್ನು ಸ್ವೀಕರಿಸಿದರು. ಆಗ ಶ್ವೇತನ ಶವವು ಅದೃಶ್ಯವಾಯಿತು! ಶ್ವೇತನು ಸಂತೋಷದಿಂದ ತನ್ನ ವಿಮಾನದಲ್ಲಿ ಕುಳಿತು ಬ್ರಹ್ಮಲೋಕಕ್ಕೆ ತೆರಳಿದನು!
       ಇದಿಷ್ಟು ಕಥೆಯನ್ನು ಅಗಸ್ತ್ಯರು ಶ್ರೀರಾಮನಿಗೆ ಹೇಳಿದರು. ಅದನ್ನು ಕೇಳಿ ರಾಮನೂ ಆಶ್ಚರ್ಯಗೊಂಡನು! 
     ಈ ಕಥೆಯಲ್ಲಿ ಅನ್ನದಾನ ಎಷ್ಟು ಮುಖ್ಯ ಎಂಬ ಸಂದೇಶವಿರುವುದನ್ನು ನೋಡಬಹುದು. ನಾವು ಏನೇ ಒಳ್ಳೆಯ ಕೆಲಸ ಮಾಡಿದರೂ ಕಷ್ಟದಲ್ಲಿರುವ ಇನ್ನೊಬ್ಬರಿಗೂ ಏನಾದರೂ ಕೊಡಬೇಕು. ನಮಗಷ್ಟೇ ಮಾಡಿಕೊಂಡರೆ ಸಾಲದು. ಇತರರಿಗೂ ಅಲ್ಪಸ್ವಲ್ಪ ದಾನ ಮಾಡಬೇಕು. ಆದ್ದರಿಂದಲೇ, ವೈದಿಕ ಸಂಸ್ಕೃತಿಯಲ್ಲಿ ನಾವು ಪ್ರತಿನಿತ್ಯ ಮಾಡುವ ಪಂಚಮಹಾಯಜ್ಞಗಳಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನ್ನದಾನ, ಸೇವೆಗಳು ಸೇರಿವೆ. ಪಂಚಮಹಾಯಜ್ಞಗಳೆಂದರೆ, ಬ್ರಹ್ಮಯಜ್ಞ ( ಪವಿತ್ರ ಗ್ರಂಥಗಳ ಅಧ್ಯಯನದ ಮೂಲಕ ಬ್ರಹ್ಮಪೂಜೆ), ದೇವಯಜ್ಞ (ಪೂಜೆ, ಪುನಸ್ಕಾರಗಳ ಮೂಲಕ ದೇವಪೂಜೆ), ಪಿತೃಯಜ್ಞ ( ತರ್ಪಣಗಳಿಂದ ಪಿತೃಗಳ ಸ್ಮರಣೆ, ಪೂಜೆ), ಭೂತಯಜ್ಞ ( ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳ ಸೇವೆ), ಮತ್ತು ಮನುಷ್ಯಯಜ್ಞ ( ಅತಿಥಿ ಸತ್ಕಾರ, ಕಷ್ಟದಲ್ಲಿರುವ ಮನುಷ್ಯರ ಸೇವೆ ಇತ್ಯಾದಿ ಮನುಷ್ಯರ ಸೇವೆ).
      ಭಾರತೀಯ ಕಥೆಗಳ ಒಂದು ಸ್ವಾರಸ್ಯವೆಂದರೆ ಕಥೆಯೊಳಗೆ ಕಥೆಯಿರುವುದು! ಅನೇಕ ಕಥೆಗಳು ಹೀಗಿರುತ್ತವೆ. ಅದನ್ನು ಇಲ್ಲಿಯೂ ನೋಡಬಹುದು. ಮೊದಲನೆಯ ಸ್ತರದಲ್ಲಿ ಅಗಸ್ತ್ಯರು ರಾಮನಿಗೆ ಕಥೆ ಹೇಳುತ್ತಾರೆ. ಎರಡನೆಯ ಸ್ತರದಲ್ಲಿ ಶ್ವೇತನೆಂಬ ಸ್ವರ್ಗೀಯ ಪುರುಷನು ಅಗಸ್ತ್ಯರಿಗೆ ಅವನ ಕಥೆ ಹೇಳಿಕೊಳ್ಳುತ್ತಾನೆ. ಹೀಗೆ ಕಥೆಯೊಳಗೆ ಒಂದು ಕಥೆಯಿರುವ ಸ್ವಾರಸ್ಯವನ್ನು ಇಲ್ಲಿ ನೋಡಬಹುದು.
     

ಶನಿವಾರ, ಫೆಬ್ರವರಿ 7, 2026

ಅದ್ಭುತ ರಾಮಾಯಣ

     ಅದ್ಭುತ ರಾಮಾಯಣ, ನಾನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಪುಸ್ತಕವಾಗಿದೆ. ಸಂಸ್ಕೃತದಲ್ಲಿ ಮೂಲ ವಾಲ್ಮೀಕಿ ರಾಮಾಯಣವಲ್ಲದೇ ಅದ್ಭುತ, ಆನಂದ, ಮತ್ತು ಅಧ್ಯಾತ್ಮ ರಾಮಾಯಣಗಳೆಂಬ ಮೂರು ಬೇರೆಯ ರಾಮಾಯಣಗಳಿವೆ. ಇವೂ ಕೂಡ ವಾಲ್ಮೀಕಿ ಮಹರ್ಷಿಗಳೇ ರಚಿಸಿದರೆಂಬ ಪ್ರತೀತಿಯಿದ್ದು ಅವುಗಳಲ್ಲೂ ಹಾಗೆಯೇ ಹೇಳಲಾಗಿದೆ. ಆದರೆ ಮೂಲ ವಾಲ್ಮೀಕಿ ರಾಮಾಯಣಕ್ಕಿಂತ ಇವು ಬಹಳ ವಿಭಿನ್ನವಾಗಿದ್ದು ಹಲವಾರು ವಿಚಿತ್ರ ಹಾಗೂ ಸ್ವಾರಸ್ಯಕರ ಕಥೆಗಳನ್ನೊಳಗೊಂಡಿವೆ. ಅಲ್ಲದೇ ಅನೇಕ ಆಧ್ಯಾತ್ಮಿಕ ವಿಚಾರಗಳೂ ಇವುಗಳಲ್ಲಿವೆ. ಇವುಗಳಲ್ಲಿ ಶ್ರೀರಾಮನನ್ನು ಮುಖ್ಯವಾಗಿ ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದು ಭಗವಂತನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಶ್ರೀರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದರೂ ಬಹುತೇಕ ಮಾನವನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ಹಾಗಾಗಿ ವಾಲ್ಮೀಕಿ ರಾಮಾಯಣದಲ್ಲಿ ರಸಪೋಷಣೆ ಹೆಚ್ಚಾಗಿದೆ. ಈ ರಾಮಾಯಣಗಳನ್ನು ಇತರರು ಯಾರೋ ರಚಿಸಿ ವಾಲ್ಮೀಕಿಗಳ ಹೆಸರಿನಲ್ಲಿ ಪ್ರಚುರಪಡಿಸಿರಬೇಕು. ಮಹಾನ್ ಸಂಸ್ಕೃತ ವಿದ್ವಾಂಸರಾದ ವಿ.ರಾಘವನ್ ಅವರು ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳನ್ನು ಕುರಿತು ಆಂಗ್ಲ ಭಾಷೆಯಲ್ಲಿ ಒಂದು ಸೊಗಸಾದ ಚಿಕ್ಕ ಗ್ರಂಥವನ್ನು ಬರೆದಿದ್ದಾರೆ.
    ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳಲ್ಲಿ ಅದ್ಭುತ ರಾಮಾಯಣ ಅತ್ಯಂತ ಚಿಕ್ಕದಾಗಿದ್ದು ಕೇವಲ ಇಪ್ಪತ್ತೇಳು ಸರ್ಗಗಳನ್ನು ಹೊಂದಿದೆ. ಸರಳವಾದ ಸಂಸ್ಕೃತದಲ್ಲಿ ರಚಿತವಾಗಿರುವ ಈ ರಾಮಾಯಣದಲ್ಲಿ ಮೂಲ ರಾಮಾಯಣದ ಕಥೆ ಬಹಳ ಸಂಕ್ಷಿಪ್ತವಾಗಿ ಬಂದಿದೆ. ಇತರ ವಿಚಾರಗಳೇ ಹೆಚ್ಚಾಗಿವೆ. ಮೊದಲಿಗೆ, ವಾಲ್ಮೀಕಿ ಮಹರ್ಷಿ ಮತ್ತು ಅವರ ಶಿಷ್ಯ ಭರದ್ವಾಜರ ಸಂವಾದ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲೂ ಇವರಿಬ್ಬರೂ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಭಾರದ್ವಾಜರು, ವಾಲ್ಮೀಕಿ ಮಹರ್ಷಿಗಳು ಶತಕೋಟಿ ಶ್ಲೋಕಗಳನ್ನುಳ್ಳ ರಾಮಾಯಣವನ್ನು ರಚಿಸಿರುವರೆಂದೂ ಅದು ಬ್ರಹ್ಮಲೋಕದಲ್ಲಿ ಪ್ರಸಿದ್ಧವಾಗಿರುವುದೆಂದೂ ಅದರಲ್ಲಿರುವ ಗುಪ್ತ ವಿಚಾರಗಳನ್ನು ಹೇಳಬೇಕೆಂದು ಕೇಳುತ್ತಾರೆ. ಆಗ ಸಂತೋಷಗೊಂಡ ವಾಲ್ಮೀಕಿಗಳು, ಸೀತಾರಾಮರು ಮೂಲತಃ ಪ್ರಕೃತಿ, ಪುರುಷರೆಂದು ಆಧ್ಯಾತ್ಮಿಕವಾಗಿ ಆರಂಭಿಸಿ ಈ ಅದ್ಭುತ ರಾಮಾಯಣವನ್ನು ಹೇಳುತ್ತಾರೆ ‌
     ಇಲ್ಲಿ ವಿಷ್ಣು, ಲಕ್ಷ್ಮಿಯರು ನಾರದರ ಶಾಪದಿಂದ ರಾಮ,ಸೀತೆಯರಾಗಿ ಹುಟ್ಟಿದರೆಂಬ ಸ್ವಾರಸ್ಯಕರ ಕಥೆಯಿದೆ.‌ ನಾರದ ಮತ್ತು ಪರ್ವತ ಋಷಿಗಳು ಅಂಬರೀಷ ರಾಜನ ಮಗಳಾದ ಶ್ರೀಮತಿಯನ್ನು ಮದುವೆಯಾಗಬಯಸಿ ವಿಷ್ಣುವಿನ ಮೂಲಕ ಪರಸ್ಪರರ ಮುಖಗಳನ್ನು ಕಪಿಮುಖಗಳಂತೆ ಮಾಡಿಸಲು, ಶ್ರೀಮತಿಯು ಅವರನ್ನು ಬಿಟ್ಟು ಸ್ವಯಂವರಕ್ಕೆ ಆಗಮಿಸಿದ ವಿಷ್ಣುವನ್ನೇ ಮದುವೆಯಾಗುತ್ತಾಳೆ! ಇದರಿಂದ ಕುಪಿತಗೊಂಡ ಅವರಿಬ್ಬರೂ ವಿಷ್ಣುವಿಗೆ ಮನುಷ್ಯನಾಗಿ ಹುಟ್ಟುವಂತೆ ಶಪಿಸುತ್ತಾರೆ! ಇದೇ ವಿಷ್ಣುವು ರಾಮನಾಗಿ ಅವತರಿಸಲು ಕಾರಣ. ಇದೇ ರೀತಿಯ ಕಥೆ ಶಿವಪುರಾಣದಲ್ಲೂ ಬರುತ್ತದೆ. ಅಂತೆಯೇ ಲಕ್ಷ್ಮಿಯ ದಾಸಿಯರು ಒಂದು ಸಮಾರಂಭದಲ್ಲಿ ನಾರದರನ್ನು ಓಡಿಸಿ ತುಂಬುರುವನ್ನು ಸನ್ಮಾನಿಸಲು ಅವರು ಕುಪಿತರಾಗಿ ಲಕ್ಷ್ಮಿಗೆ ರಾಕ್ಷಸ ಗರ್ಭದಲ್ಲಿ ಜನಿಸುವಂತೆ ಶಪಿಸುತ್ತಾರೆ! ಹಾಗಾಗಿ ಲಕ್ಷ್ಮಿಯು ಸ್ವಾರಸ್ಯಕರ ತಿರುವುಗಳಿಂದ ರಾವಣನ ಪತ್ನಿ ಮಂದೋದರಿಯ ಉದರದಲ್ಲಿ ಜನಿಸುತ್ತಾಳೆ! ಸೀತೆಯು ರಾವಣನ ಮಗಳೆಂಬ ಜನಜನಿತ ಕಥೆಗೆ ಇಲ್ಲಿದೆ ಮೂಲ. ತುಂಬುರುವನ್ನು ಸನ್ಮಾನಿಸಲು ಅವನು ಸಂಗೀತಜ್ಞನಾದುದೇ ಕಾರಣವೆಂದು ತಿಳಿದ ನಾರದರು ಗಾನಬಂಧು ಎಂಬ ಗೂಬೆಯಿಂದ ಬಹಳ ಕಷ್ಟಪಟ್ಟು ಸಂಗೀತ ಕಲಿಯುತ್ತಾರೆ. ಇದೊಂದು ಬಹಳ ಸ್ವಾರಸ್ಯಕರ ಕಥೆ! ಇದೇ ಸಂದರ್ಭದಲ್ಲಿ ಹರಿಭಕ್ತ ಹರಿಮಿತ್ರನ ಕಥೆಯೂ ಬರುತ್ತದೆ ‌
          ಇಲ್ಲಿ ಶ್ರೀರಾಮನು ಹನುಮಂತನಿಗೆ ತನ್ನ ನಾರಾಯಣ ಸ್ವರೂಪವನ್ನು ತೋರಿಸಿ ಜ್ಞಾನೋಪದೇಶ ಮಾಡುವ ಒಂದು ವಿಶೇಷ ಅಧ್ಯಾಯವಿದೆ.
         ಅನಂತರ ಬರುವುದೇ ಅದ್ಭುತ ರಾಮಾಯಣದ ಮುಖ್ಯ ಕಥೆ. ಋಷಿಮುನಿಗಳು ಅಯೋಧ್ಯೆಗೆ ಬಂದು ಶ್ರೀ ರಾಮನನ್ನು ರಾವಣನನ್ನು ಕೊಂದುದಕ್ಕಾಗಿ ಪ್ರಶಂಸಿಸಲು, ಸೀತೆಯು ನಕ್ಕು ದಶಮುಖ ರಾವಣನ ಅಣ್ಣನಾದ ಸಹಸ್ರಮುಖ ರಾವಣನು ಪುಷ್ಕರ ದ್ವೀಪವನ್ನು ಆಳುತ್ತಿರುವನೆಂದೂ ಅವನನ್ನು ಕೊಂದರೆ ಅದು ನಿಜವಾದ ಸಾಹಸವೆಂದೂ ಹೇಳಲು ರಾಮನು ವಾನರ, ರಾಕ್ಷಸ ಸೈನ್ಯಗಳೊಂದಿಗೆ ಪುಷ್ಕರ ದ್ವೀಪಕ್ಕೆ ಹೋಗಿ ಮುತ್ತಿಗೆ ಹಾಕಿ ಸಹಸ್ರಮುಖ ರಾವಣನೊಂದಿಗೆ ಯುದ್ಧ ಮಾಡಲು, ಅವನು ವಾನರ, ರಾಕ್ಷಸ ಸೈನ್ಯಗಳನ್ನು ತನ್ನ ಬಾಣಗಳಿಂದ ಅವರವರ ರಾಜ್ಯಗಳಿಗೇ ದೂಡಿ, ರಾಮನನ್ನೂ ಮೂರ್ಛೆಗೊಳಿಸಿಬಿಡುತ್ತಾನೆ! ಆಗ ಸೀತೆಯು ಮಹಾಕಾಳಿಯಾಗಿ ಸಹಸ್ರಮುಖ ರಾವಣನನ್ನು ಕೊಲ್ಲುತ್ತಾಳೆ! ಅನಂತರ ರಾಮನು ಎಚ್ಚೆತ್ತು ಸೀತೆಯನ್ನು ಸಹಸ್ರನಾಮ ಸ್ತೋತ್ರದಿಂದ ಸ್ತುತಿಸುತ್ತಾನೆ! ಅನಂತರ ಅವರು ಅಯೋಧ್ಯೆಗೆ ಹಿಂದಿರುಗುತ್ತಾರೆ.
        ಹೀಗೆ ಅದ್ಭುತ ಕಥೆಗಳನ್ನೊಳಗೊಂಡ ಅದ್ಭುತ ರಾಮಾಯಣ, ಸೀತಾಪರವಾದ ರಾಮಾಯಣ. ನಮ್ಮಲ್ಲಿ ಪರಸಸ್ತುವನ್ನು ಪ್ರಕೃತಿ ಮತ್ತು ಪುರುಷ, ಎರಡೂ ರೂಪಗಳಲ್ಲಿ ಆರಾಧಿಸುವ ಕ್ರಮವಿದೆ. ನಾರಾಯಣ ಪುರುಷನಾದರೆ ಲಕ್ಷ್ಮಿಯು ಪ್ರಕೃತಿ. ಶಿವನು ಪುರುಷನಾದರೆ ಪಾರ್ವತಿ ಶಕ್ತಿ. ಹೀಗೆ ಪುರುಷ, ಪ್ರಕೃತಿ, ಎರಡೂ ರೂಪಗಳಿಗೂ ಆರಾಧನೆಯಿದೆ. ವಿಷ್ಣುಪರವಾದ ಭಾಗವತ ಪುರಾಣವಿರುವಂತೆಯೇ ದೇವಿಯ ಪರವಾದ ದೇವೀಭಾಗವತ ಪುರಾಣವೂ ಇದೆ. ಶಕ್ತಿಯ ಆರಾಧನೆ ಮೊದಲಿನಿಂದಲೂ ನಮ್ಮಲ್ಲಿ ಇದೆ. ಶಾಕ್ತೇಯರ ಪಂಥವೇ ಇದೆ. ಶಾಕ್ತಪರವಾದ ತಂತ್ರಗಳೂ ಇವೆ. ಅದ್ಭುತ ರಾಮಾಯಣ ಪ್ರಾಯಶಃ ಶಕ್ತಿ ಪೂಜೆಯ ಉಚ್ಛ್ರಾಯ ಕಾಲದಲ್ಲಿ ರಚಿತವಾಗಿರಬಹುದು. ಹಾಗಾಗಿ ಇಲ್ಲಿ ಸೀತೆ ಆದಿಶಕ್ತಿ ಮಹಾಕಾಳಿಯಾಗಿ ವಿಜೃಂಭಿಸುವ ಕಥೆಯಿದೆ. 
      ಒಟ್ಟಿನಲ್ಲಿ ಇದೊಂದು ಸ್ವಾರಸ್ಯಕರವಾದ ವಿಭಿನ್ನ ರಾಮಾಯಣ. ಎಲ್ಲರೂ ತಿಳಿದಿರಬೇಕಾದುದಾಗಿದೆ. ಇದನ್ನೇ ಹಿಂದೆ ಕನ್ನಡದ ಮಹಾಕವಿ ಮುದ್ದಣನು ಹಳೆಗನ್ನಡದಲ್ಲಿ ರಚಿಸಿದ್ದ.  ನಾನು ಇದನ್ನು ಸಂಸ್ಕೃತದಿಂದ ಹೊಸಗನ್ನಡದಲ್ಲಿ ಅನುವಾದಿಸಿದ್ದೇನೆ. ಇದಕ್ಕೆ ನಾನು ವಾರಾಣಸಿಯ ಚೌಖಂಬ ಪ್ರಕಾಶನದ ಹಿಂದೀ ಅನುವಾದಸಹಿತವಾದ ಮೂಲ ಗ್ರಂಥವನ್ನು ಬಳಸಿಕೊಂಡಿದ್ದೇನೆ.
      

ಶುಕ್ರವಾರ, ಫೆಬ್ರವರಿ 6, 2026

ತೆರೆಯುವಂತೆ ಮಾಡುವ ಅರ್ಟಿಕೇರಿಯ

ಅರ್ಟಿಕೇರಿಯ, ಅಲರ್ಜಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚರ್ಮಸಮಸ್ಯೆ. ಅಲರ್ಜಿ ಅಥವಾ ಅತಿಸೂಕ್ಷ್ಮತೆ ಇರುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ಇಂಥ ವ್ಯಕ್ತಿಗಳು ಕೆಲವು ವಸ್ತುಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ. ಇಂಥ ಪ್ರಚೋದನಾತ್ಮಕ ವಸ್ತುಗಳ ಸಂಪರ್ಕಕ್ಕೆ ಬಂದಾಗ ಇವರಲ್ಲಿ IgE ಎಂಬ ಆಂಟಿಬಾಡಿಗಳು ಹೆಚ್ಚಾಗಿ ಉತ್ಪತ್ತಿಯಾಗಿ ಅವು ರಕ್ತದಲ್ಲಿರುವ ಬೇಸೋಫಿಲ್ ಗಳೆಂಬ ಬಿಳಿರಕ್ತಕಣಗಳನ್ನೂ ಚರ್ಮ, ಶ್ವಾಸಾಂಗಗಳು, ಜೀರ್ಣಾಂಗಗಳು, ಮೊದಲಾದ ಅಂಗಾಂಗಗಳಲ್ಲಿರುವ ಮಾಸ್ಟ್ ಸೆಲ್ ಗಳೆಂಬ ಜೀವಕೋಶಗಳನ್ನೂ ಬಡಿದು ಅವುಗಳಿಂದ ಹಿಸ್ಟಮಿನ್, ಲ್ಯುಕೋಟ್ರಿನ್ ಮೊದಲಾದ ರಾಸಾಯನಿಕಗಳು ಬಿಡುಗಡೆಯಾಗಿ ರಕ್ತನಾಳಗಳನ್ನು ಹಿಗ್ಗಿಸುತ್ತವೆ ಹಾಗೂ ನರಗಳನ್ನು ಪ್ರಚೋದಿಸುತ್ತವೆ. ಇದರಿಂದ ರಕ್ತ ಹೆಚ್ಚಾಗಿ ಹರಿದು, ಅದರಲ್ಲಿನ ನೀರಿನಂಶ ಹೊರಚೆಲ್ಲಿ ಕೆಂಪು ಬಣ್ಣ, ಹಾಗೂ ಊತಗಳಾಗುತ್ತವೆ. ನರಗಳ ಪ್ರಚೋದನೆಯಿಂದ ಕೆಂಪು ಬಣ್ಣ ಸುತ್ತಲೂ ಹರಡಿ, ಬಹಳ ತುರಿಕೆಯುಂಟಾಗುತ್ತದೆ. ಈ ಖಾತೆಗಳಿಗೆ ವೀಲ್ ಗಳೆಂದು ಕರೆಯುತ್ತಾರೆ.‌ಕನ್ನಡದಲ್ಲಿ ಇವನ್ನು ಗಂಧೆಗಳು ಅಥವಾ ದದ್ದುಗಳು ಎನ್ನುತ್ತಾರೆ. ಈ ಗಂಧೆಗಳು ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತವೆ. ಸಾಮಾನ್ಯವಾಗಿ ಒಂದರಿಂದ ಇಪ್ಪತ್ತು ನಾಲ್ಕು ಗಂಟೆಗಳೊಳಗೆ ಹೊರಟುಹೋಗುತ್ತವೆ. ಅನಂತರ ಮತ್ತೆ ಮತ್ತೆ ಬರುತ್ತಿರುತ್ತವೆ.
     ಈ ಅರ್ಟಿಕೇರಿಯಾಗೆ ಕಾರಣವಾಗುವ ಪ್ರಚೋದನಾತ್ಮಕ ವಸ್ತುಗಳು ಹಲವಾರಿರುತ್ತವೆ. ಅವು ಆಹಾರ ಪದಾರ್ಥಗಳಿರಬಹುದು ( ಸಾಮಾನ್ಯವಾಗಿ ಮೊಟ್ಟೆ, ಮೀನು, ಬೀಜಗಳು ಇತ್ಯಾದಿ), ಉಸಿರಿನಲ್ಲಿ ತೆಗೆದುಕೊಳ್ಳುವಂಥವು ( ಧೂಳು, ಮನೆ ಧೂಳಿನಲ್ಲಿರುವ ನುಸಿ ಎಂಬ ಕೀಟ, ಹೂವಿನ ಪರಾಗ, ಅನಿಲಗಳು ಇತ್ಯಾದಿ), ಔಷಧಿಗಳು, ಮೊದಲಾದವು. ಕೀಟಗಳ ಕಚ್ಚುವಿಕೆ, ಕರುಳಿನಲ್ಲಿ ವಾಸಿಸುವ ಜಂತು ಹುಳು, ಕೊಕ್ಕೆ ಹುಳು, ಮೊದಲಾದ ಹುಳುಗಳು, ಸೋಂಕು ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮುಂತಾದವುಗಳೂ ಅಲರ್ಜಿಯನ್ನು ಪ್ರಚೋದಿಸುತ್ತವೆ. ಇವಲ್ಲದೇ, ಚರ್ಮದ ಸ್ಪರ್ಶಕ್ಕೆ ಬರುವ ಕೂದಲ ಬಣ್ಣ, ಸೌಂದರ್ಯ ವರ್ಧಕಗಳು, ಅಂಗರಾಗ ದ್ರವ್ಯಗಳು, ಪ್ರಾಣಿಗಳ ಕೂದಲು ಮತ್ತು ಹೊಟ್ಟು, ಇವೆಲ್ಲವೂ ಸ್ಥಳೀಯವಾಗಿ ಅರ್ಟಿಕೇರಿಯ ಉಂಟುಮಾಡುತ್ತವೆ. ಇವಲ್ಲದೇ ಭೌತಿಕ ಅಂಶಗಳಾದ ಚಳಿ, ಸೆಖೆ, ಬಿಸಿಲು, ನೀರು, ಮೈ ಮೇಲಿನ ಒತ್ತಡ, ಶ್ರಮ ಮತ್ತು ವ್ಯಾಯಾಮ, ಇವೂ ಕೂಡ ಕೆಲವೊಮ್ಮೆ ಅರ್ಟಿಕೇರಿಯಾವನ್ನು ಪ್ರಚೋದಿಸಬಹುದು. ಕೆಲವರಿಗೆ ವ್ಯಾಯಾಮ, ಶ್ರಮಗಳಾದಾಗ ಹಾಗೂ ಅತಿ ಖಾರ ಪದಾರ್ಥಗಳನ್ನು ಸೇವಿಸಿದಾಗ ಮೈಯಲ್ಲಿ ಬಿಸಿಯೇರಿ ನರಗಳ ತುದಿಗಳಿಂದ ಒಸರುವ ಅಸಿಟೈಲ್ ಕೋಲೀನ್ ದ್ರವ ಹೆಚ್ಚಿ ಅದೂ ಇದನ್ನು ಪ್ರಚೋದಿಸುತ್ತದೆ. ಇದನ್ನು ಕೋಲಿನರ್ಜಿಕ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಕೆಲವರಿಗೆ ಆಟೋ ಆಂಟಿಬಾಡಿಗಳು ಉತ್ಪತ್ತಿಯಾಗಿ ಇವು ಅವರ IgE ಆಂಟಿಬಾಡಿಗಳನ್ನೂ ಮಾಸ್ಟ್ ಸೆಲ್ ಗಳನ್ನೂ ಬೇಸೋಫಿಲ್ ಗಳನ್ನೂ ಪ್ರಚೋದಿಸಿ ಅರ್ಟಿಕೇರಿಯ ಉಂಟಾಗುತ್ತದೆ. ಇದನ್ನು ಆಟೋ ಇಮ್ಯೂನ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಮಾಸ್ಟ್ ಸೆಲ್ ಗಳು ತುಂಬಾ ಹೆಚ್ಚಾಗಿ ಅರ್ಟಿಕೇರಿಯ ಉಂಟಾಗುತ್ತದೆ. ಈ ಬಗೆಯಲ್ಲಿ ಗಂಧೆಗಳು ಹೋದ ಬಳಿಕ ಬಣ್ಣದ ಕಲೆಗಳು ಉಳಿಯುತ್ತವೆ. ಇದನ್ನು ಅರ್ಟಿಕೇರಿಯ ಪಿಗ್ಮೆಂಟೋಸ ಎನ್ನುತ್ತಾರೆ. ಹೀಗೆ ಅರ್ಟಿಕೇರಿಯ ಹಲವು ಕಾರಣಾಂಶಗಳಿಂದ ಆಗುತ್ತದೆ.
    ಅರ್ಟಿಕೇರಿಯಾವನ್ನು ತೀವ್ರ ( ಅಕ್ಯೂಟ್) ಮತ್ತು ದೀರ್ಘಕಾಲದ ( ಕ್ರಾನಿಕ್) ಎಂದು ವಿಂಗಡಿಸಲಾಗುತ್ತದೆ. ಅರ್ಟಿಕೇರಿಯ ಆರಂಭವಾಗಿ ಆರು ವಾರಗಳ ಒಳಗಿದ್ದರೆ ಅದನ್ನು ತೀವ್ರ ಎನ್ನಲಾಗುತ್ತದೆ, ಹಾಗೂ ಆರು ವಾರಗಳಿಗಿಂತ ಹೆಚ್ಚಿನ ಅವಧಿಯದಾಗಿದ್ದರೆ ದೀರ್ಘ ಕಾಲದ್ದೆನ್ನಲಾಗುತ್ತದೆ. ತೀವ್ರ ಅರ್ಟಿಕೇರಿಯದಲ್ಲಿ ಕಾರಣ ಸುಲಭವಾಗಿ ತಿಳಿಯುತ್ತದೆ ಹಾಗೂ ಅದು ಚಿಕಿತ್ಸೆಗೆ ಬೇಗನೆ ಸ್ಪಂದಿಸುತ್ತದೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕಾರಣ ತಿಳಿಯುವುದು ಬಹಳ ಕಷ್ಟ ಹಾಗೂ ಅದು ಚಿಕಿತ್ಸೆಗೆ ಸ್ಪಂದಿಸುವುದು ಬಹಳ ನಿಧಾನ.‌ ಎಷ್ಟೋ ದೀರ್ಘಾವಧಿಯ ಅರ್ಟಿಕೇರಿಯಾಗಳಲ್ಲಿ ಕಾರಣವೇ ಪತ್ತೆಯಾಗುವುದಿಲ್ಲ.
     ಅರ್ಟಿಕೇರಿಯವನ್ನು ಹೋಗಲಾಡಿಸಲು ಹಾಗೂ ಅದು ಬಾರದಂತೆ ನಿವಾರಿಸಲು, ಪ್ರಚೋದನಾತ್ಮಕ ಅಂಶಗಳನ್ನು ಗುರುತಿಸಿ ಅವುಗಳಿಂದ ದೂರವಿರುವುದು ಬಹಳ ಮುಖ್ಯ. ವೈದ್ಯರು ರೋಗಿಯ ಸುದೀರ್ಘ ಚರಿತ್ರೆಯನ್ನು ತೆಗೆದುಕೊಂಡು ಅವನಿಗೆ ಪ್ರಚೋದನಾತ್ಮಕ ಅಂಶಗಳು ಯಾವುವಿರಬಹುದೆಂದು ತಿಳಿಯಲು ಸಹಾಯ ಮಾಡುತ್ತಾರೆ. ಅರ್ಟಿಕೇರಿಯ ಲಕ್ಷಣಗಳನ್ನು ಹೋಗಲಾಡಿಸಲು ಆಂಟಿಹಿಸ್ಟಮಿನ್ ಔಷಧಿಗಳನ್ನು ನೀಡಲಾಗುತ್ತದೆ. ಇವು ಹಿಸ್ಟಮಿನ್ ಅನ್ನು ವಿರೋಧಿಸಿ ಗಂಧೆಗಳನ್ನೂ ಕೆರೆತವನ್ನೂ ಹೋಗಲಾಡಿಸುತ್ತವೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ಎರಡು ಬಗೆಯ ಆಂಟಿಹಿಸ್ಟಮಿನ್ ಮಾತ್ರೆಗಳನ್ನು ದೀರ್ಘಕಾಲ ಸೇವಿಸಬೇಕಾಗುತ್ತದೆ. ನಿದ್ರೆ ಬರಿಸುವ, ಬಾಯಿ ಒಣಗಿಸುವ, ಮೊದಲಾದ ಕೆಲವು ಅಡ್ಡಪರಿಣಾಮಗಳನ್ನು ಬಿಟ್ಟರೆ ಇವು ಬಹುತೇಕ ಸುರಕ್ಷಿತ. ಆದರೆ ಇವುಗಳನ್ನು ವೈದ್ಯರ ನಿರ್ದೇಶನದಂತೆ ಬಳಸಬೇಕು. ತೀವ್ರವಾದ ಅರ್ಟಿಕೇರಿಯಾಗೆ ಕೆಲವೊಮ್ಮೆ ಸ್ಟಿರಾಯ್ಡ್ ಮಾತ್ರೆ ಅಥವಾ ಚುಚ್ಚುಮದ್ದು ಬೇಕಾಗಬಹುದು. ಇದನ್ನೂ ವೈದ್ಯರ ನಿರ್ದೇಶನದಂತೆ ತೆಗೆದುಕೊಳ್ಳಬೇಕು. ಅರ್ಟಿಕೇರಿಯಾದ ನವೆಯನ್ನು ಹೋಗಲಾಡಿಸುವಲ್ಲಿ ಕ್ಯಾಲಮಿನ್, ಆಲೋ ವೀರಾ, ತೇವಾಂಶ ಹೆಚ್ಚಿಸುವ ದ್ರಾವಣಗಳು ಸಹಾಯ ಮಾಡುತ್ತವೆ. ಜಂತು ಹುಳು ಮೊದಲಾದ ಹುಳುಗಳ ಬಾಧೆಗೆ ಹುಳು ನಿರೋಧಕ ಔಷಧಿ ನೀಡಲಾಗುತ್ತದೆ.
     ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕೆಲವಾರು ರಕ್ತ ಪರೀಕ್ಷೆಗಳನ್ನು ಮಾಡಿ ಕಾರಣವನ್ನು ತಿಳಿಯಲು ಪ್ರಯತ್ನಿಸಿ ಚಿಕಿತ್ಸೆ ಮಾಡಲಾಗುತ್ತದೆ. ಆಟೋ ಇಮ್ಯೂನ್ ಅರ್ಟಿಕೇರಿಯದಲ್ಲಿ ವ್ಯಕ್ತಿಯ ರಕ್ತವನ್ನು ತೆಗೆದುಕೊಂಡು ಸೆಂಟ್ರಿಫ್ಯೂಜ್ ಯಂತ್ರದಿಂದ ನೀರಿನಂಶವಾದ ಪ್ಲಾಸ್ಮಾವನ್ನು ಬೇರ್ಪಡಿಸಿ ಅವನಿಗೇ ಚುಚ್ಚುಮದ್ದು ನೀಡಲಾಗುತ್ತದೆ. ಹೀಗೆ ಅರ್ಟಿಕೇರಿಯಾಗೆ ಅನೇಕ ಬಗೆಯ ಚಿಕಿತ್ಸೆಗಳಿವೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ವ್ಯಕ್ತಿಗೆ ಮಾನಸಿಕವಾಗಿ ಕಷ್ಟವಾಗಬಹುದು ಹಾಗೂ ಕೆಲಸ ಮಾಡಲು, ಸುಖವಾಗಿ ಜೀವನ ನಡೆಸಲು ಕಷ್ಟವಾಗಬಹುದು. ಆದರೆ ಭರವಸೆ ಕಳೆದುಕೊಳ್ಳದೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮನಸ್ಸನ್ನು ಹಲವಾರು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನವೆಯನ್ನು ಮರೆಯಲು ಪ್ರಯತ್ನಿಸಿದರೆ ಸುಧಾರಣೆ ಕಂಡುಬಂದು ಬೇಗನೆ ಗುಣವಾಗುತ್ತದೆ. 
                                    ಡಾ.ಬಿ.ಆರ್.ಸುಹಾಸ್ 
   

ಸೋಮವಾರ, ಜನವರಿ 19, 2026

ಬಿಷ್ಣುಪುರದ ಅದ್ಭುತ ಕೃಷ್ಣ ಮಂದಿರಗಳು


ಭಾರತವು ಪುಣ್ಯಭೂಮಿ ಎಂದು ಹೆಸರಾಗಿದೆ. ಹಾಗಾಗಿಯೇ ಭಾರತದ ಪ್ರವಾಸೀ ತಾಣಗಳಲ್ಲಿ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳು ಪ್ರಧಾನವಾಗಿವೆ. ಭಾರತದಲ್ಲಿ ಅನೇಕ ಭವ್ಯ ದೇವಾಲಯಗಳಿವೆ. ಅವುಗಳಲ್ಲಿ ಈಗ ನಾನು ಹೇಳಹೊರಟಿರುವ ಬಿಷ್ಣುಪುರದ ಅದ್ಭುತ ದೇವಾಲಯಗಳ ಗುಂಪೂ ಒಂದು.
     ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ ಸುಮಾರು 150 ಕಿ.ಮೀ.ಗಳಷ್ಟು ದೂರದಲ್ಲಿರುವ ಬಿಷ್ಣುಪುರ ( ವಿಷ್ಣುಪುರ) ಬಾಂಕುರ ಜಿಲ್ಲೆಯಲ್ಲಿನ ಪುಟ್ಟ ಊರಾಗಿದ್ದು, ಕಲಾತ್ಮಕವಾದ ಟೆರ್ರಕೋಟ ಅಥವಾ ಮಣ್ಣಿನ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಂಥ ಅದ್ಭುತ ದೇವಾಲಯಗಳನ್ನು ಇನ್ನೆಲ್ಲೂ ಕಾಣಲಾಗದು! ಎತ್ತರವಾಗಿಯೂ ಭವ್ಯವಾಗಿಯೂ ಇರುವ ಈ ದೇವಾಲಯಗಳು ತಮ್ಮ ವಿಶಿಷ್ಟ ಕೆತ್ತನೆಗಳಿಂದ ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ! ಕೋಲ್ಕತಾಗೆ ಹೋದಾಗ ಈ ಸ್ಥಳವನ್ನು ತಪ್ಪದೇ ನೋಡಬೇಕು. 
     ಈಗ ಒಂದು ಸಾಧಾರಣ ಹಳ್ಳಿಯಂತೆ ಕಾಣುವ ಬಿಷ್ಣುಪುರ, ಹಿಂದೆ, ಕ್ರಿ.ಶ. 997 ರ ಕಾಲದಲ್ಲಿ ಮಲ್ಲ ರಾಜರ ಸಾಮ್ರಾಜ್ಯವಾಗಿ ವಿಜೃಂಭಿಸಿತ್ತು! ಆದಿಮಲ್ಲನಿಂದ ಸ್ಥಾಪಿತವಾದ ಮಲ್ಲ ಸಾಮ್ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ರಾಜರು ಆಳಿದರು. ಮೊದಲಿಗೆ ಈ ಮಲ್ಲ ಸಾಮ್ರಾಜ್ಯಕ್ಕೆ ಪ್ರದ್ಯುಮ್ನಪುರ ಎಂಬ ಸ್ಥಳ ರಾಜಧಾನಿಯಾಗಿತ್ತು.‌ ಮುನ್ನೂರು ವರ್ಷಗಳ ನಂತರ ಆಳ್ವಿಕೆಗೆ ಬಂದ ಜಗತ್ ಮಲ್ಲನೆಂಬ ರಾಜನು ಇಲ್ಲಿನ ಕಾಡಿನಲ್ಲಿ ಬೇಟೆಯಾಡುವಾಗ, ತನ್ನ ಹದ್ದುವನ್ನು ಒಂದು ಕೊಕ್ಕರೆಯು ಸೋಲಿಸಿ ಓಡಿಸುವುದನ್ನು ಕಂಡು ವಿಸ್ಮಯಗೊಂಡು, ಈ ಸ್ಥಳದಲ್ಲಿ ಏನೋ ವಿಶೇಷ ಶಕ್ತಿಯಿರಬೇಕೆಂದು ಭಾವಿಸಿ ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿದನು. ಆಗಲೇ ಆದಂಥ ಮೃಣ್ಮಯೀದೇವಿಯ ( ದುರ್ಗೆಯ) ಆಜ್ಞೆಯಂತೆ, ಮಣ್ಣಿನಲ್ಲಿ ಹುದುಗಿದ್ದ ಅವಳ ವಿಗ್ರಹವನ್ನು ಅಗೆದು ತೆಗೆಸಿ ಅದರೊಂದಿಗೆ ಅವಳ ದೇವಾಲಯವನ್ನು ನಿರ್ಮಿಸಿದನು ಎಂದು ಐತಿಹ್ಯಗಳು ಹೇಳುತ್ತವೆ. ಹೀಗೆ ಮೃಣ್ಮಯೀದೇವಿಯ ಭಕ್ತರಾಗಿದ್ದ ಮಲ್ಲರು, ಬೀರ್ ಹಂಬೀರ್ ರಾಜನಿಂದ ವೈಷ್ಣವರಾಗಿ ಸೊಗಸಾದ ಅನೇಕ ಕೃಷ್ಣ ಮಂದಿರಗಳನ್ನು ನಿರ್ಮಿಸಿದರು. ಇವನ ಕಾಲದಲ್ಲಿ ಮೊಘಲರಿಗೂ ಪಠಾಣರಿಗೂ ಯುದ್ಧವಾಗಿ, ಇವನು ಮೊಘಲರ ಪರವಾಗಿ ನಿಂತು ಪಠಾಣರ ನಾಯಕ ದಾವೂದ್ ಖಾನನನ್ನು ಸೋಲಿಸಲು, ಅಕ್ಬರನು ಇವನ ಶೌರ್ಯಕ್ಕೆ ಮೆಚ್ಚಿ ಇವನಿಗೆ ಬೀರ್ ( ವೀರ) ಎಂಬ ಬಿರುದನ್ನಿತ್ತನೆಂದು ಹೇಳುತ್ತಾರೆ. ದಾವೂದ್ ಖಾನನನ್ನು ಸೋಲಿಸಿದರೂ ಅವನನ್ನು ಕೊಲ್ಲದೇ ಬಿಟ್ಟುದಕ್ಕಾಗಿ ಅವನೇ ಇವನಿಗೆ ಈ ಬಿರುದು ಕೊಟ್ಟನೆಂದೂ ಹೇಳುತ್ತಾರೆ. ಇವನು ವೈಷ್ಣವನಾದುದಕ್ಕೆ ಒಂದು ಕಥೆಯಿದೆ. ಒಮ್ಮೆ, ಚೈತನ್ಯ ಪರಂಪರೆಯ ಜೀವಗೋಸ್ವಾಮಿಗಳು, ಹರಿಭಕ್ತಿವಿಲಾಸ, ಚೈತನ್ಯ ಚರಿತಾಮೃತ, ಉಜ್ವಲ ನೀಲಮಣಿ, ಭಕ್ತಿರಸಾಮೃತಸಿಂಧು, ಲಲಿತಮಾಧವ, ವಿದಗ್ಧ ಮಾಧವ, ಮೊದಲಾದ ಇಪ್ಪತ್ತೊಂದು ಅಪರೂಪದ ಭಕ್ತಿಸಾಹಿತ್ಯ ಕೃತಿಗಳನ್ನು ಗೌರಮಠಕ್ಕೆ ಶ್ರೀನಿವಾಸಾಚಾರ್ಯರ ಮೂಲಕ ಕಳಿಸಿದರು. ಅವರು ಅವನ್ನು ಪೆಟ್ಟಿಗೆಗಳ ಮೂಲಕ ಸಾಗಿಸುತ್ತಾ ರಾತ್ರಿ ಒಂದು ಕಡೆ ವಿಶ್ರಾಂತಿ ಪಡೆಯುತ್ತಿದ್ದಾಗ, ರಾಜನ ಸೈನಿಕರು ಅವನ್ನು ಹಣದ ಪೆಟ್ಟಿಗೆಗಳೆಂದು ತಪ್ಪು ತಿಳಿದು ವಶಪಡಿಸಿಕೊಂಡು ಹೋದರು! ರಾಜನು ಅವನ್ನು ತೆಗೆಸಿ, ಪುಸ್ತಕಗಳನ್ನು ಕಂಡು ಆಶ್ಚರ್ಯಗೊಂಡು ಪಂಡಿತರಿಂದ ಅವನ್ನು ಓದಿಸಿ ವಿವರಣೆ ಪಡೆಯತೊಡಗಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಶ್ರೀನಿವಾಸಾಚಾರ್ಯರು, ಆ ಪಂಡಿತರು ತಪ್ಪು ವಿವರಣೆ ಕೊಡುತ್ತಿದ್ದುದನ್ನು ಕೇಳಿ ದುಃಖಗೊಂಡು ಕಿವಿ ಮುಚ್ಚಿಕೊಂಡರು! ಆಗ ರಾಜನು ಅವರನ್ನು ವಿಚಾರಿಸಲು, ಅವರು ಸರಿಯಾದ ವಿವರಣೆಗಳನ್ನು ಕೊಟ್ಟರು. ಇದರಿಂದ ರಾಜನ ಮನ ಕರಗಿ ಅವನು ಕೂಡಲೇ ಶ್ರೀನಿವಾಸಾಚಾರ್ಯರ ಶಿಷ್ಯನಾಗಿ ವೈಷ್ಣವನಾದನು. ಅವರಿಗೆ ಅವನು ಮದುವೆಯನ್ನೂ ಮಾಡಿಸಿ ಅಲ್ಲಿಯೇ ವಸತಿಯನ್ನು ಕಲ್ಪಿಸಿಕೊಟ್ಟನು. ಅಲ್ಲಿಂದ ಮುಂದೆ ಬಿಷ್ಣುಪುರವು ಒಂದು ವೈಷ್ಣವಧಾಮವಾಯಿತು! ಮೃಣ್ಮಯೀದೇವಿಯ ಪೂಜೆ ಮುಂದುವರೆದರೂ ಅನೇಕ ಕೃಷ್ಣ ದೇಗುಲಗಳ ನಿರ್ಮಾಣವಾಯಿತು! ಬೀರ್ ಹಂಬೀರನು ರಾಸಮಂಚ ಎಂಬ ಮಂದಿರವನ್ನು ಶ್ರೀಕೃಷ್ಣನ ರಾಸಲೀಲೆಯನ್ನು ಆಚರಿಸಲೆಂದು ನಿರ್ಮಿಸಿ, ಶ್ಯಾಮಬಂಧ್, ಜಮುನಾಬಂಧ್, ರಾಧಾಕುಂಡ, ಕಾಲಿಂದೀ ಘಾಟ್, ಮೊದಲಾದ ಅನೇಕ ಕೆರೆಗಳನ್ನು ನಿರ್ಮಿಸಿದನು. ಅವನಿಗೆ ಒಬ್ಬ ನವಾಬನು ದೇವ್ ಎಂಬ ಬಿರುದನ್ನೂ ಕೊಟ್ಟನು. ಅವನ ನಂತರ ಬಂದ ಮಲ್ಲರಾಜರು ಅನೇಕ ಕೃಷ್ಣ ದೇಗುಲಗಳನ್ನು ನಿರ್ಮಿಸಿದರು. ಈಗ ಅಂಥ ಕೆಲವು ಸುಂದರ ದೇವಾಲಯಗಳ ಪರಿಚಯ ಮಾಡಿಕೊಳ್ಳೋಣ.

ರಾಸಮಂಚ 
   ಈ ಮಂದಿರವನ್ನು ನೋಡುವುದರೊಂದಿಗೆ ಬಿಷ್ಣುಪುರದ ಪ್ರವಾಸವನ್ನು ಆರಂಭಿಸುವುದು ಒಳ್ಳೆಯದು. ಏಕೆಂದರೆ ಎಲ್ಲಾ ದೇವಾಲಯಗಳನ್ನು ನೋಡಲು ನಮಗೆ ಪ್ರವೇಶ ಚೀಟಿ ದೊರೆಯುವುದು ಇಲ್ಲಿಯೇ. ಹಾಗೆಯೇ ಇಲ್ಲಿ ಮಾರ್ಗದರ್ಶಿಗಳು ಅಥವಾ ಗೈಡ್ ಗಳು ಸಿಗುತ್ತಾರೆ. ದೇವಾಲಯಗಳ ವಿವರಣೆ ಪಡೆಯಲು ನಮಗೆ ಮಾರ್ಗದರ್ಶಿ ಅತ್ಯವಶ್ಯಕ. ಒಂದೊಂದು ದೇವಾಲಯವೂ ದೂರವಿರುವುದರಿಂದ, ಮಾರ್ಗದರ್ಶಿಯನ್ನೂ ನಮ್ಮ ಖಾಸಗಿ ವಾಹನದಲ್ಲಿ ಜೊತೆಗೆ ಕರೆದೊಯ್ಯುವುದು ಒಳ್ಳೆಯದು. 
     ಮಲ್ಲ ಸಾಮ್ರಾಜ್ಯದ ಕೀರ್ತಿ, ವೈಭವಗಳನ್ನು ಸಾರಿ ಹೇಳುವ ರಾಸಮಂಚ ಎಂಬ ಈ ಬೃಹತ್ ಮಂದಿರವನ್ನು ಬೀರ್ ಹಂಬೀರನು ಕ್ರಿ.ಶ.1587 ರಲ್ಲಿ ನಿರ್ಮಿಸಿದನು.

 ಮೂರು ಅಂಗಣಗಳನ್ನುಳ್ಳ ಚೌಕಾಕಾರದ ಮಂದಿರ, ಅದರ ಮೇಲೆ ಮೊಘಲ್ ಶೈಲಿಯ ಕಮಾನುಗಳು, ಮತ್ತು ಅವುಗಳ ಮೇಲೆ ತ್ರಿಕೋಣಾಕೃತಿಯ ಗೋಪುರ, ಹೀಗೆ ಮೂರು ಅಂತಸ್ತುಗಳ ವಿಶಿಷ್ಟ ರಚನೆಯ ಈ ಕಟ್ಟಡ, ಲ್ಯಾಟರೈಟ್ ( ಕೆಂಪು ಜೇಡಿಮಣ್ಣಿನ) ತಳದ ಮೇಲೆ ನಿಂತಿದ್ದು, ಒಂದೊಂದು ಬದಿಯಲ್ಲೂ ಹತ್ತು ದ್ವಾರಗಳನ್ನು ಹೊಂದಿದೆ. ಇವು ಬಂಗಾಳಿ ಶೈಲಿಯ ಛಾವಣಿಗಳನ್ನೂ ಸೊಗಸಾದ ಭಾರವಾದ ಕಂಬಗಳನ್ನೂ ಹೊಂದಿವೆ. ಈ ರಾಸಮಂಚವು ರಾಸೋತ್ಸವವನ್ನು ಆಚರಿಸುವ ಮಂದಿರವಾಗಿದ್ದು, ಆ ಉತ್ಸವದ ಸಮಯದಲ್ಲಿ ಇತರ ಎಲ್ಲಾ ದೇವಾಲಯಗಳ ವಿಗ್ರಹಗಳನ್ನು ತಂದು ಇಲ್ಲಿರಿಸುತ್ತಿದ್ದರು. 

ಶ್ಯಾಮರಾಯ್ ಮಂದಿರ 
        ಅತ್ಯಂತ ಸೊಗಸಾದ ಟೆರ್ರಕೋಟ ಶಿಲ್ಪಕಲೆಯನ್ನು ಹೊಂದಿರುವ ಈ ಬೃಹತ್ ಮಂದಿರವನ್ನು ಕ್ರಿ.ಶ. 1643 ರಲ್ಲಿ ಮಲ್ಲರಾಜ ರಘುನಾಥ ಸಿಂಘನು ನಿರ್ಮಿಸಿದನು. ಬಂಗಾಳೀ ಶೈಲಿಯ ಕಮಾನಿನ ಛಾವಣಿ ಮತ್ತು ಮೇಲೆ ಐದು ಶಿಖರಗಳನ್ನು ಹೊಂದಿರುವ ಈ ದೇವಾಲಯ, ಪಂಚರತ್ನ ಮಾದರಿಯ ದೇವಾಲಯಗಳಿಗೆ ಅತ್ಯುತ್ತಮ ಉದಾಹರಣೆ. ಈ ಮಂದಿರದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಮತ್ತು ಕೃಷ್ಣಲೀಲೆಗಳಿಗೆ ಸಂಬಂಧಿಸಿದ ಸುಂದರ ಕೆತ್ತನೆಗಳಿವೆ. ಅಂತೆಯೇ ಜಿಂಕೆ, ಆನೆ, ಗಂಡಭೇರುಂಡ,ಮೊದಲಾದ ಪ್ರಾಣಿಪಕ್ಷಿಗಳ ಹಾಗೂ ಸುಂದರ ವಿನ್ಯಾಸಗಳ ಕೆತ್ತನೆಗಳಿವೆ. ಆದರೆ ಮಂದಿರದಲ್ಲಿ ವಿಗ್ರಹವಿಲ್ಲದಿರುವುದರಿಂದ ಪೂಜೆಯಿಲ್ಲ.

ಜೋರ್ ಬಂಗ್ಲ ಮಂದಿರ 
      ಕ್ರಿ.ಶ. 1655 ರಲ್ಲಿ ರಘುನಾಥ ಸಿಂಘ ರಾಜನು ನಿರ್ಮಿಸಿದ ಈ ಅದ್ಭುತ ಮಂದಿರವು ಎರಡು ಬಂಗಾಳೀ ಗುಡಿಸಲುಗಳ ಮಾದರಿಯಲ್ಲಿದ್ದು, ಅವುಗಳ ಜಾರುವ ಛಾವಣಿಗಳನ್ನು ಒಟ್ಟಿಗೆ ಸೇರಿಸಿ, ಮೇಲೆ ಒಂದು ಶಿಖರವಿರುವಂತೆ ನಿರ್ಮಿಸಲಾಗಿದೆ! ಗೋಡೆಗಳ ಮೇಲಿನ ಶ್ರೀಕೃಷ್ಣನ ರಾಸಲೀಲೆ ಹಾಗೂ ದಶಾವತಾರ, ರಾಮಾಯಣ, ಮಹಾಭಾರತಗಳ ಅದ್ಭುತ ಕೆತ್ತನೆಗಳು ಮನಸೆಳೆಯುತ್ತವೆ! ಇಲ್ಲಿಯೂ ವಿಗ್ರಹ ಮತ್ತು ಪೂಜೆಗಳಿಲ್ಲ.

ರಾಧಾಶ್ಯಾಮ ಮಂದಿರ 
     ಕ್ರಿ.ಶ. 1758 ರಲ್ಲಿ ರಾಜಾ ಚೈತನ್ಯ ಸಿಂಘನು ನಿರ್ಮಿಸಿದ ಈ ಲ್ಯಾಟರೈಟ್ ( ಕೆಂಪು ಜೇಡಿಮಣ್ಣು); ಮಂದಿರವು, ಒಂದು ಏಕರತ್ನ, ಅಂದರೆ ಒಂದೇ ಶಿಖರವುಳ್ಳ ಮಂದಿರವಾಗಿದ್ದು, ಎತ್ತರದ ಗೋಡೆಗಳುಳ್ಳ ವಿಶಾಲ ಆವರಣದಲ್ಲಿದೆ. ರಾಜಾ ಚೈತನ್ಯ ಸಿಂಘನ ಕಾಲದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಅವನ ಮೇಲೆ ಆರ್ಥಿಕ ಒತ್ತಡವನ್ನು ತಂದಿತ್ತು! ಆದರೂ ಅವನು ಮನೆತನದ ಸಂಪ್ರದಾಯವಾದ ದೇವಾಲಯ ನಿರ್ಮಾಣವನ್ನು ಬಿಡಲಿಲ್ಲ. ಅವನ ಅಚ್ಚಳಿಯದ ಪ್ರಯತ್ನದ ಫಲವೇ ಈ ಅದ್ಭುತ ಮಂದಿರ! ಇಲ್ಲಿನ ಕೃಷ್ಣಲೀಲೆಯ ಸುಂದರ ಭಿತ್ತಿ ಕೆತ್ತನೆಗಳೊಂದಿಗೆ ಗರ್ಭಗುಡಿಯಲ್ಲಿ ಶ್ರೀ ರಾಧಾಕೃಷ್ಣರ ಸುಂದರ ವಿಗ್ರಹಗಳಿದ್ದು ನಿತ್ಯ ಪೂಜೆ ನಡೆಯುತ್ತದೆ.

ಮದನಮೋಹನ ಮಂದಿರ 
      ಕ್ರಿ.ಶ. 1694 ರಲ್ಲಿ ದುರ್ಜನ ಸಿಂಘ್ ರಾಜನು ನಿರ್ಮಿಸಿದ ಈ ಮಂದಿರ, ಕಮಾನಿನ ಆಕೃತಿಯ ಬಾಂಗ್ಲಾ ಛಾವಣಿಯ ಮೇಲೆ ಒಂದೇ ಶಿಖರವನ್ನು ಹೊಂದಿದ್ದು, ಇಟ್ಟಿಗೆ ಮತ್ತು ಮಣ್ಣಿನಿಂದ ಕಟ್ಟಲಾಗಿರುವ, ಈ ಮಾದರಿಯ ಅತ್ಯದ್ಭುತ ಮಂದಿರವಾಗಿದೆ. ಗೋಡೆಗಳ ಮೇಲೆ ಕೃಷ್ಣಲೀಲೆ, ದಶಾವತಾರ, ಮೊದಲಾದ ಸುಂದರ ಕೆತ್ತನೆಗಳಿದ್ದು, ಗರ್ಭಗುಡಿಯಲ್ಲಿ ಶ್ರೀ ರಾಧಾಮನೋಹರರ ಸುಂದರ ವಿಗ್ರಹಗಳಿವೆ. ಈಗಲೂ ಇಲ್ಲಿ ನಿತ್ಯ ಪೂಜೆ ನಡೆಯುವುದಾಗಿದ್ದು, ರಾಸೋತ್ಸವ, ಮತ್ತು ದೋಲಾಯಾತ್ರೆ ( ಹೋಳಿ) ಗಳು ಇಲ್ಲಿ ನಡೆಯುವ ಆಕರ್ಷಕ ಉತ್ಸವಗಳಾಗಿವೆ! ಇಲ್ಲಿನ ಅರ್ಚಾವಿಗ್ರಹವಾದ ಮದನಮೋಹನನ ಬಗ್ಗೆ ಒಂದು ಕಥೆ ಹೇಳುತ್ತಾರೆ. ಗೋಪಾಲಸಿಂಘನೆಂಬ ರಾಜನು ಬಿಷ್ಣುಪುರವನ್ನು ಆಳುತ್ತಿದ್ದಾಗ, ಮರಾಠಾ ಲೂಟಿಕೋರರು ದಾಳಿ ಮಾಡಲು, ಅವನು ಎದುರಿಸಲಾಗದೇ ಮದನಮೋಹನ ದೇವರಿಗೆ ಶರಣಾದನಂತೆ. ಆಗ ಮದನಮೋಹನನು ನೀಲಿ ವಸ್ತ್ರವನ್ನು ಧರಿಸಿದ ಒಬ್ಬ ಯುವಕನ ರೂಪದಲ್ಲಿ ಬಂದು, ದಲ್ ಮದಲ್ ಎಂಬ ಫಿರಂಗಿಯನ್ನು ಸಿಡಿಸಿ ಅನೇಕ ಲೂಟಿಕೋರರನ್ನು ಕೊಂದು ಬಿಷ್ಣುಪುರವನ್ನು ರಕ್ಷಿಸಿದುದನ್ನು ಅನೇಕರು ನೋಡಿದರಂತೆ! 
      ಈ ದೇವಾಲಯ, ದೊಡ್ಡ ಗೋಡೆಗಳ ವಿಶಾಲ ಆವರಣದಲ್ಲಿದ್ದು, ಇಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಪಾಕಶಾಲಾ ಕಟ್ಟಡವೂ ಇದೆ.

ಇತರ ಮಂದಿರಗಳು ಮತ್ತು ಪ್ರೇಕ್ಷಣೀಯ ಸ್ಥಳಗಳು 
      ಬಿಷ್ಣುಪುರದಲ್ಲಿ ಈ ಮಂದಿರಗಳಲ್ಲದೇ, ಲಾಲ್ ಜಿ ಮಂದಿರ, ಮದನಗೋಪಾಲ ಮಂದಿರ, ನಂದಲಾಲ್ ಮಂದಿರ, ಕೃಷ್ಣ ಬಲರಾಮ ಮಂದಿರ, ಮೃಣ್ಮಯೀದೇವಿಯ ಮಂದಿರ, ಛಿನ್ನಮಸ್ತಾದೇವಿಯ ಮಂದಿರ, ಮೊದಲಾದ ಅನೇಕ ಮಂದಿರಗಳಿವೆ. ಇವಲ್ಲದೇ, ದಲ್ ಮದಲ್ ಫಿರಂಗಿ, ಕೋಟೆಯ ಹೆಬ್ಬಾಗಿಲು, ಗುಮ್ ಗಢ ಎಂಬ ಅಪರಾಧಿಗಳ ಶಿಕ್ಷಾಸ್ಥಾನ, ಕಲ್ಲಿನ ರಥ, ವಸ್ತುಸಂಗ್ರಹಾಲಯ, ರಘುನಾಥ ಸಿಂಘನು ನಿರ್ಮಿಸಿದ ಲಾಲ್ ಬಂಧ್ ಕೆರೆ, ಮೊದಲಾದ ಅನೇಕ ಪ್ರೇಕ್ಷಣೀಯ ತಾಣಗಳಿವೆ ಇಲ್ಲಿ. ಇಲ್ಲಿ ಲಾಲ್ ಬಂಧ್ ಕೆರೆಯ ಬಗೆಗಿನ ಒಂದು ಕಥೆಯನ್ನು ಹೇಳಲೇ ಬೇಕು. ರಘುನಾಥ ಸಿಂಘನು ದೆಹಲಿಯಿಂದ ಬಹಾದುರ್ ಖಾನ್ ಎಂಬ ಸಂಗೀತಗಾರನನ್ನು ಇಲ್ಲಿಗೆ ಕರೆತಂದು ಹಿಂದೂಸ್ತಾನಿ ಘರಾನಾ ಸಂಗೀತವನ್ನು ಇಲ್ಲಿ ಪರಿಚಯಿಸಿದಾಗ, ಅವನೊಂದಿಗೆ ಬಂದ ಪರ್ಷಿಯಾ ನರ್ತಕಿ ಲಾಲ್ ಬಾಯಿಗೂ ಇವನಿಗೂ ಪ್ರೇಮವಾಗಿ, ಅವಳಿಗಾಗಿ ಲಾಲ್ ಬಂಧ್ ಕೆರೆಯನ್ನು ಇವನು ನಿರ್ಮಿಸಿದನೆಂದು ಹೇಳುತ್ತಾರೆ. ಆದರೆ ಅವರ ಪ್ರೇಮವನ್ನು ಸಹಿಸದ ಅವನ ರಾಣಿ ಚಂದ್ರಪ್ರಭೆಯು ಅವನನ್ನೂ ಲಾಲ್ ಬಾಯಿಯನ್ನೂ ಈ ಕೆರೆಯಲ್ಲಿ ದೋಣಿವಿಹಾರ ಮಾಡಿಸುತ್ತಾ ಕೆರೆಯಲ್ಲಿ ಮುಳುಗಿಸಿ ಕೊಂದು, ಅನಂತರ ತಾನೂ ಸಹಗಮನ ಮಾಡಿದಳೆಂಬ ಒಂದು ರೋಚಕ ಕಥೆಯಿದೆ. ಇನ್ನೊಂದು ಕಥೆಯ ಪ್ರಕಾರ, ಜನರು ಲಾಲ್ ಬಾಯಿ ಮತ್ತು ಅವಳಿಗೆ ರಾಜನಿಂದ ಹುಟ್ಟಿದ ಮಗುವನ್ನು ದೋಣಿಗೆ ಕಟ್ಟಿ ಮುಳುಗಿಸಿದರೆಂದು ಹೇಳುತ್ತಾರೆ. ಈ ಕೆರೆ ಭೂತಾವೇಶಿತವಾಗಿದೆಯೆಂದೂ ಅಮಾವಾಸ್ಯೆಯ ರಾತ್ರಿ ಇಲ್ಲಿ ಬಂದರೆ ಒಂದು ಹೆಣ್ಣಿನ ಆರ್ತನಾದ ಕೇಳುವುದೆಂದೂ ಇಲ್ಲಿನ ಜನರು ಹೇಳುತ್ತಾರೆ. 
      ಬಿಷ್ಣುಪುರ ಘರಾನಾ ಇಂದಿಗೂ ಪ್ರಸಿದ್ಧವಾಗಿದೆ.

ಇತರ ಆಕರ್ಷಣೆಗಳು 
        ಬಿಷ್ಣುಪುರವು ಹಲವಾರು ಕರಕುಶಲ ಕಲೆಗಳಿಗೆ ಪ್ರಸಿದ್ಧವಾಗಿದೆ. ಕೃಷ್ಣಲೀಲೆ ಹಾಗೂ ಪೌರಾಣಿಕ ಚಿತ್ರಗಳ ಅಂಚುಗಳಿರುವ ಬಾಲುಚಾರಿ ಎಂಬ ಬಗೆಯ ಸೀರೆ ಇಲ್ಲಿನ ಒಂದು ಮುಖ್ಯ ಕೊಡುಗೆಯಾಗಿದೆ. ಅಂತೆಯೇ ಇದು ಟೆರ್ರಕೋಟಾ ತಾಣವಾಗಿದ್ದು, ಅದ್ಭುತವಾದ ಟೆರ್ರಕೋಟ ಕಲಾತ್ಮಕ ವಸ್ತುಗಳು ಇಲ್ಲಿ ಸುಲಭ ಬೆಲೆಗೆ ದೊರೆಯುತ್ತವೆ. ಟೆರ್ರಕೋಟ ಶಂಖಗಳೂ ಇಲ್ಲಿನ ಒಂದು ಆಕರ್ಷಣೆ. ಹಿತ್ತಾಳೆಯ ಪಾತ್ರೆಗಳೂ ಕಲಾತ್ಮಕ ವಸ್ತುಗಳೂ ಇಲ್ಲಿನ ಇನ್ನೊಂದು ಆಕರ್ಷಣೆ. ಅಂತೆಯೇ ದಶಾವತಾರ ಕಾರ್ಡ್ ಗಳು ಹಾಗೂ ಒಡಿಶಾದ ಪಟಚಿತ್ರಗಳು ಇಲ್ಲಿನ ಇನ್ನಿತರ ಪ್ರಮುಖ ಆಕರ್ಷಣೆಗಳು. ಪರ್ಷಿಯಾ ಮೂಲದ ಗಂಜೀಫಾ ಚಿತ್ರಕಲೆಯ ಕಾರ್ಡ್ ಗಳ ಕ್ರೀಡೆ ಭಾರತದ ಹಲವೆಡೆಗಳಲ್ಲಿ ಬೆಳೆದು ಪ್ರಸಿದ್ಧವಾಗಿದ್ದು, ಚಿತ್ರಕಲೆಗೂ ಕ್ರೀಡೆಗೂ ತನ್ನದೇ ಆದ ಕಾಣ್ಕೆ ಕೊಟ್ಟಿದೆ. ಬಿಷ್ಣುಪುರದಲ್ಲೂ ಮಲ್ಲರಾಜರು ದಶಾವತಾರದ ಕಾರ್ಡ್ ಗಳ ಆಟ ಆಡುತ್ತಿದ್ದು ಈಗಲೂ ಇದು ಉಳಿದುಬಂದಿದೆ. ಫೌಜ್ ದಾರ್ ವಂಶದವರು ಪರಂಪರೆಯಿಂದ ಈ ಗಂಜೀಫಾ ಕಾರ್ಡ್ ಗಳನ್ನು ರಚಿಸುತ್ತಿದ್ದು, ಈಗ ಶೀತಲ್ ಫೌಜ್ ದಾರ್ ಎಂಬ ಕಲಾವಿದರು ಇದನ್ನು ಮಾಡುತ್ತಿದ್ದಾರೆ. ಮಾರ್ಗದರ್ಶಿಯೊಂದಿಗೆ ನಾನು ಅವರ ಕಫೇರಿಗೆ ಹೋಗಿ ಅವರನ್ನು ಮಾತನಾಡಿಸಿ ದಶಾವತಾರ ಕಾರ್ಡ್ ಗಳನ್ನು ಖರೀದಿಸಿದೆ. ವಿಷ್ಣುವಿನ ದಶಾವತಾರದ ಚಿತ್ರಗಳಿರುವ ಈ ಕಾರ್ಡ್ ಗಳನ್ನು ಬಟ್ಟೆಯನ್ನು ಬೇಲದ ಹಣ್ಣಿನ ರಸದಿಂದ ಗಟ್ಟಿಗೊಳಿಸಿ, ಸಸ್ಯವರ್ಣಗಳಿಂದ ಚಿತ್ರಗಳನ್ನು ರಚಿಸಿ ಮಾಡಲಾಗುತ್ತದೆ. ಇವನ್ನು ನಾವು ಕ್ರೀಡೆ ಇಲ್ಲವೇ ಸಂಗ್ರಹಕ್ಕಾಗಿ ಖರೀದಿಸಬಹುದು. ಇಲ್ಲಿ ನಾವು ನಮ್ಮಲ್ಲೂ ಇರುವ ಗಂಜೀಫಾ ರಘುಪತಿ ಭಟ್ ಎಂಬ ಗಂಜೀಫಾ ಕಲಾವಿದರನ್ನು ಸ್ಮರಿಸಬಹುದು. ಅವರ ಬಗ್ಗೆ ನಾನು ಶೀತಲ್ ಫೌಜ್ ದಾರ್ ಅವರ ಬಳಿ ಹೇಳಿದಾಗ ಅವರು ತಮಗೆ ಗೊತ್ತೆಂದರು. 
       ಬಿಷ್ಣುಪುರದಲ್ಲಿ ಉಳಿದುಕೊಳ್ಳಲು ಕೆಲವು ಹೋಟೆಲ್ ಗಳಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಒಂದೆರಡು ದಿನಗಳು ಇಲ್ಲಿರಬಹುದು, ಇಲ್ಲವೇ ಕೋಲ್ಕತಾದಿಂದ ಖಾಸಗಿ ವಾಹನದಲ್ಲಿ ಬೆಳಿಗ್ಗೆ ಬೇಗನೆ ಹೊರಟು, ಸಾಕಷ್ಟು ನೋಡಿ, ರಾತ್ರಿಯ‌ ಹೊತ್ತಿಗೆ ಹಿಂದಿರುಗಬಹುದು. ಬಿಷ್ಣುಪುರಕ್ಕೆ ಹೋಗುವ ದಾರಿಯಲ್ಲೇ ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಶಾರದಾದೇವಿಯರ ಜನ್ಮಸ್ಥಳಗಳಾದ ಕಾಮಾರ್ಪುಕೂರ್, ಜಯರಾಂಬಾಟಿಗಳನ್ನೂ ನೋಡಬಹುದು. ಊಟ, ತಿಂಡಿಗಳು ಅಷ್ಟಾಗಿ ದೊರೆಯದಿರುವುದರಿಂದ, ಕೋಲ್ಕತಾದಿಂದಲೇ ಏನಾದರೂ ತಿಂಡಿತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.



ಭಾನುವಾರ, ಜನವರಿ 18, 2026

ನೆನಪಿಗೆ ಬಂದ ರಾಮಾಯಣಗಳು

ನೆನಪಿಗೆ ಬಂದ ರಾಮಾಯಣಗಳು,ರಾಮಕಥೆಗಳು

ವಾಲ್ಮೀಕಿ ರಾಮಾಯಣ(ಸಂಸ್ಕೃತ)
ಅದ್ಭುತ ರಾಮಾಯಣ(ಸಂಸ್ಕೃತ)
ಆನಂದ ರಾಮಾಯಣ(ಸಂಸ್ಕೃತ)
ಅಧ್ಯಾತ್ಮ ರಾಮಾಯಣ(ಸಂಸ್ಕೃತ)
ತತ್ವಸಂಗ್ರಹ ರಾಮಾಯಣ(ಸಂಸ್ಕೃತ)
ಕಾಳಿದಾಸನ ರಘುವಂಶ(ಸಂಸ್ಕೃತ)
ಕುಮಾರದಾಸನ ಜಾನಕೀರಹಣ(ಸಂಸ್ಕೃತ,ಶ್ರೀಲಂಕಾ)
ಭಾಸನ ಪ್ರತಿಮಾನಾಟಕ(ಸಂಸ್ಕೃತ ನಾಟಕ)
ಭಾಸನ ಅಭಿಷೇಕ ನಾಟಕ(ಸಂಸ್ಕೃತ ನಾಟಕ)
ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ(ಸಂಸ್ಕೃತ ನಾಟಕ)
ಭವಭೂತಿಯ ಮಹಾವೀರಚರಿತ(ಸಂಸ್ಕೃತ ನಾಟಕ)
ಭವಭೂತಿಯ ಉತ್ತರರಾಮಚರಿತ(ಸಂಸ್ಕೃತ ನಾಟಕ)
ಹನುಮಂತನ ಹನೂಮನ್ನಾಟಕ(ಸಂಸ್ಕೃತ ನಾಟಕ)
ಭಾಸ್ಕರಭಟ್ಟನ ಉನ್ಮತ್ತರಾಘವ(ಸಂಸ್ಕೃತ ನಾಟಕ)
ಜಯದೇವನ ಪ್ರಸನ್ನರಾಘವ(ಸಂಸ್ಕೃತ ನಾಟಕ)
ಮುರಾರಿಯ ಅನರ್ಘರಾಘವ(ಸಂಸ್ಕೃತ ನಾಟಕ)
ರಾಜಶೇಖರನ ಬಾಲರಾಮಾಯಣ(ಸಂಸ್ಕೃತ ನಾಟಕ)
ಮಾಯುರಾಜನ ಉದಾತ್ತರಾಘವ(ಸಂಸ್ಕೃತ ನಾಟಕ)
ರಾಮಭದ್ರದೀಕ್ಷಿತನ ಜಾನಕೀಪರಿಣಯ(ಸಂಸ್ಕೃತ ನಾಟಕ)
ಅದ್ಭುತದರ್ಪಣ(ಸಂಸ್ಕೃತ ನಾಟಕ)
ಕೃತ್ಯಾರಾವಣ(ಸಂಸ್ಕೃತ ನಾಟಕ)
ಸೇತುಬಂಧ(ಪ್ರಾಕೃತ)
ದಶರಥ ಜಾತಕ(ಪಾಲೀ ಬೌದ್ಧ ರಾಮಕಥೆ)
ವಿಮಲಸೂರಿಯ ಪಉಮಚರಿಯ ಅಥವಾ ಪದ್ಮಚರಿತ ಅಥವಾ ಪದ್ಮಪುರಾಣ(ಪ್ರಾಕೃತ ಜೈನರಾಮಾಯಣ)
ತುಳಸೀದಾಸರ ರಾಮಚರಿತಮಾನಸ(ಅವಧೀ-ಹಳೇಹಿಂದೀ)
ಕುಮಾರವಾಲ್ಮೀಕಿಯ ತೊರವೆ ರಾಮಾಯಣ(ಕನ್ನಡ)
ಬತ್ತಲೇಶ್ವರ ರಾಮಾಯಣ(ಕನ್ನಡ)
ಮುದ್ದಣನ ಅದ್ಭುತರಾಮಾಯಣ(ಕನ್ನಡ)
ಮುದ್ದಣನ ರಾಮಾಶ್ವಮೇಧ ನಾಟಕ(ಕನ್ನಡ)
ಕುವೆಂಪುರವರ ರಾಮಾಯಣದರ್ಶನಂ(ಕನ್ನಡ)
ನಾಗಚಂದ್ರಅಥವಾ ಅಭಿನವ ಪಂಪನ ರಾಮಚಂದ್ರಚರಿತಪುರಾಣ(ಕನ್ನಡ)
ಗಿರಿಧರ ರಾಮಾಯಣ(ಗುಜರಾತೀ)
ಮಾಧವಕಂದಲೀಯ ರಾಮಾಯಣ(ಅಸ್ಸಾಮೀ)
ಸರಳಾದಾಸ್ ರ ವಿಲಂಕರಾಮಾಯಣ(ಒಡಿಸ್ಸೀ)
ರಂಗನಾಥ ರಾಮಾಯಣ(ತೆಲುಗು)
ಭಾವಾರ್ಥ ರಾಮಾಯಣ(ಮರಾಠೀ)
ಕಂಬರಾಮಾಯಣ(ತಮಿಳು)
ಏಳುತಚ್ಚನ್ ನ ಅಧ್ಯಾತ್ಮರಾಮಾಯಣ(ಮಲಯಾಳಂ)
ಕೃತ್ತಿವಾಸ ರಾಮಾಯಣ(ಬಂಗಾಳಿ)
ರಾಮಾವತಾರಚರಿತ್ರ(ಕಾಶ್ಮೀರಿ)
ಗೋವಿಂದರಾಮಾಯಣ(ಪಂಜಾಬಿ)
ರಾಧೇಶ್ಯಾಂ ರಾಮಾಯಣ(ನೇಪಾಳೀ)
ರಾಮಕೀನ್(ಥೈಲ್ಯಾಂಡ್)
ಕಕವಿನ್ ರಾಮಾಯಣ(ಇಂಡೋನೇಷ್ಯಾ)
ಮಹಾರಾಡಿಯಾ ಲವಾನಾ(ಫಿಲಿಪೈನ್ಸ್)
ಫ್ರಾಲಂ ಫ್ರಾಲಕ್(ಲಾವೋಸ್)
ರೀಮ್ ಕೇರ್(ಕಾಂಬೋಡಿಯಾ)
ಹಿಕಾಯತ್ ಸೆರಿ ರಾಮಾಯಣ(ಮಲೇಶಿಯಾ)
ರಾಮ ವತ್ತು,ತಿರಿ ರಾಮ(ಬರ್ಮ)