ಭಾನುವಾರ, ಮೇ 10, 2026

ಸುಂದರೀಶತಕ -೩೫

ಸಂಸ್ಕೃತ ಮೂಲ 

ಸಸ್ಮಿತಮುಖಮವಧೀರಿತಚೇಲಾಂಚಲಮೀಷದಾನತಗ್ರೀವಮ್ /
ತಿರ್ಯಗ್ವಿಲೋಕಯಂತ್ಯಾ ಕೋsಪಿ ಕೃತೀ ಲಕ್ಷಿತ: ಕ್ರಿಯತೇ //

ಕನ್ನಡ ಅನುವಾದ 

     ' ಆ ಸುಂದರಿಯು ತನ್ನ ಅವಕುಂಠನವನ್ನು ತಲೆಯ ಮೇಲೆತ್ತಿ, ಕುತ್ತಿಗೆಯನ್ನು ಸ್ವಲ್ಪ ಬಾಗಿಸಿ, ನಗುವಿನಿಂದ ಕೂಡಿದ ಮುಖವುಳ್ಳವಳಾಗಿ, ಕಡೆಗಣ್ಣಿನಿಂದ ನೋಡುತ್ತಾ, ಯಾರೋ ಭಾಗ್ಯವಂತನನ್ನು ತನ್ನ ಲಕ್ಷ್ಯಕ್ಕೆ ತರುತ್ತಿದ್ದಾಳೆ!' 
    ಹೆಣ್ಣಿನ ನಗುಮುಖದ ನಾಚಿಕೆಯ ಈ ನೋಟ ಯಾವ ಗಂಡಿನ ಮೇಲಾದರೂ ಬಿದ್ದರೆ, ಆ ಗಂಡು ಭಾಗ್ಯವಂತನಲ್ಲದೇ ಮತ್ತೇನು? ಹೀಗೆ ಗಂಡನ್ನು ನೇರವಾಗಿ ನೋಡದೇ, ಓರೆ ನೋಟದಲ್ಲಿ ನಗುತ್ತಾ ನೋಡುವ ಹೆಣ್ಣಿನ ಈ ಸುಂದರ ಚಿತ್ರಣವನ್ನು ಯಾರೂ ಅನುಕರಿಸಲಾಗುವುದಿಲ್ಲ! ಅದು ಹೆಣ್ಣಿಗಷ್ಟೇ ಸೀಮಿತವಾಗಿರುವ ಕಲೆ. ಅಂಥ ಸುಂದರ ಕಲಾತ್ಮಕ ನೋಟವನ್ನು ಚಿತ್ರಿಸುತ್ತಾ ಕವಿಯು, ಯಾರೋ ಭಾಗ್ಯವಂತ ಪುರುಷ ಅವಳ ಲಕ್ಷ್ಯಕ್ಕೆ ಬೀಳುತ್ತಿದ್ದಾನೆ ಎನ್ನುತ್ತಾನೆ. 

ಸುಂದರೀಶತಕ -೩೪

ಸಂಸ್ಕೃತ ಮೂಲ 

ಅಧರದಲೋಪರಿ ನಿಹಿತಂ ಮುಕ್ತಾಚೂರ್ಣೇ ದರಸ್ಮಿತಂ ತಸ್ಯಾ: /
ಆಸ್ವಾದ್ಯೋಚ್ಛೂನಮಿದಂ ಮನೋ ಮಮ ಸ್ನೇಹಮಭಿಲಷತಿ //

ಕನ್ನಡ ಅನುವಾದ 
    ' ಈ ಸುಂದರಿಯ ನಗು, ಇವಳ ಅಧರದಳದ ಮೇಲಿರುವ ಮುತ್ತಿನ ಚೂರ್ಣದಂತಿದೆ! ಅದನ್ನು ಆಸ್ವಾದಿಸಿ ಪ್ರಫುಲ್ಲಿತವಾಗಿರುವ ನನ್ನ ಮನಸ್ಸು ಈಗ ಅವಳ ಸಂಪೂರ್ಣ ಪ್ರೇಮವನ್ನು ಆಶಿಸುತ್ತಿದೆ!' 
     ಹೆಣ್ಣಿನ ಸುಂದರ ನಗುವನ್ನು ಕವಿಯು ಇಲ್ಲಿ ಅವಳ ಅಧರವೆಂಬ ದಳದ ಮೇಲಿರುವ ಮುತ್ತಿನ ಚೂರ್ಣಕ್ಕೆ ಹೋಲಿಸುತ್ತಾನೆ! ಇಂಥ ಅದ್ಭುತ ನಗುವನ್ನು ಆಸ್ವಾದಿಸಿದ ಪ್ರೇಮಿಗೆ ಮನಸ್ಸು ಅರಳಿದ ಹೂವಿನಂತೆ ತುಂಬಿ ಬಂದಿದೆ! ಅವಳ ನಗುವೇ ಅಷ್ಟು ಆಪ್ಯಾಯಮಾನವಾಗಿರುವಾಗ ಇನ್ನು ಅವಳ ಪೂರ್ಣ ಪ್ರೇಮ ಹೇಗಿರಬೇಡ? ಅಂತೆಯೇ ಪ್ರೇಮಿಯು ಅವಳ ಪೂರ್ಣ ಪ್ರೇಮವನ್ನು ಈಗ ಅಪೇಕ್ಷಿಸುತ್ತಿದ್ದಾನೆ! ಎಂಥ ಜಡ ವ್ಯಕ್ತಿಯಲ್ಲೂ ಪ್ರೇಮದ ತರಂಗಗಳನ್ನು ಎಬ್ಬಿಸಬಲ್ಲದು ಹೆಣ್ಣಿನ ನಗು!

ಬುಧವಾರ, ಮೇ 6, 2026

ಐತಿಹಾಸಿಕ ಸ್ವಾರಸ್ಯಗಳು - ಕಾಲಾಶೋಕ ಯಾರು?

ಕಾಲಾಶೋಕನ ಹೆಸರು ಕೇಳಿರುವಿರಾ? ಚಂಡಾಶೋಕ ಗೊತ್ತು, ಧರ್ಮಾಶೋಕ ಗೊತ್ತು, ವೀತಶೋಕ ಗೊತ್ತು......ಈ ಕಾಲಾಶೋಕ ಯಾರು?! ಚಂಡಾಶೋಕ ಎಂದರೆ ಸಮ್ರಾಟ್ ಅಶೋಕನು ಬಹಳ ಆವೇಶದ ಸ್ವಭಾವದವನಾಗಿದ್ದಾಗ ಅವನನ್ನು ಕರೆಯುತ್ತಿದ್ದ ಹೆಸರು. ಧರ್ಮಾಶೋಕ ಎಂಬುದು ಅವನು ಬೌದ್ಧ ಧರ್ಮದ ಅನುಯಾಯಿಯಾದಾಗ ಧರ್ಮವನ್ನು ಪಾಲಿಸುತ್ತಿದ್ದುದರಿಂದ ಅವನನ್ನು ಕರೆಯುತ್ತಿದ್ದ ಹೆಸರು. ವೀತಶೋಕ ಅವನ ಸಹೋದರರಲ್ಲಿ ಉಳಿದುಕೊಂಡ ಏಕೈಕನು. ಹಾಗಿದ್ದರೆ ಕಾಲಾಶೋಕ ಯಾರು?
     ಕಾಲಾಶೋಕ, ಅಶೋಕನಿಗೆ ಸಂಬಂಧಿಸಿರದ ಬೇರೊಬ್ಬ ರಾಜ. ಅಶೋಕನಿಗಿಂತಲೂ ಮುಂಚಿನವನು. ಅವನು ಶಿಶುನಾಗ ವಂಶದ ಕೊನೆಯ ರಾಜ.‌ ಕಾಲಾಶೋಕ ಎಂದರೆ ಕಪ್ಪು ಅಶೋಕ ಎಂದು ಅರ್ಥ ಬರುತ್ತದೆ. ಅವನಿಗೆ ಕಾಕವರ್ಣ ಎಂದೂ ಹೆಸರಿತ್ತು. ಪ್ರಾಯಶಃ ಅವನು ಕಪ್ಪಗಿದ್ದುದರಿಂದ ಈ ಹೆಸರನ್ನಿಟ್ಟಿದ್ದರೋ ಏನೋ! 
     ಪ್ರಾಚೀನ ಭಾರತದ ರಾಜ್ಯಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು. ಬೌದ್ಧ ಗ್ರಂಥಗಳು ಅಂಥ ಹದಿನಾರು ಮಹಾಜನಪದಗಳನ್ನು ಹೆಸರಿಸುತ್ತವೆ. ಗಾಂಧಾರ, ಮತ್ಸ್ಯ, ಕೋಸಲ, ಶೂರಸೇನ, ಕಾಂಭೋಜ, ವತ್ಸ, ಕುರು, ಪಾಂಚಾಲ, ಕಾಶಿ, ಅವಂತಿ, ಮಲ್ಲ, ವೃಜ್ಜಿ, ಅಂಗ, ಮಗಧ, ಚೇದಿ, ಅಶ್ಮಕ, ಇವೇ ಆ ಹದಿನಾಲ್ಕು ಮಹಾಜನಪದಗಳು. ಇವಲ್ಲದೆ ಇನ್ನೂ ಅನೇಕ ರಾಜ್ಯಗಳಿದ್ದವು. ಇವುಗಳಲ್ಲಿ ಮಗಧವು ದೊಡ್ಡ ಸಾಮ್ರಾಜ್ಯವಾಗಿ ಬೆಳೆಯಿತು. ಮಗಧ ದೇಶದಲ್ಲಿ ಹರ್ಯಂಕ ಸಾಮ್ರಾಜ್ಯ ಅಳುತ್ತಿತ್ತು. ಅದರ ಪ್ರಮುಖ ರಾಜ ಬಿಂಬಿಸಾರ. ಅವನು ಬುದ್ಧನ ಸಮಕಾಲೀನನಾಗಿದ್ದನು. ಅವನು ಒಳ್ಳೆಯ ರಾಜನಾಗಿದ್ದರೂ ದುರದೃಷ್ಟವಶಾತ್, ಅವನ ಮಗ ಅಜಾತಶತ್ರು ಅವನನ್ನು ಕೊಂದುಬಿಟ್ಟನು! ಅದಕ್ಕೆ ಕಾರಣ, ಬುದ್ಧನ ದಾಯಾದಿ ದೇವದತ್ತನ ದುರ್ಬೋಧೆ ಎನ್ನುತ್ತವೆ ಬೌದ್ಧ ಗ್ರಂಥಗಳು. ಆದರೆ ಜೈನ ಗ್ರಂಥಗಳ ಪ್ರಕಾರ, ಅಜಾತಶತ್ರು ಅವನನ್ನು ಬಂಧಿಸಿದ್ದು, ಕೊನೆಗೆ ತನ್ನ ತಾಯಿ ಚೆಲ್ಲನಳಿಂದ ತನ್ನ ತಪ್ಪನ್ನರಿತು, ತಂದೆಯ ಸರಪಣಿಗಳನ್ನು ಕತ್ತರಿಸಿ ಅವನನ್ನು ಬಂಧಮುಕ್ತನನ್ನಾಗಿಸಲು ಕಬ್ಬಿಣದ ದೊಣ್ಣೆ ಹಿಡಿದು ಕಾರಾಗೃಹಕ್ಕೆ ಅವನು ಓಡಿ ಬರುವಾಗ, ಅದನ್ನು ನೋಡಿ ತಪ್ಪು ತಿಳಿದು ಬಿಂಬಿಸಾರ ತಾನೇ ಆತ್ಮಹತ್ಯೆ ಮಾಡಿಕೊಂಡ! ಒಟ್ಟಿನಲ್ಲಿ ಮಗನ ದೆಸೆಯಿಂದ ತಂದೆ ಮೃತ್ಯುವಶನಾದ! 
      ಅಜಾತಶತ್ರುವಿಗೆ ಉದಯಭದ್ರ ಅಥವಾ ಉದಾಯಿನ್ ಎಂಬ ಪುತ್ರನಿದ್ದ. ಇವನೇ ಪಾಟಲಿಪುತ್ರ ನಗರವನ್ನು ನಿರ್ಮಿಸಿ ತನ್ನ ರಾಜಧಾನಿಯನ್ನು ರಾಜಗೃಹದಿಂದ ಅಲ್ಲಿಗೆ ವರ್ಗಾಯಿಸಿದ. ದುರದೃಷ್ಟವಶಾತ್ ಇವನೂ ತನ್ನ ತಂದೆ ಅಜಾತಶತ್ರುವನ್ನು ಕೊಂದ! ಅನಂತರ ಇವನ ಮಗ ಅನುರುದ್ಧ, ಅವನು ಮಗ ಮುಂಡ, ಮತ್ತು ಅವನ ಮಗ ನಾಗದಾಸಕ, ಮಗ ಅಪ್ಪನನ್ನು ಕೊಲ್ಲುವ ಅದೇ ದಾರಿಯಲ್ಲಿ ನಡೆದರು! ಇದರಿಂದ ಪ್ರಜೆಗಳು ರೋಸಿಹೋಗಿ ನಾಗದಾಸಕನನ್ನು ರಾಜ್ಯದಿಂದಲೇ ಓಡಿಸಿ ಒಬ್ಬ ಅಮಾತ್ಯನನ್ನು ಪಟ್ಟಕ್ಕೇರಿಸಿದರು. ಅವನೇ ಶಿಶುನಾಗ.‌ ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ಗೆದ್ದು ವಶಪಡಿಸಿಕೊಂಡನು.‌ಈ ಶಿಶುನಾಗನ ಮಗನೇ ಕಾಲಾಶೋಕ. ಈ ಕಾಲಾಶೋಕ ಅಥವಾ ಕಾಕವರ್ಣ. ಕಾಲಾಶೋಕ, ತನ್ನ ರಾಜಧಾನಿಯನ್ನು ಗಿರಿವ್ರಜದಿಂದ ( ರಾಜಗೃಹ) ಪಾಟಲಿಪುತ್ರಕ್ಕೆ ಬದಲಿಸಿದ. ಆದರೆ ಆಗಾಗ ಅವನು ತನಗೆ ಪ್ರಿಯವಾಗಿದ್ದ ವೈಶಾಲಿಗೆ ಹೋಗುತ್ತಿದ್ದ.
 ಕಾಲಾಶೋಕ ನಮಗೆ ಏಕೆ ಮುಖ್ಯನಾಗುವನೆಂದರೆ, ಇವನ ಆಳ್ವಿಕೆಯ ಸಮಯದಲ್ಲೇ ಎರಡನೇ ಬೌದ್ಧ ಸಂಗೀತಿ ವೈಶಾಲಿಯಲ್ಲಿ ನಡೆಯಿತು. ಆಗ ಬುದ್ಧನು ಪರಿನಿರ್ವಾಣ ಹೊಂದಿ ನೂರು ವರ್ಷಗಳಾಗಿದ್ದವು. ವೃಜ್ಜಿ ಗಣದ ಕೆಲವು ಬೌದ್ಧ ಸಂನ್ಯಾಸಿಗಳು ಸಂಘದ ನಿಯಮಗಳನ್ನು ಸಡಿಲಗೊಳಿಸಬೇಕೆಂದು ತಗಾದೆ ತೆಗೆದಿದ್ದರು. ಅದನ್ನು ಚರ್ಚಿಸಲೆಂದೇ ಈ ಎರಡನೆಯ ಬೌದ್ಧ ಸಂಗೀತಿಯನ್ನು ನಡೆಸಲಾಯಿತು. ನಾಲ್ಕು ಬೌದ್ಧ ಸಂಗೀತಿಗಳು ನಡೆದವೆಂದು ಇಲ್ಲಿ ಸ್ಮರಿಸಬಹುದು. ಮೊದಲನೆಯದು ಅಜಾತಶತ್ರುವಿನ ಆಳ್ವಿಕೆಯಲ್ಲಿ ರಾಜಗೃಹದಲ್ಲಿ ನಡೆಯಿತು. ಎರಡನೆಯದು ಈಗ ಹೇಳಲಾಯಿತು. ಮೂರನೆಯದು ಸಮ್ರಾಟ್ ಅಶೋಕನ ಆಳ್ವಿಕೆಯಲ್ಲಿ ಪಾಟಲಿಪುತ್ರದಲ್ಲಿ ನಡೆದರೆ, ನಾಲ್ಕನೆಯದು ಕಾಶ್ಮೀರದಲ್ಲಿ ಕನಿಷ್ಕ ರಾಜನ ಆಳ್ವಿಕೆಯಲ್ಲಿ ನಡೆಯಿತು.‌
     ಇಂಥ ಕಾಲಾಶೋಕ ದುರಂತ ಅಂತ್ಯವನ್ನು ಕಂಡನು! ನೋಡಲು ಸುಂದರನಾಗಿ, ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಒಬ್ಬ ಪುರುಷ, ಕಾಲಾಶೋಕನ ರಾಣಿಯನ್ನು ಒಮ್ಮೆ ಆಕರ್ಷಿಸಿದ! ಇವನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ! ಅವನು ರಾಣಿಯ ಪ್ರಿಯಕರನಾಗಿ ಅವಳ ಬೆಂಬಲದಿಂದ ಅರಮನೆಗೆ ಬಂದು ರಾಜನಿಗೆ ಹತ್ತಿರವಾದ. ರಾಜನ ವಿಶ್ವಾಸಗಳಿಸಿ, ಒಂದು ದಿನ, ಅವನನ್ನು ಪಾಟಲಿಪುತ್ರದ ಬಳಿ, ಅವನ ಕುತ್ತಿಗೆಯನ್ನು ಕಠಾರಿಯಿಂದ ಸೀಳಿ ಕೊಂದುಬಿಟ್ಟ! ಅನಂತರ, ಅವನ ಹತ್ತು ಪುತ್ರರಿಗೆ ಮೇಲ್ವಿಚಾರಕನಂತೆ ನಟಿಸುತ್ತಾ ಅವರೆಲ್ಲರನ್ನೂ ನಿಧಾನವಾಗಿ ಕೊಂದುಬಿಟ್ಟ! ರಾಣಿಯನ್ನು ವರಿಸಿ ರಾಜ್ಯವನ್ನು ವಶಪಡಿಸಿಕೊಂಡ! ಇವನು ಬೇರಾರೂ ಅಲ್ಲ! ಮಹಾಪದ್ಮನಂದ! ಇವನಿಗೆ ಎಂಟು ಪುತ್ರರು ಜನಿಸಿದರು! ಇವರೆಲ್ಲರೂ ಸೇರಿ ನವನಂದರೆನಿಸಿದರು ಹಾಗೂ ಇವರಿಂದ ನಂದ ವಂಶ ಆರಂಭವಾಯಿತು! ಇವರಲ್ಲಿ ಕೊನೆಯವನೇ ಧನನಂದ! ದೊಡ್ಡ ಸೈನ್ಯವನ್ನು ಇಟ್ಟುಕೊಂಡಿದ್ದ ಈ ನಂದರು ದುರಾಸೆಯ ಪ್ರವೃತ್ತಿಯುಳ್ಳವರಾಗಿದ್ದು ಪ್ರಜೆಗಳನ್ನು ಶೋಷಣೆ ಮಾಡಿದರು! ಇದರಿಂದ ಪ್ರಜೆಗಳು ಇವರನ್ನು ಇಷ್ಟಪಡಲಿಲ್ಲ. ಮುಂದೆ, ಆಚಾರ್ಯ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಸಹಾಯದಿಂದ ಇವರ ದುರಾಡಳಿತವನ್ನು ಕೊನೆಗೊಳಿಸಿ, ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಸ್ಥಾಪಿಸುವುದರ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಆರಂಭಿಸಿದನು. ಅದು ಇನ್ನೊಂದು ರೋಚಕ ಕಥೆ.
    ಇದು ಬೌದ್ಧ,ಜೈನ ಗ್ರಂಥಗಳು ಹಾಗೂ ನಮ್ಮ ಪುರಾಣಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿಂದ ಕಂಡುಬರುತ್ತದೆ. ನಮ್ಮ ಪುರಾಣಗಳಲ್ಲಿ ಶಿಶುನಾಗ ಮತ್ತು ಕಾಕವರ್ಣ ( ಕಾಲಾಶೋಕ) ರನ್ನು ಬಿಂಬಿಸಾರ, ಅಜಾತಶತ್ರುಗಳಿಗೂ ಮೊದಲಿನವರೆಂದು ಹೇಳಲಾಗಿದ್ದು ಈ ಪಟ್ಟಿಯಲ್ಲಿ ಕೊನೆಯದಾಗಿ ನಂದಿವರ್ಧನ ಮತ್ತು ಮಹಾನಂದಿ ಎಂಬ ರಾಜರು ಬರುತ್ತಾರೆ. ಮಹಾನಂದಿಯು ಒಬ್ಬ ಶೂದ್ರ ಸ್ತ್ರೀಯಿಂದ ಪಡೆದ ಪುತ್ರನೇ ಮಹಾಪದ್ಮಪತಿ ಅಥವಾ ಮಹಾಪದ್ಮನಂದ. ಅವನು ಎಲ್ಲಾ ಕ್ಷತ್ರಿಯರನ್ನೂ ನಾಶಮಾಡಿ ನಂದವಂಶವನ್ನು ಆರಂಭಿಸಿದ. ಜೈನ ಗ್ರಂಥ ಪರಿಶಿಷ್ಟ ಪರ್ವದ ಪ್ರಕಾರ, ಮಹಾಪದ್ಮನಂದನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ. ಕುರ್ಟಿಯಸ್ ಎಂಬ ಗ್ರೀಕ್ ಇತಿಹಾಸಕಾರನೂ ಅವನು ಒಬ್ಬ ಕ್ಷೌರಿಕ ಎಂದು ಹೇಳುತ್ತಾ ಮೇಲಿನ ಕಥೆ ಕೊಡುತ್ತಾನೆ. ಬೌದ್ಧ ಗ್ರಂಥ ಮಹಾವಂಶದ ಪ್ರಕಾರ, ಅವನು ಉಗ್ರಸೇನನೆಂಬ ಗಡಿಯಲ್ಲಿನ ಕಳ್ಳರ ದೊರೆಯಾಗಿದ್ದು ರಾಜ್ಯಗಳ ಮೇಲೆ ಆಕ್ರಮಣ ಮಾಡುತ್ತಾ ಅವುಗಳನ್ನು ಕಿತ್ತುಕೊಳ್ಳುತ್ತಿದ್ದ. ಹಾಗೆಯೇ ಮಗಧವನ್ನೂ ಆಕ್ರಮಿಸಿ ವಶಪಡಿಸಿಕೊಂಡ. ಇತರ ಎಂಟು ನಂದರು ಅವನ ಸಹೋದರರು. ‌ಹೀಗೆ ನವನಂದರ ಬಗ್ಗೆ ಪುರಾಣಗಳು, ಬೌದ್ಧ ಮತ್ತು ಜೈನ ಗ್ರಂಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಬಾಣಭಟ್ಟನ ಹರ್ಷಚರಿತೆಯಲ್ಲಿ ಕಾಲಾಶೋಕ ಅಥವಾ ಕಾಕವರ್ಣನು ಕಠಾರಿಯ ಇರಿತದಿಂದ ಸತ್ತ ಉಲ್ಲೇಖವಿದೆ. ಅವಂತಿಯ ಪ್ರದ್ಯೋತನು ಬಿಂಬಿಸಾರನ ಸಮಕಾಲೀನನಾಗಿದ್ದು ಪ್ರದ್ಯೋತರೆಂಬ ವಂಶಾವಳಿಯನ್ನು ಆರಂಭಿಸಿದ.‌ ಇವನಿಗೂ ಬಿಂಬಿಸಾರನಿಗೂ ವೈರತ್ವವಿತ್ತು. ಅಂದರೆ ಮಗಧಕ್ಕೂ ಅವಂತಿಗೂ ವೈರತ್ವವಿತ್ತು. ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ವಶಪಡಿಸಿಕೊಂಡನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಅದೇ ಪುರಾಣಗಳ ಪ್ರಕಾರ ಅವನು ಬಿಂಬಿಸಾರನಿಗೂ ಪೂರ್ವದಲ್ಲಿದ್ದಿದ್ದರೆ ಹಾಗೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ, ಅವನು ಮತ್ತು ಅವನ ಪುತ್ರ ಕಾಲಾಶೋಕ, ಬಿಂಬಿಸಾರ, ಅಜಾತಶತ್ರುಗಳ ನಂತರ ಇರುವ ಬೌದ್ಧ ಗ್ರಂಥಗಳ ಪಟ್ಟಿಯೇ ಹೆಚ್ಚು ಸಮರ್ಪಕ ಎಂದು ಇತಿಹಾಸಕಾರರಾದ ಆರ್.ಸಿ.ಮಜುಂದಾರರು ಅಭಿಪ್ರಾಯಪಡುತ್ತಾರೆ.
      ಹೀಗೆ ಕಾಲಾಶೋಕ ನಮಗೆ ಅಷ್ಟು ಪರಿಚಿತವಲ್ಲದ ಹೆಸರು. ಅವನ ಹೆಂಡತಿಯ ಮೋಸದಿಂದ ಅವಳ ಪ್ರಿಯಕರ ಮಹಾಪದ್ಮನಂದನಿಂದ ಕೊಲ್ಲಲ್ಪಟ್ಟ ಅವನಿಂದ ಶಿಶುನಾಗ ವಂಶ ಕೊನೆಯಾಗಿ ನಂದವಂಶ ಆರಂಭವಾಯಿತು. 

ಸೋಮವಾರ, ಮೇ 4, 2026

ಸುಂದರೀಶತಕ -೩೩

ಸಂಸ್ಕೃತ ಮೂಲ 

ಅಂಗಂ ಕೋಮಲಮಂಗಾದಧರೋsಧರತೋsಪಿ ಚಂದ್ರಮುಖಿ ವಚನಮ್ /
ವಚನಾದಪಿ ಸ್ಮಿತಂ ತೇ ತತ್ಕಥಮಂತರ್ಭಿನತ್ತಿ ಮಮ //

ಕನ್ನಡ ಅನುವಾದ 

     ' ಎಲೈ ಚಂದ್ರಮುಖಿ! ನಿನ್ನ ದೇಹವು ಬಹಳ ಕೋಮಲವಾಗಿದೆ! ನಿನ್ನ ದೇಹಕ್ಕಿಂತಲೂ ನಿನ್ನ ಅಧರ ಬಹಳ ಕೋಮಲವಾಗಿದೆ! ಆ ಅಧರಕ್ಕಿಂತಲೂ ನಿನ್ನ ಮಾತು ಕೋಮಲವಾಗಿದೆ! ಇಷ್ಟು ಕೋಮಲವಾಗಿದ್ದರೂ ನಿನ್ನ ನಗುವು ಏಕೆ ನನ್ನ ಹೃದಯವನ್ನು ಸೀಳುತ್ತಿದೆ?!' 
    ಅತ್ಯಂತ ಕೋಮಲವಾದ ಸುಂದರಿಯ ನಗುವು ಪ್ರೇಮಿಯ ಹೃದಯಕ್ಕೆ ಹಿತವನ್ನುಂಟುಮಾಡಬೇಕು. ಆದರೆ ಅದು ಪ್ರೇಮಿಗೆ ಸಿಗದೇ ದೂರವಾಗಿದ್ದಾಗ ವಿರಹವೇದನೆಯುಂಟುಮಾಡಿ ಹೃದಯವನ್ನು ಸೀಳುವಂತಾಗುತ್ತದೆ! ಇಷ್ಟು ಕೋಮಲವಾದ ಸುಂದರಿಯ ನಗುವು ಹೇಗೆ ನನ್ನ ಹೃದಯವನ್ನು ಸೀಳುತ್ತಿದೆ ಎಂದು ಪ್ರೇಮಿಯ ಮೂಲಕ ಹೇಳಿಸುತ್ತಾ ಕವಿಯು ಸಂದೇಹಾಲಂಕಾರದ ಮೂಲಕ ಸುಂದರಿಯ ನಗುವನ್ನು ವರ್ಣಿಸುತ್ತಾನೆ 

ಭಾನುವಾರ, ಮೇ 3, 2026

ಸುಂದರೀಶತಕ -೩೨

ಸಂಸ್ಕೃತ ಮೂಲ 

ಸುಂದರಿ ತವ ಸ್ಮಿತೇನ ಸ್ಫುರಿತಾಧರಪಲ್ಲವಾಂಕಮಿಲಿತೇನ /
ಮಕರಧ್ವಜನೃಪಹಸ್ತೇ ವದ ಕಸ್ಯ ಮನೋ ನ ವಿಕ್ರೀತಮ್ //

ಕನ್ನಡ ಅನುವಾದ 

     ಎಲೈ ಸುಂದರಿ! ಅದುರುತ್ತಿರುವ ನಿನ್ನ ಪಲ್ಲವಾಧರದೊಂದಿಗೆ ಮಿಳಿತವಾಗಿರುವ ನಿನ್ನ ನಗುವಿನಿಂದ ಯಾರ ಮನಸ್ಸು ತಾನೇ ಕಾಮದೇವ ಮಹಾರಾಜನ ಹಸ್ತಕ್ಕೆ ವಿಕ್ರೀತವಾಗುವುದಿಲ್ಲ ಹೇಳು!' 
      ಸುಂದರಿಯ ಸುಂದರ ನಗುವಿನ ಮೂಲಕ ಮಹಾರಾಜ ಕಾಮದೇವನು ಯುವಜನರ ಮನಸ್ಸನ್ನು ಖರೀದಿಸುತ್ತಿದ್ದಾನೆ! ಇಂಥ ನಗುವಿನ ಮೂಲಕ ಯಾರ ಮನಸ್ಸು ತಾನೇ ವಿಕ್ರೀತವಾಗುವುದಿಲ್ಲ ಎಂದು ಕೇಳುತ್ತಾ ಕವಿಯು ಸುಂದರಿಯ ನಗುವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೧

ಸಂಸ್ಕೃತ ಮೂಲ 

ಜಯತಿ ಸ್ಮಿತಪ್ರಕಾರ: ಸ್ಫುರದಧರೋಪಾಂತವಿಶ್ರಮಸ್ತಸ್ಯಾ: /
ಕುಸುಮಾಂಜಲಿರಿವ ದತ್ತೋ ನವೇನ ವಯಸಾ ರತೀಶಾಯ //

ಕನ್ನಡ ಅನುವಾದ 

    ' ಈ ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು, ಇವಳ ನವಯೌವನವು ರತಿಪತಿಯಾದ ಕಾಮದೇವನಿಗೆ ನೀಡಿದ ಪುಷ್ಪಾಂಜಲಿಯಂತಿದ್ದು ವಿಜಯಶಾಲಿಯಾಗುತ್ತದೆ!' 
      ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು ಒಂದು ಪುಷ್ಪಾಂಜಲಿ, ಅಂದರೆ ಹೂವಿನ ಅರ್ಪಣೆಯಂತಿದೆ ಎನ್ನುತ್ತಾನೆ ಕವಿ. ಆ ಹೂವಿನ ಅರ್ಪಣೆಯನ್ನು ಯಾರು ಯಾರಿಗೆ ಮಾಡುತ್ತಿದ್ದಾರೆ? ಅವಳ ನವಯೌವನವೇ ರತಿಪತಿಯಾದ ಕಾಮದೇವನಿಗೆ ಅರ್ಪಣೆ ಮಾಡುತ್ತಿದೆ! ಇಂಥ ನಗು ವಿಜಯಶಾಲಿಯಾಗುತ್ತದೆ ಎನ್ನುತ್ತಾ, ಕವಿಯು ಸುಂದರಿಯ ಸುಂದರ ನಗು ಹಾಗೂ ನವಯೌವನವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೦

ಸಂಸ್ಕೃತ ಮೂಲ 

ಕುಸುಮಶರನೃಪತಿಶಾಸನಮಭಿನವಸೌಂದರ್ಯಸಾರಸೌಭಾಗ್ಯಮ್  /
ಯುವಜನಮನೋವಿನೋದೋ ಜಯತಿ ಪ್ರಥಮಂ ವಯಸ್ತಸ್ಯಾ:  //

ಕನ್ನಡ ಅನುವಾದ 

      ಕಾಮದೇವ ಮಹಾರಾಜನ ಶಾಸನವು ಈ ಸುಂದರಿಯ ನವಯೌವನ ಸೌಂದರ್ಯಸಾರಸೌಭಾಗ್ಯ! ಯುವಜನರ ಮನಸ್ಸಿಗೆ ವಿನೋದವಾಗಿರುವ ಇವಳ ಈ ಪ್ರಥಮ ವಯಸ್ಸು ಜಯಶಾಲಿಯಾಗುತ್ತದೆ! ' 
      ಸುಂದರಿಯಲ್ಲಿ ಬಂದಿರುವ ನವಯೌವನದ ಸೌಂದರ್ಯವನ್ನು ಕಾಮದೇವನೆಂಬ ರಾಜನ ಶಾಸನಕ್ಕೆ ಹೋಲಿಸುತ್ತಾನೆ ಕವಿ.‌ ಈ ಶಾಸನವೆಂಬ ಸೌಂದರ್ಯ, ಯುವಜನರ ಮನಸ್ಸಿಗೆ ವಿನೋದವುಂಟುಮಾಡುತ್ತಿದೆ! ಇವಳ‌ ಸೌಂದರ್ಯವನ್ನು ನೋಡಿ ಅವರು ಸಂತೋಷಪಡುತ್ತಿದ್ದಾರೆ! ಇಂಥ ಸೌಂದರ್ಯ, ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ.