ಭಾನುವಾರ, ಏಪ್ರಿಲ್ 5, 2026

ಪೌರಾಣಿಕ ಸ್ವಾರಸ್ಯಗಳು-- ಭಗವಂತನೊಡನೆ ಹೋರಾಡಿದ ಭಕ್ತ

ಪ್ರಹ್ಲಾದನ ಹೆಸರು ಕೇಳಿದ ಕೂಡಲೇ ನಮಗೆ ಆ ಬಾಲ ಭಾಗವತೋತ್ತಮನ ಮುಖ ಮನಸ್ಸಿನಲ್ಲಿ ಮೂಡುತ್ತದೆ! ತಂದೆ ಹಿರಣ್ಯಕಶಿಪು ಹರಿದ್ವೇಷಿಯಾಗಿದ್ದರೆ ಮಗ ಪ್ರಹ್ಲಾದ ಮಹಾನ್ ಹರಿಭಕ್ತ! ಇದನ್ನು ಸಹಿಸದೆ, ತಂದೆ ಹಿರಣ್ಯಕಶಿಪುವು ಅವನನ್ನು ಕೊಲ್ಲಿಸಲು ವಿಷಪ್ರಾಶನವೂ ಸೇರಿದಂತೆ ಹಲವಾರು ಪ್ರಯತ್ನಗಳನ್ನು ಮಾಡಿದರೂ ಭಗವಂತನ ಮೇಲಿನ ದೃಢ ಭಕ್ತಿಯಿಂದ ಅವನ ಕೃಪೆಗೊಳಗಾಗಿ ಪ್ರಹ್ಲಾದನು ಆ ಎಲ್ಲ ದಂಡನೆಗಳಿಂದಲೂ ಪಾರಾಗುತ್ತಾನೆ. ಕೊನೆಗೆ ಬಾಲಭಕ್ತನಿಗೊಲಿದು, ಹರಿಯು ಎಲ್ಲಿರುವನೆಂಬ ತಂದೆಯ ಪ್ರಶ್ನೆಗೆ, ಅವನು ಎಲ್ಲೆಲ್ಲೂ ಇರುವನೆಂಬ ಆ ಬಾಲಕನ ದೃಢ ವಿಶ್ವಾಸವನ್ನು ನಿರೂಪಿಸಲು, ತಂದೆಯು ಒಂದು ಕಂಬದಲ್ಲಿರುವನೇ ಎಂದು ಅದನ್ನು ಒಡೆದಾಗ, ಆ ಕಂಬದಲ್ಲೇ ನರಸಿಂಹಾವತಾರಿಯಾಗಿ ಬಂದು ಹರಿಯು ಹಿರಣ್ಯಕಶಿಪುವನ್ನು ಸಂಹರಿಸಿ ಪ್ರಹ್ಲಾದನಿಗೆ ದಾನವರಾಜ್ಯದ ಪಟ್ಟಗಟ್ಟಿ ಹರಸುತ್ತಾನೆ! ಇದು ಎಲ್ಲರಿಗೂ ಗೊತ್ತಿರುವ ಅತ್ಯಂತ ಜನಪ್ರಿಯ ಕಥೆ. ಇಂಥ ಪ್ರಹ್ಲಾದನು, ತನ್ನ ಆರಾಧ್ಯ ದೈವ ಶ್ರೀಹರಿಯೊಂದಿಗೇ ಹೋರಾಡಿದನೆಂದರೆ ಆಶ್ಚರ್ಯವಾಗುವುದಲ್ಲವೇ? ಆದರೆ ಅದು ನಿಜ! ಪ್ರಹ್ಲಾದನು ಒಮ್ಮೆ ತಿಳಿಯದೆಯೇ ಹರಿಯೊಂದಿಗೇ ಸೆಣೆಸಿದ! ತಂದೆ -ಮಗ, ಅಣ್ಣ -ತಮ್ಮ, ಭಕ್ತ -ಭಗವಂತ, ಇಂಥವರ ನಡುವೆ ತಿಳಿದೋ ತಿಳಿಯದೆಯೋ ನಡೆಯುವ ಸ್ನೇಹ ಕಲಹಗಳು ಸ್ವಾರಸ್ಯಕರವಾಗಿರುತ್ತವೆ! ಇವು ಚಲನಚಿತ್ರ ಕಥೆಗಳಲ್ಲಷ್ಟೇ ಅಲ್ಲದೇ ಪುರಾಣ ಕಥೆಗಳಲ್ಲೂ ಬಹಳಷ್ಟಿವೆ! ಭಗವಂತನೂ ತನ್ನ ಭಕ್ತರ ದರ್ಪಾಹಂಕಾರಗಳನ್ನು ಮಣಿಸಲು ಅವರೊಂದಿಗೆ ಹೋರಾಡಲು ಬಯಸುವನೋ ಏನೋ! ಪ್ರಹ್ಲಾದನ ಈ ವಿಭಿನ್ನ ಕಥೆ ವಾಮನ ಪುರಾಣ ಮತ್ತು ದೇವೀಭಾಗವತ ಪುರಾಣಗಳಲ್ಲಿ ಬಂದಿದೆ. ಆ ಕಥೆಯನ್ನೀಗ ನೋಡೋಣ.
     ಒಮ್ಮೆ, ಚ್ಯವನ ಮಹರ್ಷಿಗಳು ನಕುಲೀಶ್ವರವೆಂಬ ತೀರ್ಥಕ್ಷೇತ್ರದಲ್ಲಿ , ನರ್ಮದಾ ನದಿಯಲ್ಲಿ ಸ್ನಾನ ಮಾಡಲು ಹೋದರು. ಅಲ್ಲಿ, ಶಿವನ ದರ್ಶನ ಮಾಡಿ ನದಿಯಲ್ಲಿ ಸ್ನಾನ ಮಾಡಲು ಕಾಲಿಡುತ್ತಿದ್ದಂತೆ, ಕೇಕರಲೋಹಿತವೆಂಬ ಸರ್ಪವು ಅವರ ಕಾಲನ್ನು ಹಿಡಿಯಿತು! ಆಗ ಚ್ಯವನರು ಶ್ರೀಹರಿಯನ್ನು ಸ್ಮರಿಸಿದರು.‌ ಅದರಿಂದ ಆ ಸರ್ಪವು ವಿಷರಹಿತವಾಯಿತು! ಆದರೆ ಅದು ಅವರನ್ನು ರಸಾತಳ ಲೋಕಕ್ಕೆ ಸೆಳೆದೊಯ್ಯಿತು! ಅನಂತರ ಅದು ಅವರನ್ನು ಬಿಟ್ಟು ಹೊರಟುಹೋಯಿತು! 
      ಭಾರ್ಗವೋತ್ತಮರಾದ ಚ್ಯವನರು ರಸಾತಳದಲ್ಲಿ ಸಂಚರಿಸುತ್ತಿದ್ದಂತೆ ನಾಗಸ್ತ್ರೀಯರು ಅವರನ್ನು ಸ್ವಾಗತಿಸಿ ನಮಸ್ಕರಿಸಿದರು! ಅವರು ಹಾಗೆಯೇ ಹೋಗುತ್ತಾ  ದಾನವ ರಾಜ್ಯವನ್ನು ಪ್ರವೇಶಿಸಲು, ದಾನವ ಪ್ರಮುಖರಿಂದ ಸೇವಿಸಲ್ಪಡುತ್ತಿದ್ದ ದಾನವ ಚಕ್ರವರ್ತಿ ಪ್ರಹ್ಲಾದನು ಅವರನ್ನು ನೋಡಿ ಸ್ವಾಗತಿಸಿ ಆಸನವನ್ನರ್ಪಿಸಿ ಕುಶಲವನ್ನು ವಿಚಾರಿಸಿದನು. ಆಗ ಅವರು ತಾವು ಅಲ್ಲಿಗೆ ಬಂದ ಬಗೆಯನ್ನು ವಿವರಿಸಿದರು. ಅದನ್ನು ಕೇಳಿ ಪ್ರಹ್ಲಾದನು ಭೂಮಿ, ಅಂತರಿಕ್ಷ ಹಾಗೂ ರಸಾತಳಗಳಲ್ಲಿರುವ ಶ್ರೇಷ್ಠ ತೀರ್ಥಕ್ಷೇತ್ರಗಳಾವುವೆಂದು ಕೇಳಿದನು. ಅದಕ್ಕೆ ಚ್ಯವನರು,' ಭೂಮಿಯಲ್ಲಿ ನೈಮಿಷಾರಣ್ಯವೂ ಅಂತರಿಕ್ಷದಲ್ಲಿ ಪುಷ್ಕರ ಕ್ಷೇತ್ರವೂ ರಸಾತಳದಲ್ಲಿ ಚಕ್ರತೀರ್ಥವೂ ಪ್ರಸಿದ್ಧವಾಗಿವೆ!" ಎಂದು ಹೇಳಿದರು.ಇದನ್ನು ಕೇಳಿ ಪ್ರಹ್ಲಾದನಿಗೆ ನೈಮಿಷಾರಣ್ಯವನ್ನು ಸಂದರ್ಶಿಸಿ ಶ್ರೀಹರಿಯ ದರ್ಶನ ಪಡೆಯಬೇಕೆಂದು ಆಸೆಯಾಯಿತು. ಅಂತೆಯೇ ಅವನು ತನ್ನ ದೈತ್ಯ ಪರಿವಾರದೊಂದಿಗೆ ನೈಮಿಷಾರಣ್ಯಕ್ಕೆ ಹೊರಟನು. 
        ಪ್ರಹ್ಲಾದನು ನೈಮಿಷಾರಣ್ಯದಲ್ಲಿ ಪುಣ್ಯಸ್ನಾನ ಮಾಡಿ ಅನಂತರ ಬೇಟೆಗೆ ಹೋದನು. ಆಗ ಅವನು ಸರಸ್ವತೀ ನದಿಯಿಂದ ಸ್ವಲ್ಪವೇ ದೂರದಲ್ಲಿ ಒಂದು ಸಾಲವೃಕ್ಷವನ್ನು ಕಂಡನು. ವಿಶೇಷವೆಂದರೆ ಆ ಸಾಲವೃಕ್ಷದ ಕಾಂಡ ಮತ್ತು ರೆಂಬೆ ಕೊಂಬೆಗಳು ಬಾಣಗಳಿಂದ ತುಂಬಿದ್ದವು! ಕೆಲವು ಬಾಣಗಳು ಪರಸ್ಪರ ಅಂಟಿಕೊಂಡು ಸರ್ಪಗಳಂತೆ ಸುರುಳಿ ಸುತ್ತಿಕೊಂಡಿದ್ದವು! ಇದನ್ನು ನೋಡಿ ಕೋಪಗೊಂಡು ಪ್ರಹ್ಲಾದನು ಮುಂದೆ ಬಂದಾಗ ಇಬ್ಬರು ತಪಸ್ವಿಗಳು ಜಟೆಗಟ್ಟಿದ ಕೇಶದಿಂದ ಕೂಡಿದ್ದು ಮೃಗಚರ್ಮ ಧರಿಸಿ ತಪಸ್ಸು ಮಾಡುತ್ತಿದ್ದುದನ್ನು ಕಂಡನು. ಅವರ ಬಳಿ ಮಂಗಳಕರ ಚಿಹ್ನೆಗಳಿಂದ ಕೂಡಿದ್ದ ಶಾರ್ಙ್ಗ ಮತ್ತು ಅಜಗವ ಎಂಬ ಎರಡು ದಿವ್ಯ ಧನುಸ್ಸುಗಳೂ ಅಕ್ಷಯ ಬತ್ತಳಿಕೆಗಳೂ ಇದ್ದವು! 
     ಅವರಿಬ್ಬರನ್ನೂ ನೋಡಿ ಪ್ರಹ್ಲಾದನು ಅವರನ್ನು ಡಾಂಭಿಕರೆಂದು ಭಾವಿಸಿ ಹೇಳಿದನು," ಧರ್ಮವನ್ನು ನಾಶಮಾಡುವ ಇಂಥ ದಂಭಾಚಾರವನ್ನೇಕೆ ಮಾಡುತ್ತಿರುವಿರಿ? ಎಲ್ಲಿಯ ಜಟೆಗಟ್ಟಿದ ತಲೆ? ಎಲ್ಲಿಯ ಈ ದೊಡ್ಡ ಆಯುಧಗಳು? ಒಂದಕ್ಕೊಂದು ಸಂಬಂಧವೇ ಇಲ್ಲ!" 
    ಆ ಇಬ್ಬರೂ ಮಹಾವಿಷ್ಣುವಿನ ಅವತಾರಗಳಾದ ನರ, ನಾರಾಯಣರಾಗಿದ್ದರು! ಧರ್ಮ ಪ್ರಜಾಪತಿ ಮತ್ತು ಅವನ ಪತ್ನಿ ರುಚಿಗೆ ಹುಟ್ಟಿ ಲೋಕಕಲ್ಯಾಣಕ್ಕಾಗಿ ತಪಶ್ಚರ್ಯೆಯಲ್ಲಿ ತೊಡಗಿದ್ದರು. ಅವರಲ್ಲಿ ನರನು ಹೇಳಿದನು," ಎಲೈ ದೈತ್ಯರಾಜ! ಈ ವಿಷಯ ನಿನಗೇಕೆ? ಸಾಮರ್ಥ್ಯವಿರುವವನು ಯಾವ ಕಾರ್ಯವನ್ನಾದರೂ ಮಾಡುತ್ತಾನೆ!" 
    ಅದಕ್ಕೆ ಪ್ರಹ್ಲಾದನು," ದೈತ್ಯರಾಜನಾದ ನಾನು ಧರ್ಮಸೇತುವೆಯ ಪ್ರವರ್ತಕನಾಗಿ ಇಲ್ಲಿರುವಾಗ ನಿಮಗೆ ಯಾವ ಸಾಮರ್ಥ್ಯವಿದೆ?" ಎಂದನು.
   ಆಗ ನರನು," ನಮಗೆ ಆ ಸಾಮರ್ಥ್ಯವಿದೆ! ಈ ನರ, ನಾರಾಯಣರನ್ನು ಯುದ್ಧದಲ್ಲಿ ಯಾರೂ ಗೆಲ್ಲಲಾರರು!" 
    ಇದರಿಂದ ಕುಪಿತಗೊಂಡ ಪ್ರಹ್ಲಾದನು ಒಂದು ಪ್ರತಿಜ್ಞೆ ಮಾಡಿದನು," ಹೇಗಾದರೂ ಈ ನರ,ನಾರಾಯಣರನ್ನು ನಾನು ಯುದ್ಧದಲ್ಲಿ ಗೆಲ್ಲುವೆ!" 
     ಹೀಗೆ ಹೇಳಿ ಅವನು ತನ್ನ ಸೈನ್ಯವನ್ನು ನೈಮಿಷಾರಣ್ಯದ ಹೊರಗೆ ನಿಲ್ಲಿಸಿ ನರ, ನಾರಾಯಣರೊಂದಿಗೆ ದ್ವಂದ್ವ ಯುದ್ಧಕ್ಕೆ ಸಿದ್ಧನಾದನು. ಅವನು ತನ್ನ ಧನುಸ್ಸನ್ನು ಬಾಗಿಸಿ ಶಿಂಜಿನಿಯನ್ನು ಎಳೆದು ದೊಡ್ಡ ಠೇಂಕಾರ ಶಬ್ದ ಮಾಡಿದನು! ಆಗ ನರನು ತನ್ನ ಅಜಗವ ಧನುಸ್ಸನ್ನು ಬಾಗಿಸಿ ಅನೇಕ ಬಾಣಗಳನ್ನು ಪ್ರಯೋಗಿಸಿದನು! ಪ್ರಹ್ಲಾದನು ಅವೆಲ್ಲವನ್ನೂ ತನ್ನ ಬಂಗಾರದ ಗರಿಗಳ ಅಸಮಾನ ಬಾಣಗಳಿಂದ ತುಂಡರಿಸಿದನು! ನರನು ಒಂದು ಬಾಣ ಬಿಟ್ಟರೆ ಪ್ರಹ್ಲಾದನು ಎರಡು ಬಾಣಗಳನ್ನು ಬಿಟ್ಟನು! ನರನು ಮೂರನ್ನು ಬಿಟ್ಟರೆ ಪ್ರಹ್ಲಾದನು ನಾಲ್ಕನ್ನು ಬಿಟ್ಟನು! ಹೀಗೆ ಯುದ್ಧ ಮಾಡುತ್ತಾ ಇಬ್ಬರೂ ಅಸಂಖ್ಯ ಬಾಣಗಳನ್ನು ಬಿಟ್ಟರು! ನರನು ಬಾಣಗಳಿಂದ ಇಡೀ ಭೂಮಿಯನ್ನೂ ದಿಕ್ಕುಗಳನ್ನೂ ಆಕಾಶವನ್ನೂ ಮುಚ್ಚಿದರೆ, ಪ್ರಹ್ಲಾದನು ತನ್ನ ಬಾಣಗಳ ರಾಶಿಯಿಂದ ಅವನ್ನು ಭೇದಿಸಿದನು! ಅನಂತರ ಪ್ರಹ್ಲಾದನು ನರನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು! ಆಗ ನರನು ಅದನ್ನು ಮಹೇಂದ್ರಾಸ್ತ್ರದಿಂದ ಭೇದಿಸಿ ವಿಫಲಗೊಳಿಸಿದನು! ಆಗ ಪ್ರಹ್ಲಾದನು ತನ್ನ ಗದೆಯನ್ನು ಎತ್ತಿಕೊಂಡು ರಥದಿಂದ ಧುಮುಕಿ ನರನ ಕಡೆಗೆ ಓಡಿ ಬರಲು, ನಾರಾಯಣನು ಶಾರ್ಙ್ಗ ಧನುಸ್ಸನ್ನು ಹಿಡಿದು ಯುದ್ಧ ಮಾಡಲು ಮುಂದೆ ಬಂದು ನರನನ್ನು ತಡೆದನು. ಪ್ರಹ್ಲಾದನು ತನ್ನ ಗದೆಯನ್ನು ಬಲವಾಗಿ ಬೀಸಿ ನಾರಾಯಣನ ತಲೆಗೆ ಬಡಿಯಲು, ನಾರಾಯಣನ ಕಂಗಳಿಂದ ಬೆಂಕಿಯ ಮಳೆಯಂತೆ ನೀರು ಸುರಿಯಿತು! ಆದರೆ ಪ್ರಹ್ಲಾದನ ಗದೆಯು ಅವನ ತಲೆಯ ಮೇಲೆ ಪರ್ವತ ಶಿಖರದ ಮೇಲೆ ಸಿಡಿಲು ಬಡಿಯುವಂತೆ ಬಡಿದು ಚೂರು ಚೂರಾಯತು! 
    ಆಗ ಪ್ರಹ್ಲಾದನು ಪುನಃ ತನ್ನ ರಥಕ್ಕೆ ಹಿಂದಿರುಗಿ ನಾರಾಯಣನೊಂದಿಗೆ ಧನುರ್ಯುದ್ಧ ಮಾಡತೊಡಗಿದನು! ಇಬ್ಬರೂ ವೀರರು ಭಯಂಕರವಾಗಿ ಹೋರಾಡುತ್ತಾ ದಿಕ್ಕುಗಳನ್ನು ಬಾಣಗಳಿಂದ ಮುಚ್ಚಿ ಪರಸ್ಪರರ ಮರ್ಮಸ್ಥಾನಗಳನ್ನು ಪೀಡಿಸಿದರು! ದೇವತೆಗಳು ಈ ಭಯಂಕರ ಯುದ್ಧವನ್ನು ವೀಕ್ಷಿಸಲು ಆಕಾಶದಲ್ಲಿ ನೆರೆದು ಇಬ್ಬರ ಮೇಲೂ ಪುಷ್ಪವೃಷ್ಟಿ ಮಾಡಿದರು! ನಾರಾಯಣನು ತನ್ನ ಬಾಣಗಳಿಂದ ಪ್ರಹ್ಲಾದನ ಬಿಲ್ಲುಗಳನ್ನು ಒಂದೊಂದಾಗಿ ಮುರಿದನು! ಆಗ ಪ್ರಹ್ಲಾದನು ಸರ್ವಲೋಹಮಯವಾದ ಪರಿಘಾಯುಧವನ್ನು ತೆಗೆದುಕೊಂಡು ತಿರುಗಿಸತೊಡಗಿದನು! ನಾರಾಯಣನು ಅದನ್ನೂ ತನ್ನ ಬಾಣದಿಂದ ತುಂಡರಿಸಿದನು! ಅನಂತರ, ಪ್ರಹ್ಲಾದನು ತೆಗೆದುಕೊಂಡ ಗದೆ, ಪಾಶ, ಶಕ್ತ್ಯಾಯುಧ, ಮೊದಲಾದ ಆಯುಧಗಳನ್ನು ನಾರಾಯಣನು ತುಂಡರಿಸಿದನು! ಆಗ ಪ್ರಹ್ಲಾದನು ಪುನಃ ಒಂದು ಬಿಲ್ಲನ್ನು ತೆಗೆದುಕೊಂಡು ಬಾಣಗಳ ರಾಶಿಯನ್ನು ಹರಡಿದನು! ಆಗ ನಾರಾಯಣನು ದೈತ್ಯರಾಜನ ಎದೆಗೆ ಒಂದು ಬಾಣದಿಂದ ಹೊಡೆಯಲು, ಅವನು ರಥದಲ್ಲೇ ಕುಸಿದನು! ಆಗ ಪ್ರಹ್ಲಾದನ ಸಾರಥಿಯು ರಥವನ್ನು ಬೇರೆಡೆಗೆ ಓಡಿಸಿದನು. ಬೇಗನೆ ಪ್ರಹ್ಲಾದನಿಗೆ ಪ್ರಜ್ಞೆ ಮರುಕಳಿಸಲು, ಅವನು ಬಲವಾದ ಬಿಲ್ಲನ್ನೆತ್ತಿಕೊಂಡು ಪುನಃ ಯುದ್ಧಕ್ಕೆ ಬಂದನು. ಆಗ ನಾರಾಯಣನು, " ಈಗ ನೀನು ಹೋಗಿ ಆಹ್ನಿಕವನ್ನು ಪೂರೈಸು! ಯುದ್ಧವನ್ನು ನಾಳೆ ಮುಂದುವರೆಸೋಣ!" ಎಂದನು.
  ಅದರಂತೆ ಪ್ರಹ್ಲಾದನು ಯುದ್ಧದಿಂದ ವಿರಮಿಸಿ ಆಹ್ನಿಕವನ್ನಾಚರಿಸಿದನು.‌ ಆ ರಾತ್ರಿ ಅವನು ನಾರಾಯಣನು ಯುದ್ಧ ಮಾಡಿದ ರೀತಿಯನ್ನು ನೆನೆಸಿಕೊಂಡು  ಈ ಡಾಂಭಿಕನನ್ನು ಯುದ್ಧದಲ್ಲಿ ಹೇಗೆ ಗೆಲ್ಲುವುದೆಂದು ಚಿಂತಿಸಿದನು. ಅನಂತರ ಮರುದಿನ ಯುದ್ಧ ಮುಂದುವರೆಯಿತು. ಹೀಗೆಯೇ ಒಂದು ಸಾವಿರ ವರ್ಷಗಳ ಕಾಲ ಯುದ್ಧ ಮುಂದುವರೆಯಿತು. ಆದರೂ ಪ್ರಹ್ಲಾದನಿಗೆ ನಾರಾಯಣನನ್ನು ಗೆಲ್ಲಲಾಗಲಿಲ್ಲ. ಆಗ ಅವನು ಮಹಾವಿಷ್ಣುವನ್ನು ಧ್ಯಾನಿಸಿದನು. ಭಗವಾನ್ ವಿಷ್ಣುವು ಪ್ರತ್ಯಕ್ಷನಾಗಲು, ಪ್ರಹ್ಲಾದನು," ಓ ದೇವದೇವೇಶ! ನಾನು ಈ ನಾರಾಯಣನನ್ನು ಯುದ್ಧದಲ್ಲಿ ಗೆಲ್ಲಲಾಗುತ್ತಿಲ್ಲ! ದಯವಿಟ್ಟು ಏಕೆಂದು ಹೇಳು!" ಎಂದು ಕೇಳಿಕೊಂಡನು.
    ಆಗ ಮಹಾವಿಷ್ಣುವು ಹೇಳಿದನು," ಪ್ರಹ್ಲಾದ! ಧರ್ಮ ಪ್ರಜಾಪತಿಯ ಪುತ್ರನಾದ ನಾರಾಯಣನು ಬ್ರಾಹ್ಮಣೋತ್ತಮನೂ ಮಹಾಜ್ಞಾನಿಯೂ ಮಹಾಪರಾಕ್ರಮಿಯೂ ಆಗಿರುವನು! ಅವನನ್ನು ದೇವತೆಗಳಾಗಲೀ ಅಸುರರಾಗಲೀ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ!" 
     " ಅವನನ್ನು ಯುದ್ಧದಲ್ಲಿ ಗೆಲ್ಲಲಾಗದಿದ್ದರೆ ಇನ್ನು ಹೇಗೆ ಗೆಲ್ಲುವುದು? ಅವನನ್ನು ಗೆಲ್ಲುವೆನೆಂದು ನಾನು ಪ್ರತಿಜ್ಞೆ ಮಾಡಿದ್ದೇನೆ! ಪ್ರತಿಜ್ಞಾಭಂಗ ಮಾಡಿ ನನ್ನಂಥವರು ಬದುಕುವುದಾದರೂ ಹೇಗೆ? ಆದ್ದರಿಂದ ನಾನು ನಿನ್ನೆದುರೇ ನನ್ನ ದೇಹವನ್ನು ಶೋಷಿಸಿಬಿಡುತ್ತೇನೆ!" " ಪ್ರಹ್ಲಾದನು ಹೇಳಿ, ಕೂಡಲೇ ಶಿರಸ್ನಾನ ಮಾಡಿ ವೇದಮಂತ್ರಗಳನ್ನು ಪಠಿಸುತ್ತಾ ನಿಂತುಬಿಟ್ಟನು!
   ಆಗ ವಿಷ್ಣುವು," ಪ್ರಹ್ಲಾದ! ಅವನನ್ನು ಭಕ್ತಿಯಿಂದಷ್ಟೇ ಗೆಲ್ಲಬಲ್ಲೆ! ಯುದ್ಧದಿಂದಲ್ಲ!" ಎಂದನು 
     " ಓ ಪ್ರಭು! ಅವನು ಮೂರು ಲೋಕಗಳಲ್ಲೂ ಅಜೇಯನಾದರೂ ನಿನ್ನ ಕೃಪೆಯಿಂದ ನನ್ನ ಮುಂದೆ ನಿಲ್ಲುವಂತಾಗಬಾರದಲ್ಲವೇ? ನಿನ್ನ ಕೃಪೆಯಿಂದ ಇಂದ್ರನನ್ನೂ ಗೆದ್ದಿರುವ ನನಗೆ ಈ ಧರ್ಮಪುತ್ರನು ಯಾವ ಮಾತು?" ಪ್ರಹ್ಲಾದನು ಹೇಳಿದನು.
   " ಎಲೈ ದಾನವಶಾರ್ದೂಲ! ಅವನು ನಾನೇ ಆಗಿದ್ದೇನೆ! ನರ,ನಾರಾಯಣರಿಬ್ಬರೂ ನನ್ನ ಅವತಾರಗಳೇ ಆಗಿದ್ದಾರೆ! ಲೋಕಕಲ್ಯಾಣಕ್ಕಾಗಿ ನಾನು ಈ ಅವತಾರಗಳನ್ನೆತ್ತಿ ತಪಶ್ಚರ್ಯೆಯಲ್ಲಿ ತೊಡಗಿದ್ದೇನೆ! ಆದ್ದರಿಂದ ಹೋಗು! ನಿನಗೆ ಜಯವು ಬೇಕೆಂದರೆ ನಾರಾಯಣನನ್ನು ಭಕ್ತಿಯಿಂದ ಆರಾಧಿಸು!" ವಿಷ್ಣುವು ಹೀಗೆ ಹೇಳಿ ಅಂತರ್ಧಾನನಾದನು.
    ನರ, ನಾರಾಯಣರು ತನ್ನ ಆರಾಧ್ಯದೈವವಾದ ಮಹಾವಿಷ್ಣುವಿನ ಅವತಾರಗಳೇ ಎಂದು ಕೇಳಿದಾಗ ಪ್ರಹ್ಲಾದನಿಗೆ ಸಮಾಧಾನವಾಯಿತು. ಅವನು ಕೂಡಲೇ ಹಿರಣ್ಯಾಕ್ಷನ ಪುತ್ರನಾದ ಅಂಧಕಾಸುರನನ್ನು ಕರೆದು ಅವನಿಗೆ ರಾಜ್ಯವನ್ನೊಪ್ಪಿಸಿ ನರ,ನಾರಾಯಣರ ಬಳಿಗೆ ತೆರಳಿದನು. ಅವನು ಅವರಿಗೆ ಕೈಮುಗಿದುಕೊಂಡು ಅವರ ಪಾದಾಭಿವಂದನೆ ಮಾಡಿದನು. ಆಗ ನಾರಾಯಣನು," ಎಲೈ ಮಹಾಸುರನೇ! ಏಕೆ ನನ್ನನ್ನು ಜಯಿಸದೇ ನನಗೆ ನಮಸ್ಕರಿಸುತ್ತಿರುವೆ?" ಎಂದು ಕೇಳಿದನು.
    ಅದಕ್ಕೆ ಪ್ರಹ್ಲಾದನು ಹೇಳಿದನು," ಪ್ರಭು! ನಿನ್ನನ್ನು ಜಯಿಸಲು ಯಾರು ಶಕ್ತರು? ನಿನಗಿಂತ ಅಧಿಕರಾದವರು ಯಾರು? ನೀನು ಅನಂತನಾದ ನಾರಾಯಣನು! ಪೀತಾಂಬರಧಾರಿಯಾದ ಜನಾರ್ದನನು! ಶಾರ್ಙ್ಗ ಧನುಸ್ಸನ್ನು ಹಿಡಿದಿರುವ ಮಹಾವಿಷ್ಣು! ದೇವದೇವನಾದ ಪುಂಡರೀಕಾಕ್ಷ! ನೀನು ಅವ್ಯಯನೂ ಮಹೇಶನೂ ಶಾಶ್ವತನೂ ಪುರುಷೋತ್ತಮನೂ ಆಗಿರುವೆ! ಯೋಗಿಗಳು ನಿನ್ನನ್ನು ಧ್ಯಾನಿಸುತ್ತಾರೆ! ಜ್ಞಾನಿಗಳು ನಿನ್ನನ್ನು ಅರ್ಚಿಸುತ್ತಾರೆ! ನೀನು ಮಹಾಮತ್ಸ್ಯನೂ ಹಯಗ್ರೀವನೂ ಮಹಾಕೂರ್ಮನೂ ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹದೇವನೂ ನನ್ನ ತಂದೆ ಹಿರಣ್ಯಕಶಿಪುವುವನ್ನು ಸಂಹರಿಸಿದ ನರಸಿಂಹನೂ ಆಗಿರುವೆ! ನೀನೇ ಬ್ರಹ್ಮ, ಇಂದ್ರ,ಶಿವ,ಯಮ,ವರುಣ, ಸೂರ್ಯ, ಚಂದ್ರ, ಮೊದಲಾದ ದೇವತೆಗಳಾಗಿರುವೆ! ನೀನೇ ಈ ಪೃಥ್ವಿ, ಜಲ, ಜ್ಯೋತಿ,ಆಕಾಶ, ಎಲ್ಲವೂ ಆಗಿದ್ದು ಇಡೀ ಜಗತ್ತನ್ನು ವ್ಯಾಪಿಸಿರುವೆ! ನಿನ್ನನ್ನು ಯಾರು ತಾನೇ ಜಯಿಸಬಲ್ಲರು? ಭಕ್ತಿಯಿಂದಷ್ಟೇ ನಿನ್ನನ್ನು ಜಯಿಸಲು ಸಾಧ್ಯ! ಅನ್ಯಥಾ ಅಲ್ಲ!" 
      ಆಗ ಭಗವಂತನು ಹೇಳಿದನು," ಎಲೈ ದೈತ್ಯರಾಜ! ಸುವ್ರತ! ನಿನ್ನ ಸ್ತುತಿಯಿಂದ ಸಂತುಷ್ಟನಾಗಿರುವೆನು! ನಿನ್ನ ಭಕ್ತಿಯಿಂದ ನಾನು ಪರಾಜಿತನಾಗಿದ್ದೇನೆ! ಪರಾಜಿತನಾದವನು ದಂಡವನ್ನು ತೆರುತ್ತಾನೆ! ಆ ದಂಡವಾಗಿ ನಾನು ನಿನಗೊಂದು ವರವನ್ನು ನೀಡುತ್ತೇನೆ! ನಿನಗೆ ಬೇಕಾದ ವರವನ್ನು ಬೇಡು!"
     ಪ್ರಹ್ಲಾದನು ಹೇಳಿದನು," ನಾರಾಯಣ! ನೀನು ನನಗೆ ವರವನ್ನು ನೀಡುವುದಾದರೆ ನಿನ್ನೊಂದಿಗೂ ನರನೊಂದಿಗೆ ಹೋರಾಡಿದುದರಿಂದ ನನಗೆ ಉಂಟಾದ ಶಾರೀರಿಕ, ಮಾನಸಿಕ, ಹಾಗೂ ವಾಚಿಕವಾದ ಪಾಪಗಳೆಲ್ಲವೂ ನಾಶವಾಗಲೆಂಬ ವರವನ್ನು ನೀಡು ಜಗನ್ನಾಥ!"
    " ಹಾಗೆಯೇ ಆಗಲಿ ಪ್ರಹ್ಲಾದ! ನಿನ್ನ ಪಾಪಗಳೆಲ್ಲವೂ ನಾಶವಾಗಲಿ! ಇನ್ನೊಂದು ವರವನ್ನು ಬೇಡು!" ನಾರಾಯಣನು ಹೇಳಿದ.
    ಪ್ರಹ್ಲಾದನು ಹೇಳಿದನು," ಪ್ರಭು! ನನ್ನ ಬುದ್ಧಿಯು ಎಲ್ಲೆಲ್ಲಿ ಹೋದರೂ ಅದು ನಿನ್ನನ್ನೇ ಆಶ್ರಯಿಸಲಿ! ಸದಾ ನಿನ್ನ ಭಕ್ತಿಯಲ್ಲೇ ಮುಳುಗಲಿ!"
   " ಹಾಗೆಯೇ ಆಗಲಿ! ಇನ್ನೂ ಒಂದು ವರವನ್ನು ಬೇಡು!" ನಾರಾಯಣನು ಹೇಳಿದನು.
   " ಅಧೋಕ್ಷಜ! " ಪ್ರಹ್ಲಾದನು ಹೇಳಿದನು," ನಿನ್ನ ಕೃಪೆಯಿಂದ ನನಗೆ ಎಲ್ಲವೂ ದೊರಕಿದೆ! ನಿನ್ನ ಪಾದಪಂಕಜಗಳಲ್ಲಿನ ಭಕ್ತಿಯಿಂದ ನನ್ನ ಖ್ಯಾತಿಯಿರಲಿ!" 
    " ಹಾಗೆಯೇ ಆಗಲಿ!" ನಾರಾಯಣನು ಹೇಳಿದನು," ನನ್ನ ಅನುಗ್ರಹದಿಂದ ನೀನು ನಿತ್ಯನೂ ಅವ್ಯಯನೂ ಅಕ್ಷಯನೂ ಅಜರಾಮರನೂ ಆಗುವೆ! ಇನ್ನು ನಿನ್ನ ರಾಜ್ಯಕ್ಕೆ ಹಿಂದಿರುಗಿ ಕರ್ತವ್ಯವನ್ನು ಪಾಲಿಸು! ನಿನಗೆ ಕರ್ಮಬಂಧನವಾಗುವುದಿಲ್ಲ! ಜನತೆಗೆ ಸೂಕ್ತವಾದ ಧರ್ಮವನ್ನು ಆಚರಿಸು!"
   " ಪ್ರಭು! ತ್ಯಜಿಸಿದ ರಾಜ್ಯವನ್ನು ಪುನಃ ಹೇಗೆ ಸ್ವೀಕರಿಸಲಿ?" ಪ್ರಹ್ಲಾದನು ಹೇಳಿದನು.
   " ಪ್ರಹ್ಲಾದ! ನಿನ್ನ ನಿವಾಸಕ್ಕೆ ತೆರಳಿ ದಾನವರಿಗೆ ಹಿತೋಪದೇಶಕನಾಗು!" ನಾರಾಯಣನು ಹೇಳಿದನು.
    ಆಗ ಪ್ರಹ್ಲಾದನು ನರ,ನಾರಾಯಣರಿಗೆ ನಮಸ್ಕರಿಸಿ ಸಂತುಷ್ಟನಾಗಿ ತನ್ನ ರಾಜ್ಯಕ್ಕೆ ಹಿಂದಿರುಗಿದನು. ದೈತ್ಯರು ಅವನನ್ನು ಸ್ವಾಗತಿಸಲು, ಅಂಧಕಾಸುರನು ಅವನನ್ನು ಪುನಃ ರಾಜ್ಯವನ್ನು ಸ್ವೀಕರಿಸಲು ಕೇಳಿಕೊಂಡನು. ಆದರೆ ಪ್ರಹ್ಲಾದನು ಒಪ್ಪದೇ ಅಂಧಕಾಸುರನಿಗೆ ಪಟ್ಟಗಟ್ಟಿ ದೈತ್ಯರನ್ನು ಸತ್ಪಥದಲ್ಲಿ ನಡೆಸುತ್ತಾ ಶ್ರೀಹರಿಯನ್ನು ಸ್ಮರಿಸುತ್ತಾ ಯೋಗರತನಾಗಿದ್ದನು.
     ಪ್ರಹ್ಲಾದನು ಧರ್ಮಾತ್ಮನೂ ಅತ್ಯುತ್ತಮ ರಾಜನೂ ಆಗಿದ್ದರೂ ತಾನೊಬ್ಬನೇ ಧರ್ಮವನ್ನುಳಿಸುವ ವ್ಯಕ್ತಿ ಎಂಬ ಸಣ್ಣ ಅಹಂಕಾರ ಅವನಲ್ಲಿತ್ತು. ಅದು ಮಣಿಯಲೆಂದು ಅವನಿಗೆ ಶ್ರೀ ಹರಿಯೊಂದಿಗೇ ಯುದ್ಧವಾಗಿ ಸೋಲಾಯಿತು! ಬಹಳ ಒಳ್ಳೆಯವನಾದಾಗ ಆ ಒಳ್ಳೆಯತನದ ಬಗ್ಗೆಯೂ ಅಹಂಕಾರವಿರಬಾರದಲ್ಲವೇ? ಹಾಗಾದಾಗ ಭಗವಂತನು ಅದನ್ನು ಮೊಟಕುಗೊಳಿಸುತ್ತಾನೆ.
     

    
    

ಗುರುವಾರ, ಏಪ್ರಿಲ್ 2, 2026

ಸುಂದರೀಶತಕ -೧೫

ಸಂಸ್ಕೃತ ಮೂಲ 

ವಯಸಾ ಕುಂಭಕೃತಾಸ್ಯಾ: ಪರಿಭ್ರಮತ್ಕಾಂತಿಮಂಡಲಚ್ಛಲತ: /
ಅಭ್ರಮಿ ಕಿಮುರಸಿ ಚಕ್ರಂ ಕುಚಕುಂಭಂ ಕರ್ತುಕಾಮೇನ //

ಕನ್ನಡ ಅನುವಾದ 

    ' ಈ ಸುಂದರಿಯ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸಲು ಇವಳ ವಕ್ಷಸ್ಥಳದಲ್ಲಿ ಪರಿಭ್ರಮಿಸುವ ಕಾಂತಿಮಂಡಲವೆಂಬ ನೆಪದಲ್ಲಿ ಚಕ್ರವನ್ನು ತಿರುಗಿಸಿದನೇ?'
     ಇಲ್ಲಿ ಕವಿಯು ಸುಂದರಿಯ ಯೌವನವನ್ನು ಕುಂಬಾರನಿಗೆ ಹೋಲಿಸಿದ್ದಾನೆ! ಅವಳ ದುಂಡುಕುಚಗಳನ್ನು ಅವನು ನಿರ್ಮಿಸುವ ಕುಂಭಗಳಿಗೆ ಹೋಲಿಸಿದ್ದಾನೆ! ಈ ಕುಚಕುಂಭಗಳನ್ನು ನಿರ್ಮಿಸಲು ಚಕ್ರವನ್ನು ತಿರುಗಿಸಬೇಕಲ್ಲವೇ? ಆ ಚಕ್ರವೇ ಅವಳ ವಕ್ಷಸ್ಥಳದಲ್ಲಿ ರಾರಾಜಿಸುತ್ತಿರುವ ಕಾಂತಿಮಂಡಲ! ಹೀಗೆ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸುವ ಆಸೆಯಿಂದ ಅವಳ ವಕ್ಷಸ್ಥಳದಲ್ಲಿ ಕಾಂತಿಮಂಡಲವೆಂಬ ಚಕ್ರವನ್ನು ತಿರುಗಿಸಿದನೇ ಎನ್ನುತ್ತಾ ಕವಿಯು, ಯೌವನದಲ್ಲಿ ಹೆಣ್ಣಿನಲ್ಲಿ ಉದಯಿಸುತ್ತಿರುವ ಸುಂದರ ಕುಚಕುಂಭಗಳನ್ನು ವರ್ಣಿಸುತ್ತಾನೆ.

ಸುಂದರೀಶತಕ -೧೪

ಸಂಸ್ಕೃತ ಮೂಲ 

ವಕ್ಷಸಿ ಸುಮುಖಿ ಭವತ್ಯಾ ಮನೋಹರಂ ಕಾಂತಿಮಂಡಲಂ ಜಯತಿ /
ಭ್ರಾಮಿತಮಭಿನವವಯಸಾ ಕಾಭನೃಪಾದೇಶಚಕ್ರಮಿವ //

ಕನ್ನಡ ಅನುವಾದ 
      ' ಎಲೈ ಸುಮುಖಿ! ನಿನ್ನ ವಕ್ಷಸ್ಥಳದಲ್ಲಿ ಮನೋಹರವಾದ ಕಾಂತಿಮಂಡಲವು ವಿಜಯಶಾಲಿಯಾಗುತ್ತದೆ! ಅದು, ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ!' 
     ಹೆಣ್ಣಿನ ಸೌಂದರ್ಯಕ್ಕೆ ಬಹು ಮುಖ್ಯವಾದ ಅಂಗಗಳೆಂದರೆ ಕುಚಗಳು! ಆ ತುಂಬುಕುಚಗಳ ಕಾರಣದಿಂದ ವಕ್ಷಸ್ಥಳದಲ್ಲಿ ಉಂಟಾಗಿರುವ ಮನೋಹರವಾದ ಕಾಂತಿಮಂಡಲವು ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ ಎಂದು ಕವಿಯು ಹೆಣ್ಣಿನ ವಕ್ಷಸ್ಥಳವನ್ನು ಉತ್ಪ್ರೇಕ್ಷಿಸುತ್ತಾ ವರ್ಣಿಸುತ್ತಾನೆ.

ಸುಂದರೀಶಚಕ -೧೩

ಸಂಸ್ಕೃತ ಮೂಲ 

ಸುತನೋರಿಯತ್ಪ್ರದೇಶೇ ತಿಷ್ಠತು ನವರೋಮರಾಜಿಭುಜಗೀತೀ /
ತ್ರಿವಲಿಸತ್ಯರೇಖಾ ವಯ:ಫಣಿಗ್ರಾಹಿಣಾಕಾರಿ //

ಕನ್ನಡ ಅನುವಾದ 
     ' ಈ ಸುಂದರಿಯ ನವರೋಮರಾಜಿ ಎಂಬ ಸರ್ಪಿಣಿಯು ಇಲ್ಲೇ ಇರಲಿ ಎಂದು ಯೌವನವೆಂಬ ಹಾವಾಡಿಗನು ತ್ರಿವಳಿಗಳೆಂಬ ಮೂರು ಸತ್ಯರೇಖೆಗಳನ್ನು ಗೀಚಿದ್ದಾನೆ!'
     ಇಲ್ಲಿ ಕವಿಯು ಸುಂದರ ಹೆಣ್ಣಿನ ನವರೋಮರಾಜಿಯನ್ನು ( ರೋಮಾವಲಿ ಅಥವಾ ರೋಮರಾಜಿ, ಹೆಣ್ಣಿನ ನಾಭಿಯ ಮೇಲಿನ ತೆಳುಗೂದಲಿನ ಸಾಲು) ಒಂದು ಸರ್ಪಿಣಿಗೆ ಹೋಲಿಸಿದ್ದಾನೆ. ಹಾವಾಡಿಗನು ಹೇಗೆ ಸರ್ಪವು ಎಲ್ಲೂ ಹೋಗದಂತೆ ಅದನ್ನು ಮಂತ್ರಗಳಿಂದ ಬಂಧಿಸುವನೋ, ಹಾಗೆಯೇ ಅವಳ ಯೌವನವೆಂಬ ಹಾವಾಡಿಗನು, ಅವಳ ಹೊಟ್ಟೆಯ ಮೇಲೆ ತ್ರಿವಳಿಗಳೆಂಬ ಮೂರು ಸತ್ಯಗೆರೆಗಳನ್ನು ( ಎಲ್ಲೂ ಹೋಗದಂತೆ ಮಾಡುವ ಗೆರೆಗಳು) ರೋಮಾವಲಿಯೆಂಬ ಸರ್ಪಿಣಿಯು ಎಲ್ಲೂ ಹೋಗದಂತೆ ಎಳೆದಿದ್ದಾನೆ ಎಂದು ಉತ್ಪ್ರೇಕ್ಷಿಸುತ್ತಾ ಸುಂದರಿಯ ರೋಮಾವಲಿ, ತ್ರಿವಳಿಗಳು ಹಾಗೂ ಯೌವನವನ್ನು ಪ್ರಶಂಶಿಸಿದ್ದಾನೆ.

ಬುಧವಾರ, ಏಪ್ರಿಲ್ 1, 2026

ಸುಂದರೀಶತಕ -೧೨

ಸಂಸ್ಕೃತ ಮೂಲ 

ಸ್ಮರರವಿಪುರ:ಸರೀಕೃತಯೌವನಮಾಯಾತಮಭಿಮುಖಂ ಸುತನೋ: /
ಆಲಕ್ಷ್ಯತೇ ಯಥೇಷಾ ರೋಮಾಲಿಚ್ಛದ್ಮತಶ್ಛಾಯಾ //

ಕನ್ನಡ ಅನುವಾದ 
     ' ಈ ಸುಂದರ ತನುವಿನ ಸುಂದರಿಯ ಶರೀರಕ್ಕೆ ಸ್ಮರನೆಂಬ ಸೂರ್ಯನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಅದರ ನೆರಳೇ ರೋಮಾವಲಿಯ ರೂಪದಲ್ಲಿ ಕಾಣುತ್ತಿದೆ!' 
    ಕವಿಯು ಇಲ್ಲಿ ಹೆಣ್ಣಿನ ರೋಮಾವಲಿಯನ್ನು ಕುರಿತು ಇನ್ನೊಂದು ಪದ್ಯವನ್ನು ರಚಿಸಿದ್ದಾನೆ. ಸುಂದರಿಯ ರೋಮಾವಲಿ, ಅವಳ ಯೌವನದ ನೆರಳು ಎಂದು ಸ್ವಾರಸ್ಯವಾಗಿ ಹೇಳುತ್ತಾನೆ. ಹಾಗೆ ನೆರಳು ಬೀಳಬೇಕಾದರೆ ಸೂರ್ಯನಿರಬೇಕಲ್ಲವೇ? ಆ ಸೂರ್ಯನೇ ಸ್ಮರ ಅಥವಾ ಮನ್ಮಥ! ಸೂರ್ಯನೆಂಬ ಮನ್ಮಥನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಆ ಯೌವನದ ನೆರಳು ಬಿದ್ದು ರೋಮಾವಲಿಯಂತೆ ಕಾಣುತ್ತಿದೆ ಎನ್ನುತ್ತಾನೆ ಕವಿ! 

ಭಾನುವಾರ, ಮಾರ್ಚ್ 29, 2026

ಸುಂದರೀಶತಕ -೧೧

ಸಂಸ್ಕೃತ ಮೂಲ 

ಯಾ ತವ ಗಾತ್ರೇ ಯೌವನತಪನರಥಾರೋಹನೇಮಿನವರೇಖಾ /
ಸುಂದರಿ ಸೈವ ಜನಾನಾಂ ಜನಯತಿ ರೋಮಾವಲಿಭ್ರಾಂತಿಮ್ //

ಕನ್ನಡ ಅನುವಾದ 

   ' ಎಲೈ ಸುಂದರಿ! ನಿನ್ನ ಶರೀರದಲ್ಲಿ ಯೌವನವೆಂಬ ಸೂರ್ಯನ ರಥ ಮೇಲೆ ಮೇಲೆ ಚಲಿಸುತ್ತಾ ಅದರ ಚಕ್ರದ ಅಂಚು ಮಾಡಿರುವ ಹೊಸ ರೇಖೆಯನ್ನೇ ಜನರು ರೋಮಾವಲಿ ಎಂದು ಭ್ರಮಿಸುತ್ತಾರೆ!'
     ರೋಮಾವಲಿಯೆಂದರೆ ಹೆಣ್ಣಿನ ನಾಭಿಯ ಮೇಲಿನಿಂದ ಎದೆಯವರೆಗೂ ಸಾಗುವ ತೆಳುಗೂದಲಿನ ಸಾಲು. ಇದು ಮುಖ್ಯವಾಗಿ ನಾಭಿಯ ಮೇಲಿದ್ದರೂ ಕೆಳಗೂ ಸಾಗಿ ಮುಖ್ಯವಾಗಿ ಹೊಟ್ಟೆಯ ಮೇಲಿನ ತೆಳುಗೂದಲಿನ ಸಣ್ಣ ಗೆರೆಯಾಗಿರುತ್ತದೆ. ಇದನ್ನು ರೋಮರಾಜಿ ಎಂದೂ ಕರೆಯಲಾಗಿ ಭಾರತೀಯ ದೃಷ್ಟಿಯಲ್ಲಿ ಹೆಣ್ಣಿನ ಸೌಂದರ್ಯದ ಒಂದು ಮುಖ್ಯ ಲಕ್ಷಣವಾಗಿದೆ. ಸಂಸ್ಕೃತ ಕವಿಗಳು ಹೆಣ್ಣಿನ ಸೌಂದರ್ಯದ ವರ್ಣನೆ ಮಾಡುವಾಗ ರೋಮಾವಲಿಯನ್ನು ವಿಶೇಷವಾಗಿ ವರ್ಣನೆ ಮಾಡಿಯೇ ಮಾಡುತ್ತಾರೆ. ವಿಶ್ವೇಶ್ವರನೆಂಬ ಕವಿ ರೋಮಾವಲಿಯನ್ನು ಕುರಿತು ರೋಮಾವಲೀಶತಕವೆಂಬ ಶತಕವನ್ನೇ ರಚಿಸಿದ್ದಾನೆ! 
    ಇಲ್ಲಿ ಕವಿಯು ಹೆಣ್ಣಿನ ಸೌಂದರ್ಯವನ್ನು ಸೂರ್ಯನ ರಥವೆಂದು ವರ್ಣಿಸುತ್ತಾನೆ. ಆ ರಥ ಅವಳ ಮೈಮೇಲೆ ಚಲಿಸುತ್ತಾ ಹೋದಾಗ, ಅದರ ನೇಮಿ ಅಥವಾ ಚಕ್ರದ ಅಂಚು ಮಾಡುವ ಹೊಸ ರೇಖೆಯನ್ನೇ ಜನರು ರೋಮಾವಲಿಯೆಂದು ಭ್ರಮಿಸುತ್ತಾರೆ ಎನ್ನುತ್ತಾನೆ! ಸಹಜವಾಗಿ ಸುಂದರವಾಗಿ ಉಂಟಾಗಿರುವ ಹೆಣ್ಣಿನ ಅಂಗಾಂಗಗಳಿಗೆ ಕವಿಯು ಉತ್ಪ್ರೇಕ್ಷಿತ ಕಾರಣಗಳನ್ನು ಕೊಡುತ್ತಾ ಅವು ಎಷ್ಟು ಸುಂದರವಾಗಿವೆ ಎಂದು ತೋರಿಸುತ್ತಾನೆ! 

ಶುಕ್ರವಾರ, ಮಾರ್ಚ್ 27, 2026

ರಾಮಾಯಣ ಸಂಬಂಧಿತ ಸ್ವಾರಸ್ಯಕರ ಒಗಟುಗಳು


೧. ಕಂದ ಬಂದ ಕೊಂದ ತಂದ 
         ಸರಳವಾದ ಒಂದೇ ವಾಕ್ಯದಲ್ಲಿ ಈ ಒಗಟು ರಾಮಾಯಣದ ಕಥೆಯನ್ನೇ ಹೇಳುತ್ತದೆ. ಕಂದ, ಎಂದರೆ ಬಾಲ ರಾಮನು ಹುಟ್ಟಿ ಬಂದ, ರಾವಣನನ್ನು ಕೊಂದ, ಸೀತೆಯನ್ನು ಹಿಂದಕ್ಕೆ ಕರೆತಂದ. 

೨. ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು!
    ಮಕ್ಕಳ ಕಣ್ಣಾಮುಚ್ಚಾಲೆ ಆಟದ ಈ ಸರಳ ಪದ್ಯದಲ್ಲಿ ರಾಮಾಯಣದ ಕಥೆ ಅಡಗಿದೆ. ಕಣ್ಣಾ ಮುಚ್ಚೆ ಅಂದರೆ ದಶರಥನು ಕಣ್ಣು ಮುಚ್ಚಲು, ಅಂದರೆ ಮರಣ ಹೊಂದಲು, ಕಾಡೇ ಗೂಡೆ, ಅಂದರೆ ರಾಮ, ಲಕ್ಷ್ಮಣ, ಸೀತೆಯರಿಗೆ ಕಾಡೇ ಗೂಡಾಯಿತು, ಅಂದರೆ ಮನೆಯಾಯಿತು. ಉದ್ದಿನ ಮೂಟೆ ಉರುಳೇಹೋಯ್ತು, ಅಂದರೆ ಉದ್ದಿನ ಮೂಟೆಯಂತೆ ಕೊಬ್ಬಿ ಉಬ್ಬಿದ್ದ ರಾವಣ ಸತ್ತು ಬಿದ್ದ. ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು, ಅಂದರೆ ನಮ್ಮ ಹಕ್ಕಿ ಎಂದು ಭಾವಿಸಿದ್ದ ನಿಮ್ಮ ಹಕ್ಕಿ ಸೀತೆಯನ್ನು ಬಿಟ್ಟೆವು, ಅಂದರೆ ಸೀತೆಯನ್ನು ಗೌರವದಿಂದ ಕಳಿಸಿಕೊಡುತ್ತೇವೆ ಎಂದು ವಿಭೀಷಣ ಹೇಳುವುದು. 
೩ ಹತ್ತುತಾ ಕೆಂಪು, ಆರುತಾ ಕಪ್ಪು, ಅದರ ಮಿತ್ರನ ಮಗನ ಒಡೆಯನ ವೈರಿಯ ಹೆಂಡತಿಯ ಹುಟ್ಹೆಸರೇನು?
      ಇದೊಂದು ಸಂಕೀರ್ಣ ಒಗಟು. ಹತ್ತುತಾ ಕೆಂಪು ಆರುತಾ ಕಪ್ಪು ಅಂದರೆ ಬೆಂಕಿ. ಅದರ ಮಿತ್ರ ಅಂದರೆ ಗಾಳಿ ಅಥವಾ ವಾಯು. ಮಿತ್ರನ ಮಗ ಅಂದರೆ ವಾಯುಪುತ್ರ ಹನುಮಂತ. ಅವನ ಒಡೆಯ ಅಂದರೆ ರಾಮ. ಅವನ ವೈರಿ ಅಂದರೆ ರಾವಣ. ಅವನ ಹೆಂಡತಿಯ ಹುಟ್ಹೆಸರು ಮಂಡೋದರಿ.
೪. ಹತೋ ಹನುಮತಾ ರಾಮ: ಸೀತಾ ಹರ್ಷಮುಪಾಗತಾ /
     ರುದಂತಿ ರಾಕ್ಷಸಾ: ಸರ್ವೇ ಹಾ ಹಾ ರಾಮೋ ಹತೋ      ಹತ: //
      ಇದೊಂದು ಸಂಸ್ಕೃತದ ಕೂಟ ಸಮಸ್ಯೆ. ಮೇಲ್ನೋಟಕ್ಕೆ ಒಂದು ಆರ್ಥ ಕಂಡರೆ ಪದಗಳನ್ನು ಬೇರೆ ರೀತಿಯಲ್ಲಿ ಸೇರಿಸಿದಾಗ ಅಥವಾ ಬಿಡಿಸಿದಾಗ ಬೇರೆ ಅರ್ಥ ಬರುತ್ತದೆ. ಮೇಲ್ನೋಟಕ್ಕೆ ಕಾಣುವ ಅರ್ಥ ಹೀಗಿದೆ -
      ಹನುಮಂತನಿಂದ ರಾಮನು ಹತನಾಗಲು, ಅಂದರೆ ಕೊಲ್ಲಲ್ಪಡಲು ( ಹತೋ ಹನುಮತಾ ರಾಮ:), ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ,' ಹಾ! ಹಾ! ರಾಮನು ಹತನಾದ!' ಎಂದು ಅಳತೊಡಗಿದರು!
    ವಿಚಿತ್ರ ಅರ್ಥವಲ್ಲವೇ? ಇದು ಹೇಗೆ ಸಾಧ್ಯ? ಹನುಮತಾ ರಾಮ: ಎನ್ನುವುದನ್ನು ಹನುಮತಾರಾಮ: ಎಂದು ಸೇರಿಸಿ ಹನುಮತಾ ಆರಾಮ: ಎಂದು ಬಿಡಿಸಿಕೊಂಡರೆ ಹತೋ ಹನುಮತಾ ಆರಾಮ: ಎಂದಾಗುತ್ತದೆ. ಆರಾಮ ಅಂದರೆ ಉದ್ಯಾನವನ. ಆಗ ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು ಎಂದಾಗುತ್ತದೆ. ಪುನಃ  ಹಾರಾಮ ಎಂದು ಸೇರಿಸಿ, ಹಾ ಆರಾಮ ಎಂದು ಬಿಡಿಸಿದರೆ ರಾಕ್ಷಸರು ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು ಎಂದು ಅಳುತ್ತಾರೆ ಎಂಬ ಅರ್ಥ ಬರುತ್ತದೆ. ಈಗ ಶ್ಲೋಕದ ಅರ್ಥ ಹೀಗಾಗುತ್ತದೆ -
       ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು, ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ ' ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು!' ಎಂದು ಅಳತೊಡಗಿದರು.