ಬುಧವಾರ, ಮೇ 27, 2026

ಮಹಾಭಾರತದ ಸ್ವಾರಸ್ಯಗಳು - ಜಿಂಕೆಗಳ ಕನಸು

                ನಾವು ಪ್ರಾಣಿ ಪ್ರಪಂಚದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ ಮಾನವರು ಅದೆಷ್ಟೋ ಪ್ರಾಣಿ, ಪಕ್ಷಿಗಳನ್ನು ನಿರ್ದಯವಾಗಿ ಬೇಟೆಯಾಡಿ ನಿರ್ನಾಮ ಮಾಡಿರುವುದು ಕಾಣುತ್ತದೆ. ಅದರಲ್ಲೂ ಯುರೋಪಿಯನ್ನರು ಕ್ರೌರ್ಯದಲ್ಲಿ ಹೆಸರೆತ್ತಿದವರು. ಅವರು ಹೋದಲ್ಲೆಲ್ಲಾ ನೆಲೆಗಳನ್ನು ವಶಪಡಿಸಿಕೊಂಡು, ಮೂಲನಿವಾಸಿಗಳನ್ನು ಬಗ್ಗುಬಡಿದು ಇಲ್ಲವೇ ದಾಸ್ಯಕ್ಕೊಳಪಡಿಸಿ ಶೋಷಿಸಿದ್ದಷ್ಟೇ ಅಲ್ಲದೆ, ಅಲ್ಲಿನ ಪ್ರಾಣಿ ಪಕ್ಷಿಗಳನ್ನೂ ಅನಗತ್ಯವಾಗಿ ಬೇಟೆಯಾಡಿದರು. ಹಾಗಾಗಿಯೇ ಡೋಡೋ, ಪ್ಯಾಸೆಂಜರ್ ಪಿಜನ್, ಕ್ವಗ್ಗ ( ಜೀಬ್ರಾದಂಥ ಒಂದು ಪ್ರಾಣಿ) ಇನ್ನೆಂದೂ ಕಾಣದಂತೆ ನಾಮಾವಶೇಷವಾದವು! ಈಗಲೂ ಆಫ್ರಿಕಾದಲ್ಲಿ ಅರಣ್ಯ ಸಂರಕ್ಷಣೆಗೆ ಧನಸಹಾಯ ಮಾಡುವವರಿಗೆ ಬೇಟೆಯಾಡಲು ಅವಕಾಶ ಕೊಡುವುದು ಒಂದು ದೊಡ್ಡ ವಿಡಂಬನೆಯ ವಿಷಯವಾಗಿದೆ! 
    ಈ ರೀತಿ ಬೇಟೆಯಾಡುವ ಪ್ರವೃತ್ತಿ ಭಾರತದಲ್ಲೂ ಇತ್ತೇ ಎಂದು ಕೇಳಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ಆದಿಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ನಿಜ. ಅಂತೆಯೇ ಅಂದಿನಿಂದ ಇಂದಿನವರೆಗೂ ಬಹುತೇಕ ಮಾನವರಲ್ಲಿ ಮಾಂಸಾಹಾರ ಸಹಜವಾದ ಒಂದು ಪ್ರವೃತ್ತಿಯೇ ಆಗಿದೆ. ಈ ಮಾಂಸ ಸಿಗಲು ಪ್ರಾಣಿಗಳನ್ನು ಬೇಟೆಯಾಡಬೇಕಾದುದರಿಂದ ಅದೊಂದು ಕ್ರೀಡೆಯೇ ಆಯಿತು! ಓಡುತ್ತಿರುವ, ಹಾರುತ್ತಿರುವ ಅಥವಾ ದೂರದಲ್ಲಿ ಮೇಯುತ್ತಿರುವ ಇಲ್ಲವೇ ವಿಶ್ರಮಿಸುತ್ತಿರುವ ಪ್ರಾಣಿ ಪಕ್ಷಿಗಳನ್ನು ಗುರಿಯಿಟ್ಟು ಹೊಡೆದು ಕೊಂದರೆ ಅದೇನೋ ಸಾಧನೆ ಮಾಡಿದ ಆನಂದ ಅನೇಕ ರಾಜರುಗಳಿಗಿತ್ತು! ಯುದ್ಧಗಳಲ್ಲಿ ತೊಡಗುವ ಬಹುತೇಕ ರಾಜರು ಕ್ಷತ್ರಿಯರಾಗಿದ್ದು ಮಾಂಸಾಹಾರ ಅವರಿಗೆ ಸಹಜವಾಗಿತ್ತು. ಅಂತೆಯೇ ಶೂದ್ರರು, ಶ್ರಮಜೀವಿಗಳಿಗೂ ಮಾಂಸಾಹಾರವಿಲ್ಲದೇ ಆಗುತ್ತಿರಲಿಲ್ಲ. ಆದರೆ ಅಷ್ಟೇ ಅಲ್ಲದೇ ಬ್ರಾಹ್ಮಣರು ಕೂಡ ಯಜ್ಞ ಯಾಗಗಳನ್ನು ಮಾಡಿದಾಗ ಬಲಿಪಶುವಿನ ಮಾಂಸಾಹಾರ ಸೇವಿಸುತ್ತಿದ್ದರು. ಇವುಗಳಿಗೆ ಅನೇಕ ದಾಖಲೆಗಳು ಪ್ರಾಚೀನ ಗ್ರಂಥಗಳಲ್ಲಿ ಇವೆ. ಆದರೆ ಮಾಂಸಾಹಾರಕ್ಕಲ್ಲದೇ ಸುಖಾಸುಮ್ಮನೆ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವುದೆಂದರೇನು? ಆದರೆ ಅದೂ ತೀರಾ ಇತ್ತೀಚಿನವರೆಗೂ ಇತ್ತು. ಮೈಸೂರು ಮಹಾರಾಜರೇ ಮೊದಲಾಗಿ ಅನೇಕ ಮಹಾರಾಜರು ಕಾಡುಗಳನ್ನು ಬೇಟೆಗೆಂದೇ ಬೆಳೆಸಿದ್ದಲ್ಲದೇ ಕಾಡುಗಳಲ್ಲಿ ಬೇಟೆಯಾಡಲು ಉಳಿದುಕೊಳ್ಳಲು ಸುಂದರ ಗೃಹಗಳನ್ನು ನಿರ್ಮಿಸಿದರು. ಬ್ರಿಟಿಷರು ಬಂದಮೇಲೆ ಅವರ ಜೊತೆ ನಮ್ಮ ರಾಜರೂ ಸೇರಿಕೊಂಡು ಈ ಕ್ರೀಡೆಯನ್ನು ಆನಂದಿಸುತ್ತಿದ್ದರು! 
      ಆದರೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವ ಪ್ರವೃತ್ತಿ ಇದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದುದು ಕಾಣುತ್ತದೆ. ಉದಾಹರಣೆಗೆ ಶ್ರೀಕೃಷ್ಣನು ಮಹಾಭಾರತದಲ್ಲಿ ರಾಜರಿಗೆ ಬೇಟೆ, ಮದ್ಯಪಾನ, ಜೂಜು, ಮತ್ತು ಸ್ತ್ರೀ ವ್ಯಾಮೋಹ, ಇವು ನಾಲ್ಕೂ ವ್ಯಸನಗಳು ಎಂದು ಹೇಳುತ್ತಾನೆ. ಜೂಜಿನಿಂದ ಯುಧಿಷ್ಠಿರ, ನಳ ಮಹಾರಾಜ, ಮೊದಲಾದವರು ತೊಂದರೆಗೊಳಗಾದರೆ, ಬೇಟೆಯಿಂದ ಪಾಂಡು ಮಹಾರಾಜನು  ನಾಶವಾದ. ಬೇಟೆಯ ವ್ಯಾಮೋಹದಿಂದ ಅವನು ಜಿಂಕೆಗಳ ರೂಪದಲ್ಲಿ ರತಿಕ್ರೀಡೆಯಾಡುತ್ತಿದ್ದ ಕಿಂದಮ ಋಷಿದಂಪತಿಗಳನ್ನು ಕೊಂದು ಸ್ತ್ರೀಯನ್ನು ಸಂಭೋಗಿಸಿದರೆ ಸಾಯುವಂತೆ ಅವರಿಂದ ಶಾಪಗ್ರಸ್ತನಾದ. ವಿಚಿತ್ರವೀರ್ಯನು ಅತಿಯಾದ ಸ್ತ್ರೀ ಸಂಭೋಗದಿಂದ ಯಕ್ಷ್ಮ ಕ್ಷಯರೋಗವೆಂಬ ಕ್ಷೀಣಿಸುವ  ರೋಗಕ್ಕೊಳಗಾಗಿ ಸತ್ತ. ಇಂಥ ಉದಾಹರಣೆಗಳಿಂದ ಬೇಟೆ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಯಂತ್ರಿಸಲಾಗಿದೆ. ಮುಂದೆ ಬೌದ್ಧ, ಜೈನ ಧರ್ಮಗಳಲ್ಲಂತೂ ಇದು ಬೇಡವೇ ಬೇಡ ಎಂದು ಒತ್ತು ಕೊಡಲಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ ಬೇಟೆಯನ್ನು ವಿರೋಧಿಸುವ ಚಿನ್ನದ ಜಿಂಕೆಯ ಕಥೆಯಿದೆ. ಬುದ್ಧನು ಮೊದಲ ಪ್ರವಚನ ನೀಡಿದ ಸಾರನಾಥದ ಮಿಗದಾಯ ( ಮೃಗದಾವ) ಜಿಂಕೆಗಳನ್ನು ಸಂರಕ್ಷಿಸಿದ ಉಪವನವಾಗಿತ್ತು.
     ಪ್ರಾಣಿಗಳ, ಮುಖ್ಯವಾಗಿ ಜಿಂಕೆಗಳ ಸಂರಕ್ಷಣೆ ಹಾಗೂ ಅನಗತ್ಯ ಬೇಟೆಯನ್ನು ನಿಯಂತ್ರಿಸುವ ಸ್ವಾರಸ್ಯಕರ ಪ್ರಸಂಗವೊಂದು ಮಹಾಭಾರತದಲ್ಲಿದೆ. ಅದು ವನಪರ್ವದ ಮೃಗಸವಪ್ನೋದ್ಭವಪರ್ವವೆಂಬ ಚಿಕ್ಕ ಉಪಪರ್ವದಲ್ಲಿದೆ.‌ ಅದನ್ನು ಈಗ ನೋಡೋಣ.
  ಪಾಂಡವರು ಆಗ ದ್ವೈತವನದಲ್ಲಿ ವಾಸಿಸುತ್ತಿದ್ದರು.  ಒಮ್ಮೆ ಯುಧಿಷ್ಠಿರನು ಆಶ್ರಮದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವನಿಗೆ ಒಂದು ವಿಚಿತ್ರ ಕನಸು ಬಿತ್ತು.‌ ಅದರಲ್ಲಿ ಕೆಲವು ಜಿಂಕೆಗಳು ಮುಂಗಾಲುಗಳನ್ನು ಜೋಡಿಸಿಕೊಂಡು ಕಣ್ಣೀರು ಸುರಿಸುತ್ತಾ ಗದ್ಗದ ಸ್ವರದಿಂದ ಅಳುತ್ತಿದ್ದವು. ಅದನ್ನು ನೋಡಿ ಯುಧಿಷ್ಠಿರನು ಕೇಳಿದನು," ಮೃಗಶ್ರೇಷ್ಖರೇ! ಯಾರು ನೀವು? ನಿಮ್ಮ ಇಚ್ಛೆ ಏನು? ಅದೇನು ಹೇಳಬೇಕೆಂದಿರುವಿರೋ ನಿರ್ಭಯವಾಗಿ ಹೇಳಿ!" 
    ಅದಕ್ಕೆ ಆ ಜಿಂಕೆಗಳು ಹೇಳಿದವು," ನೀವುಗಳು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡುವಾಗ ನಿಮ್ಮ ಬಾಣಾಘಾತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಉಳಿದ ಬಡಪಾಯಿ ಜಿಂಕೆಗಳು ನಾವು! ಆದರೆ ಇನ್ನು ಕೆಲವೇ ದಿನಗಳಲ್ಲಿ ನಾವೂ ನಿಮ್ಮ ಆಹಾರವಾಗಿ ಪರಿವರ್ತನೆ ಹೊಂದುವುದು ಖಚಿತ! ಮಹಾರಾಜ! ನಿನ್ನ ತಮ್ಮಂದಿರು ಮಹಾಶೂರರು! ಬಿಲ್ವಿದ್ಯೆಯಲ್ಲಿ ಅಸಮಾನರು! ನಮ್ಮ ಉಚ್ಛ್ವಾಸ, ನಿ:ಶ್ವಾಸಗಳನ್ನು ಕೇಳಿಯೇ ಗುರಿಯಿಟ್ಟು ಬಾಣ ಬಿಡಬಲ್ಲರು! ಹೀಗಾಗಿ ದ್ವೈತವನದಲ್ಲಿ ನಮ್ಮ ವಂಶವೇ ಕ್ಷೀಣಿಸಿಹೋಗುತ್ತಿದೆ! ಅಲ್ಪಸಂಖ್ಯಾತರಾಗಿರುವ ನಾವಿಂದು ನಮ್ಮ ವಂಶಕ್ಕೆ ಬೀಜಪ್ರಾಯರಾಗಿರುವೆವು! ನಿನ್ನ ಅನುಗ್ರಹದಿಂದ ಮಾತ್ರ ನಮ್ಮ ವಂಶವು ಪುನಃ ಅಭಿವೃದ್ಧಿ ಹೊಂದಬಹುದು. ಹಾಗಾಗಿ ದಯವಿಟ್ಟು ನೀವು ಈ ಅರಣ್ಯ ಬಿಟ್ಟು ಬೇರೆ ಅರಣ್ಯಕ್ಕೆ ಪ್ರಯಾಣ ಮಾಡಿ! " 
    ಗಡಗಡನೆ ನಡುಗುತ್ತಾ ಕಣ್ಣೀರು ಸುರಿಸುತ್ತಾ ಹೇಳಿದ ಜಿಂಕೆಗಳ ಮಾತುಗಳನ್ನು ಕೇಳಿ ಯುಧಿಷ್ಠಿರನಿಗೆ ಬಹಳ ದು:ಖವಾಯಿತು. ಅವನು ಸಕಲಪ್ರಾಣಿಗಳ ಯೋಗಕ್ಷೇಮದಲ್ಲೂ ಆಸಕ್ತಿ ಹೊಂದಿದ್ದನು. ಹಾಗಾಗಿ ಅವನು," ತಥಾಸ್ತು! ನೀವು ಹೇಳಿದಂತೆಯೇ ಮಾಡುತ್ತೇನೆ!" ಎಂದು ಅಭಯವಿತ್ತನು.
   ಇದಿಷ್ಟು ಕನಸು ಮುಗಿದ ಬಳಿಕ ಯುಧಿಷ್ಠಿರನಿಗೆ ನಿದ್ರೆ ಕಳೆದು ಎಚ್ಚರವಾಯಿತು.‌ ಅವನಿಗೆ ಆಗ ಕನಸಿನ ವಿಷಯ ಕಾಡತೊಡಗಿತು. ಪ್ರಾತರ್ವಿಧಿಗಳು ಮುಗಿದ ಬಳಿಕ ತನ್ನ ತಮ್ಮಂದಿರ ಮಧ್ಯೆ ಕುಳಿತುಕೊಂಡು ತನಗಾದ ಕನಸಿನ ಅನುಭವವನ್ನು ಹೇಳಿ," ತಮ್ಮಂದಿರೇ! ಆ ಜಿಂಕೆಗಳ ಮಾತು ಸತ್ಯ! ನಾವು ಈ ಕಾಡಿನ ಪ್ರಾಣಿಗಳ ಮೇಲೆ ಈಗಲಾದರೂ ದಯೆ ತೋರಬೇಕು. ನಾವಿಲ್ಲಿಗೆ ಬಂದು ಒಂದು ವರ್ಷ ಎಂಟು ತಿಂಗಳುಗಳು ಕಳೆದುಹೋಗಿವೆ! ನಾವು ಈ ಪ್ರಾಣಿಗಳಿಂದಲೇ ಜೀವಿಸುತ್ತಿದ್ದೇವೆ! ಆದ್ದರಿಂದ ನಾವೀಗ ಬೇರೆ ಕಾಡಿಗೆ ಹೋಗಬೇಕು. ಅನೇಕಾನೇಕ ಮೃಗಗಳಿಂದಲೂ ಲತಾವೃಕ್ಷಗಳಿಂಜಲೂ ಸಮೃದ್ಧವಾಗಿರುವ, ತೃಣಬಿಂದು ಸರೋವರದ ದಡದಲ್ಲಿರುವ ಕಾಮ್ಯಕವನಕ್ಕೆ ಹೋಗೋಣ!" 
   ಯುಧಿಷ್ಠಿರನು ಹೀಗೆ ಹೇಳಲು, ಎಲ್ಲರೂ ಒಪ್ಪಿದರು. ಅದರಂತೆ ಅವರೆಲ್ಲರೂ ಕಾಮ್ಯಕವನಕ್ಕೆ ಹೋದರು.‌
     ಹೀಗೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವುದು ಹಾಗೂ ಮಾಂಸಾಹಾರ ಕಂಡುಬಂದರೂ ಅವುಗಳ ನಿಯಂತ್ರಣವೂ ಕಂಡುಬರುತ್ತದೆ. ಮನುಸ್ಮೃತಿಯ ಒಂದು ಮಾತು ಇಲ್ಲಿ ಮನನೀಯ:
    ನ ಮಾಂಸಭಕ್ಷಣೇ ದೋಷೋ ನಾ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ //
    ' ಮಾಂಸಭಕ್ಷಣೆಯಲ್ಲಿ, ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸಹಜವಾದ ಪ್ರವೃತ್ತಿ. ಆದರೆ ಇದರ ನಿವೃತ್ತಿಯಿಂದ ಮಹಾಫಲವುಂಟಾಗುತ್ತದೆ.' 
   ಹೀಗೆ ಕೆಲವರಿಗೆ ಮಾಂಸಾಹಾರ ಬೇಕಾಗುತ್ತದೆ. ಅದು ತಪ್ಪಲ್ಲ. ಆದರೆ ಅದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು. ಹೀಗೆ ನಾವು ಪ್ರಾಚೀನ ಭಾರತದ ಗ್ರಂಥಗಳಲ್ಲಿ, ಸಂದರ್ಭಗಳಲ್ಲಿ ಪ್ರಾಣಿಗಳ ಸಂರಕ್ಷಣೆಯ ವಿಚಾರವನ್ನು ನೋಡಬಹುದು.

ಸೋಮವಾರ, ಮೇ 18, 2026

ಸುಂದರೀಶತಕ -೪೦

ಸಂಸ್ಕೃತ ಮೂಲ 

ಕುಂಚನ್ಮೃದುಕರಶಾಖಾಕೃಷ್ಟಾಂಚಲಕೋಣತಿರ್ಯಗುಲ್ಲಸಿತ: /
ಲಕ್ಷೀಕರೋತಿ ಧನ್ಯಂ ಸುಂದರಿ ದೀರ್ಘ: ಕಟಾಕ್ಷಸ್ತೇ //

ಕನ್ನಡ ಅನುವಾದ 

       ' ಎಲೈ ಸುಂದರಿ! ಬಾಗಿದ ನಿನ್ನ ಮೃದುವಾದ ಕರಶಾಖೆಗಳಿಂದ ( ಬೆರಳುಗಳಿಂದ) ನಿನ್ನ ಸೆರಗಿನ ಅಂಚನ್ನು ಎಳೆಯುತ್ತಾ ಕಣ್ಣಿನ ಕೋನದಿಂದ ಓರೆಯಾದ ದೀರ್ಘ ಕಟಾಕ್ಷದ ಹೊಳೆಯುವ ನೋಟ ಬೀರುತ್ತಾ ಧನ್ಯನಾದ ಪುರುಷನೊಬ್ಬನನ್ನು ನಿನ್ನ ಲಕ್ಷ್ಯಕ್ಕೆ ತರುತ್ತಿರುವೆ!' 
     ಹೆಣ್ಣು ಓರೆ ನೋಟ ಬೀರಿ ನೋಡುವ ಸೌಂದರ್ಯವನ್ನು ಎಷ್ಟು ಹೊಗಳದರೂ ಕವಿಗೆ ತೃಪ್ತಿಯಿಲ್ಲ! ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಅವನು ಅದೇ ವಿಷಯವನ್ನು ಹೊಗಳುತ್ತಿದ್ದಾನೆ! ಅಂಥ ನೋಟಕ್ಕೆ ಗುರಿಯಾಗಿರುವ ಪುರುಷ ನಿಜಕ್ಕೂ ಧನ್ಯ ಎಂದು ಹೇಳುತ್ತಿದ್ದಾನೆ! ಇಲ್ಲಿ ಸುಂದರಿಯ ಮೃದುವಾದ ಕೈಬೆರಳುಗಳನ್ನು ಕೋಮಲವಾದ ಎಳೆ ಶಾಖೆಗಳಿಗೆ ಹೋಲಿಸಿರುವುದು ರಮ್ಯವಾಗಿದೆ! ಹೆಣ್ಣಿನ ಎಲ್ಲಾ ಅಂಗಗಳೂ ಅತ್ಯಂತ ಕೋಮಲ! ಅಷ್ಟೇ ಅಲ್ಲದೆ ಅವಳ ಮಾತು, ನಗೆ, ನೋಟ, ಎಲ್ಲವೂ ಕೋಮಲ ಹಾಗೂ ರಮ್ಯ! ಇಂಥ ಸುಂದರ ಹೆಣ್ಣಿನ ಕಣ್ಣೋಟ ಬಿದ್ದರೂ ಪುರುಷ ಧನ್ಯನಲ್ಲವೇ? 

ಸುಂದರೀಶತಕ -೩೯

ಸಂಸ್ಕೃತ ಮೂಲ 

ಸುಂದರಿ ವಿವೃತ್ಯ ದೃಷ್ಟ: ಕಷ್ಟಮಪಾಂಗೇನ ಭುಜಗೇನ /
ಅಧರಾಮೃತೇನ ಜೀವತಿ ಸೋsಯಮುಪಾಯಾಂತರಾಸಾಧ್ಯ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನೀನು ಹಿಂದೆ ತಿರುಗಿ ನಿನ್ನ ಸರ್ಪವೆಂಬ ಕಡೆಗಣ್ಣ ಕುಡಿನೋಟ ಬೀರಿ ಇವನಿಗೆ ( ನಿನ್ನ ಪ್ರೇಮಿಗೆ) ಕಷ್ಟ ತಂದಿರುವೆ! ಈಗ ಇವನು ನಿನ್ನ ಅಧರಾಮೃತದಿಂದಷ್ಟೇ ಜೀವಿಸುತ್ತಾನೆ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ!'
       ಇಲ್ಲಿ ಕವಿಯು ಹೆಣ್ಣಿನ ಕಡೆಗಣ್ಣ ಕುಡಿನೋಟವನ್ನು ಸರ್ಪಕ್ಕೆ ಹೋಲಿಸಿದ್ದಾನೆ! ಅದು ಸರ್ಪವೇ ಎಂದು ಹೇಳಿರುವುದರಿಂದ ಇಲ್ಲಿ ರೂಪಕಾಲಂಕಾರವಿದೆ. ಆ ನೋಟ ಅವಳ ಪ್ರೇಮಿಗೆ ಸರ್ಪ ಕಚ್ಚಿದಂತಾಗಿ ಮೈಯೆಲ್ಲಾ ಪ್ರೇಮದ ವಿಷವೇರಿದೆ! ಈಗ ಅವನನ್ನು ಬದುಕಿಸುವುದು ಹೇಗೆ? ಅದಕ್ಕೆ ಇರುವ ಒಂದೇ ಉಪಾಯವೆಂದರೆ ಅವಳ ಅಧರಾಮೃತಪಾನ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ ಎನ್ನುತ್ತಾನೆ ಕವಿ! ಹೌದಲ್ಲವೇ?

ಸುಂದರೀಶತಕ -೩೮

ಸಂಸ್ಕೃತ ಮೂಲ 

ತವ ಸುಂದರಿ ಮಧುರಸ್ಮಿತಮೇದುರಮಚ್ಚಕ್ಷುರಭಿಮುಖಂ ಚಕ್ಷು: /
ಶರದಿಂದುಕಿರಣತುಂದಿಲಕುಮುದೋನ್ಮುಖಮಧುಪಮನುಹರತೇ //

ಕನ್ನಡ ಅನುವಾದ 

    ' ಎಲೈ ಸುಂದರಿ! ಮಧುರವಾದ ನಗುವಿನಿಂದ ಕೂಡಿರುವ ನಿನ್ನ ಕಣ್ಣು ನನ್ನ ಕಣ್ಣಿನ ಮುಂದಿರಲು, ಶರತ್ಕಾಲದ ಚಂದಿರನ ಕಿರಣಗಳಿಂದ ಅರಳಿದ ಕುಮುದ ಪುಷ್ಪದ ಮುಂದೆ ಇರುವ ಭ್ರಮರದಂತಿದೆ! ' 
       ಪ್ರೇಮಿಗಳು ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರೆ ಜಗತ್ತನ್ನೇ ಮರೆಯುವರು! ಹಾಗೆಯೇ ಇಲ್ಲಿ ಇಬ್ಬರು ಪ್ರೇಮಿಗಳು ಪರಸ್ಪರ ನೋಡುತ್ತಾ ಕುಳಿತಿದ್ದಾರೆ.‌ ನಗುವಿನಿಂದ ಕೂಡಿರುವ ಸುಂದರಿಯ ಕಣ್ಣು ಪ್ರಿಯತಮನ ಕಣ್ಣಿನ ಮುಂದಿದ್ದರೆ, ಪ್ರಿಯತಮನ ಮುಖ, ಶರತ್ಕಾಲದ ಚಂದ್ರಮನ ಕಿರಣಗಳಿಂದ ಅರಳಿದ ಕುಮುದ ಪುಷ್ಪದಂತೆ ಅರಳಿದೆ. ಅದನ್ನು ನೋಡುತ್ತಿರುವ ಪ್ರಿಯತಮೆಯ ಕಣ್ಣು, ಭ್ರಮರದಂತೆ ಆಉರ್ಷಿತವಾಗಿದೆ! ಹೀಗೆ ಕವಿಯು ಪ್ರಿಯತಮನ ಮುಖವನ್ನು ಅರಳಿದ ಕುಮುದ ಪುಷ್ಪಕ್ಕೂ ಪ್ರಿಯತಮೆಯ ಕಣ್ಣನ್ನು ಭ್ರಮರಕ್ಕೂ ಹೋಲಿಸಿ ಅವನ ಬಾಯಲ್ಲೇ ಹೇಳಿಸಿದ್ದಾನೆ. ಇಲ್ಲಿ ಉಪಮಾಲಂಕಾರವಿದೆ. ಕಮಲ ಪುಷ್ಪಗಳು ಸೂರ್ಯನ ಕಿರಣಗಳಿಗೆ ಅರಳಿದರೆ ಕುಮುದ ಪುಷ್ಪಗಳು ಅಥವಾ ಬಿಳಿ ನೈದಿಲೆಗಳು ಚಂದ್ರಕಿರಣಗಳಿಗೆ ಅರಳುತ್ತವೆ.

ಬುಧವಾರ, ಮೇ 13, 2026

ಸುಂದರೀಶತಕ -೩೭

ಸಂಸ್ಕೃತ ಮೂಲ 

ಪಶ್ಯತ್ಯಸಮ್ಮುಖಂ ಮಾಂ ಮಯಿ ಪಶ್ಯತಿ ಸಾಥ ಸಮ್ಮುಖೀಭವತಿ /
ಸ್ಮರಮೇಕತೋsವರೋಹೈ: ಶ್ರಮಯತಿ ಕೋಟಿದ್ವಯೇ ಮೌರ್ವೀ //

ಕನ್ನಡ ಅನುವಾದ 

     ' ನಾನು ಅವಳ ಕಡೆ ನೋಡುವಾಗ ಅವಳು ಬೇರೆ ಕಡೆ ನೋಡುತ್ತಾಳೆ! ನಾನು ಬೇರೆ ಕಡೆ ನೋಡುವಾಗ ಅವಳು ನನ್ನ ಕಡೆ ನೋಡುತ್ತಾಳೆ! ಹೀಗೆ ನಾನು ಅವಳತ್ತ ನೋಡಿದಾಗ ತನ್ನ ಕಂಗಳನ್ನು ಕೆಳಗೆ ಮಾಡುತ್ತಾ ಮತ್ತು ಬೇರೆ ಕಡೆ ನೋಡಿದಾಗ ಮೇಲೆ ಮಾಡುತ್ತಾ ಅವಳು ಕಾಮದೇವನ ಬಿಲ್ಲಿನ ಎರಡೂ ತುದಿಗಳಲ್ಲಿ ಅದರ ಶಿಂಜಿನಿಗೆ ಶ್ರಮವುಂಟುಮಾಡುತ್ತಾಳೆ!' 
     ಹೆಣ್ಣಿಗೆ ತನ್ನ ನಲ್ಲನನ್ನು ನೋಡುವ ಆಸೆ. ಆದರೆ ನಾಚಿಕೆ ಅಡ್ಡ ಬರುತ್ತಿದೆ. ಹಾಗಾಗಿ ಅವನು ಅವಳತ್ತ ನೋಡಿದಾಗ ಅವಳು ಬೇರೆ ಕಡೆ ನೋಡುತ್ತಾಳೆ! ಆದರೆ ಅವನು ಬೇರೆ ಕಡೆ ನೋಡಿದಾಗ ಅವಳು ಅವನತ್ತ ನೋಡುತ್ತಾಳೆ. ತಾನು ನೋಡಿದ್ದು ಅವನಿಗೆ ತಿಳಿಯಬಾರದೆಂದು ಕದ್ದು ಕದ್ದು ನೋಡುತ್ತಾಳೆ! ಹುಡುಗಿಯರ ಈ ನಾಚಿಕೆಯ ಸ್ವಭಾವ ಬಹಳ ಸ್ವಾರಸ್ಯಕರವಾಗಿರುತ್ತದೆ ಹಾಗೂ ಆನಂದ ಕೊಡುತ್ತದೆ. ಹೆಣ್ಣಿಗೆ ಸಹಜವಾಗಿರುವ ನಾಚಿಕೆಯ ಸ್ವಭಾವ ಒಂದು ಕಲಾತ್ಮಕ ಸ್ಥಿತಿ ತರುತ್ತದೆ ಕೂಡ! ಅದನ್ನು ಕವಿಯು ಗಮನಿಸಿ ಸೊಗಸಾಗಿ ಚಿತ್ರಿಸಿದ್ದಾನೆ. ಅದು ಮನ್ಮಥನು ತನ್ನ ಬಿಲ್ಲಿನ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತಿದೆ ಹಾಗೂ ಆ ಬಿಲ್ಲಿನ ಎರಡೂ ತುದಿಗಳಲ್ಲಿ ಶಿಂಜಿನಿಗೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ ಕವಿ. ಇಲ್ಲಿ ಕವಿಯು ಅವಳ ಡೊಂಕಾದ ಹುಬ್ಬುಗಳನ್ನು ಬಿಲ್ಲಿಗೆ ಹೋಲಿಸಿ ಹಾಗೂ ಅವಳ ನೋಟಗಳನ್ನು ಶಿಂಜಿನಿಗೆ ಹೋಲಿಸಿ, ಅವಳು ಕಂಗಳನ್ನು ಮೇಲೆ ಕೆಳಗೆ ಮಾಡುವುದು ಆ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತೆ ಹಾಗೂ ಬಿಲ್ಲಿನ ಎರಡೂ ತುದಿಗಳಲ್ಲಿ ಅದಕ್ಕೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ.

ಮಂಗಳವಾರ, ಮೇ 12, 2026

ಸುಂದರೀಶತಕ -೩೬

ಸಂಸ್ಕೃತ ಮೂಲ 

ತರುಣಿ ತರಲನಯನಾಂತಂ ವಲಿತಗ್ರೀವಂ ವಧೂತಚೇಲಾಂತಮ್ /
ಭವನದ್ವಾರಿ ವಿಶಂತ್ಯಾಸ್ತವ ದೃಷ್ಟಂ ದ್ರಷ್ಟುಮುತ್ಕಂಠೇ //

ಕನ್ನಡ ಅನುವಾದ 

    ' ಎಲೈ ತರುಣಿ! ನೀನು ಭವನದ ದ್ವಾರವನ್ನು ಪ್ರವೇಶಿಸುವಾಗ, ನಿನ್ನ ಸೆರಗಿನ ಅಂಚು ಗಾಳಿಗೆ ಹಾರುತ್ತಿರಲು, ನಿನ್ನ ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿ, ಚಂಚಲವಾದ ನಿನ್ನ ಕಂಗಳಿಂದ ನನ್ನನ್ನು ನೋಡಿದ ಆ ನೋಟವನ್ನು ಮತ್ತೊಮ್ಮೆ ನೋಡಲು ನಾನು ಉತ್ಕಂಠಿತನಾಗಿದ್ದೇನೆ!' 
      ಪ್ರೇಮಿಯೊಂದಿಗೆ ಅವನ ಪ್ರಿಯತಮೆಯು ತನ್ನ ಭೇಟಿಯನ್ನು ಮುಗಿಸಿಕೊಂಡು ಮನೆಗೆ ಹೋಗಿ ಅದರ ದ್ವಾರವನ್ನು ಪ್ರವೇಶಿಸುವಾಗ ಅಥವಾ ಇನ್ನಾವುದೋ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಅವಳು ಮನೆಯ ದ್ವಾರವನ್ನು ಪ್ರವೇಶಿಸುವಾಗ ಅವನನ್ನು ಕಂಡು ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿ ಚಂಚಲವಾದ ಕಂಗಳಿಂದ ಅವನನ್ನು ನೋಡಿದ್ದಾಳೆ! ಆಗ ಅವಳ ಸೆರಗು ಗಾಳಿಗೆ ಹಾರಾಡುತ್ತಿತ್ತು! ಅವಳು ಇನ್ನೇನು ಒಳಗೆ ಹೋಗಬೇಕು, ಅಷ್ಟರಲ್ಲಿ ಅವನನ್ನು ನೋಡುವ ಕಾತುರತೆಯಿಂದ ಅಲ್ಲೇ ನಿಂತು ನೋಡಿದ್ದಾಳೆ! ಆ ದೃಶ್ಯ ಅವನಲ್ಲಿ ಒಂದು ಚಿತ್ರದಂತೆ ನೆಟ್ಟಿದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಪ್ರಾಯದ ಹುಡುಗಿಯರು ಆಡುವ ಮಾತು, ನೋಡುವ ನೋಟ, ಅವರ ನಗು, ಕಂಗಳ ಚಂಚಲತೆ, ಎಲ್ಲವೂ ಅತ್ಯಂತ ಸುಂದರವಾದ ಚರ್ಯೆಗಳು! ಮಧುರಾತಿಮಧುರವಾದವುಗಳು! ಅಂಥ ಸುಂದರ ನೋಟವನ್ನು ಮತ್ತೊಮ್ಮೆ ನೋಡಲು ಪ್ರೇಮಿಯು ಉತ್ಕಂಠಿತನಾಗಿದ್ದು ಅದನ್ನು ಅವನು ಅವಳಿಗೇ ಹೇಳುತ್ತಿದ್ದಾನೆ! ಇಂಥ ಸುಂದರ ಚರ್ಯೆಗಳನ್ನು ಕವಿಯು ಗಮನಿಸಿ ಪದ್ಯಗಳ ರೂಪದಲ್ಲಿ ನಮಗೆ ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ.

ಭಾನುವಾರ, ಮೇ 10, 2026

ಸುಂದರೀಶತಕ -೩೫

ಸಂಸ್ಕೃತ ಮೂಲ 

ಸಸ್ಮಿತಮುಖಮವಧೀರಿತಚೇಲಾಂಚಲಮೀಷದಾನತಗ್ರೀವಮ್ /
ತಿರ್ಯಗ್ವಿಲೋಕಯಂತ್ಯಾ ಕೋsಪಿ ಕೃತೀ ಲಕ್ಷಿತ: ಕ್ರಿಯತೇ //

ಕನ್ನಡ ಅನುವಾದ 

     ' ಆ ಸುಂದರಿಯು ತನ್ನ ಸೆರಗು ಜಾರಿರಲು, ಅದರ ಕಡೆಗೆ ಗಮನವಿಲ್ಲದೆ, ಕುತ್ತಿಗೆಯನ್ನು ಸ್ವಲ್ಪ ಬಾಗಿಸಿ, ನಗುವಿನಿಂದ ಕೂಡಿದ ಮುಖವುಳ್ಳವಳಾಗಿ, ಕಡೆಗಣ್ಣಿನಿಂದ ನೋಡುತ್ತಾ, ಯಾರೋ ಭಾಗ್ಯವಂತನನ್ನು ತನ್ನ ಲಕ್ಷ್ಯಕ್ಕೆ ತರುತ್ತಿದ್ದಾಳೆ!' 
    ಹೆಣ್ಣಿನ ನಗುಮುಖದ ನಾಚಿಕೆಯ ಈ ನೋಟ ಯಾವ ಗಂಡಿನ ಮೇಲಾದರೂ ಬಿದ್ದರೆ, ಆ ಗಂಡು ಭಾಗ್ಯವಂತನಲ್ಲದೇ ಮತ್ತೇನು? ಹೀಗೆ ಗಂಡನ್ನು ನೇರವಾಗಿ ನೋಡದೇ, ಓರೆ ನೋಟದಲ್ಲಿ ನಗುತ್ತಾ ನೋಡುವ ಹೆಣ್ಣಿನ ಈ ಸುಂದರ ಚಿತ್ರಣವನ್ನು ಯಾರೂ ಅನುಕರಿಸಲಾಗುವುದಿಲ್ಲ! ಅದು ಹೆಣ್ಣಿಗಷ್ಟೇ ಸೀಮಿತವಾಗಿರುವ ಕಲೆ. ಅಂಥ ಸುಂದರ ಕಲಾತ್ಮಕ ನೋಟವನ್ನು ಚಿತ್ರಿಸುತ್ತಾ ಕವಿಯು, ಯಾರೋ ಭಾಗ್ಯವಂತ ಪುರುಷ ಅವಳ ಲಕ್ಷ್ಯಕ್ಕೆ ಬೀಳುತ್ತಿದ್ದಾನೆ ಎನ್ನುತ್ತಾನೆ.